ಈ ಬ್ಲಾಗ್ ಅನ್ನು ಹುಡುಕಿ

ಸೋಮವಾರ, ಡಿಸೆಂಬರ್ 5, 2016

ಶಾಲಾ ದಿನಗಳ ನೆನಪು

                       
      1960ರ ದಶಕದಲ್ಲಿ ನಮ್ಮೂರ (ದೊಡ್ನಳ್ಳಿ) ಸುತ್ತಲಿನ ಹತ್ತಾರು ಹಳ್ಳಿಗಳ ಪೈಕಿ ನಮ್ಮೂರಿನಲ್ಲಿ ಮಾತ್ರ ಹಿರಿಯ ಪ್ರಾಥಮಿಕ ಶಾಲೆಯಿತ್ತು. ಸುತ್ತಲಿನ ಹಳ್ಳಿಗಳ ಪೈಕಿ ಮೂರರಲ್ಲಿ ಕಿರಿಯ ಪ್ರಾಥಮಿಕ ಶಾಲೆಗಳಿದ್ದು ಅಲ್ಲಿ 4ನೇ ತರಗತಿಯ ತನಕ ಓದಿ ನಂತರ 5ನೇ ತರಗತಿಗೆ ನಮ್ಮೂರ ಶಾಲೆಗೆ ಬರುತ್ತಿದ್ದರು. ಅಷ್ಟೊತ್ತಿಗೆ 2-3 ಮೈಲು ದೂರದ ನಮ್ಮ ಶಾಲೆಗೆ ಬಂದು ಹೋಗುವಷ್ಟು ಅವರು ದೊಡ್ಡವರಾಗಿರುತ್ತಿದ್ದರು.
      ನಮ್ಮದು ಹಿರಿಯ ಪ್ರಾಥಮಿಕ ಶಾಲೆಯಾದರೂ ಅದರಲ್ಲಿ ಆಗ ಕೇವಲ ಎರಡೇ ಕೋಣೆಗಳಿದ್ದವು. ಅವುಗಳ ಪೈಕಿ ದೊಡ್ಡದಾಗಿದ್ದ ಒಂದು ಖೋಲಿಯ ನಡುವೆ ಪರದೆ ಹಾಕಿ ಪಾರ್ಟಿಷನ್ ಮಾಡಿ ಇನ್ನೊಂದು ಖೋಲಿ ಮಾಡಿಕೊಂಡಿದ್ದರು. ಈ ಮೂರು ಖೋಲಿಗಳಲ್ಲೇ ಎಲ್ಲ ಏಳು ಕ್ಲಾಸುಗಳ ಮಕ್ಕಳೂ ಕೂಡ್ರಬೇಕಿತ್ತು. 6 ಮತ್ತು 7ನೇ ತರಗತಿಯ ಮಕ್ಕಳಿಗೆ ಮಾತ್ರ ಕೂಡ್ರಲು ಬೆಂಚು ಇತ್ತು. ಉಳಿದವರೆಲ್ಲಾ ನೆಲದ ಮೇಲೇ ಕೂರುತ್ತಿದ್ದೆವು. ಆದರೆ ಇವ್ಯಾವುದೂ ನಮ್ಮ ಕಲಿಕೆಗೆ ಅಡಚಣೆಯಾಗಿರಲೇ ಇಲ್ಲ. ಅದಕ್ಕೆ ಕಾರಣ ಆಗ ಅಲ್ಲಿದ್ದ ಮೂರು ಜನ ಶಿಕ್ಷಕರು. ಆಗಿನ್ನೂ ಬ್ರಹ್ಮಚಾರಿಗಳೇ ಆಗಿದ್ದ ಆ ಮೂವರೂ ಅತ್ಯಂತ ನಿಷ್ಠಾವಂತ ಗುರುಗಳಾಗಿದ್ದರು.
      ಆ ಮೂವರ ಪೈಕಿ ಶ್ರೀ ಮಾರುತಿ ಹೊನ್ನಾವರ್ ಎಂಬುವವರು ಹೆಡ್ ಮಾಸ್ತರ್. ಶ್ರೀ ಜಿ.ಎಸ್.ಭಂಡಾರಿ (ಈಗ ಇವರು  ದಿವಂಗತರಾಗಿದ್ದಾರೆ) ಹಾಗೂ ಶ್ರೀ ಬಿ.ವಿ. ನಾಯ್ಕ್ ಸಹಾಯಕ ಶಿಕ್ಷಕರು.. ಈ ತ್ರಿವಳಿ ಶಿಕ್ಷಕರ ಧ್ಯೇಯನಿಷ್ಟ ಅವಿರತ ಪ್ರಯತ್ನದಿಂದ ನಮ್ಮ ಶಾಲೆ ಅತ್ಯುತ್ತಮ ಶಾಲೆಗಳ ಪೈಕಿ ಒಂದೆಂದು  ಹೆಸರು ಮಾಡಿತ್ತು. ಪ್ರತಿವರ್ಷ ಮುಲ್ಕಿ ಪರೀಕ್ಷೆಯಲ್ಲಿ ಶತ ಪ್ರತಿಶತ ಫಲಿತಾಂಶ  ಬರುತ್ತಿತ್ತು. (ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿದ್ದ 7ನೇ ತರಗತಿಯ ಪರೀಕ್ಷೆಗೆ ಮುಲ್ಕಿ ಪರೀಕ್ಷೆ ಎನ್ನುತ್ತಿದ್ದರು. ಬಹುಶ:ಅರೇಬಿಕ್ ಶಬ್ದ “ಮುಲ್ಕ್” ಎಂಬುದರಿಂದ ಬಂದಿದ್ದಿರಬೇಕು).
       ನನ್ನ 3ನೇ ಕ್ಲಾಸಿನಿಂದ 6ನೇ ಕ್ಲಾಸ್ ತನಕ ಶ್ರೀ ಬಿ.ವಿ. ನಾಯ್ಕ್ ರವರು ನಮ್ಮ ಪೂರ್ತಿ ಕ್ಲಾಸನ್ನು ತೆಗೆದುಕೊಳ್ಳುತ್ತಿದ್ದರು. ಗಣಿತ ಮತ್ತು ಇಂಗ್ಲೀಷ್ ಅವರ ಮೆಚ್ಚಿನ ವಿಷಯಗಳು. ಉಳಿದವನ್ನೂ ಚೆನ್ನಾಗಿಯೇ ಕಲಿಸುತ್ತಿದ್ದರು. ಆದಾಗ ತಾನೇ ನಮ್ಮ  7ನೇ ತರಗತಿ ಆರಂಭವಾಗಿತ್ತು. ಮತ್ತೆ   ನಾಯ್ಕ್ ಗುರೂಜಿಯವರೇ  ನಮ್ಮ ಕ್ಲಾಸ್ ಟೀಚರ್. ಒಂದು ದಿನ ತರಗತಿಯಲ್ಲಿನ ನಮ್ಮ ಏನೋ ತಪ್ಪಿಗೆ ಎಲ್ಲರಿಗೂ ಒಂದೊಂದು ಏಟು ಕೊಟ್ಟಿದ್ದರು – ಗಂಡು ಹೆಣ್ಣು ಮಕ್ಕಳೆಂಬ ಭೇದವಿಲ್ಲದೆ. ಈ ವಿಷಯವನ್ನು ಅಳುತ್ತಾ ತನ್ನ ಮನೆಯಲ್ಲಿ ದೂರಿದಳೊಬ್ಬಳು. ಅದೇ ಸಮಯಕ್ಕೆ ಪರವೂರಿನಲ್ಲಿ ಕಾಲೇಜ್ ಓದುತ್ತಿದ್ದ, ರಜೆಗಾಗಿ ಊರಿಗೆ ಬಂದ ಅವಳಣ್ಣ ಇದರಿಂದ ಕನಲಿ, ಮಾರನೇ ದಿನ ಸೀದಾ ಶಾಲೆಗೆ ಬಂದು ನಾಯ್ಕ್ ಗುರೂಜಿಯವರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ. ಆ ದಿನಗಳಲ್ಲಿ ಮಕ್ಕಳಿಗೆ ಒಂದೆರಡು ಏಟು ಹೊಡೆಯುವದು ಈಗಿನಂತೆ ಅಪರಾಧವಾಗಿರಲಿಲ್ಲ. ಗುರೂಜಿ ಅದನ್ನಾಗಲೇ ಮರೆತು ಬಿಟ್ಟಿದ್ದರು ಕೂಡಾ. ನಿಯತ್ತಾಗಿ ದುಡಿಯುತ್ತಿದ್ದ ಅವರಿಗೆ ತಾವು ಏನೂ ತಪ್ಪು ಮಾಡಿಲ್ಲವೆಂಬ ಧೃಡ ನಂಬಿಕೆ. ಈ ಚಿಗುರು ಮೀಸೆಯ ಯುವಕನ ಮಾತಿಗೆ ಸೊಪ್ಪು ಹಾಕದೇ ಅವನಿಗೆ “ಗೆಟ್ ಔಟ್” ಎಂದು ಆದೇಶಿಸಿದರು. ಅಷ್ಟಕ್ಕೂ ಅವರೂ ಸಹ ಬಿಸಿರಕ್ತದ ತರುಣರೇ ಆಗಿದ್ದರು. “ನಿನ್ನನ್ನು ಈ ಶಾಲೆಯಿಂದಲೇ ಗೆಟ್ ಔಟ್  ಮಾಡಿಸುತ್ತೇನೆ” ಎಂದು ಸವಾಲು ಹಾಕಿ ಹೋದ ಆ ತರುಣ, ಊರ ಹಿರಿಯರ ಎದುರು ಈ ಮಾಸ್ತರರ ಉದ್ಧಟತನದ ಬಗ್ಗೆ ವರದಿ ಮಾಡಿ ಪಂಚಾಯತಿ ಸೇರಿಸಿದ. ಇತ್ತ  ಶಾಲೆಯಲ್ಲಿ ಮೂರೂ ಜನ ಶಿಕ್ಷಕರು ತಮ್ಮದಲ್ಲದ ತಪ್ಪಿಗೆ ಕ್ಷಮೆ ಕೇಳಕೂಡದೆಂದು ನಿರ್ಧರಿಸಿಕೊಂಡರು. ಶಾಲೆಗೆ ಬಂದ ಹಿರಿಯರು ಆ ತರುಣನ ಪರವಾಗಿಯೇ ಮಾತಾಡಿದ್ದರಿಂದ ಶಿಕ್ಷಕರು ಸಹ ಹಟ ಹಿಡಿದರು. ಆಗ ಊರ ಹಿರಿಯರು ಸೇರಿ “ಹರತಾಳ” ಮಾಡಿ ಮಕ್ಕಳು ಶಾಲೆಗೆ ಬರದಂತೆ ತಡೆದರು. ಮೂರೂ ಜನ ಶಿಕ್ಷಕರನ್ನು ವರ್ಗಾಯಿಸುವಂತೆ ಮೇಲಧಿಕಾರಿಗಳಲ್ಲಿ ಹಟ ಹಿಡಿದರು. “ಇಷ್ಟು ಒಳ್ಳೆಯ ಶಿಕ್ಷಕರನ್ನು ಬಿಟ್ಟು ಕೊಡಬೇಡಿ “ ಎಂದು ಅವರು ತಿಳಿಹೇಳಿದರೂ ಪ್ರತಿಷ್ಟೆಗೆ ಬಿದ್ದ ಹಿರಿಯರು ಕೇಳಲಿಲ್ಲ. ಪರಿಣಾಮವಾಗಿ ಈ ಮೂವರನ್ನೂ ಶಿಕ್ಷೆಯ ರೂಪದಲ್ಲಿ  ಕಿರಿಯ ಪ್ರಾಥಮಿಕ ಶಾಲೆಗಳಿಗೆ ವರ್ಗಾಯಿಸಿದರು.
         ಊರವರ ಹಠವೇನೋ  ಗೆದ್ದಿತು. ಆದರೆ  ಆದರ ನಂತರ 2-3 ದಶಕಗಳ ಕಾಲ ನಮ್ಮ ಶಾಲೆಗೆ ಆ ರೀತಿಯ ಉತ್ಕೃಷ್ಟ ಶಿಕ್ಷಕರು ಸಿಗಲಿಲ್ಲ. ಇವರ ಜಟಾಪಟಿಯಲ್ಲಿ ಬಡವಾಗಿದ್ದು ಶಾಲೆ ಮತ್ತು ಮಕ್ಕಳು.
         ನಂತರದ ದಿನಗಳಲ್ಲಿ ನಾನು ಎಷ್ಟೋ ಸಾರಿ ಹಿರಿಯರ ಈ ಅವಿವೇಕಿ ನಡೆಯ ಬಗ್ಗೆ ಖೇದಗೊಂಡಿದ್ದೇನೆ. ತರುಣರು ಮೊಂಡಾಟ ಮಾಡುವದು  ಅಸಹಜವಲ್ಲ. ಆದರೆ ನ್ಯಾಯ ನೀಡುವವರು ವಿವೇಚನೆ ಕಳೆದುಕೊಂಡರೆ  ‘ವ್ಯವಸ್ಥೆ ‘ ಬಳಲುತ್ತದೆ. ದುಷ್ಪರಿಣಾಮ ಸಮಾಜದ ಮೇಲಾಗುತ್ತದೆ. ಅಲ್ಲವೇ?.
         ಯಾವ ಒಂದು ಆದರ್ಶದ ಕನಸು ಹೊತ್ತು ಹುಮ್ಮಸ್ಸಿನಿಂದ ಕರ್ತವ್ಯ ನಿರ್ವಹಿಸುತ್ತಿದ್ದರೋ ಅದಕ್ಕೆ ಈ “ಬಹುಮಾನ” ಸಿಕ್ಕ ಮೇಲೆ ನನ್ನ ನೆಚ್ಚಿನ ನಾಯ್ಕ್ ಗುರೂಜಿ ತುಂಬಾ ತೊಳಲಾಡಿದರು. ನಮ್ಮೂರ ಪಕ್ಕದ “ಒಕ್ಕಲಕೊಪ್ಪ”ದ  ಕಿ. ಪ್ರಾ. ಶಾಲೆಗೆ ವರ್ಗವಾದ ಅವರು ತನ್ನ ನೆಚ್ಚಿನ ಇಂಗ್ಲಿಷ್ ಮತ್ತು ಗಣಿತದ ಕಲಿಸುವಿಕೆಗೆ ಹಿನ್ನಡೆಯಾದ ಬಗ್ಗೆ ಬಹಳೇ ನೊಂದುಕೊಂಡಿದ್ದರು. ನಮಗೂ ಅವರ ಅಗಲುವಿಕೆ ದು:ಸ್ಸಹವಾಗಿತ್ತು. ವಾರಾಂತ್ಯದಲ್ಲಿ ಭೆಟ್ಟಿಯಾದಾಗ ದು:ಖ ಉಮ್ಮಳಿಸಿ ಅಳುತ್ತಿದ್ದೆವು. “ಗುರು”ವಾಗಲಿದ್ದ ಓರ್ವ 'ಶಿಕ್ಷಕ'ನ ಅವಸಾನವಾಗುತ್ತಿತ್ತು. ನಾನು ಅವರ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದೆ. “ನೀನು ಉನ್ನತ ಸ್ಥಾನಕ್ಕೆ ಏರುತ್ತೀ” ಎಂದು ಸದಾ ನನಗೆ ಹೇಳುತ್ತಾ ಹಾರೈಸುತ್ತಿದ್ದರು. ಈಗಲೂ  ನನಗೆ ಇವೆಲ್ಲ ಮನಸ್ಸನ್ನು ಮುದುಡಿಸುವ ನೆನೆಪುಗಳು.  ಇದು ನಾನು  ಅವರಿಗೆ ಸಲ್ಲಿಸುತ್ತಿರುವ ಒಂದು “ನುಡಿನಮನ”.
        ಈ ಮೂವರ ನಂತರ ಬಂದ ಶಿಕ್ಷಕ ದಂಪತಿಗಳಿಗೂ ನಾನು ಪ್ರಿಯ ಶಿಷ್ಯನೇ ಆಗಿದ್ದೆ. ಆ ವರ್ಷ ಮೂಲ್ಕಿ ಪರೀಕ್ಷೆ ಬರೆದ ನನಗೆ ಜಿಲ್ಲಾ ಮಟ್ಟದಲ್ಲಿ  5ನೇ  ಸ್ಥಾನ ಲಭ್ಯವಾಗಿತ್ತು. ಮೊತ್ತ ಮೊದಲ ಬಾರಿಗೆ ನಮ್ಮೂರ ಹೈದನ ಹೆಸರು ಪತ್ರಿಕೆಯಲ್ಲಿ ಬಂದಿತ್ತು. ನಮ್ಮನೆಯಲ್ಲಿ ಸಂಭ್ರಮವೋ ಸಂಭ್ರಮ! ನಮ್ಮಪ್ಪ ನನ್ನನ್ನು ಹೈಸ್ಕೂಲ್ ಗೆ  ಸೇರಿಸುವ ಸಲುವಾಗಿ ಚಿಂತಿಸತೊಡಗಿದ್ದ.
        ನನ್ನ ಶಾಲಾದಿನಗಳಲ್ಲಿ ನಮ್ಮ ಮನೆಯ ಕೊಟ್ಟಿಗೆಗೆ ಹೊಂದಿಕೊಂಡು ನಿರ್ಮಿಸಿದ “ಬಿಡಾರ”ದಲ್ಲಿ ಕುಂದಾಪುರ ಕಡೆಯ “ಹಿರಣ್ಣಯ್ಯ ಶೆಟ್ಟಿ” ಎಂಬ ಒಬ್ಬರು “ಶೇರೆಗಾರ”ರು ತಮ್ಮ ತಂಡದೊಂದಿಗೆ ಇದ್ದರು. ಆ ತಂಡದ ಎಲ್ಲರ ಜೊತೆ ನನಗೆ ತುಂಬಾ ಸಲಿಗೆ. ನಾನು 5ನೇ ತರಗತಿಯಲ್ಲಿದ್ದಾಗ ಒಮ್ಮೆ “ಹಂಪಿ”ಗೆ ಶಾಲಾ ಪ್ರವಾಸ ಏರ್ಪಡಿಸಿದ್ದರು. ತಲಾ 5 ರೂಪಾಯಿ ಶುಲ್ಕ. ತನ್ನಲ್ಲಿ ದುಡ್ಡಿಲ್ಲವೆಂದು ಅಪ್ಪಯ್ಯ ಕಳಿಸಲೊಪ್ಪಲಿಲ್ಲ. ನನ್ನ ಅಳು, ಹಠ ನೋಡಿದ ಶೆಟ್ಟರು ತಾನು 5 ರೂಪಾಯಿ ಕೊಡುತ್ತೇನೆಂದರು. ಖುಷಿಯಿಂದ ಹೆಸರು ಕೊಟ್ಟೆ. ಎಲ್ಲಿಗೋ ಹೋಗಿದ್ದ ಶೆಟ್ಟರಿಗೆ ಪ್ರವಾಸದ ದಿನ ನಿಗದಿತ ಸಮಯಕ್ಕೆ ಊರು ತಲುಪಲು ಆಗಲೇ ಇಲ್ಲ. ಫೀಸು ಕೊಡದ ನನ್ನನ್ನು ಬಿಟ್ಟೇ ವ್ಯಾನು ಹೊರಟಿತು. ತೀವ್ರ ನಿರಾಶೆ ಮತ್ತು ಶೆಟ್ಟರ ಮೇಲಿನ ಕೋಪ ತಾರಕಕ್ಕೇರಿತ್ತು. ಈಗಿನಂತೆ ವಾಹನ ಸೌಕರ್ಯ ಇಲ್ಲದ ಆ ದಿನಗಳಲ್ಲಿ ಎಷ್ಟೇ ಯತ್ನಿಸಿದರೂ ಶೆಟ್ಟರಿಗೆ ಸಮಯಕ್ಕೆ ಸರಿಯಾಗಿ ಊರು ತಲುಪಲು ಆಗಿರಲೇ ಇಲ್ಲ. ಧಾವಂತದಿಂದ ನಡೆದು ಬರುತ್ತಿದಾಗ ಎದುರು ಬಂದ ವ್ಯಾನ್ ನಿಲ್ಲಿಸಿ ಮಾಸ್ತರ್ ರವರ ಕೈಲಿ “ ಇದು ರವಿ ಭಟ್ಟರ ಪ್ರವಾಸದ ಶುಲ್ಕ” ಎಂದು ಐದು ರೂಪಾಯಿ ಇಡಲು ಹೋದರೆ, “ದುಡ್ಡು ಕೊಡದ್ದಕ್ಕೆ ಅವನನ್ನು ಕರೆತಂದಿಲ್ಲ” ಎಂಬ ಉತ್ತರ ಕೇಳಿದಾಗ ಅಲ್ಲೇ ಗಳಗಳನೆ ಅತ್ತುಬಿಟ್ಟರಂತೆ. ಮನೆಗೆ ಬಂದಾಗ ಅವರನ್ನು ಮಾತಾಡಿಸದೆ ಸಿಟ್ಟು ಮಾಡಿಕೊಂಡು ಕುಳಿತ ನನಗೆ ಎಲ್ಲವನ್ನೂ ಹೇಳಿ ಪೇಚಾಡಿಕೊಂಡರು. ಅದಕ್ಕೆ ಮರುಗಿದ ನನ್ನಮ್ಮ ನನ್ನನ್ನು ಸಮಾಧಾನಪಡಿಸಿದರು.
       ಇಲ್ಲಿ ಶೆಟ್ಟರು ನೀಡಿದ ಹಣಕ್ಕಿಂತ ಅವರ ಹೃದಯವಂತಿಕೆ ಪ್ರಮುಖವೆನಿಸುತ್ತದೆ. (ಅಂದ ಹಾಗೆ ಆ ಕಾಲದಲ್ಲಿ ಐದು ರೂಪಾಯಿ ಸಣ್ಣ ಮೊತ್ತವಾಗಿರಲಿಲ್ಲ).ಅನಿವಾರ್ಯವಾಗಿಯಾದರೂ, ಮಾತಿಗೆ ತಪ್ಪಿದಾಗ ಅವರು ಅನುಭವಿಸಿದ ಯಾತನೆ ಆ ಕಾಲದ ನೈತಿಕತೆಗೊಂದು ನಿದರ್ಶನವಾಗಿ ನಿಲ್ಲುತ್ತದೆ. ತೀವ್ರ ಬಡತನದ ನಡುವೆಯೂ ಕಾಣಸಿಕ್ಕ ಇಂತಹ ಹೃದಯವಂತಿಕೆಗಳು ಬದುಕಲ್ಲಿ ಆಶಾವಾದಿಯಾಗಿರುವಂತೆ ಮಾಡಿವೆ. ಸದ್ದಿಲ್ಲದೇ ನನ್ನೊಳಗೂ ಒಂದು ಸುಸಂಸ್ಕಾರವನ್ನು ಬಿತ್ತಿವೆ.
        ಇಂತಹ ಮಹನೀಯರು ಅಪ್ರಸಿದ್ಧರಾದರೂ ಅವರ ಹೃದಯ ಸಂಸ್ಕಾರ ಅನುಕರಣೀಯ. ಅಂತಹವರ ಸ್ನೇಹ, ಹಾರೈಕೆಗಳು ಲಭಿಸಿದ್ದು ನನ್ನ ಪುರಾಕೃತ ಪುಣ್ಯವಿಶೇಷವೇ ಸೈ. ಬಾಳಿನ ಪಯಣದಲ್ಲಿ ಸಿಕ್ಕಿದ ಇಂತಹ 'ಅರವಟ್ಟಿಗೆಗೆಳು' ಜೀವನದ  ಗಮ್ಯ ತಲುಪುವಲ್ಲಿ ಚೈತನ್ಯ ನೀಡಿದ್ದನ್ನು ಎಂದಾದರೂ ಮರೆಯಲುಂಟೇ?



ಶುಕ್ರವಾರ, ಆಗಸ್ಟ್ 29, 2014

ಹೆಚ್ಚಿದ ಜವಾಬ್ದಾರಿ.....

         'ಮಹಾಭಾರತ'ದಲ್ಲಿ ಒಂದು ಘಟನೆ ಬರುತ್ತದೆ. ದಾನಶೂರನೆನಿಸಿದ್ದ ಕರ್ಣ ಒಮ್ಮೆ ಊಟಕ್ಕೆ ಕುಳಿತಿದ್ದ. ತನಗೆ ತುಂಬ ಪ್ರಿಯವಾಗಿದ್ದ ಚಿನ್ನದ ಚೊಂಬಿನಲ್ಲಿ ನೀರನ್ನು ತುಂಬಿ ಪಕ್ಕದಲ್ಲೇ ಇಟ್ಟುಕೊಂಡಿದ್ದ. ಊಟ ಅರ್ಧ ಆಗಿದ್ದಾಗ ಹೊರಬಾಗಿಲಲ್ಲಿ ಬ್ರಾಹ್ಮಣನೋರ್ವ ಆಗಮಿಸಿ ದಾನ ನೀಡುವಂತೆ ಯಾಚಿಸಿದ. ಅವನನ್ನು ಒಳಗೆ ಕರೆದ ಕರ್ಣ  ತನ್ನ ಎಡಗೈಯಿಂದ ಪಕ್ಕದಲ್ಲಿದ್ದ ತನ್ನ ಪ್ರೀತಿಯ ಚಿನ್ನದ ಚೊಂಬನ್ನು ಆ ಬ್ರಾಹ್ಮಣನಿಗೆ ಎತ್ತಿ ಕೊಟ್ಟುಬಿಟ್ಟ. ಎಡಗೈಯಿಂದ ದಾನ ನೀಡಿದ್ದಕ್ಕೆ ಆ ಯಾಚಕ ಆಕ್ಷೇಪಿಸಿದ. ಅದಕ್ಕೆ ಕರ್ಣ, 'ಮನದಲ್ಲಿ ಕೊಡಬೇಕೆಂಬ  ಭಾವ ಮೂಡಿದಾಗ ತಡ ಮಾಡದೇ ಕೊಟ್ಟುಬಿಡಬೇಕು. ನಾನು ಈಗ ಕೈ ತೊಳೆಯಲೆಂದು ತಡ ಮಾಡಿದ್ದಿದ್ದರೆ ಈ ಪ್ರಿಯ ಚೊಂಬನ್ನು ಬಿಟ್ಟು ಬೇರೆ ವಸ್ತುವನ್ನು ಕೊಡುವಂತೆ ಮನಕ್ಕೆ ಪ್ರೇರಣೆಯಾಗುತ್ತಿತ್ತು. ನಮಗೆ ಪ್ರಿಯವಾದುದನ್ನು ನೀಡುವದು ಯಾವಾಗಲೂ ಉತ್ತಮ ದಾನ. ಕಾರಣ ಎಂಜಲು ಕೈ ತೊಳೆಯುವ ಯೋಚನೆ ಮಾಡದೇ ಎಡಗೈಯಿಂದ ನೀಡಿದೆನೇ  ವಿನ: ಇದರಲ್ಲಿ ಇನ್ಯಾವ ಅರ್ಥವೂ ಇಲ್ಲ' ಎಂದು ಹೇಳುತ್ತಾನೆ.
ಇಲ್ಲಿ ಕರ್ಣ ಆಡಿದ ಮಾತಿನಲ್ಲಿ ಹಲವು ಹೊಳಹುಗಳಿವೆ. ದಾನ ನೀಡುವವನಿಗೆ ಇರಬೇಕಾದ ಮೂಲ ಮನಸ್ಥಿತಿಯು ಎಷ್ಟು ಉನ್ನತವಾಗಿರಬೇಕು ಎಂಬುದರ ಸೂಚನೆಯಿದೆ.
           ಈ ಹಿಂದಿನ ಬ್ಲಾಗ್ ನಲ್ಲಿ ನಮ್ಮ ಅಪ್ಪಯ್ಯನ ಹೊಸಮನೆಯ ಪ್ರವೇಶದ ಸಮಯದಲ್ಲಿ ಆಪದ್ಬಾಂಧವನಾಗಿ ಒದಗಿಬಂದ ರಾಮಪ್ಪ ಹೆಗಡೆಯವರ ಬಗ್ಗೆ ಹೇಳಿದ್ದೇನೆ. ಅವರಂತೆಯೇ ತನ್ನ ಅಂತರಂಗದ ಕರೆಗೆ ಓಗೊಟ್ಟ ಇನ್ನೊಬ್ಬ ಮಹಾನುಭಾವರ ಬಗ್ಗೆ ಕೂಡ ಹೇಳಬೇಕಿದೆ. ಅವರೇ ಡೊ೦ಬೆಸರದ  ನಾರಾಯಣ ಭಟ್ಟರು. ಇವರು ದೊಡ್ನಳ್ಳಿ ಗ್ರಾಮದ ಎಲ್ಲಾ ಬ್ರಾಹ್ಮಣ ಕುಟುಂಬಗಳ ಪುರೋಹಿತ ಭಟ್ಟರು. ನಿಜವಾದ ಅರ್ಥದಲ್ಲಿ ಪುರದ ಹಿತ ಕಾಯುವವರಾಗಿದ್ದರು. ಯಾವುದೇ ಕಾರ್ಯದಲ್ಲೂ ಧರ್ಮ- ಕರ್ಮ - ಕ್ರಿಯಾಲೋಪ ಬಾರದಂತೆ, ಎಂದೂ ದಕ್ಷಿಣೆಯ ಮುಖ ನೋಡದೇ, ಕರ್ತವ್ಯ ನಿರ್ವಹಿಸಿದವರು. ಸತ್ಯದ ಪಕ್ಷಪಾತಿಯಾಗಿ, ಯಾರ ದಾಕ್ಷಿಣ್ಯಕ್ಕೂ ಒಳಗಾಗದೆ ಗಂಭೀರವಾಗಿರುತ್ತಿದ್ದ ಅವರು ಎಲ್ಲರ ಗೌರವಕ್ಕೆ ಪಾತ್ರರಾಗಿದ್ದವರು. ನಮ್ಮ ಮನೆಯ ಪ್ರವೇಶ ಮತ್ತು ವಿನಾಯಕನ ಮುಂಜಿಗೂ ಇವರೇ ಪುರೋಹಿತರು. ಆ ಹೊಸಮನೆಯ ಒಳಗೊಂದು  ದೃಷ್ಟಿ ಹಾಯಿಸಿದರೆ ಅದರ ಒಡೆಯನ ಸ್ಥಿತಿಗತಿ ಯಾರಿಗಾದರೂ ಅರ್ಥವಾಗಿ ಬಿಡುತ್ತಿತ್ತು. ಸೂಕ್ಷ್ಮಗ್ರಾಹಿಗಳಾದ ನಾರಾಯಣ ಭಟ್ಟರಿಗಂತೂ ಕೇಳುವದೇ ಬೇಡ. ಗಂಭೀರರಾಗಿ ಎಲ್ಲ ಕರ್ಮಾಂಗಗಳನ್ನು ಕಿಂಚಿತ್ತೂ ಲೋಪ ಬಾರದಂತೆ  ಮುಗಿಸಿ, ಮಹಾಬಲೇಶ್ವರ ದಂಪತಿ ದಾನವಾಗಿ ನೀಡಿದ ಅಕ್ಕಿ, ತೆಂಗಿನಕಾಯಿ, ಕಲಶ, ಬಟ್ಟೆ, ದಕ್ಷಿಣೆ ಇತ್ಯಾದಿಗಳನ್ನೆಲ್ಲ ಪಡೆದು ಮೌನವಾಗಿ ಭೋಜನ ಮುಗಿಸಿದರು. ನಂತರ ಸುವಾಸನಾರ್ಥವಾಗಿ ಮಹಾಬಲನು ನೀಡಿದ ತುಳಸಿ ದಳವನ್ನು ಪಡೆದವರೇ ಅವನಿಗೆ 'ಒಂದು ರೂಪಾಯಿ' ತರಲು ಹೇಳಿದರು. ಅವನಿಂದ ಒಂದು ರೂಪಾಯಿ ತೆಗೆದುಕೊಂಡು ಈ ಮೊದಲು ದಾನವಾಗಿ ಪಡೆದ ಎಲ್ಲವನ್ನೂ-ಸ್ವೀಕರಿಸಿದ ದಕ್ಷಿಣೆ ಸಹಿತ- ಅವನಿಗೇ ಹಿಂತಿರುಗಿ ನೀಡಿ, 'ಸಂಪೂರ್ಣ ಪುಣ್ಯ ಫಲ ಸಿಗಲಿ' ಎಂದು ಆಶೀರ್ವದಿಸಿದರು. ಮಹಾಬಲನ ಯಾವ ಪ್ರತಿಭಟನೆಗೂ ಜಗ್ಗಲಿಲ್ಲ.
          ಶ್ರೀ ರಾಮಪ್ಪ ಹೆಗಡೆಯವರಾಗಲಿ ಅಥವಾ ಪೂಜ್ಯ ನಾರಾಯಣ ಭಟ್ಟರಾಗಲಿ, ತಮ್ಮ ಮನದಲ್ಲಿ ಸಹಾಯ ಮಾಡಬೇಕೆನ್ನುವ ಭಾವ ಮೂಡಿದಾಗ, ಯಾವ ಕಲ್ಮಶವೂ  ಮನದೊಳಗೆ ನುಸುಳಲು ಬಿಡದೆ, ಆ  ಕರ್ಣನಂತೆ,  ಆಂತರ್ಯದ ಆದೇಶ ಪಾಲಿಸಿದ ಮಹಾನುಭಾವರುಗಳು. ಇಲ್ಲಿ ಕೊಡುಗೆಯ ಮೌಲ್ಯಕ್ಕಿಂತ ಅದರ ಹಿಂದಿನ ಭಾವಕ್ಕೇ ಪ್ರಾಧಾನ್ಯ. ಇಂಥವರ ಸಾಹಚರ್ಯಕ್ಕೆ  ಬದುಕಿನ ಕಾಠಿಣ್ಯಗಳನ್ನೆದುರಿಸಲು ಅವಶ್ಯವಾದ  ಮನೋಬಲ ನೀಡುವ ಸಾಮರ್ಥ್ಯ ಇರುವದು. ನನ್ನ ಅಪ್ಪಯ್ಯ ಇಂತಹ ಹಲವಾರು ಮಹನೀಯರ ಸಾಂಗತ್ಯ ಹೊಂದಿದ್ದ.
           ಜಮೀನಿನ ಮಧ್ಯೆ ಮನೆ ಮಾಡಿದ್ದುದರ ಲಾಭ ನಿಧಾನವಾಗಿ ನನ್ನ ಅಪ್ಪಯ್ಯನಿಗೆ ಸಿಗತೊಡಗಿತು. ತುಡುಗು ದನಗಳ ಹಾವಳಿಯಿಂದ ಬೆಳೆಗೆ ರಕ್ಷಣೆ ಸಿಕ್ಕ ಕಾರಣ ಇಳುವರಿ ಸುಧಾರಿಸತೊಡಗಿತು. ಈ ನಡುವೆ ನಮ್ಮೂರ ಪ್ರಾಥಮಿಕ ಶಾಲೆಯ ಮೊದಲ ಮುಲ್ಕಿ ಪರೀಕ್ಷೆ ಬ್ಯಾಚಿನಲ್ಲಿದ್ದ ಎಂಟು ವಿದ್ಯಾರ್ಥಿಗಳಲ್ಲಿ (ನಾಲ್ಕು ಗಂಡು ಮತ್ತು ನಾಲ್ಕು ಹೆಣ್ಣು ಮಕ್ಕಳು) ನನ್ನಣ್ಣ ವಿನಾಯಕನೂ ಒಬ್ಬನಾಗಿ ಏಳನೇ ಇಯತ್ತೆ ಪಾಸು ಮಾಡಿದ. ತನ್ನ ಮಕ್ಕಳನ್ನು ವೇದವಿದ್ಯಾ ಪಾರಂಗತರನ್ನಾಗಿಸಬೇಕೆಂಬ ಕನಸು ಹೊತ್ತಿದ್ದ ಅಪ್ಪಯ್ಯ ತನ್ನ ಪತ್ನಿ ಮತ್ತು ಮಗ ವಿನಾಯಕನ ಯಾವ ಮಾತನ್ನೂ ಕಿವಿಯ ಮೇಲೆ ಹಾಕಿಕೊಳ್ಳದೆ ಅವನನ್ನು ಸೀದಾ 'ಸಾಲ್ಕಣಿ'ಯಲ್ಲಿದ್ದ  ವೇದ ಪಾಠಶಾಲೆಗೆ ಸೇರಿಸಿ, ಅವನಿಗೆ ಉಳಿದುಕೊಳ್ಳಲು 'ಕಡಕಿನಬೈಲಿ'ನ ಸುಬ್ರಾಯ ಹೆಗಡೆಯವರ ಮನೆಯಲ್ಲಿ ವ್ಯವಸ್ಥೆ ಮಾಡಿ ಊರಿಗೆ ಮರಳಿದ. ಚೆನ್ನಾಗಿ ಗಟ್ಟುಮುಟ್ಟಾಗಿದ್ದ ಮನೆಯ ಹಿರಿಯ ಮಗ ಈ ರೀತಿ ಕೃಷಿ ಕೆಲಸಕ್ಕೆ ಸಿಗದೇ ಹೋದುದಕ್ಕೆ ಗೌರಮ್ಮ ಮನದಲ್ಲೇ ಬೇಸರಿಸಿಕೊಂಡಿದ್ದೇ  ಬಂತು.
          ಹಳೆಯ ಮನೆಯಲ್ಲಿ ಹುಟ್ಟಿದ ಗಂಡು ಮಕ್ಕಳ ಸೈನ್ಯದ ಬಾಲಂಗೋಚಿಯಾಗಿ ಹೊಸ ಮನೆಗೆ ಬಂದ ಮೇಲೆ ಮೊದಲ ಹೆಣ್ಣುಮಗು ಜನಿಸಿತು. ಭಾಗ್ಯಲಕ್ಷ್ಮಿ ಮನೆಗೆ ಬಂದಂತಾಯಿತೆಂದು ಅಪ್ಪಯ್ಯ ಸಂತೋಷ ಪಟ್ಟ. ಈ ಸಂತೋಷ ವಾರ್ತೆಯನ್ನು ತಿಳಿಸಿ ತನ್ನ ಹಿರಿಮಗನಿಗೆ ನನ್ನ ಕೈಯಿಂದಲೇ ಪೋಸ್ಟ್ ಕಾರ್ಡ್ ಬರೆಸಿ ಹಾಕಿದ. ಹೀಗೆ ನಮ್ಮ ಮೊದಲ ತಂಗಿ 'ಸುಮನಾ' ಹಾಗೂ ಇನ್ನೆರಡು ವರ್ಷಗಳ ನಂತರ ಎರಡನೆಯ ತಂಗಿ 'ಶಾಲಿನಿ' ಈ ಮಹಾಬಲ ಸಂಸಾರದ ಸದಸ್ಯೆಯರಾದರು.
           ಹೆಚ್ಚುತ್ತಿದ್ದ  ಖರ್ಚು ಮತ್ತು ಜವಾಬ್ದಾರಿಗಳನ್ನು ಸರಿದೂಗಿಸಲು ಅವಿರತ ದುಡಿಮೆಯ ಈ ದಂಪತಿ ಹೊಸ ಹೊಸ ಮಾರ್ಗಗಳನ್ನು ಆವಿಷ್ಕರಿಸಲೇ ಬೇಕಾಯಿತು. ಕನಸುಗಳ ಬೆನ್ನೇರಿ ಹೊರಟವರಿಗೆ ವಿಶ್ರಾಂತಿ ಎಂಬುದೂ ಕನಸೇ ಅಲ್ಲವೇ?













           

ಬುಧವಾರ, ಆಗಸ್ಟ್ 6, 2014

ಅಂತರಾತ್ಮನ ದನಿಗೆ.......

         ಕಳೆದ ಸುಮಾರು ೮-೯ ವರ್ಷಗಳಿಂದ ಪೂಜ್ಯ ಶ್ರೀ ಡಿ. ವಿ. ಜಿ. ವಿರಚಿತ "ಮಂಕುತಿಮ್ಮನ ಕಗ್ಗ " ನನಗೆ ಗುರುಸ್ಥಾನದಲ್ಲಿದ್ದು ದಾರಿ ತೋರುತ್ತಿರುವ ಪುಸ್ತಕವಾಗಿದೆ. ಅದಕ್ಕೂ ಮೊದಲು ಸಹ ಅದರ ಸಂಗ ಇತ್ತಾದರೂ ನನ್ನ ಬದುಕಿಗೆ ಅದನ್ನು ಸಮೀಕರಿಸಿಕೊಂಡಿರಲಿಲ್ಲ. ನನ್ನ ಬೇಕು-ಬೇಡಗಳಿಗೆ ಬೇಲಿ ಹಾಕಿಕೊಂಡು, ಬದುಕಿನಲ್ಲಿ 'ನೆಮ್ಮದಿ'ಗೆ ಮಿಗಿಲಾದ ಸುಖವಿಲ್ಲ ಎಂಬುದನ್ನು ಮನಗಂಡು, ಆ 'ನೆಮ್ಮದಿ' ಪಡೆಯಲು ನೆರವಾಗುತ್ತಿರುವ "ಕಗ್ಗ'" ನನಗೆ ಗುರುವಾದರೆ, ಅದರ ಕರ್ತೃ "ದಿವಿಜ"-ಗುಂಡಪ್ಪನವರು ಮಹಾಗುರುಗಳು. ಕಳೆದ ಕೆಲ ದಿನಗಳಲ್ಲಿ ನನ್ನ ಸುತ್ತಲಿದ್ದ ಕೆಲವರ ನಡೆ-ನುಡಿಗಳನ್ನು ಕಂಡಾಗ, ಏನ ಕೇನ ಪ್ರಕಾರೇಣ  ಅಧಿಕಾರ, ಹಣ, ಪ್ರತಿಷ್ಠೆ ಹೊಂದಿಯೇ ತೀರಬೇಕೆಂದು - ಅದಕ್ಕಾಗಿ ತಮ್ಮವರಿಗೇ ವಂಚಿಸಿದರೂ ಸರಿಯೆ - ಎಂಬ ಅವರ ಮನ:ಸ್ಥಿತಿಯನ್ನು ಕಂಡಾಗ ಮರುಕ ಉಂಟಾಗುತ್ತಿದೆ. ತಾವು ಈ ಎತ್ತರ ತಲುಪಲು ತ್ಯಾಗ ಮಾಡಿದ, ತಮ್ಮ ಸುಖ ಮರೆತು ಇವರಿಗೆ  ಏಣಿಯಾಗಿ ಮೇಲಕ್ಕೇರಿಸಿದ ಹಿರಿಯರನ್ನೂ ,ಹಿತೈಷಿಗಳನ್ನೂ ಈಗಿನ ಸ್ಥಾನಬಲದಿಂದ ಅವಗಣನೆ ಮಾಡುವದನ್ನು ಗಮನಿಸಿದಾಗ ಸಂಕಟವಾಗುತ್ತದೆ.  ಹಾಗೆಂದು ಇವರು ಬುದ್ಧಿಹೀನರೇನಲ್ಲ, ಆದರೆ ತಮ್ಮ ಜ್ಞಾನ ಕೇವಲ ಪರೋಪದೇಶಕ್ಕಾಗಿಯೇ ವಿನ: ಸ್ವಯಮನುಷ್ಟಾನಕ್ಕೆ ಅಲ್ಲ ಎಂದುಕೊಂಡ ಪ್ರಭೃತಿಗಳು. ತಮ್ಮ ಜೀವಿತಾವಧಿಯ ಉದ್ದಕ್ಕೂ ಋಷಿಯಂತೆ ಬಾಳಿದ "ಡಿ. ವಿ. ಜಿ."  ಇಂಥವರನ್ನು ಎಚ್ಚರಿಸಲೆಂದೇ ಬರೆದ ಕೆಳಗಿನ ಮೂರು ಕಗ್ಗ ಚೌಪದಿಗಳು ಉಲ್ಲೇಖಯೋಗ್ಯವೆನಿಸುತ್ತವೆ.
         ೧) ಹೆಸರು ಹೆಸರೆಂದು ನೀಂ ಬಸವಳಿವುದೇಕಯ್ಯ| 
                ಕಸದೊಳಗೆ ಕಸವಾಗಿ ಹೋಹನಲೆ ನೀನು|| 
                   ಮುಸುಕಲೀ ಧರೆಯ ಮರೆವೆನ್ನನ್ ಎನುತ ಬೇಡು| 
                      ಮಿಸುಕದಿರು ಮಣ್ಣಿನಲಿ - ಮಂಕುತಿಮ್ಮ.||
             ತಾತ್ಪರ್ಯ :- ಎಂದಿದ್ದರೂ ಈ  ಮಣ್ಣಲ್ಲಿ ಮಣ್ಣಾಗಿ ಹೋಗುವವನೇ ಆದ ನೀನು ನಿನ್ನ ಹೆಸರಿಗಾಗಿ ಅದೇಕೆ ಅಷ್ಟು                                         ಗುದ್ದಾಡುತ್ತೀ. 'ಜನ ನನ್ನನ್ನು ಬೇಗನೆ ಮರೆಯಲಿ' ಎಂದುಕೊಂಡರೆ ಈ ತೊಳಲಾಟ                                                         ಇಲ್ಲವಾಗುತ್ತದೆಯಲ್ಲ! (ನಿನಗೆ ನಿರ್ಲಿಪ್ತತೆ ಸಾಧಿಸುತ್ತದೆಯಲ್ಲ !) 
          ೨) ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ |
                  ಚಿನ್ನದಾತುರಕಿಂತ ಹೆಣ್ಣು-ಗಂಡೊಲವು|| 
                    ಮನ್ನಣೆಯ ದಾಹ ಈ ಎಲ್ಲಕುಂ ತೀಕ್ಷ್ಣತಮ| 
                        ಕೊಲ್ಲುವುದದಾತ್ಮವನೆ - ಮಂಕುತಿಮ್ಮ.|| 
                                ಇದಕ್ಕೆ ಹೆಚ್ಚಿನ ವಿವರಣೆ ಅನಗತ್ಯ.
           ೩)  ಭುವಿಯಿಂದ ಮೊಳಕೆವೊಗೆವಂದು ತಮ್ಮಟೆಗಳಿಲ್ಲ|
                    ಫಲಮಾಗುವಂದು ತುತ್ತೂರಿ ದನಿಯಿಲ್ಲ|| 
                       ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ| 
                           ಹೊಲಿ  ನಿನ್ನ  ತುಟಿಗಳನು - ಮಂಕುತಿಮ್ಮ.|| 
                 ತಾತ್ಪರ್ಯ :- ಈ ಜಗತ್ತಿನಲ್ಲಿನ ಅತ್ಯಂತ ಮಹತ್ವವೂ, ಶ್ರೇಷ್ಠವೂ ಆದ ಬೀಜ ಮೊಳಕೆ ಒಡೆದು ಸಸಿಯಾಗುವ,                                           ಕಾಯಿ ಹಣ್ಣಾಗುವ ಪ್ರಕ್ರಿಯೆಗಳು, ಸೂರ್ಯ- ಚಂದ್ರರ "ಬೆಳಗುವ" ಕಾರ್ಯಗಳೇ  ಸದ್ದಿಲ್ಲದೇ                                               ನಡೆಯುತ್ತಿರುವಾಗ  ನಿನ್ನ ಸಾಧನೆಗಳನ್ನು  ಅದೇನು 'ಮಹಾ' ಎಂದು ಸಾರಿಕೊಳ್ಳುತ್ತೀ

                  ಅಂತರಾತ್ಮನ ದನಿಗೆ ಕಿವಿಗೊಡೋಣ. ಆತ್ಮವಂಚನೆಗೈಯ್ಯದೆ ಬದುಕೋಣ
                                                                                                                                           
                                              'ಸರ್ವೇ ಸಂತು ನಿರಾಮಯಾ:'

                                                    -----------------










ಶುಕ್ರವಾರ, ಆಗಸ್ಟ್ 1, 2014

ನಾನು ಬಡವ ... ಅವಳು ಬಡವಿ .....

           " ಹಿಂದೊಮ್ಮೆ ಕದಂಬರ ಸೈನ್ಯದಲ್ಲಿ ದಳಪತಿಯಾಗಿದ್ದ 'ದೊಡ್ಡಣ್ಣ ನಾಯಕ'ನೆಂಬುವನು ನಮ್ಮ ಗ್ರಾಮದಲ್ಲಿದ್ದ ಗ್ರಾಮಾಧಿದೇವತೆ ಶ್ರೀ ಶಂಭುಲಿಂಗೇಶ್ವರನ  ಗುಡಿಯನ್ನು ಜೀರ್ಣೋದ್ಧಾರ ಮಾಡಿಸಿದ ನಂತರ ಈ ಊರಿಗೆ "ದೊಡ್ನಳ್ಳಿ"ಎಂದು ಹೆಸರು ಬಂದಿತು" ಎಂಬುದಾಗಿ ಕಾರವಾರ ಜಿಲ್ಲಾ ಗೆಜೆಟಿಯರ್ ನಲ್ಲಿ ದಾಖಲಾಗಿದೆ ಎಂದು ಈ ಊರಿನಲ್ಲಿ ಪ್ರಾಥಮಿಕ ಶಾಲೆ ಆರಂಭವಾದಾಗ ಮೊದಲ ಶಿಕ್ಷಕರಲ್ಲಿ ಒಬ್ಬರಾಗಿದ್ದ 'ಭಾಗ್ವತ  ಮಾಸ್ತರರು' (ಶ್ರೀ ಕೆ. ಎನ್. ರಾವ್ ) ಶಾಲೆಯ ಸ್ವರ್ಣ ಮಹೋತ್ಸವದ ಸಮಾರಂಭದಲ್ಲಿ ಹೇಳಿದ್ದು ನನಗೆ ನೆನಪಿದೆ. ಶ್ರೀ ಶಂಭುಲಿಂಗೇಶ್ವರ ದೇವರು ಈ ಊರಿನ ಶ್ರೇಯೋಭಿವೃದ್ಧಿಗೆ ಕಾರಣೀಕರ್ತನು. ನಮ್ಮೂರಿನವರ ಆರಾಧ್ಯ ದೈವವಾದ ಇವನು ಸುತ್ತಲಿನ ಸೋಮನಳ್ಳಿ, ಬಿಸಲಕೊಪ್ಪ , ಚಿಪಗಿ, ತಾರಗೋಡು, ನಡಗೋಡು ಮೊದಲಾದ ಗ್ರಾಮಗಳ ಕೆಲವರಿಗೆ ಕುಲದೈವವೂ ಹೌದು. ಊರಿನ ಹಿರಿಯರಾದ ದಿ. ಗಣಪತಿ ಹೆಗಡೆಯವರು "ಈ ಊರಿನಲ್ಲಿ ವಿನಯಶೀಲತೆಯೇ ಉನ್ನತಿಗೆ ಸೋಪಾನ. ನಾ, ನಾ (ಅಹಂ ಭಾವ) ಎಂಬುವವನನ್ನು ನಮ್ಮ ಶಂಭುಲಿಂಗ ಎಂದೂ ಸಹಿಸನು" ಎಂದು ಹೇಳುತ್ತಿದ್ದುದನ್ನು ನಾನು ಬಾಲಕನಿದ್ದಾಗ ಕೇಳಿದ್ದು ಚೆನ್ನಾಗಿ ನೆನಪಿದೆ. ಇಲ್ಲಿ ಶಿವನ ಅಭಿಷೇಕಕ್ಕೆ ನಿಗದಿ ಪಡಿಸಿದ ಹೊಂಡ / ಭಾವಿಯ ನೀರನ್ನೇ ಬಳಸಬೇಕೆಂಬ ನಿಯಮವಿದೆ. ಈ ಭವಹರನ ಮಹಿಮೆ ಅಪಾರವಾಗಿದ್ದು ಭಕ್ತವೃಂದ ಕೂಡ ವಿಶಾಲವಾಗಿದೆ. ಈಗ ಗುಡಿ ಮತ್ತೊಮ್ಮೆ ನವೀಕೃತವಾಗಿದ್ದು ವಿಶಾಲವೂ, ಪ್ರೇಕ್ಷಣೀಯವೂ ಆಗಿದೆ.
             ನನ್ನ ತಂದೆಯವರು ಈ ಊರಿಗೆ ಬಂದಾಗ ದೇವಸ್ಥಾನ ಎಂದರೆ ಒಂದು ಗರ್ಭಗುಡಿ, ಕಿರಿದಾದ ಪ್ರದಕ್ಷಿಣ ಪ್ರಾಕಾರ    ಹಾಗೂ ಎದುರಿನಲ್ಲಿ ಒಂದು ಪುಟ್ಟ ನವರಂಗ (ಸಭಾಗೃಹ) ಇಷ್ಟು ಮಾತ್ರ ಇದ್ದ, ನಿತ್ಯ ಪೂಜೆ ನಡೆಯುತ್ತಿದ್ದ,ಸಣ್ಣ ದೇವಳವಾಗಿತ್ತು. ಗರ್ಭಗೃಹದಲ್ಲಿ ಉದ್ಭವಲಿಂಗವೆಂದು ಪ್ರತೀತಿಯಿದ್ದ ಶಂಭುಲಿಂಗ ಹಾಗು ಎದುರಿನಲ್ಲಿ (ಹೊರಗೆ) ಮೂತಿಯೋ ಬಾಲವೋ, (ನನಗೀಗ ಸರಿಯಾಗಿ ನೆನಪಿಲ್ಲ ) ಖಡ್ಗದಿಂದ ಕೆತ್ತಿಹೋದ ಪುಟ್ಟ ಬಸವಣ್ಣ. ಈ ನಂದಿಯ ಮೇಲುಗಡೆ, ಈಗಲೂ ಇರುವ, ದೊಡ್ಡ ಘಂಟೆ. ಇಂತಿಪ್ಪ ಈ ಗುಡಿಯ ಅರ್ಚಕ ಹುದ್ದೆಯನ್ನೂ ಸಹ ಒಪ್ಪಿಕೊಂಡ ನನ್ನ ತಂದೆ ಮಹಾಬಲೇಶ್ವರನಿಗೆ ಒಟ್ಟಿನಲ್ಲಿ ಆ ಊರಿನವರಲ್ಲಿ ಒಬ್ಬನಾಗಿ, ತಾನು ನೆಲೆ ನಿಲ್ಲಬೇಕಾಗಿತ್ತು.
             ಈ ಮಹಾಬಲನು 'ಗೇಣಿ'ಗೆ ಪಡೆದ ಜಮೀನು ಸಹ ವರ್ಣನಾಯೋಗ್ಯವೇ ಇದೆ. 'ಸಾಗುವಳಿ ಯೋಗ್ಯ'ವೆಂದು ಗುರುತಿಸಲ್ಪಟ್ಟ ಗದ್ದೆಗಳಲ್ಲಿ ಎರಡು ಭಾಗ - ಮೇಲೆ ಕೆರೆಯ ಸರ್ವೇ ನಂಬರಿನಿಂದ ಕೆಳಗೆ ಸುಮಾರು  ಸಾವಿರ ಅಡಿ  ದೂರದಲ್ಲಿದ್ದ ದೊಡ್ಡ ಮಣ್ಣಿನ ಏರಿಯ ತನಕದ ಭಾಗ "ಹೊಸಕಟ್ಟೆ" ಹಾಗೂ ಅದರ ಕೆಳಗೆ ಹಾನಂಬೆ ರಸ್ತೆಯತನಕದ ಭಾಗ "ಮೂಲಗದ್ದೆ". ನನ್ನಮ್ಮ ಈಗಲೂ ಆ ಗದ್ದೆಗಳ ವೈಖರಿ ನೆನಪಿಸಿಕೊಳ್ಳುತ್ತಾಳೆ -ನಾಟಾ ಎಂದು ಬಳಸಬಹುದಾದ ಎಲ್ಲ ದೊಡ್ಡ ಮರಗಳನ್ನೂ ಕಡಿದು ಖಾಲಿ ಮಾಡಲ್ಪಟ್ಟ, ಕೇವಲ ಮುಳ್ಳು ಕಂಟಿ ಮತ್ತು ದಟ್ಟವಾದ ಬಿದಿರು ಮೆಳೆಗಳಿಂದ ತುಂಬಿಹೋದ 'ಹೊಸಕಟ್ಟೆ'ಯಲ್ಲಿ ಅಲ್ಲೊಂದು ಇಲ್ಲೊಂದು 'ಹಾಳಿ' ಹಾಕಿದ ಗುರುತು ಬಿಟ್ಟರೆ ಅದು ಪಕ್ಕದ ಕಾಡಿನ ವಿಸ್ತರಿತ ಭಾಗದಂತೆ ಕಾಣುತ್ತಿತ್ತು. 'ಮೂಲಗದ್ದೆ' ಇದ್ದುದರಲ್ಲೇ ಸ್ವಲ್ಪ ಮೇಲು. ಆಳು ನೋಡಲು ಭಾರಿ ಅಲ್ಲದಿದ್ದರೂ ಮಹಾಬಲನಲ್ಲಿ ಛಲ ಮತ್ತು ಬಲಕ್ಕೆ ಕೊರತೆ ಇರಲಿಲ್ಲ. ಅಕ್ಷರಶ: ಅಹೋರಾತ್ರಿ ದುಡಿದ ಈ "ಗೌರಿ-ಮಹಾಬಲ" ಜೋಡಿ ಆ ಕಾಡನ್ನೆಲ್ಲ ಸವರಿ, ಸುಟ್ಟು, ಗದ್ದೆಯಾಗಿ ಪರಿವರ್ತಿಸಿದಾಗ ನೋಡಿದವರಿಗೆ ಅದರ ಭೂತರೂಪ ಕಟ್ಟುಕತೆ ಅನ್ನಿಸುವ ಹಾಗೆ ಆಗಿತ್ತು. ಆದರೆ ಗದ್ದೆಯ ಎರಡೂ ಪಕ್ಕಗಳಲ್ಲಿದ್ದ "ಬ್ಯಾಣ" ನನಗೆ ತಿಳುವಳಿಕೆ ಮೂಡಿದಾಗಲೂ ಅದೇ ರೂಪದಲ್ಲೇ ಇತ್ತು.
             ಇಷ್ಟೆಲ್ಲ ಕಷ್ಟಪಟ್ಟು ತಯಾರು ಮಾಡಿದ ಗದ್ದೆಯಲ್ಲಿ ಬೇಸಾಯ ಮಾಡಲು ನನ್ನ ಅಪ್ಪಯ್ಯ ಎಲ್ಲರ ಕೃಷಿ ಕೆಲಸ ಮುಗಿಯುವ ತನಕ ಕಾಯಬೇಕಾಗುತ್ತಿತ್ತು. ಏಕೆಂದರೆ ಇವನಲ್ಲಿ ತನ್ನ ಸ್ವಂತ ಎತ್ತಿನ ಜೋಡಿ ಇರಲಿಲ್ಲ. ಅಂತೂ ಇಂತೂ ಅವರಿವರಲ್ಲಿ  ದಮ್ಮಯ್ಯ ಎಂದು ಗುಡ್ಡೆ ಹಾಕಿ ಸಸಿ ನಾಟಿ ಮಾಡಿ ಬಂದರೆ ಕಾಡಿನಂಚಿನ ಈ ಗದ್ದೆಯಲ್ಲಿ ಕಳ್ಳ ದನಗಳ ಕಾಟ. ಅವು  ಮೇಯ್ದು ಉಳಿದಿದ್ದರಲ್ಲಿ ತೆನೆಗೂಡಿದಾಗ, ಆ ಭಾಗದಲ್ಲಿದ್ದ ಅಸಂಖ್ಯ ಕಾಡುಹಂದಿಗಳು ಲೂಟಿ ಮಾಡಿದ ನಂತರ, ಇವನ ಪಾಲಿಗೆ  ಅದೆಷ್ಟು ಮಿಗುತ್ತಿತ್ತೋ ನಾ ಕಾಣೆ. ಊರೊಳಗಿಂದ ಗದ್ದೆಗೆ ಹೋಗಿಬರಲೂ ದೂರವಾಗುತ್ತಿತ್ತು. ಮನೆಯಲ್ಲಿ ಅದಾಗಲೇ ಮಕ್ಕಳ ಸೈನ್ಯ ತಯಾರಾಗುತ್ತಿತ್ತು. ಜೊತೆಯಲ್ಲಿ ಗ್ರಾಮ ದೇವರ ಪ್ರಸಾದ ವಿತರಣೆಗಾಗಿ ಪ್ರತಿ ವಾರವೂ ಸೀಮೆ ಪೂರ್ತಿ ಸುತ್ತುವ ಕೆಲಸ.   ದೇವರ ನಿತ್ಯ ಪೂಜೆಗೆ ಎಲ್ಲಿದ್ದರೂ ಬರಲೇ ಬೇಕಾದ ಅನಿವಾರ್ಯತೆ ಬೇರೆ. ತಾಯಿ ಬದುಕಿದ್ದಾಗ ಕಂಡ ಕಷ್ಟಗಳು ಒಂದು ಬಗೆಯವಾದರೆ ಈಗ ಹೆಂಡತಿ ಮಕ್ಕಳು ಸಹ ತನ್ನ ಜೊತೆಗೇ  ಕಷ್ಟ ಪಡುವದನ್ನು ಕಾಣುವ ಅಸಹಾಯಕತೆ ಕೂಡಾ ಸೇರಿಕೊಂಡು ಮಹಾಬಲನಿಗೆ ಬದುಕು ದುಃಸಹವೆನಿಸತೊಡಗಿತ್ತು. ದೇವಸ್ಥಾನದ ಪೂಜೆಗೆ ಬರಲು ತಡವಾದಲ್ಲಿ ಗೌರಿ ಸಹ ಊರವರ ಮಾತು ಕೇಳಬೇಕಾಗುತ್ತಿತ್ತು. ಇದರಿಂದ ಅವಳೂ ಸಿಟ್ಟಿಗೆದ್ದು ಗಂಡನಿಗೆ ಮಂಗಳಾರತಿ ಮಾಡುತ್ತಿದ್ದಳು. ಇವೆಲ್ಲದರಿಂದ ರೋಸಿಹೋಗಿ  ಕೊನೆಗೆ ಅನಿವಾರ್ಯವಾಗಿ ದೇವರ ಪೂಜೆಯನ್ನು ಘಟ್ಟದ ಕೆಳಗಿನಿಂದ ಬಂದ ನರಸಿಂಹ ಭಟ್ಟರಿಗೆ ವಹಿಸಿಕೊಟ್ಟು, ಕೈತೊಳೆದುಕೊಂಡನು. ಇದೆಲ್ಲ ನಾನು ಹುಟ್ಟುವ ಪೂರ್ವದಲ್ಲೇ ಆದ ಕಥೆ.
          ಆ ವಿಷಮ ದಿನಗಳಲ್ಲಿ ಈ ಮಹಾಬಲ ಸಂಸಾರ ಹೇಗೆ ಸಾಗುತ್ತಿತ್ತು ? ಬಹುಶ: ಬೆಳೆದ ಬೆಳೆ ಕೂಲಿಯಾಳುಗಳ ಸಂಬಳಕ್ಕೆ ಮಾತ್ರ ಸಾಲುತ್ತಿತ್ತೇನೋ! ಪ್ರತಿ ಏಪ್ರಿಲ್ ತಿಂಗಳಲ್ಲೊಮ್ಮೆ ನವೀಕರಣಗೊಳ್ಳುತ್ತಿದ್ದ ಸೊಸಾಯಿಟಿ ಸಾಲವೇ ಕೃಷಿಗೆ ಬಂಡವಾಳ. ಪತಿ - ಪತ್ನಿ ಮಾತ್ರವಲ್ಲದೆ ದುಡಿಯದೇ ತಿನ್ನುವ ಪುಟ್ಟ ಮಕ್ಕಳ ಹೊಟ್ಟೆ ಸಹ ತುಂಬಬೇಕಿತ್ತು.  ಅದಕ್ಕಾಗಿ ಸಣ್ಣ ಪುಟ್ಟ ಪೌರೋಹಿತ್ಯ, ಮದುವೆ ಮುಂಜಿ ಮುಂತಾದ ಶುಭಕಾರ್ಯಗಳಲ್ಲಿ ನೀಡುವ ದಕ್ಷಿಣೆ,ವರ್ಷಕ್ಕೊಮ್ಮೆ ಸೀಮೆ ಸುತ್ತಿ ಗಿಟ್ಟಿಸುತ್ತಿದ್ದ 'ಸಂಭಾವನೆ', ಸಣ್ಣ ಪುಟ್ಟ ಸಮಾರಂಭಗಳಲ್ಲಿ ಅಡಿಗೆ ಕೆಲಸ, ಅಲ್ಲಲ್ಲಿ ಕಿರಾಣಿ ಅಂಗಡಿಗಳಲ್ಲಿ ದೊರಕುತ್ತಿದ್ದ ತಾತ್ಪೂರ್ತಿಕ ಉದ್ರಿ -ಇವೆಲ್ಲವುಗಳ ಮೇಲೆಯೇ ಈ ಕುಚೇಲನ ಜೀವನ ರಥ ಸಾಗುತ್ತಿತ್ತು. ಈ ಮಧ್ಯೆ, ಜಮೀನಿನ ನಡುವೆಯೇ ಮನೆ ಮಾಡಿದರೆ ಸಾಕಷ್ಟು ಅನುಕೂಲತೆ ಇದೆಯೆಂದು ಆಲೋಚಿಸಿ ಊರೊಳಗಿನ ಜಾಗೆಯನ್ನು ಸೊರಬ  ಸೀಮೆಯಿಂದ ಬಂದು ನಮ್ಮೂರಿನಲ್ಲಿ ಜಮೀನು ಮಾಡುತ್ತಿದ್ದ ಶ್ರೀಯುತ ರಾಮಪ್ಪ ಶೇಷಗಿರಿಯಪ್ಪ ಹೆಗಡೆಯವರಿಗೆ ಮಾರಿ, ಅದೇ ದುಡ್ಡಿನಲ್ಲಿ ತನ್ನ ಜಮೀನಿನಲ್ಲಿಯೇ ಒಂದು ಮನೆ ಕಟ್ಟಿಕೊಂಡನು. ಆ ಮನೆ ಕಟ್ಟುವಾಗ ನಾನು ಕನ್ನಡ ಶಾಲೆಯ ಎರಡನೇ ವರ್ಗದಲ್ಲಿದ್ದೆ. ನನ್ನ ದೊಡ್ಡಣ್ಣ ವಿನಾಯಕ ಅದರ ನಿರ್ಮಾಣದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದನು. ಸುಮಾರು ೮ ಅಂಕಣದಷ್ಟು ಜಾಗ ಇದ್ದ ಅದರ ಸುತ್ತಲೂ ಮಣ್ಣು ಮುದ್ದೆ ಗೋಡೆ  ಹಾಗೂ ಒಳಗಡೆ ಮೂರು ಭಾಗವಿತ್ತು.
         ಆ ಮನೆಯ ಪ್ರವೇಶದ ಜೊತೆಗೇ ನನ್ನಣ್ಣನ ಮುಂಜಿ ಸಹ ಮಾಡಲು ಅಪ್ಪಯ್ಯ ಯೋಜಿಸಿದ್ದ. ಊರೊಳಗಿನ ಜಾಗ ಮಾರಿದ ದುಡ್ಡಿನಲ್ಲೇ ಇದೂ ಕೂಡ ಆಗಬೇಕಿತ್ತು. ಅದಕ್ಕಾಗಿ ಪಕ್ಕದ ಇಸಳೂರಿನ ಗೌಡರ ಅಂಗಡಿಯಲ್ಲಿ ಕಿರಾಣಿ ಸಾಮಾನು ತರಲು ಹೋದಾಗ ಮೊದಲು ಹಳೇ ಬಾಕಿ ತುಂಬಿಸಿಕೊಂಡ ಅವರು, ತಾನು ಉದ್ರಿ ಕೊಡುವದನ್ನು ನಿಲ್ಲಿಸಿಬಿಟ್ಟಿರುವದಾಗಿ ಹೇಳಿಬಿಟ್ಟರು. ತನ್ನ ಪರಿಸ್ಥಿತಿಯನ್ನು ಪರಿಪರಿಯಾಗಿ ವಿವರಿಸಿದರೂ ಅದಕ್ಕೆ ಸೊಪ್ಪು ಹಾಕದ ಅವರು ಇವನನ್ನು ಸಾಗಹಾಕಿದರು. ಮಾರನೆ ದಿನದ ಕಾರ್ಯಕ್ಕಾಗಿ ಎಲ್ಲರಿಗೂ ಹೇಳಿಯಾಗಿತ್ತು. ಆದರೆ ಮನೆಯಲ್ಲಿ ನಾಲ್ಕು ಜನರಿಗೆ ಮಾಡಿ ಬಡಿಸುವಷ್ಟು ಸಾಮಗ್ರಿಯೂ ಇರಲಿಲ್ಲ. ಆ ಅತೀವ ನಿರಾಶೆಯಲ್ಲಿ ದುಃಖತಪ್ತ ದಂಪತಿ ದೇವರ ಮೇಲೆ ಭಾರ ಹಾಕಿ ಮಲಗಿದರು.
          ಅದು ಹೇಗೋ ಈ ವಿಷಯ ಗೊತ್ತುಮಾಡಿಕೊಂಡ ರಾಮಪ್ಪ ಹೆಗಡೆಯವರು ಮರುದಿನ ಸೂರ್ಯೋದಯಕ್ಕೆ ಸರಿಯಾಗಿ ಅವತ್ತಿನ ಪುಟ್ಟ ಸಮಾರಂಭಕ್ಕೆ ಅವಶ್ಯವಿರುವಷ್ಟು ದಿನಸಿ ಸಾಮಗ್ರಿ, ಅಕ್ಕಿ, ಕಾಯಿ ಮತ್ತು ಒಂದು ಡಬ್ಬಿ ಬೆಲ್ಲ- ಎಲ್ಲವನ್ನು ಆಳುಗಳ ಕೈಲಿ ಹೊರಿಸಿ ಈ ಹೊಸಮನೆಗೆ ಕಳಿಸಿಕೊಟ್ಟಿದ್ದರು. ಕೃತಜ್ಞತೆಯಿಂದ ಕೊರಳ ಸೆರೆ ಉಬ್ಬಿ ಬಂದ ಮಹಾಬಲ ಭಟ್ಟರ ಬೆನ್ನು ತಟ್ಟಿ, 'ಮೊದಲು ಕಾರ್ಯ ಸಾಗಿಸಿ' ಎಂದು ಪ್ರೋತ್ಸಾಹದ ಮಾತಾಡಿದರು. ಅಂದು ನಮ್ಮ ಕುಟುಂಬದ ಪಾಲಿಗೆ ದೇವರೇ ಆಗಿಬಂದ, ಈಗ ತೊಂಭತ್ತರ ಹೊಸ್ತಿಲಲ್ಲಿರುವ ಶ್ರೀಯುತ ರಾಮಪ್ಪ ಹೆಗಡೆಯವರು ನಾವು ಸಹೋದರರಿಗೆಲ್ಲ ತೀರ್ಥರೂಪರೆ ಹೌದು.
          "ಕೊಲ್ಲುವ  ದೇವರಿಗಿಂತ ಕಾಯುವ ದೇವರು ದೊಡ್ಡವನು" ಎಂಬುದು ಇದಕ್ಕೇ ಅಲ್ಲವೇ ?
           


















     

ಶುಕ್ರವಾರ, ಜೂನ್ 27, 2014

ಮರೆಯಲಾಗದ 'ಮುದಿಯಮ್ಮ'

                                                                                                                                                                            ಈ ಬರಹವನ್ನು ಓದುವ ಪೂರ್ವದಲ್ಲಿ ಈ ಹಿಂದೆ ಇದೇ blogspotನಲ್ಲಿ  ಪ್ರಕಟಿಸಿದ ನನ್ನ "ಮಹಾತಾಯಿ" ಮೇಲೊಮ್ಮೆ ಕಣ್ಣು ಹಾಯಿಸುವದೊಳಿತು  .
        ಅದು ೧೯೪೬-೪೯ರ ಸುಮಾರಿನ ಸಮಯ. ಇಡೀ  ದೇಶ ಸ್ವಾತಂತ್ರ್ಯದ ಘಮಲಿನಲ್ಲಿ ಉನ್ಮತ್ತವಾಗಿದ್ದ ಕಾಲ. ಇದೇ ಸುಮಾರಿಗೆ ಅದಾಗಲೇ ಶಿರಸಿ ತಾಲೂಕಿನ ಕುಳವೆ ಗ್ರಾಮದಲ್ಲಿ ತನ್ನ ದುಡಿಮೆಯಲ್ಲಿ ಬದುಕುತ್ತಾ, ತನ್ನ ಸಜ್ಜನಿಕೆಯಿಂದಾಗಿ  ಊರವರೆಲ್ಲರ ಪ್ರೀತಿಗೆ ಪಾತ್ರನಾಗಿದ್ದ ಯುವಕ ಮಹಾಬಲೇಶ್ವರನಲ್ಲೂ ತನ್ನದೇ ಆದ ಸ್ವಂತ ಜಮೀನು ಹೊಂದುವ ಆಸೆ  ಅದಮ್ಯವಾಗಿ ತಲೆಯೆತ್ತುತ್ತಿತ್ತು. ಕುಳವೆಯಲ್ಲಿ ಬಡ್ತಿ ಡಾಕ್ಟರರ ಮನೆಯಲ್ಲಿ ಮನೆ ಮಗನ ತರಹದ ಪ್ರೀತಿ ವಿಶ್ವಾಸ ಸಿಗುತ್ತಿದ್ದರೂ ಸ್ವತಂತ್ರ ನೆಲೆ ಹೊಂದುವ ಅಭಿಲಾಷೆಯ  ಮುಂದೆ ಅದು ಹಿನ್ನೆಲೆಗೆ ಸರಿಯುತ್ತಿತ್ತು. ಒಂದೆರಡು ವಿಫಲ ಯತ್ನಗಳ ನಂತರ ಕೊನೆಗೊಮ್ಮೆ ತಾಲೂಕಿನ ಪೂರ್ವ ಭಾಗದ "ದೊಡ್ನಳ್ಳಿ"ಯಲ್ಲಿ 'ಗೇಣಿ'ಗೆ  ಜಮೀನು ಸಿಗುವ ಬಾತ್ಮಿಯನ್ನು ಪಡೆದು, ಅದರ ಮಾಲಿಕರಾದ ಕಾರವಾರದ ವಕೀಲ ಹಬ್ಬುರಾಯರನ್ನು ಮತ್ತು ಶಿರಸಿಯಲ್ಲಿ ಅವರ ಪ್ರತಿನಿಧಿಯಾದ ಶ್ರೀಮತಿ ಫಣಿಯಮ್ಮ ಹೆಬ್ಬಾರರನ್ನು ಭೆಟ್ಟಿಯಾಗಿ, ಸುಮಾರು ಹದಿನೆಂಟು ಎಕರೆಯಷ್ಟು ಜಮೀನನ್ನು ಗೇಣಿ ಕರಾರಿನ ಮೇಲೆ ಪಡೆಯುವಲ್ಲಿ ಯಶಸ್ವಿಯಾದನು. ಆಗಿನ ಕಾಲದಲ್ಲಿ ಅದಕ್ಕೆ ವಾರ್ಷಿಕ ತಲಾ ಇಪ್ಪತ್ನಾಲ್ಕು ರೂಪಾಯಿಗಳ ಗೇಣಿ ಮತ್ತು ಸರಕಾರೀ ತೆರಿಗೆ ಇತ್ತು.
        ಆ ವೇಳೆಗೆ ಶಿರಸಿ ಸೀಮೆಯಲ್ಲಿ "ಕನ್ಯಾಬರ" ಇತ್ತು. ಮನೆಮಾರು ಎಲ್ಲ ಇದ್ದವರಿಗೇ ಹೆಣ್ಣು ಸಿಗದ ವಾತಾವರಣ ಇದ್ದಾಗ ಈ ಸುದಾಮನಿಗೆ ಯಾರು ಹೆಣ್ಣು ಕೊಡಬೇಕು. ಮೇಲಾಗಿ ಇವನಿಗಾಗಲೇ ೩೨-೩೩ ವರ್ಷವಾಗಿತ್ತು. ಆ ಸಮಯದಲ್ಲಿ ಘಟ್ಟದ ಕೆಳಗಿನ ಕುಂಬಳ ಸೀಮೆಯಿಂದ ಮಲಯಾಳಿ ಹೆಣ್ಮಕ್ಕಳನ್ನು ತಂದು ತಾವೇ ಎಲ್ಲ ಖರ್ಚು ಹಾಕಿಕೊಂಡು ಮದುವೆ ಮಾಡಿಕೊಳ್ಳುವ ಪದ್ಧತಿ ಅಲ್ಲಲ್ಲಿ ಕೆಲ ಹವ್ಯಕರಲ್ಲಿ ಕಂಡುಬರತೊಡಗಿತ್ತು. (ಚಕ್ರ ಮತ್ತೊಂದು ಸುತ್ತು ತಿರುಗಿದ್ದು ಹವ್ಯಕ ವಿವಾಹಯೋಗ್ಯ ಗಂಡುಗಳಿಗೆ ಈಗ ಮತ್ತೊಮ್ಮೆ "ಕನ್ಯಾಬರ" ಎದುರಾಗಿದೆ. ಎಂತಹ ವಿಪರ್ಯಾಸ !). ಕೆಲ ಮಧ್ಯವರ್ತಿಗಳ ನೆರವಿನಿಂದ ಮಹಾಬಲೇಶ್ವರನೂ ಮಂಗಳೂರಿನ ಸನಿಹದ ಪಣಂಬೂರಿನ ಲಕ್ಷ್ಮೀನಾರಾಯಣ ಐತಾಳರ ಕೊನೆಯ ಮಗಳು ಗೌರಿಯನ್ನು, ಕನ್ಯಾಶುಲ್ಕ ನೀಡಿ, ಅಲ್ಲೇ ಹೋಗಿ ಲಗ್ನವಾದನು. ಅದಾಗಲೇ ಇಳಿವಯಸ್ಸು  ಹಾಗೂ ಕಾಡುತ್ತಿದ್ದ ಉಬ್ಬಸದ ಕಾರಣದಿಂದ ಜರ್ಝರಿತರಾಗಿದ್ದ ಐತಾಳರು  ವಿಶೇಷ ವಿಚಾರ ಮಾಡದೆ ಗುರುತು ಪರಿಚಯ ಇಲ್ಲದ, ಘಟ್ಟದ ಮೇಲಿನವನಾದ, ತನ್ನ ಮಗಳಿಗಿಂತ ಸುಮಾರು ೨೦-೨೧ ವರ್ಷ ಹಿರಿಯನಾದ ಈ ವರನಿಗೆ ಗೊಂಬೆಯಂತೆ ಸುಂದರಳಾದ ತಮ್ಮ  ಮುಗ್ಧ  ಮಗಳನ್ನು ಧಾರೆಯೆರೆದು ಕೊಟ್ಟು,  ಕನ್ಯಾಸೆರೆ ಬಿಡಿಸಿಕೊಂಡು ನಿರಾಳವಾದರು. ಮದುವೆಯ ಗಡಿಬಿಡಿ ಎಲ್ಲ ಮುಗಿದ ಮೇಲೆ ಗೌರಿಯ ಅಣ್ಣ ಸುಂದರನು (ವೆಂಕಟರಮಣ ಐತಾಳ)  ಘಟ್ಟದ ಮೇಲಿನ  ಅಳಿಯದೇವರ ಊರು-ಮನೆ ನೋಡಲು ಬಂದರೆ ಇಲ್ಲೇನಿದೆ?  'ಕೈಲಾಸವಾಸಿ ಪರಮೇಶ್ವರನಂತೆ ತನಗೂ ಏನೂ ಕಮ್ಮಿ ಇಲ್ಲ' ಎಂದು ಅತ್ತೆ-ಮಾವನವರ  ಮುಂದೆ ಹೇಳಿಕೊಂಡಿದ್ದ ಅಳಿಯಬಹಾದ್ದೂರನ ಸ್ಥಿತಿ ನಿಜವಾಗಿಯೂ ಆ ಸ್ಮಶಾನವಾಸಿ ಶಿವನ ಹಾಗೆ 'ಅಂಬರ ಛತ್ತಿನ ಕೆಳಗೆ ಭೂತಾಯಿ ಮಂಚದ' ರೀತಿಯೇ ಇದ್ದದ್ದು ನೋಡಿ ಕೋಪದಿಂದ  ಕೆಂಡಾಮಂಡಲನಾದ ಆ ಅಣ್ಣ  ತನ್ನ ಅಬೋಧ ತಂಗಿಯನ್ನು ಕರೆದುಕೊಂಡು ಬಂದ ಹಾಗೆಯೇ ಹಿಂದಕ್ಕೆ ಹೊರಟು  ಹೋದನು. ಕಷ್ಟ ಕೋಟಲೆಗಳನ್ನೇ ಹಾಸಿ ಹೊದೆದು ದೊಡ್ಡವನಾಗಿದ್ದ ಮಹಾಬಲನ ಜೋಳಿಗೆಗೆ ಈಗ ಇನ್ನೊಂದು ಮಹಾಕಷ್ಟ ಬಂದು ಬಿದ್ದಂತಾಯಿತು.
        ದೂರದ ಮದ್ರಾಸಿನಲ್ಲಿ ನೌಕರಿ ಮಾಡುತ್ತಿದ್ದ ಸುಂದರನು ಈ ಪುಟ್ಟಗೌರಿಯನ್ನು ಕರೆದುಕೊಂಡು ಹೋಗಿ ಘಟ್ಟದ ಕೆಳಗಿನ 'ಅರಬೈಲಿ'ನಲ್ಲಿದ್ದ ತನ್ನ ಇನ್ನೊಬ್ಬ ತಂಗಿ- ಬಾವರ ಮನೆಯಲ್ಲಿ ಬಿಟ್ಟು ಹೊರಟು ಹೋದನು.  ವರ್ಷಒಪ್ಪತ್ತು ಅಲ್ಲೇ ಇದ್ದ ಗೌರಿಗೆ  ಇನ್ನೊಬ್ಬ ವರನನ್ನು ಹುಡುಕಿ ಲಗ್ನ ಮಾಡಿಕೊಡುವ ತಯಾರಿ ನಡೆದಿರುವ ಸುದ್ದಿ ತಿಳಿದ ಮಾಬ್ಲೇಶ್ವರ (ನಾರದರಂತೆ ಎಲ್ಲ ಸೀಮೆಗಳನ್ನು ಸುತ್ತಿ ಗೋಕರ್ಣ ಮಹಾಬಲೇಶ್ವರ ದೇವರ ಪ್ರಸಾದ ವಿತರಣೆ ಮಾಡುತ್ತಿದ್ದ ಗೋಕರ್ಣ ಪುರಾಣಿಕರೊಬ್ಬರ ಮುಖಾಂತರ ) ತನ್ನ ಮಿತ್ರನೊಬ್ಬನಿಗೆ ಪೋಲೀಸನ ಡ್ರೆಸ್ ತೊಡಿಸಿಕೊಂಡು ಸೀದಾ ಅರಬೈಲಿಗೆ ಹೋದನು. ತನ್ನ ಹೋಟೆಲ್ಲಿನ ಒಳಗೆ ಪೊಲೀಸರು ಬಂದು ಗದ್ದಲ ಎಬ್ಬಿಸಿದರೆ ಆಗಬಹುದಾದ ಅನಾನುಕೂಲ ಗ್ರಹಿಸಿದ ಗೌರಿಯ ಬಾವ ತಡ ಮಾಡದೆ ನಿರ್ಣಯ ತೆಗೆದುಕೊಂಡು ಬಡಪಾಯಿ ಗೌರಿಯನ್ನು ಅವಳ ಗಂಡನ ಸುಪರ್ದಿಗೆ ವಹಿಸಿಕೊಟ್ಟನು. ಮತ್ತೊಮ್ಮೆ ಗೌರಿ ದೊಡ್ನಳ್ಳಿಗೆ-ಈ ಬಾರಿ ತೌರಿನ ಬೆಂಗಾವಲಿಲ್ಲದೆ -ಬಂದು ಸ್ಥಾಪಿತಳಾದಳು.
        ದೊಡ್ನಳ್ಳಿಯಲ್ಲಿ ತನ್ನದೆಂಬ ಒಂದು ಸ್ವಂತ ಸೂರು ಇರದ ಕಾರಣ ಅದಾಗಲೇ ಅಲ್ಲಿ ನೆಲೆಸಿದ್ದ, ತನ್ನ ದೂರದ ಬಂಧುಗಳೂ ಆಗಿದ್ದ  'ಹೊಸಹಕ್ಕಲಿ'ನವರ ಮನೆಗೆ ಈ ಮಹಾಶಯ ತನ್ನ ನವ ವಧುವಿನ ಪ್ರವೇಶ ಮಾಡಿಸಿದನು. ತವರಿಗೆ ವಿದಾಯ ಹೇಳುವದೆ ಹೆಣ್ಣು ಮಕ್ಕಳಿಗೆ ಸಂಕಟಮಯ ವಿಷಯ. ಅದರಲ್ಲೂ ದೂರದೂರಿನ, ಏನೂ ಗುರುತು ಪರಿಚಯ ಇಲ್ಲದ, ವಿಭಿನ್ನ ಭಾಷೆ, ಸಂಸ್ಕೃತಿ, ಸಂಪ್ರದಾಯಗಳ ಜನರಿಂದ ಕೂಡಿದ, ತನ್ನ ಗಂಡನ ಸ್ವಂತದ್ದಲ್ಲದ ಈ ಮನೆ ಸೇರಿದ ಬಾಲಕಿ ಗೌರಿಗೆ ಆ ಅಯೋಮಯ ಸ್ಥಿತಿಯಲ್ಲಿ  ಅಲ್ಲಿದ್ದ ಹಿರಿಯ ಜೀವ "ಮುದಿಯಮ್ಮ"ನ ಸಕಾಲಿಕ ಪ್ರೀತಿ ಸಂಜೀವಿನಿಯಂತೆ ಒದಗಿಬಂದಿತು.      
        ಈ 'ಮುದಿಯಮ್ಮ' ಆ ಮನೆಯ ನಾಲ್ವರು ಗಂಡು ಮಕ್ಕಳಾದ ಸುಬ್ರಾಯ, ಲಕ್ಷ್ಮಣ, ಕೃಷ್ಣ  ಮತ್ತು ಸದಾಶಿವ ಹೆಗಡೆಯವರ ತಾಯಿ ಮತ್ತು ದಿವಂಗತ ನಾರಾಯಣ ಹೆಗಡೆಯವರ ಪತ್ನಿ ಭಾಗೀರಥಿ. ಆಗಿನ ಕಾಲದ ಪದ್ಧತಿಯಂತೆ ತಲೆ ಬೋಳಿಸಿಕೊಂಡು ಕೆಂಪುಸೀರೆ ಉಟ್ಟುಕೊಳ್ಳುತ್ತಿದ್ದ ವಿಧವೆ -ಮಡಿಹೆಂಗಸು. ಅವಳು ಆ ಮನೆಯಲ್ಲಿ ಈ ಪುಟ್ಟಗೌರಿಗೆ ತಾಯಿಯ ಮಡಿಲನ್ನು ನೀಡಿದಳು. ವಯೋಸಹಜವಾದ ನಾಚಿಕೆ, ಸಿಗ್ಗು, ಪರಕೀಯ ಭಾವದಿಂದ ಕುಗ್ಗಿ ಹೋಗುತ್ತಿದ್ದ ಈ ಹುಡುಗಿಗೆ ಅಭಯ ನೀಡಿದ್ದಲ್ಲದೆ ,ಅವಳ ಗಂಡನಿಗೆ, 'ಹರುಕೋ ಮುರುಕೋ- ಒಟ್ಟಿನಲ್ಲಿ ತನ್ನದೇ ಸ್ವಂತದ್ದೆನ್ನುವ'- ಒಂದು ಬಿಡಾರ ಕಟ್ಟಿಕೊಳ್ಳಲು ಬೋಧಿಸಿದಳು. ಅದಾಗಲೇ ತನ್ನ ಹೊಸ ಸಂಸಾರಕ್ಕೆ ಏಕಾಂತದ ಅವಶ್ಯಕತೆ ಇದೆಯೆಂಬುದನ್ನು ಮನಗಂಡಿದ್ದ ಮಾಬ್ಲೇಶ್ವರ ಸನಿಹದ ಕಾಡಿನಲ್ಲಿ ಯಥೇಚ್ಚವಾಗಿ ಸಿಗುತ್ತಿದ್ದ 'ಗುರಿಗೆ'  ಗಳುಗಳನ್ನು  ತಂದು ಪಕ್ಕದಲ್ಲೇ ಇದ್ದ ಖಾಲಿ ಗಾಂವ್ಠಾಣ ಜಾಗದಲ್ಲಿ ತಟ್ಟಿಗೋಡೆ ಕಟ್ಟಿ ಒಂದು ಬಿಡಾರ ನಿರ್ಮಿಸಿಯೇ ಬಿಟ್ಟ. ವಯಸ್ಸಿನಲ್ಲಿ ಕಿರಿಯಳಾದರೂ ಕಠಿಣ ಪರಿಶ್ರಮಿಯಾಗಿ ತಯಾರಾಗಿದ್ದ ಗೌರಿ ಆ ಗೋಡೆಗಳಿಗೆಲ್ಲ  ತನ್ನ ಕೈಯಾರೆ ಮಣ್ಣಿನ ಗಿಲಾಯಿ ಮಾಡಿ, ಸಗಣಿ ಸಾರಿಸಿ ಆ ಬಿಡಾರವನ್ನೊಂದು ಮನೆಯನ್ನಾಗಿಸಿದಳು. ಇದೆಲ್ಲದರ ಹಿಂದೆ ಮುದಿಯಮ್ಮನ ಸಲಹೆ-ಸೂಚನೆಯಲ್ಲದೆ ನೆರವೂ ಸಹ ಧಾರಾಳವಾಗಿ ದೊರಕಿತ್ತು.
       ಈ ಮನೆಯಲ್ಲಿಯೇ ನಾವು ಐವರು  ಗಂಡು ಮಕ್ಕಳು ಜನಿಸಿದ್ದು ಮತ್ತು ನನ್ನ ಬೆನ್ನಿಗೆ ಹುಟ್ಟಿದ್ದ, ಮುಖದಲ್ಲಿ ವಿಶೇಷ ದೈವಿಕ ಲಕ್ಷಣಗಳನ್ನು ಹೊಂದಿದ್ದ 'ವಿಶ್ವಪತಿ' ಎಂಬ ಮಗ ತೀರಿಕೊಂಡಿದ್ದು ಕೂಡ. ಇಂತಹ ಯಾತನಾಮಯ ಸಮಯಗಳಲ್ಲೆಲ್ಲ ನನ್ನಮ್ಮನ ಕೆಚ್ಚು ಸಾಯದಂತೆ ನೋಡಿಕೊಂಡಿದ್ದು ಈ ಮುದಿಯಮ್ಮ. ನನಗೆ ಚೆನ್ನಾಗಿ ನೆನಪಿದೆ-ನಮ್ಮ ಮನೆಯೆದುರು, ರಸ್ತೆಯ ಆಚೆ ಇದ್ದ ದೊಡ್ಡ ಅರಳಿ ಮರಕ್ಕೆ ನಿತ್ಯ ನಸುಕಿನಲ್ಲಿ ಭಕ್ತಿಯಿಂದ ಪೂಜೆ ಸಲ್ಲಿಸಿ, ನಂತರ ಪ್ರಸಾದ ರೂಪದ ಬಾಳೆಹಣ್ಣನ್ನು ಕಾಯುತ್ತಿದ್ದ ನಮ್ಮ ಕೈ ಮೇಲೆ ಹಾಕಿ, ನನ್ನಮ್ಮನ ಜೊತೆ ನಾಲ್ಕು ಸುಖ-ದುಃಖದ ಮಾತಾಡಿ ತನ್ನ ಮನೆಗೆ ಹೋಗುತ್ತಿದ್ದಳು ಈ ಮುದಿಯಮ್ಮ. ನಾವು ಊರೊಳಗಿನ ಈ ಮನೆ ತೊರೆದು ನಮ್ಮ ಜಮೀನಿನಲ್ಲೇ ಮನೆ ಮಾಡಿದ ಮೇಲೂ ನಿತ್ಯ ನಮ್ಮ ಮನೆಗೆ ಬಂದು ಮಜ್ಜಿಗೆ ಕಡೆದು ಕೊಟ್ಟು, ಒಂದು ಲೋಟ ತಾನೇ ಕಡೆದ ಮಜ್ಜಿಗೆ ಕುಡಿದು, ಅದಾಗಲೇ ಸಾಕಷ್ಟು ಅನುಭವಿಯಾಗಿದ್ದ ನನ್ನ ಅಮ್ಮನ ಜೊತೆ ನಾಲ್ಕು ಮಾತಾಡಿ ಹೋಗುತ್ತಿದ್ದಳು. ಅವಳ ಪಾಲಿಗೆ ನನ್ನಮ್ಮ ಮಗಳಾದರೆ ನನ್ನಮ್ಮನಿಗೆ ಅವಳು ಅಮ್ಮ.
        ಇಂತಹ ಕರುಣಾಮಯಿ ಮುದಿಯಮ್ಮ ಕೊನೆಗೆ ಪಾರ್ಶ್ವವಾಯುವಿಗೆ ತುತ್ತಾಗಿ ಕೆಲ ತಿಂಗಳು ಹಾಸಿಗೆಯಲ್ಲೇ ಕಳೆದು ತೀರಿಕೊಂಡಾಗ ಅವರ ಮನೆಯವರಿಗಿಂತ ನನ್ನಮ್ಮ ಕಳೆದುಕೊಂಡಿದ್ದೇ ಹೆಚ್ಚಾಗಿತ್ತು.
        ನಿಷ್ಕಾಮ ಕರ್ಮ ಮಾಡುವ ಇಂತಹ ಎಲೆಮರೆಯ ಕಾಯಿಗಳಿಗೆ ಇದೋ ನನ್ನ ನಮನ!









             

ಭಾನುವಾರ, ಮೇ 11, 2014

ಅಂದು ಇಂದುಗಳ ಸೇತುವೆ

    ಇಂದು  ಸುಮಾರು ೩೦ ರಿಂದ ೪೦ ವರ್ಷ ವಯಸ್ಸಿನ ಆಸುಪಾಸಿನಲ್ಲಿರುವ ಬಹುತೇಕರು ತಮ್ಮ ಬಾಲ್ಯಕ್ಕಿಂತ ಹಿಂದಿನ ವರ್ಷಗಳಲ್ಲಿ ಈ ನಾಡು ಹೇಗಿದ್ದಿರಬಹುದೆಂಬುದನ್ನು ಊಹಿಸಿಕೊಳ್ಳಲಾರರು. ಏಕೆಂದರೆ ಕಳೆದ ೩೦ ವರ್ಷಗಳಲ್ಲಿ ಈ ದೇಶದಲ್ಲಿ ಪ್ರಗತಿಯ ಚಿತ್ರಣ ವರ್ಷದಿಂದ ವರ್ಷಕ್ಕೆ ಅತ್ಯಂತ ತ್ವರಿತವಾಗಿ ಬದಲಾಗುತ್ತಾ ಬಂದಿದೆ. ಅದಕ್ಕೂ ಪೂರ್ವದಲ್ಲಿ ಈ ಬದಲಾವಣೆಯ ವೇಗ ತೀರ ನಿಧಾನ ಗತಿಯಲ್ಲಿದ್ದು, ಜನರಿಗೆ ತಾವು ನಂಬಿದ ಮೌಲ್ಯಗಳನ್ನು ತಮ್ಮ ಜೀವಿತಾವಧಿಯಲ್ಲಿ ಬದಲಾಯಿಸಿಕೊಳ್ಳಬೇಕಾದ ಪ್ರಮೇಯ ಒದಗಿ ಬರುತ್ತಿದ್ದುದು ತೀರ ವಿರಳ. ಆದರೆ ಇಂದಿನ ತ್ವರಿತ ಬದಲಾವಣೆಗಳು ಜೀವನ ಮೌಲ್ಯಗಳನ್ನು ಸ್ಥಿರೀಕರಿಸಿಕೊಳ್ಳಲು ಬಿಡುವದಿಲ್ಲ. ಇದರಿಂದಾಗಿ ೬೦ರ ಮೇಲ್ಪಟ್ಟ ಹಿರಿಯರು ಇಂದಿನ ಯುವಜನತೆ ಯಾವುದೇ ಮೌಲ್ಯಗಳಿಗೆ ಬದ್ಧರಾಗಿಲ್ಲವೆಂದು ಗೊಣಗುತ್ತಿದ್ದರೆ, ಅದೇ ಯುವಕರು, ತಮ್ಮನ್ನು ತಾವು ಬದುಕಿನ ವೇಗದೊಂದಿಗೆ ಸರಿ ತೂಗಿಸಿಕೊಳ್ಳುವಲ್ಲಿ ಹೈರಾಣಾಗುತ್ತಿದ್ದಾರೆ. ಆದರೆ ಇವೆರಡು ಗುಂಪುಗಳ ಮಧ್ಯೆ ಇರುವ ನನ್ನಂತವರನ್ನು ನಾನು ಅತ್ಯಂತ ಅದೃಷ್ಟಶಾಲಿಗಳೆಂದು ಪರಿಗಣಿಸುತ್ತೇನೆ. ಏಕೆಂದರೆ, ನಮ್ಮಗಳ ಬಾಲ್ಯ ಮತ್ತು ಯೌವ್ವನ  ಹಿಂದಿನ ತಲೆಮಾರಿನವರ ಮೌಲ್ಯಾಧಾರಿತ ಬದುಕಿನ ಸಿಹಿಯನ್ನು ಉಂಡಿದ್ದರೆ ತದನಂತರ ವೃತ್ತಿಬದುಕಿನ ಸ್ಪರ್ಧಾಕಣದಲ್ಲಿ ಮೂಲೆಗುಂಪಾಗದಿರಲು  ಈಗಿನ ಇಲೆಕ್ಟ್ರಾನಿಕ್ ಯುಗದ ಧಾವಂತಕ್ಕೂ ನಾವು ಅನಿವಾರ್ಯವಾಗಿ ಒಗ್ಗಿಕೊಳ್ಳಬೇಕಾಯಿತು. ನಮ್ಮ ಯೌವ್ವನದಲ್ಲಿ ಮನದನ್ನೆಗೊಂದು ಒಲವಿನೋಲೆ ಬರೆದರೆ ಅವಳ ಮಾರೋಲೆಗಾಗಿ ವಾರಗಟ್ಟಲೆ ವಿರಹದ ಕುದಿಯಲ್ಲಿ ಕಾತರಿಸಿ ಕಾಯಬೇಕಿತ್ತು. ಏನಾದರೂ ತಡವಾದರೆ ಏಕೆಂದು ತಿಳಿಯದೆ ದುಗುಡ ಬೇರೆ. ಈಗಿನಂತೆ ಎಲ್ಲರ ಬೆರಳ ತುದಿಯಲ್ಲಿ , -ಅಷ್ಟೇಕೆ, ಎಲ್ಲರ ಮನೆಗಳಲ್ಲಿ ಸಹ ಫೋನ್ ಇದ್ದಿರದ ಕಾಲವದು. ಅಂಚೆಯ ಅಣ್ಣನೇ ಎಲ್ಲರ ಬಂಧುವಾಗಿದ್ದ ಕಾಲವದು. ಮಾಹಿತಿ ಸಂವಹನ ನಿಧಾನವಾಗಿದ್ದರಿಂದ ಸಾರ್ವಜನಿಕರ ಬದುಕಿನ ಓಟದ ಗತಿಯೂ ಅದೇ ರೀತಿ ನಿಧಾನವಾಗಿದ್ದ ಕಾಲವದು.
        ನನ್ನ ಈ ಮೊದಲಿನ ಮತ್ತು ಇನ್ನು ಬರೆಯಲು ಉದ್ದೇಶಿಸಿದ ಹೆಚ್ಚಿನೆಲ್ಲ ಬ್ಲಾಗ್ ಗಳಲ್ಲಿ ನಾನು ಆ  ಧಾವಂತರಹಿತ ಕಾಲಘಟ್ಟದಲ್ಲಿ ಬದುಕಿದ್ದ, ಹಾಗೂ ನನ್ನನ್ನು ಪ್ರಭಾವಿಸಿದ ಕೆಲ ಹೃದಯವಂತರ ಬಗ್ಗೆ ಬರೆಯಬಯಸಿದ್ದೇನೆ. ಅವರಲ್ಲಿ ಪ್ರಸಿದ್ಧರೂ ಇದ್ದಾರೆ, ಅನಾಮಿಕರೂ ಇದ್ದಾರೆ. ಅವರೆಲ್ಲರೂ ಅತ್ಯುನ್ನತ ಮಾನವತೆಯ ದೃಷ್ಟಾಂತರೂಪಿಗಳು ಎಂದೇನೂ ನಾನು ಹೇಳಲಾರೆ. ಎಲ್ಲ ಸಾಂಸಾರಿಕರಂತೆ ಅವರಲ್ಲಿಯೂ ಗುಣ-ದೋಷಗಳೆರಡೂ ಮಿಳಿತವಾಗಿದ್ದವು. ಆದರೂ "ಪರಗುಣ                ಪರಮಾಣೂನ್ ಪರ್ವತೀಕೃತ್ಯ....." ಎಂಬ  ಉಕ್ತಿಯಂತೆ ನಾ ಕಂಡ ಅವರ ಗುಣಗಳನ್ನು ಮಾತ್ರ, ಅವರ   ಹೃದಯವಂತಿಕೆಯನ್ನು  ಮಾತ್ರ, ನನ್ನ ಬಾಲ್ಯದಿಂದಾರಂಭಿಸಿ  ಅನುಕ್ರಮದಲ್ಲಿ  ವಿಶದೀಕರಿಸುತ್ತೇನೆ. ಇಲ್ಲಿ ಯಾವುದೇ ಹೆಚ್ಚುಗಾರಿಕೆಯನ್ನು ಮೆರೆಸುವದಕ್ಕಿಂತ ಇದನ್ನೊಂದು ಸ್ಮೃತಿಸಂಪುಟವಾಗಿಸುವ ಉದ್ದೇಶ ಮಾತ್ರ ಇದೆ. ಅಷ್ಟೇ ಅಲ್ಲದೆ ಯಾವ ಬರಹವನ್ನೂ ಸಂಪೂರ್ಣವಾಗಿ ಒಬ್ಬ ವ್ಯಕ್ತಿಗಾಗಿ ಮೀಸಲಿಡದೆ, ಸಮತೋಲಿಸಿ ಕೊಂಡೊಯ್ಯುವ ಇರಾದೆ ಕೂಡ ಇದೆ.
         ಇಂದಿನ ಪೀಳಿಗೆಯವರಿಗೆ ಅಂದಿನ ಜನಸಾಮಾನ್ಯರ ಬದುಕಿನ ಒಂದು ಚಿತ್ರಣವನ್ನು ಕಟ್ಟಿಕೊಡುವಲ್ಲಿ, ತನ್ಮೂಲಕ ತಮ್ಮ ವಿಚಾರ ಸರಣಿಯಲ್ಲಿ ಒಂದು ಹೊಸ ಹೊಳಹನ್ನು ಕಂಡುಕೊಳ್ಳುವಲ್ಲಿ ಈ ನನ್ನ ಬರಹಗಳು ಸಹಾಯಕವಾದರೆ ನನ್ನ ಶ್ರಮ ಸಾರ್ಥಕವಾದಂತೆ.










ಭಾನುವಾರ, ಏಪ್ರಿಲ್ 13, 2014

ಋಣದ ಭಾರವನಂತ

       ಸಿದ್ಧವನ ಗುರುಕುಲದಲ್ಲಿ ಇದ್ದುಕೊಂಡು ಉಜಿರೆಯ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಒಂದು ವಿಶೇಷವಾದ ಲಾಭ ತನ್ನಿಂದ ತಾನೇ ಆಗುತ್ತಿತ್ತು.  ಹಾಸ್ಟೆಲ್ಲಿನಲ್ಲಿ  ಪ್ರತಿದಿನದ ಓದಿನ ಸಮಯ ಕಟ್ಟು ನಿಟ್ಟಾಗಿ ಪಾಲನೆಯಾಗುತ್ತಿದ್ದ ಕಾರಣ ಎಲ್ಲ ಹುಡುಗರಿಗೂ ಕನಿಷ್ಠ ಮಟ್ಟದ ಪರೀಕ್ಷಾ ತಯಾರಿ ತಾನಾಗಿಯೇ ಆಗಿರುತ್ತಿತ್ತು. ಕಾಲೇಜಿನ ದಶಮಾನೋತ್ಸವ ಸಂಭ್ರಮದ ಸದ್ದು ಅಡಗುತ್ತಿದ್ದ ಹಾಗೇ ಎಲ್ಲರೂ ಸಮೂಹ ಸನ್ನಿಗೆ ಒಳಗಾದವರಂತೆ ವಾರ್ಷಿಕ ಪರೀಕ್ಷೆಗೆ ಓದತೊಡಗಿದರು. ಅದರಲ್ಲೂ ಪಿಯುಸಿ ನಂತರ ವೃತ್ತಿಪರ ಕೋರ್ಸ್ ಓದುವ ಕನಸು ಕಟ್ಟಿಕೊಂಡ ಸೈನ್ಸ್ ವಿದ್ಯಾರ್ಥಿಗಳಿಗಂತೂ  ಬಾಲಕ್ಕೆ ಬೆಂಕಿ ಹಚ್ಚಿ ಬಿಟ್ಟಂತಾಗಿತ್ತು.  ಹಾಸ್ಟೆಲ್ಲಿನಲ್ಲಿ, ಬೇಸಿಗೆಯಲ್ಲಿ ನೀರಿನ ತುಟಾಗ್ರತೆ ಆಗುತ್ತಿದ್ದ ಕಾರಣ ಹೊರಗಿನ ಜಿಲ್ಲೆಯವರನ್ನು ಹೊರತುಪಡಿಸಿ ಹತ್ತಿರದವರನ್ನೆಲ್ಲ ಸಿಲೆಬಸ್ ಮುಗಿದ ಕೂಡಲೆ ಪರೀಕ್ಷಾ ದಿನದವರೆಗೂ ಮನೆಗೆ ಕಳಿಸಲಾಗುತ್ತಿತ್ತು. ನಾವು ಕೆಲವೇ ಮಂದಿ ಉಳಿದರೂ ಅತ್ಯಂತ ಸೀರಿಯಸ್ ಆಗಿ ಓದಿ, ತಯಾರಾಗಿ, ಪರೀಕ್ಷೆಯನ್ನು ಎದುರು ನೋಡುತ್ತಿದ್ದೆವು. ಈ ಅವಧಿಯಲ್ಲಿಯೇ ಅನಂತರಾಮು ಮತ್ತು ಪದ್ದಣ್ಣನ ಜೊತೆ ನನ್ನ ಸ್ನೇಹ ಗಾಢವಾಗಿದ್ದು.
        ಎಲ್ಲ ದುಗುಡಕ್ಕೂ ಕೊನೆ ಹಾಡಿ ಅಂತೂ ಪರೀಕ್ಷೆ ಪ್ರಾರಂಭವಾಯ್ತು. ಮೊದಲ ಎರಡು - ಸಂಸ್ಕೃತ ಹಾಗೂ ಇಂಗ್ಲಿಷ್ -ಭಾಷಾ ಪೇಪರ್ ಗಳು ಚೆನ್ನಾಗಿಯೇ ಆದವು. ಗಣಿತ ಪೇಪರ್ ಗಾಗಿ ನನ್ನ ತಯಾರಿ ಅತ್ಯುತ್ತಮ ಮಟ್ಟದಲ್ಲಿತ್ತು. ಉತ್ಸಾಹದ ಬುಗ್ಗೆಯಾಗಿ ಪರೀಕ್ಷಾ ಹಾಲ್ ಹೊಕ್ಕು ಪೇಪರ್ ಕೈಗೆ ಬಂದೊಡನೇ ನನಗೆ ಅತ್ಯಂತ ಗ್ಯಾರಂಟಿ ಇದ್ದ "Mathematical Induction"ನ ಪ್ರಾಬ್ಲಮ್ ತಗೊಂಡು ಬಿಡಿಸೋಕೆ ಶುರು ಮಾಡಿದೆ. MI ದ ಯಾವುದೇ ಪ್ರಾಬ್ಲಮ್ ನ್ನು ನಿದ್ದೆಯಲ್ಲೂ  ಬಿಡಿಸಬಲ್ಲ ಪರಿಣಿತಿ ನನಗಿತ್ತು. ಐದರಿಂದ ಎಂಟು ನಿಮಿಷದಲ್ಲಿ ಬರಬೇಕಾದ ಉತ್ತರ ಏನು ಮಾಡಿದರೂ ಬರುತ್ತಿರಲಿಲ್ಲ. ಅದರಲ್ಲಿ L.H.S.=R.H.S. ಎಂದು ನಿರೂಪಿಸಬೇಕಾಗುತ್ತದೆ. ನಾನು ಅರ್ಧ ಗಂಟೆ ಅದರಲ್ಲೇ ತಿಣುಕಾಡಿದೆ. ಊಹೂಂ, ಉತ್ತರ ಬರಲೊಲ್ಲದು. ಇಷ್ಟರಲ್ಲಿ ನಾನು ನರ್ವಸ್ ಆಗಿ ಚೆನ್ನಾಗಿ ಬೆವರತೊಡಗಿದ್ದೆ. ಮೆದುಳಿನಲ್ಲಿ ನೀಟಾಗಿ ಪೇರಿಸಿದ್ದೆಲ್ಲ ಕದಡಿ ಹೋಗಿ ಬಿಟ್ಟಿತ್ತು. ನನ್ನ ಅಯೋಮಯ ಸ್ಥಿತಿ ನೋಡಿದ ರೂಮ್ ಸೂಪರ್ ವೈಸರ ಆಗಿದ್ದ ಸಂಸ್ಕೃತ ಲೆಕ್ಚರರ್ ಮಹಾಬಲ ಭಟ್ಟರು, "ಕ್ಲಾಸಿನಲ್ಲಿ ಉಡಾಳತನ ಮಾಡದೇ ಸರಿಯಾಗಿ ಓದಿದ್ದಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ " ಎಂದು ಕಿಚಾಯಿಸಿ ಅವರ ಕ್ಲಾಸಿನಲ್ಲಿ ನಾವು ಅವರನ್ನು ಕಾಡಿದ್ದುದರ ಪ್ರತೀಕಾರವೆಂಬಂತೆ ಮೀಸೆಯಲ್ಲೇ ನಕ್ಕರು ಬೇರೆ. ನನಗಾಗ, ಭೂಮಿ ಇಲ್ಲೇ ಬಾಯ್ದೆರೆದು ನನ್ನನ್ನು ನುಂಗಿ ಬಿಡಬಾರದೇ  ಎಂದು ಅನಿಸುತ್ತಿತ್ತು. ಆಗಲೇ ಅರ್ಧ ಗಂಟೆಗೂ ಮಿಕ್ಕಿ ಸಮಯ ಕಳೆದು ಹೋಗಿತ್ತು. ಇನ್ನು ನಾನು ಎಷ್ಟೇ ವೇಗವಾಗಿ ಬಿಡಿಸಿದರೂ ಪೇಪರ್ ಮುಗಿಸುವದು ಅಸಾಧ್ಯವಾಗಿತ್ತು. ಕೊನೆಗೊಮ್ಮೆ ಕಣ್ಮುಚ್ಚಿ ಕುಳಿತು ಶಾಂತನಾಗಿ ಇನ್ನೊಮ್ಮೆ ಪ್ರಶ್ನೆ ಪತ್ರಿಕೆ ನೋಡಿದೆ. ಅಯ್ಯೋ!, ನನ್ನ ಉತ್ಸಾಹದಲ್ಲಿ ನಾನು RHS ನಲ್ಲಿ ಸಂಖ್ಯೆಗಳ ವರ್ಗ(squares )ದ ಬದಲಾಗಿ ಘನ (cubes)ಎಂದು ಬರೆದುಕೊಂಡು ಮೂರ್ಖನಾಗಿದ್ದೆ ! ಕೂಡಲೇ ಆ ಪ್ರಾಬ್ಲಮ್ ಬಿಡಿಸಿದರೂ ಸಹ ಸಮಯ ನಷ್ಟವಾದ ಕಾರಣ ಪೇಪರ್ ಪೂರ್ತಿಗೊಳಿಸಲಾಗಲಿಲ್ಲ. ಸಾಲದ್ದಕ್ಕೆ ಆ ಸಾರಿ ಗಣಿತ ಪೇಪರ್ ಸ್ವಲ್ಪ  ಕಠಿಣವಾಗಿಯೂ ಇತ್ತು. ಅಂತೂ ಇಂತೂ ೭೫ ಮಾರ್ಕ್ಸ್ ನಷ್ಟು ಬಿಡಿಸುವಷ್ಟರಲ್ಲಿ ಟೈಂ ಆಗಿ ಹೋಗಿತ್ತು. ಪರೀಕ್ಷಾ ಕೊಠಡಿಯಿಂದ ಹೊರಬಂದಾಗ ತಲೆ ಸಿಡಿದು ಹೋಗುವದೊಂದೆ ಬಾಕಿ ಉಳಿದಿತ್ತು. ಉಳಿದ ಮಿತ್ರರೆಲ್ಲ ಸಾಕಷ್ಟು ಚೆನ್ನಾಗಿಯೇ ಮಾಡಿದ್ದರು. ಮಿತ್ರ ಪದ್ದಣ್ಣನಲ್ಲಿ ಎಲ್ಲ ಹೇಳಿಕೊಂಡು ಹಳಹಳಿಸಿದೆ. ಅವನು ಯಾವಾಗಲೂ Mr.Cool.  ನನಗೆ ಧೈರ್ಯ ಹೇಳುತ್ತಾ ನನ್ನ ಜೊತೆಯಲ್ಲೇ ತಾಸೆರಡು ತಾಸು ಕಳೆದು ನನ್ನ ದುಗುಡ ಕಮ್ಮಿ ಮಾಡಿಸಿಯೇ ತನ್ನ ರೂಮಿಗೆ ಹೋದನು. ಕೆಮಿಸ್ಟ್ರಿ ಹಾಗು ಫಿಸಿಕ್ಸ್ ಪೇಪರ್ ಚೆನ್ನಾಗಿ ಆಗಿದ್ದವು. ಸ್ಟ್ಯಾಟಿಸ್ಟಿಕ್ಸ್ ಬಗ್ಗೆ ನನಗೆ ಅಂತಹ ಆಸ್ಥೆ ಇದ್ದಿರಲೇ ಇಲ್ಲ. ಅಂತೂ ಪರೀಕ್ಷೆ ಮುಗಿಸಿ ಊರಿಗೆ ಹೋದರೂ, 'ನನ್ನ ಕನಸಿನ  ಬಲೂನಿಗೆ ಎಲ್ಲೋ ಸಣ್ಣ ತೂತಾಗಿ ಹೋಗಿದೆಯೇನೋ' ಎಂಬ ಸಣ್ಣಗಿನ ಆತಂಕ   ನನ್ನನ್ನು ಅಧೀರನನ್ನಾಗಿಸಿ ಅಹರ್ನಿಶಿ ಕಾಡುತ್ತಿತ್ತು.
        ನನ್ನ ಆತಂಕ ಪೂರ್ತಿ ಸುಳ್ಳಾಗಲಿಲ್ಲ. ಫಲಿತಾಂಶ ಬಂದಾಗ  ಗಣಿತ ನನ್ನ ಕೈ ಬಿಟ್ಟಿತ್ತು. ಅದರಲ್ಲಿ ಕೇವಲ ೭೧ ಅಂಕ ಬಂದ ಕಾರಣ ನನ್ನ ಎಲ್ಲ ವಿಷಯಗಳ ಸರಾಸರಿ ಮತ್ತು ಪಿ. ಸಿ. ಎಮ್.ಗಳ ಸರಾಸರಿ ಎರಡೂ ೮೩ % ಆಗಿತ್ತು. ಪ್ರಥಮ ಪಿ ಯು ಸಿ ಯಲ್ಲೂ ಇಷ್ಟೇ ಆಗಿತ್ತು. ಎಲ್ಲ ಮಿತ್ರರೂ," ಈ ಸ್ಕೋರ್ ನಿನಗೆ ಇಂಜಿನಿಯರಿಂಗ್ ನಲ್ಲಿ ಸೀಟ್ ಗಿಟ್ಟಿಸಲು ಬೇಕಾದಷ್ಟಾಯಿತು" ಎಂದು ಬೆನ್ನು ತಟ್ಟಿದರು. ಆಗಿನ್ನೂ ನಮ್ಮ ರಾಜ್ಯದಲ್ಲಿ ಕೇವಲ ೧೨-೧೩ ಇಂಜಿನಿಯರಿಂಗ್ ಕಾಲೇಜುಗಳಿದ್ದವು. ಕಾರಣ ಈ ಕಡಿಮೆ ಸ್ಕೋರಿಗೆ ನನ್ನಿಚ್ಚೆಯ ಕಾಲೇಜ್ ಮತ್ತು ಬ್ರಾಂಚ್ ಸಿಗಲಾರದೆಂಬ ಆತಂಕದಿಂದಲೇ ಉಳಿದೆಲ್ಲ ಮಿತ್ರರ ಜೊತೆ ನಾನೂ  ಇಂಜಿನಿಯರಿಂಗ್ ಗೆ  ಅಪ್ಲೈ ಮಾಡಿದೆ. ಈ ಹಂತದಲ್ಲಿ ನನ್ನಷ್ಟೇ ಅಂಕ ಗಳಿಸಿದ್ದ  ಅನಂತರಾಮು ನನಗೆ ಎಲ್ಲ ವಿಧದಲ್ಲೂ ಗೈಡ್ ಆಗಿದ್ದ.
         ಇಲ್ಲಿಗೆ ನನ್ನ ಎರಡು ವರ್ಷಗಳ ಪಿ ಯು ಸಿ ಹಾಗೂ ಉಜಿರೆಯ,  ತಥಾಪಿ ಸಿದ್ಧವನದ ಋಣಾನುಬಂಧ ಮುಗಿದಂತಾಯಿತು. ನನಗೀಗ ೫೫ ವರ್ಷ ವಯಸ್ಸು. ಇಷ್ಟರವರೆಗಿನ ಜೀವನದಲ್ಲಿ ನನ್ನನ್ನು ಬಹುವಾಗಿ ಪ್ರಭಾವಿಸಿದ ಕಾಲಘಟ್ಟವಾಗಿ ಈ ಅವಧಿಯನ್ನು ನಾನು ಪರಿಗಣಿಸುತ್ತೇನೆ. ತವರ ಪರಿಸರದಿಂದ ಹೊರಬಿದ್ದು ಸಂಪೂರ್ಣ ಭಿನ್ನವಾದ ಪರಿಸರದಲ್ಲಿ ನನ್ನನ್ನು ನಾನು ಪ್ರತಿಷ್ಠಾಪಿಸಿಕೊಂಡು, "ಎಲ್ಲಿ ಬೇಕಾದರೂ ನಾನು ಬದುಕಬಲ್ಲೆ" ಎಂಬ ಆತ್ಮವಿಶ್ವಾಸವನ್ನು ಆವಾಹಿಸಿಕೊಂಡದ್ದು ಇಲ್ಲಿಯೇ. ನಾನೆಷ್ಟು ಸಣ್ಣವನು ಎಂಬುದು ಮೊದಲು ಅರಿವಾದದ್ದು ಇಲ್ಲಿಯೇ. ಪರರ ಕಾಳಜಿ ಮಾಡಿದರೆ ನಿನ್ನ ಕಾಳಜಿ ತಾನಾಗಿಯೇ ಆಗುತ್ತದೆ ಎಂಬ ಸತ್ಯದ ಹೊಳಹು ಗೋಚರಿಸಿದ್ದು ಇಲ್ಲಿಯೇ. ಇನ್ನು ವೈಯಕ್ತಿಕವಾಗಿ, ಮೇಲ್ತುಟಿಯ ಮೇಲೆ ಕಪ್ಪು ಮೂಡತೊಡಗಿದ್ದು ಇಲ್ಲಿಯೇ. ಹುಡುಗಿಯರು ಚೆಂದವಾಗಿ ಗೋಚರಿಸಲು ಆರಂಭವಾಗಿದ್ದೂ ಇಲ್ಲಿಯೇ.
        ಮತ್ತೊಮ್ಮೆ ಇದಕ್ಕೆಲ್ಲ ಕಾರಣೀಕರ್ತರಾದವರೆಲ್ಲರನ್ನು ಮನದುಂಬಿ ನೆನೆಯುತ್ತೇನೆ. ಮಿತ್ರವೃಂದ ಹೊರತುಪಡಿಸಿ, ಗುರುಗಳಾದ ಕೆಮಿಸ್ಟ್ರಿ ಕೃಷ್ಣ ಭಟ್ ಸರ್, ಫಿಸಿಕ್ಸ್ ನ ಜಯರಾಮ ಸುವರ್ಣ ಸರ್, ಗಣಿತದ ಜಯಲಕ್ಷ್ಮಿ ಮೇಡಂ, ಇಂಗ್ಲಿಶ್ ನ ಕುದ್ದಣ್ಣಯ್ಯ ಸರ್, ಸಂಸ್ಕೃತದ ಲಕ್ಷ್ಮೀನಾರಾಯಣ ಸರ್ ಮತ್ತು ಮಹಾಬಲ ಭಟ್ಟರು, ಶೇಖರ ಸರ್ ಹಾಗೂ ಇನ್ನಿತರ ಗುರುವರ್ಯರುಗಳ ಋಣಭಾರ ನನ್ನ ಮೇಲಿದೆ. ಹಸನ್ಮುಖಿ ಲೈಬ್ರರಿಯನ್, ಆಫೀಸ್ ಮ್ಯಾನೇಜರ್ ನಾವಡರವರು, ಹಾಸ್ಟೆಲ್ಲಿನ ಜಿನರಾಜ ಶಾಸ್ತ್ರಿಗಳು , ಪೂವಣಿಯವರು ಇವರೆಲ್ಲರ ಚಾಣದೇಟು ನನ್ನನ್ನು ರೂಪಿಸಿದೆ. ಆಫೀಸ್ ಮ್ಯಾನೇಜರ್ ನಾವಡರ ಕುರಿತು ಒಂದು ಸಣ್ಣ ಟಿಪ್ಪಣಿ ಉಚಿತವೆನಿಸುತ್ತದೆ. ಬಿಳಿಯ ತಿಳುವಾದ ಅಂಗಿ ಮತ್ತು ಲುಂಗಿ ಉಟ್ಟಿರುತ್ತಿದ್ದ, ತೀಕ್ಷ್ಣ ಕಂಗಳ, ಉದ್ದನೆಯ ಕರಿಗಡ್ಡದ ಈ ಸಣಕಲ ವ್ಯಕ್ತಿಗೆ ಎಲ್ಲ ಹುಡುಗರೂ ಹೆದರುತ್ತಿದ್ದರು. ಅವರಿಗೆ ಕಾಲೇಜಿನ ಎಲ್ಲ ಮಕ್ಕಳ ಎಲ್ಲಾ ವಿವರಗಳೂ ಗೊತ್ತಿರುತ್ತಿತ್ತು. ಈಗ್ಗೆ ಸುಮಾರು ೧೮ ವರ್ಷಗಳ ಕೆಳಗೆ ಆ ದಾರಿಯಾಗಿ ಹೋಗುತ್ತಿದ್ದಾಗ, ಒಮ್ಮೆ ನನ್ನ ಕಾಲೇಜು ನೋಡಿ ಬರೋಣವೆಂದು ಒಳಹೊಕ್ಕೆ. ಆ ದಿನ ರಜಾದಿನವಾಗಿತ್ತು. ಪ್ರವೇಶ ದ್ವಾರದಲ್ಲೇ, ನೋಟೀಸ್ ಬೋರ್ಡ್ ಪಕ್ಕದಲ್ಲೇ ನಾವಡರು ನಿಂತಿದ್ದರು. ಗಡ್ದದೊಳಗೆ ನುಸುಳಿದ್ದ ಕೆಲ ಬೆಳ್ಳಿ ಕೂದಲುಗಳನ್ನು ಬಿಟ್ಟರೆ ಥೇಟ್ ಅದೇ ನಾವಡರು. ನಾನು, ನಂತರ ಪರಿಚಯ ಹೇಳಿಕೊಂಡು ಮಾತನಾಡಿಸಿದರಾಯಿತು ಎಂದುಕೊಂಡು ಸೀದಾ ಮೇಲೆ ಹೋಗಿ ಸುತ್ತಾಡಿಕೊಂಡು ಕೆಳಗಿಳಿದೆ. ಕಡೆಯ ಮೆಟ್ಟಿಲನ್ನು ಇಳಿಯುತ್ತಿದ್ದಂತೆ ಎರಡೂ ಕೈ ಮುಗಿದು, "ನಮಸ್ಕಾರ, ಸರ್" ಎನ್ನುತ್ತಿದ್ದಂತೆ ಅವರು ಪ್ರತಿ ನಮಸ್ಕರಿಸಿ, "ಏನು, ರವೀಂದ್ರ ಮಹಾಬಲೇಶ್ವರ ಭಟ್ಟರೇ , ಚೆನ್ನಾಗಿದ್ದೀರಾ?" ಎಂದು ಪೂರ್ಣ ಹೆಸರುಗೊಂಡು ಮಾತನಾಡಿಸಿದಾಗ ನಾನು ನನ್ನನ್ನೇ ಚಿವುಟಿ ನೋಡಿಕೊಂಡಿದ್ದೆ. ನನ್ನ ಉಡಾಫೆಗೆ ನನಗೇ  ನಾಚಿಕೆಯಾಗಿತ್ತು. ಅವರ ಅಸಾಧ್ಯ ನೆನಪಿನಶಕ್ತಿಗೆ ಸಲಾಂ ಹೊಡೆದಿದ್ದೆ. ಇಂತಹ ಮಹಾನುಭಾವರುಗಳ ಸಂಸರ್ಗದಿಂದ ನನ್ನೊಳಗೂ ಒಂದು ಸಂಸ್ಕಾರ ರೂಪುಗೊಂಡಿದ್ದುದು ವಿಶೇಷವೇನೂ ಅಲ್ಲವಲ್ಲ.
       ನನ್ನಂತಹ ಸಾವಿರಾರು ಬಡವರ ಬಾಳಿಗೆ ಬೆಳಕು ತೋರಿದ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರಾದಿಯಾಗಿ ಎಲ್ಲ ಸಹೃದಯಿ ಹಿರಿಯರಿಗೆ ನಾನು ಚಿರಋಣಿ.