Wednesday 6 August 2014

ಅಂತರಾತ್ಮನ ದನಿಗೆ.......

         ಕಳೆದ ಸುಮಾರು ೮-೯ ವರ್ಷಗಳಿಂದ ಪೂಜ್ಯ ಶ್ರೀ ಡಿ. ವಿ. ಜಿ. ವಿರಚಿತ "ಮಂಕುತಿಮ್ಮನ ಕಗ್ಗ " ನನಗೆ ಗುರುಸ್ಥಾನದಲ್ಲಿದ್ದು ದಾರಿ ತೋರುತ್ತಿರುವ ಪುಸ್ತಕವಾಗಿದೆ. ಅದಕ್ಕೂ ಮೊದಲು ಸಹ ಅದರ ಸಂಗ ಇತ್ತಾದರೂ ನನ್ನ ಬದುಕಿಗೆ ಅದನ್ನು ಸಮೀಕರಿಸಿಕೊಂಡಿರಲಿಲ್ಲ. ನನ್ನ ಬೇಕು-ಬೇಡಗಳಿಗೆ ಬೇಲಿ ಹಾಕಿಕೊಂಡು, ಬದುಕಿನಲ್ಲಿ 'ನೆಮ್ಮದಿ'ಗೆ ಮಿಗಿಲಾದ ಸುಖವಿಲ್ಲ ಎಂಬುದನ್ನು ಮನಗಂಡು, ಆ 'ನೆಮ್ಮದಿ' ಪಡೆಯಲು ನೆರವಾಗುತ್ತಿರುವ "ಕಗ್ಗ'" ನನಗೆ ಗುರುವಾದರೆ, ಅದರ ಕರ್ತೃ "ದಿವಿಜ"-ಗುಂಡಪ್ಪನವರು ಮಹಾಗುರುಗಳು. ಕಳೆದ ಕೆಲ ದಿನಗಳಲ್ಲಿ ನನ್ನ ಸುತ್ತಲಿದ್ದ ಕೆಲವರ ನಡೆ-ನುಡಿಗಳನ್ನು ಕಂಡಾಗ, ಏನ ಕೇನ ಪ್ರಕಾರೇಣ  ಅಧಿಕಾರ, ಹಣ, ಪ್ರತಿಷ್ಠೆ ಹೊಂದಿಯೇ ತೀರಬೇಕೆಂದು - ಅದಕ್ಕಾಗಿ ತಮ್ಮವರಿಗೇ ವಂಚಿಸಿದರೂ ಸರಿಯೆ - ಎಂಬ ಅವರ ಮನ:ಸ್ಥಿತಿಯನ್ನು ಕಂಡಾಗ ಮರುಕ ಉಂಟಾಗುತ್ತಿದೆ. ತಾವು ಈ ಎತ್ತರ ತಲುಪಲು ತ್ಯಾಗ ಮಾಡಿದ, ತಮ್ಮ ಸುಖ ಮರೆತು ಇವರಿಗೆ  ಏಣಿಯಾಗಿ ಮೇಲಕ್ಕೇರಿಸಿದ ಹಿರಿಯರನ್ನೂ ,ಹಿತೈಷಿಗಳನ್ನೂ ಈಗಿನ ಸ್ಥಾನಬಲದಿಂದ ಅವಗಣನೆ ಮಾಡುವದನ್ನು ಗಮನಿಸಿದಾಗ ಸಂಕಟವಾಗುತ್ತದೆ.  ಹಾಗೆಂದು ಇವರು ಬುದ್ಧಿಹೀನರೇನಲ್ಲ, ಆದರೆ ತಮ್ಮ ಜ್ಞಾನ ಕೇವಲ ಪರೋಪದೇಶಕ್ಕಾಗಿಯೇ ವಿನ: ಸ್ವಯಮನುಷ್ಟಾನಕ್ಕೆ ಅಲ್ಲ ಎಂದುಕೊಂಡ ಪ್ರಭೃತಿಗಳು. ತಮ್ಮ ಜೀವಿತಾವಧಿಯ ಉದ್ದಕ್ಕೂ ಋಷಿಯಂತೆ ಬಾಳಿದ "ಡಿ. ವಿ. ಜಿ."  ಇಂಥವರನ್ನು ಎಚ್ಚರಿಸಲೆಂದೇ ಬರೆದ ಕೆಳಗಿನ ಮೂರು ಕಗ್ಗ ಚೌಪದಿಗಳು ಉಲ್ಲೇಖಯೋಗ್ಯವೆನಿಸುತ್ತವೆ.
         ೧) ಹೆಸರು ಹೆಸರೆಂದು ನೀಂ ಬಸವಳಿವುದೇಕಯ್ಯ| 
                ಕಸದೊಳಗೆ ಕಸವಾಗಿ ಹೋಹನಲೆ ನೀನು|| 
                   ಮುಸುಕಲೀ ಧರೆಯ ಮರೆವೆನ್ನನ್ ಎನುತ ಬೇಡು| 
                      ಮಿಸುಕದಿರು ಮಣ್ಣಿನಲಿ - ಮಂಕುತಿಮ್ಮ.||
             ತಾತ್ಪರ್ಯ :- ಎಂದಿದ್ದರೂ ಈ  ಮಣ್ಣಲ್ಲಿ ಮಣ್ಣಾಗಿ ಹೋಗುವವನೇ ಆದ ನೀನು ನಿನ್ನ ಹೆಸರಿಗಾಗಿ ಅದೇಕೆ ಅಷ್ಟು                                         ಗುದ್ದಾಡುತ್ತೀ. 'ಜನ ನನ್ನನ್ನು ಬೇಗನೆ ಮರೆಯಲಿ' ಎಂದುಕೊಂಡರೆ ಈ ತೊಳಲಾಟ                                                         ಇಲ್ಲವಾಗುತ್ತದೆಯಲ್ಲ! (ನಿನಗೆ ನಿರ್ಲಿಪ್ತತೆ ಸಾಧಿಸುತ್ತದೆಯಲ್ಲ !) 
          ೨) ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ |
                  ಚಿನ್ನದಾತುರಕಿಂತ ಹೆಣ್ಣು-ಗಂಡೊಲವು|| 
                    ಮನ್ನಣೆಯ ದಾಹ ಈ ಎಲ್ಲಕುಂ ತೀಕ್ಷ್ಣತಮ| 
                        ಕೊಲ್ಲುವುದದಾತ್ಮವನೆ - ಮಂಕುತಿಮ್ಮ.|| 
                                ಇದಕ್ಕೆ ಹೆಚ್ಚಿನ ವಿವರಣೆ ಅನಗತ್ಯ.
           ೩)  ಭುವಿಯಿಂದ ಮೊಳಕೆವೊಗೆವಂದು ತಮ್ಮಟೆಗಳಿಲ್ಲ|
                    ಫಲಮಾಗುವಂದು ತುತ್ತೂರಿ ದನಿಯಿಲ್ಲ|| 
                       ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ| 
                           ಹೊಲಿ  ನಿನ್ನ  ತುಟಿಗಳನು - ಮಂಕುತಿಮ್ಮ.|| 
                 ತಾತ್ಪರ್ಯ :- ಈ ಜಗತ್ತಿನಲ್ಲಿನ ಅತ್ಯಂತ ಮಹತ್ವವೂ, ಶ್ರೇಷ್ಠವೂ ಆದ ಬೀಜ ಮೊಳಕೆ ಒಡೆದು ಸಸಿಯಾಗುವ,                                           ಕಾಯಿ ಹಣ್ಣಾಗುವ ಪ್ರಕ್ರಿಯೆಗಳು, ಸೂರ್ಯ- ಚಂದ್ರರ "ಬೆಳಗುವ" ಕಾರ್ಯಗಳೇ  ಸದ್ದಿಲ್ಲದೇ                                               ನಡೆಯುತ್ತಿರುವಾಗ  ನಿನ್ನ ಸಾಧನೆಗಳನ್ನು  ಅದೇನು 'ಮಹಾ' ಎಂದು ಸಾರಿಕೊಳ್ಳುತ್ತೀ

                  ಅಂತರಾತ್ಮನ ದನಿಗೆ ಕಿವಿಗೊಡೋಣ. ಆತ್ಮವಂಚನೆಗೈಯ್ಯದೆ ಬದುಕೋಣ
                                                                                                                                           
                                              'ಸರ್ವೇ ಸಂತು ನಿರಾಮಯಾ:'

                                                    -----------------










No comments:

Post a Comment