ಈ ಬ್ಲಾಗ್ ಅನ್ನು ಹುಡುಕಿ

ಶುಕ್ರವಾರ, ಅಕ್ಟೋಬರ್ 4, 2024

ಚಾರ್ ಧಾಮ ಯಾತ್ರೆ -ಭಾಗ 15

         ಚಾರ್ ಧಾಮ ಯಾತ್ರೆ -ಭಾಗ 15

ಮರಳಿ ನಮ್ಮೂರಿಗೆ

ದಿನಾಂಕ:-21/05/2024

       ಇಂದು ವಾಪಸ್ ನಮ್ಮೂರಿಗೆ ಹೋಗುವ ದಿನ. ಬಹುಶಃ ಆ ಉತ್ಕಟತೆಯ ಕಾರಣ, ಮುಂಜಾನೆ ನಾವು ಬಿಡುವಾಗಿದ್ದು ನಿಧಾನವಾಗಿ ಏಳೋಣವೆಂದರೂ ಸಹ, 6-00 ಗಂಟೆಗೆಲ್ಲ ಎಚ್ಚರವಾಗಿ ಬಿಟ್ಟಿತ್ತು! ನಮ್ಮ ಯಾತ್ರಿಗಳಲ್ಲಿ ಕೆಲವರು - ಬೆಂಗಳೂರಿನ ಶಿವಲಿಂಗ ಚಿಕ್ಕಮಠ ಮತ್ತು ನಾಗರಾಜ್ ದಂಪತಿ ಸಹಿತ - ಬೇಗನೆ ಎದ್ದು ಮಾನಸಾ ದೇವಿ ಮಂದಿರ ಮತ್ತು ಚಂಡಿ ದೇವಿ ಮಂದಿರಗಳಿಗೆ ಹೋಗಿದ್ದರು. ನಾವು ಮತ್ತು ನಮ್ಮಂತೆ ಇನ್ನೂ ಕೆಲವರು ವಿರಾಮವಾಗಿ ಎದ್ದು, ಸ್ನಾನಾದಿಗಳನ್ನು  ಪೂರೈಸಿ, ಬೇಗನೆ ಬೆಳಗಿನ ತಿಂಡಿಗೆ ಆಗಮಿಸಿದ್ದೆವು. ಈ ದಿನ 11-00 ಗಂಟೆಗೆಲ್ಲ ಲಗೇಜ್ ಹೊರಗಿಡಬೇಕೆಂದು ತಿಳಿಸಿದ್ದರು. 12 -00 ಗಂಟೆಗೆ ಊಟ ಎಂದು ಹೇಳಿದ್ದ ಕಾರಣ ಬೆಳಗಿನ ತಿಂಡಿ ಸಹ 8-00 ಗಂಟೆಗೆಲ್ಲ ತಯಾರಿತ್ತು. ಬೆಳಗಿನ ಉಪಹಾರ ಮುಗಿಸಿ, ಸೂಚನೆಯಂತೆ ನಮ್ಮ ಬ್ಯಾಗ್ ಗಳನ್ನು ತುಂಬಿ ಹೊರಗಿಟ್ಟೆವು. ನಾವು ಸ್ವಲ್ಪ ಹರಿದ್ವಾರದ ಬೀದಿಗಳಲ್ಲಿ ಅಡ್ಡಾಡಿ ಬಂದೆವು. ವಾಪಸ್ ಹೋಗಲು ಎಲ್ಲರಿಗೂ ಸೇರಿ ಒಂದೇ ಬಸ್. ವೆಂಕಟೇಶ್ ಪ್ರಭು ಅವರು ನಮ್ಮ ನಮ್ಮ ಸೀಟ್ ನಂಬರಗಳನ್ನು ನಿರ್ಧರಿಸಿ, ಚಾರ್ಟ್ ತಯಾರಿಸಿ, ವಾಟ್ಸಾಪ್ ಗ್ರೂಪಿನಲ್ಲಿ ಅದಾಗಲೇ ತಿಳಿಸಿದ್ದರು. ಅವರ ಎಲ್ಲಾ ವ್ಯವಸ್ಥೆಗಳು ಯಾವುದೇ ನ್ಯೂನತೆಗಳಿಲ್ಲದೆ ಅಚ್ಚುಕಟ್ಟಾಗಿರುತ್ತಿದ್ದವು.
        ನಸುಕಿನಲ್ಲಿ ದರ್ಶನಾರ್ಥಿಗಳಾಗಿ ಹೋದವರೆಲ್ಲ 11:00 ಗಂಟೆಗೆಲ್ಲ ವಾಪಸ್ ಬಂದಿದ್ದರು. 12:30ಕ್ಕೆ ಊಟದ ಹಾಲ್ ತುಂಬಿತ್ತು. ಈ ದಿನ ವಿಶೇಷ ಊಟ. ಕಳೆದ 11 ದಿನಗಳಿಂದ ಕೇವಲ ಸಾತ್ವಿಕ ಊಟ ಉಂಡಿದ್ದವರಿಗೆಲ್ಲ ಈ ದಿನದ ಹೋಳಿಗೆ ಊಟ ಅತ್ಯಂತ ಅಪಾಯಮಾನವಾಗಿತ್ತು. ಎಲ್ಲರೂ ಮನದಣಿಯೆ ಊಟ ಮಾಡಿ, ನಿಧಾನವಾಗಿ ಹೋಟೆಲಿನ ಹೊರಗೆ ನಿಂತಿದ್ದ ಬಸ್ ಏರಿ ಆಸೀನರಾದೆವು. ವಾಟ್ಸಪ್ ಗ್ರೂಪ್ ನ ತುಂಬೆಲ್ಲ ಯಾತ್ರೆಯ ಧನ್ಯತೆಯನ್ನು ಉಲ್ಲೇಖಿಸಿ ತೀರ್ಥಯಾತ್ರೆ ಟೂರ್ಸ್ ಅಂಡ್ ಟ್ರಾವೆಲ್ಸ್ ಅವರಿಗೆ ಧನ್ಯವಾದಗಳ ಮಹಾಪೂರವೇ ತುಂಬಿತ್ತು.


       ರಾತ್ರಿ ಡೆಲ್ಲಿ ಏರ್ ಪೋರ್ಟ್ ನಲ್ಲಿ ಊಟಕ್ಕೆ ತೊಂದರೆ ಆಗಬಾರದೆಂದು ರಾತ್ರಿಯ ಊಟವನ್ನು ಪ್ಯಾಕ್  ಮಾಡಿ ಎಲ್ಲ ಯಾತ್ರಾರ್ಥಿಗಳಿಗೆ ನೀಡಲಾಯಿತು. ಡೆಲ್ಲಿಯಿಂದ ಕಲ್ಕತ್ತಾ, ಹೈದರಾಬಾದ್, ಚೆನ್ನೈ ಮತ್ತು ಬೆಂಗಳೂರಿಗೆ ಹೋಗುವ ಯಾತ್ರಾರ್ಥಿಗಳೆಲ್ಲ ಇದ್ದರು. ನರಸಿಂಹ ಸ್ತೋತ್ರ ಪಠಣೆಯೊಂದಿಗೆ ಪ್ರಯಾಣ ಆರಂಭವಾಯಿತು. ಹವಾನಿಯಂತ್ರಿತ ಬಸ್ಸಿನ ಸುಖದ ಜೊತೆ ಜಠರೇಶ್ವರ ಸಹ ತೃಪ್ತಿ ಹೊಂದಿದ್ದ ಕಾರಣ ಎಲ್ಲರೂ ತೂಕಡಿಕೆ, ನಿದ್ರೆಗಳಿಗೆ ಶರಣಾದೆವು.

        ಒಂದೊಳ್ಳೆ ನಿದ್ರೆ ಮುಗಿಸಿ ಏಳುತ್ತಿದ್ದಂತೆ, ಸುಮಾರು 4-30 ಗಂಟೆಗೆ, ಬಸ್ಸನ್ನು ಹೆದ್ದಾರಿಯ ಪಕ್ಕದಲ್ಲಿ ಒಂದು ಒಳ್ಳೆಯ ಹೋಟೆಲ್ ನ ಎದುರು ಚಹಾ ಸೇವನೆಗಾಗಿ ನಿಲ್ಲಿಸಿದರು. ವಿಶಾಲವಾದ ಹೊಲದ ಅಂಚಿಗೆ ಇದ್ದ ಈ ಹೋಟೆಲ್ಲಿನಲ್ಲಿ ಯಾತ್ರಿಗಳ ಮನ ಸೆಳೆಯಲು ಹಲವಾರು ನಿರುಪಯುಕ್ತ ವಸ್ತುಗಳನ್ನು ಅತ್ಯಾಕರ್ಷಕವಾಗಿ ಜೋಡಿಸಿಟ್ಟಿದ್ದರು. ಖಾಲಿಯಾದ ಪ್ಲಾಸ್ಟಿಕ್ ನೀರಿನ ಬಾಟಲುಗಳಿಗೆ ಒಂದಿಷ್ಟು ವಿನ್ಯಾಸ ಮಾಡಿ ದುಂಬಿ, ಚಿಟ್ಟೆ, ಜೇನ್ನೊಣ, ಪಕ್ಷಿಗಳು ಇತ್ಯಾದಿ ರೂಪ ನೀಡಿ ಎಲ್ಲೆಡೆ ನೇತು ಹಾಕಿದ್ದರು. ಅದೇ ರೀತಿ ನಿರುಪಯುಕ್ತವಾದ ವಾಹನಗಳ ಬಿಡಿ ಭಾಗಗಳು, ಹಳೆಯ ಟೈರುಗಳು ಇತ್ಯಾದಿಗಳನ್ನು ಸಹ ಅತ್ಯಂತ ಕಲಾತ್ಮಕವಾಗಿ ಸಿಂಗಾರಗೊಳಿಸಿಟ್ಟಿದ್ದರು. ಅದೇ ಆವರಣದಲ್ಲಿ ನಾಲ್ಕಾರು ಪುಟ್ಟ ಪ್ರಾಣಿಗಳನ್ನು ಸಾಕಿದ್ದರು. ಒಟ್ಟಿನಲ್ಲಿ ಚಹಾ ಸೇವನೆಗೆಂದು ನಿಂತವರು ಇನ್ನೊಂದು ಐದ್ಹತ್ತು ನಿಮಿಷ ಹೆಚ್ಚು  ವ್ಯಯಿಸುವ ರೀತಿಯಲ್ಲಿ ಇತ್ತು ಇಲ್ಲಿನ ವ್ಯವಸ್ಥೆ. ನಮ್ಮ ಬಸ್ಸಿನ ಎಲ್ಲರೂ, ವಿಶೇಷತಃ. ಹೆಂಗಸರು, ಇವೆಲ್ಲವುಗಳನ್ನು ನೋಡಿ ಸಂತೋಷ ಪಟ್ಟರು.

         ಇಲ್ಲಿಂದ ಹೊರಟ ನಾವು ಸಾಯಂಕಾಲ 6:30ರ ಸುಮಾರಿಗೆ ಡೆಲ್ಲಿ ವಿಮಾನ ನಿಲ್ದಾಣದಲ್ಲಿದ್ದೆವು. ತಕ್ಷಣ ನಮ್ಮ ನಮ್ಮ ಬ್ಯಾಗೇಜುಗಳನ್ನು ತೆಗೆದುಕೊಂಡು ಬೆಂಗಳೂರಿಗೆ ಹೊರಡುವ ಇಂಡಿಗೋ ವಿಮಾನದ ಚೆಕಿಂಗ್ ಸರತಿ ಸಾಲಿಗೆ ಸೇರಿಕೊಂಡೆವು. ಕ್ಯಾಬಿನ್ ಬ್ಯಾಗ್ ಬಿಟ್ಟು ಉಳಿದ ಲಗೇಜ್ ಗಳು ಚೆಕ್ ಇನ್ ಆದವು. ಸೆಕ್ಯೂರಿಟಿ ಚೆಕಪ್ ಸಹ ಆಯಿತು. ಈಗ ಕೊನೆಯ ಹಂತದಲ್ಲಿ ನನ್ನ ಚೀಲವನ್ನು ತಡೆದರು. ನಾನು ತುಂಬಾ ಮುತುವರ್ಜಿಯಿಂದ ನಿಷೇಧಿತ ವಸ್ತುಗಳನ್ನು ಕ್ಯಾಬಿನ್ ಬ್ಯಾಗ್ ನಿಂದ ತೆಗೆದು ಚೆಕ್ ಇನ್ ಲಗೇಜ್ ನ ಜೊತೆ ಕಳಿಸಿದ್ದೆ. ಆದರೆ ಈಗ ನೋಡಿದರೆ ನನ್ನ ಮೀಸೆ ಟ್ರಿಮ್ ಮಾಡುವ ಕತ್ತರಿ ಮತ್ತು ಉಗುರು ಕತ್ತರಿಸುವ ಕಟರ್  ಬಾತ್ರೂಮ್ ಕಿಟ್ ಜೊತೆ ಸೇರಿಕೊಂಡಿತ್ತು. ಚೆಕಿಂಗ್ ನಲ್ಲಿ ಅದನ್ನು ಹಿಡಿದವರು, ಬಹುಶಃ ನನ್ನ ಬಿಳಿಕೂದಲನ್ನು ನೋಡಿ,  ನಕ್ಕು ವಾಪಸ್ ಬ್ಯಾಗನಲ್ಲಿ ಇಟ್ಟರು. ಸ್ಕ್ಯಾನಿಂಗ್ ನಲ್ಲಿ ಇನ್ನೂ ಏನೋ ಕಬ್ಬಿಣದ ವಸ್ತು ಇರುವುದಾಗಿ ತೋರಿಸುತ್ತಿತ್ತು. ನಾನು 'ಸಾಧ್ಯವೇ ಇಲ್ಲವಲ್ಲ!' ಎಂದೆ. ಆದರೆ ಅದ್ಯಾವ ಮಾಯೆಯಲ್ಲಿಯೋ ಯಾತ್ರಾ ಸಂಸ್ಥೆಯವರು ಕೊಟ್ಟ ಛತ್ರಿ ಚೀಲದ ತಳ ಸೇರಿತ್ತು. ಅದನ್ನು ಹೊರಗೆ ತೆಗೆದೆ. ಅವನು ಮತ್ತೊಮ್ಮೆ ನಕ್ಕು, 'ಇರಲಿ ಬಿಡಿ' ಎಂದು ವಾಪಸ್ ಚೀಲಕ್ಕೆ ಹಾಕಿದನು. ಅಂತೂ ಚಿಕ್ಕ ಆತಂಕದ ನಂತರ ಸೆಕ್ಯೂರಿಟಿ ಚೆಕಿಂಗ್ ಮುಗಿದಂತಾಯಿತು.

       ಎಂಟು ಗಂಟೆಗೆಲ್ಲ ಕಟ್ಟಿಸಿಕೊಂಡು ಬಂದ ಬುತ್ತಿ ತಿಂದೆವು. ವಿಮಾನ ನಿಗದಿತ ಸಮಯಕ್ಕೆ ಸರಿಯಾಗಿ ಹೊರಟಿತು. ರಾತ್ರಿ 12:30 ಕ್ಕೆಲ್ಲ ಬೆಂಗಳೂರಿನ ವಿಮಾನ ನಿಲ್ದಾಣ ತಲುಪಿದೆವು. ನಮ್ಮ 9 ಜನರ ಪೈಕಿ  ಶ್ರೀಮತಿ ಭಾರತಿ ಮತ್ತು ರವಿಕುಮಾರ್ ದಂಪತಿ ಹಾಗೂ ವಸಂತ ಲಕ್ಷ್ಮಿ ಅವರು ಬೆಂಗಳೂರಿನಲ್ಲಿರುವ ತಮ್ಮ ತಮ್ಮ ಮನೆಗಳಿಗೆ ಹೋದರು. ನಾವು ಆರು ಜನ ಮೈಸೂರಿಗೆ ಹೊರಟು ನಿಂತಿದ್ದ ಫ್ಲೈ ಬಸ್ ಗೆ ಟಿಕೆಟ್ ಖರೀದಿಸಿ ಹತ್ತಿದೆವು. ನಿದ್ದೆ ತಿಳಿದೆದ್ದಾಗ ನಮ್ಮ ಬಸ್ ಮೈಸೂರಿನ ಬಸ್ ಸ್ಟ್ಯಾಂಡಿನಲ್ಲಿತ್ತು. ಸಮಯ ಬೆಳಗಿನ ಆರೂವರೆ ಆಗಿತ್ತು.

      ಆಟೋದವರಿಗೆ ಹೇಳಿ ಕುಕ್ಕರಹಳ್ಳಿ ಕೆರೆ ದ್ವಾರದಲ್ಲಿರುವ ಫಿಲ್ಟರ್ ಕಾಫಿ ಒದಗಿಸುವ ವಾಹನದ ಎದುರು ನಿಲ್ಲಿಸಿಕೊಂಡು, ಎರಡು ವಾರಗಳ ನಂತರ, ಉತ್ಕೃಷ್ಟವಾದ ಫಿಲ್ಟರ್ ಕಾಫಿಯನ್ನು - ಪ್ರತೀ ಗುಟುಕನ್ನು ಆಸ್ವಾದಿಸುತ್ತಾ - ಹೀರಿದೆವು. ನಂತರ ನಮ್ಮ ನಮ್ಮ ಮನೆ ಸೇರಿದಾಗ ಸಮಯ ಬೆಳಗಿನ 7- 30 ;ದಿನಾಂಕ 22/ 5/2024.

       ಯಾತ್ರೆ ಸಂಪನ್ನವಾಯಿತು. ಈ ರೀತಿ ಪ್ಯಾಕೇಜ್ ಟೂರ್ ಗೆ ನಾನು ಹೋಗಿದ್ದು ಇದೇ ಮೊದಲು. ಒಂದೆರಡು ಸೂಚನೆಗಳನ್ನು ನನ್ನ ತರಹದ ಆರಂಭಿಕರಿಗೆ ನೀಡಬಯಸುತ್ತೇನೆ.

1. ಯಾತ್ರಾ ಸಂಸ್ಥೆಯ 'ನಂಬಿಕಸ್ಥತನ'ವನ್ನು ವಿವಿಧ ಮೂಲಗಳಿಂದ ಪರಿಶೀಲಿಸಿ, ದರಗಳನ್ನು ಹೋಲಿಕೆ ಮಾಡಿ, ಸಾಧ್ಯವಾದರೆ ಚೌಕಾಸಿ ಮಾಡಿ, ನಂತರ ಬುಕ್ ಮಾಡಬೇಕು.

2. ಯಾತ್ರೆಯ ಸಲುವಾಗಿ ರಜಿಸ್ಟ್ರೇಷನ್ ಮಾಡಿಸಿಕೊಳ್ಳಲು ಮರೆಯಬಾರದು. ಇದನ್ನು ಯಾತ್ರಾಸಂಸ್ಥೆ ಮಾಡಿಸುತ್ತದೆ. ಪರಿಶೀಲಿಸಿಕೊಳ್ಳಬೇಕು.

3. ವಿವಿಧ ಕ್ಷೇತ್ರಗಳಲ್ಲಿ ಪೂಜಾದಿಗಳಿಗೆ ಮುಂಗಡ ಟಿಕೆಟ್ ಗಳನ್ನು ಆನ್ಲೈನ್ ನಲ್ಲಿ ಕಾಯ್ದಿರಿಸಿಕೊಳ್ಳುವುದು ಉತ್ತಮ.

4. ಹೆಲಿಕಾಪ್ಟರ್ ಗಳಿಗೆ ಯಾತ್ರಾ ಸಂಸ್ಥೆಯವರು ಹೇಳಿದ ಕ್ರಮದಲ್ಲಿಯೇ ಆನ್ಲೈನ್ ಬುಕಿಂಗ್ ಮಾಡಿಕೊಳ್ಳುವುದು ಒಳ್ಳೆಯದು. ನಂತರ ಆಯಾ ಸ್ಥಳದಲ್ಲಿ ಟಿಕೆಟ್ ಸಿಗಲಿಕ್ಕಿಲ್ಲ. ಸಿಕ್ಕಿದರೂ ತುಂಬಾ ದುಬಾರಿಯಾಗುತ್ತದೆ.

5. ಅಕಸ್ಮಾತ್ ಹೆಲಿಕ್ಯಾಪ್ಟರ್ ಬುಕಿಂಗ್ ಆಗದಿದ್ದರೂ ಚಿಂತಿಸುವ ಅಗತ್ಯವಿಲ್ಲ ಅನ್ಯ ರೀತಿಗಳಲ್ಲಿ ಪ್ರಯಾಣಿಸಬಹುದು. ಆಯಾ ಸ್ಥಳದಲ್ಲಿ ನಿಮ್ಮ ನಿಮ್ಮ ಆರೋಗ್ಯದ ಸ್ಥಿತಿಯ ಮೇಲೆ ಪಿಟ್ಟೂ, ಕುದುರೆ ಅಥವಾ ಡೋಲಿಯಲ್ಲಿ ಪ್ರಯಾಣಿಸಬಹುದು.

6. ಸೀಟ್ ಬುಕ್ಕಿಂಗ್ ಮಾಡಿ ಪಾವತಿಸಿ ಆಗಿದೆ ಎಂದು ನಿರಾಳರಾಗಬೇಡಿ. ಕೈಯಲ್ಲಿ ಸಾಕಷ್ಟು ನಗೆದು ಹಣವನ್ನು ಇಟ್ಟುಕೊಂಡು ಪ್ರಯಾಣಿಸಿ. ಹಣವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ. ಅಷ್ಟೇ.

7. ಲಗೇಜ್ ಕಡಿಮೆ ಇದ್ದಷ್ಟು ಕ್ಷೇಮ. ಖರೀದಿ ಅನಿವಾರ್ಯವಾದರೆ ಮಾತ್ರ ಮಾಡಿ.

8. ಒಂದೇ ಕುಟುಂಬದ ಬದಲು ಇನ್ನೊಂದು ಆತ್ಮೀಯ ಕುಟುಂಬ ನಿಮ್ಮ ಜೊತೆ ಪ್ರಯಾಣಿಸಿದರೆ ಎಲ್ಲಾ ದೃಷ್ಟಿಯಲ್ಲಿಯೂ ಹಿತಕರ.

9. ಎಲ್ಲಾ ಕಡೆ ಸಮಯ ಪಾಲನೆಗೆ ಮಹತ್ವ ನೀಡಿರಿ. ತೀರ್ಥಯಾತ್ರೆ ಇರುವುದು ಮನಸ್ಸಿಗೆ ನೆಮ್ಮದಿ ಪಡೆಯಲು. ಹಾಗಾಗಿ ಸಹಯಾತ್ರಿಗಳ ಜೊತೆ ವಾದ ವಿವಾದವಾಗಲೀ, ಜಗಳವಾಗಲೀ ಬೇಡವೇ ಬೇಡ. ಅಂತಹ ಸಂದರ್ಭದಲ್ಲಿ ಮೌನ ಮತ್ತು ಸಹನೆ ನಿಮ್ಮ ಆಯುಧವಾಗಿರಲಿ.

10. ಬಾಯಿ ಚಪಲಕ್ಕೆ ಕಟ್ಟು ಬಿದ್ದು ಏನನ್ನಾದರೂ ತಿಂದು ಆರೋಗ್ಯ ಕೆಡಿಸಿಕೊಂಡರೆ ಇಡೀ ಯಾತ್ರೆಯೇ ಹದಗೆಟ್ಟು ಹೋಗುತ್ತದೆ. ಆದ್ದರಿಂದ ನಾಲಿಗೆಯ ಮೇಲೆ ಹಿಡಿತ ಇರುವುದು ಒಳ್ಳೆಯದು.

       ನಿಮಗೆಲ್ಲ ಶುಭವಾಗಲಿ.

       ಜೈ ಕೇದಾರ ಬಾಬಾಕೀ!!

       ಜೈ ಬದರಿ ವಿಶಾಲ್ ಕೀ!!


ಹೆಮ್ಮೆಯ ಹಿಮಾಲಯ


ಭಾರತಾಂಬೆಯ ಮುಕುಟಮಣಿಯೀ 

ಗಿರಿಹಿಮಾಲಯ ನಮ್ಮದು

ಪೂರ್ವ-ಪಶ್ಚಿಮದಗಲ ಹರಡಿಹ 

ಗಿರಿಪುರಾತನ ನಮ್ಮದು || ಪ ||


ನಮ್ಮ ದೇಶದ ಗತ ಪುರಾಣದ

ಘಟನೆಯೆಲ್ಲವು ನಡೆದಿಹ

ಪುಣ್ಯಪುರುಷರು ಋಷಿವರೇಣ್ಯರು

ತಪವಗೈದಿಹ ಪರಿಸರ |

ಹೆಜ್ಜೆ ಹೆಜ್ಜೆಗು ತೀರ್ಥಸ್ಥಳಗಳು

ಪುಣ್ಯ ನದಿಗಳು ಹರಡಿಹ

ಪರಮ ಪಾವನ ಶಿಖರ ಶ್ರೇಣಿಯ

ಪರ್ವತಾವಳಿ ನಮ್ಮದು  || 1 ||


ಭಾರತೀಯನ ಕನಸು ಹಿಮಗಿರಿ

ದರುಶನದ ಅನುಭೂತಿಯು

ಒಮ್ಮೆ ನೋಡಲು ಮತ್ತೆ ನೋಡುವ

ಸತತ ಸೆಳೆತದ ತುಡಿತವು |

ಗಿರಿ ಕಣಿವೆಯಲಿ ಹರಡಿ ನಗುತಿಹ

ಪ್ರಕೃತಿ ಸೆಳೆವುದು ನಮ್ಮನು

ಗಿರಿಹಿಮಾಲಯ ನಿನ್ನ ಮಹಿಮೆಗೆ

ಸಾಟಿ ನೀನೇ ಜಗದೊಳು  || 2 ||


ಮೇಲೆ ನೋಡಲು ರಜತಗಿರಿಗಳು

ಪುಣ್ಯ ನದಿಗಳ ಸ್ರೋತವು!

ಜಿನುಗಿ ಹರಿಯುವ ಹಾಲು ಹಿಮಜಲ 

ಕಣಿವೆಯೆಡೆಗಿನ ಓಟವು |

ಹೆಜ್ಜೆ ಹೆಜ್ಜೆಗು ನೀರ ಝರಿಗಳು

ಸೃಷ್ಟಿಸುವ ಜಲಪಾತವು!

ಹಿನ್ನೆಲೆಯ ಗಿರಿ ಶೃಂಗ ನೀಡುವ

ಶುದ್ಧ ದೈವಿಕ ಭಾವವು! || 3 ||


ಶಿವನ ಆಡುಂಬೊಲ ಹಿಮಾಲಯ

ಹೆಜ್ಜೆ ಹೆಜ್ಜೆಯು ಶಿವಮಯ!

ಇಲ್ಲಿಯೇ ಕೈಲಾಸ ಮಾನಸ

ಪಂಚ ಕೇದಾರಾಲಯ |

ಯಮುನೆ ಭಾಗೀರಥಿಗಳೆಲ್ಲವು

ತೊಳೆವವೈ ಶಿವಪಾದವ!

ಕಳೆದು ಮಲಿನವ ತಳೆದು ಭಕ್ತಿಯ

ಹಿಡಿಯೊ ಭೈರವ ಚರಣವ || 4 ||


ಹರಿಯು ಧರೆಯಲಿ ತಪವಗೈದಿಹ 

ಬದರಿ ಕ್ಷೇತ್ರವು ಇಲ್ಲಿದೆ

ನಿಧಿಯ ಅಧಿಪತಿ ಯಕ್ಷರೊಡೆಯ ಕು-

ಬೇರನಲಕಾಪುರಿಯಿದೆ! |

ಪಂಚಪಾಂಡವರೆಲ್ಲ ಜನಿಸಿದ

ಪಾಂಡುಕೀಶ್ವರವಿಲ್ಲಿದೆ!

ಪುಣ್ಯ ನದಿಗಳು ಬೆರೆತು ಹರಿವ ಪ್ರ-

ಯಾಗ ಸರಣಿಯೆ ಇಲ್ಲಿದೆ! || 5 ||


ಸಾಧಕರಿಗಿದು ತಪೋಭೂಮಿಯು

ಸಾಹಸಿಗೆ ಆಹ್ವಾನವು!

ದಿವ್ಯಕಾನನ ಪುಣ್ಯಸಲಿಲವು

ನೆಲದ ಕೃಷಿಗಾಧಾರವು! |

ಇಂಥ ಹಿಮಗಿರಿ ಭವ್ಯ ಶ್ರೇಣಿಯು

ನಮ್ಮದೆಂಬುದೆ ಹೆಮ್ಮೆಯು!

ಮತ್ತೆ ಬರುವೆವು ನಿನ್ನ ಮಡಿಲಿಗೆ

ನಾವು ನಿನ್ನಯ ತನಯರು || 6 ||


            -ರವೀಂದ್ರ ಭಟ್ ದೊಡ್ನಳ್ಳಿ.

                                                                                                        (ಮುಗಿಯಿತು.)





        (ಮುಗಿಯಿತು.)


ಮಂಗಳವಾರ, ಅಕ್ಟೋಬರ್ 1, 2024

ಚಾರ್ ಧಾಮ ಯಾತ್ರೆ -ಭಾಗ 14

ಚಾರ್ ಧಾಮ ಯಾತ್ರೆ -ಭಾಗ 14

ದೇವಪ್ರಯಾಗ ದರ್ಶನ

ದಿನಾಂಕ:-20/05/2024

        ಮುಂಜಾನೆ ಮೂರು ಗಂಟೆಗೆಲ್ಲ ಎದ್ದೆವು. ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು, ರೂಮಿನಲ್ಲಿ ಒದಗಿಸಿದ್ದ ಕೆಟಲ್ ನಲ್ಲಿ ನೀರು ಕುದಿಸಿಕೊಂಡು, ಬ್ಲಾಕ್ ಟೀ ತಯಾರಿಸಿಕೊಂಡು ಕುಡಿದೆವು. 3:45ಕ್ಕೆಲ್ಲ ನಮ್ಮ ಲಗೇಜ್ ಗಳನ್ನು ರೂಮಿನ ಹೊರಗಡೆ ಇಟ್ಟಾಗಿತ್ತು. ನಾಲ್ಕು ಗಂಟೆಗೆ ಸರಿಯಾಗಿ ನಮ್ಮ ಬಸ್ಸುಗಳನ್ನು ಹೊರಡಿಸಿ ಜ್ಯೋತಿರ್ಮಠಕ್ಕೆ ವಿದಾಯ ಹೇಳಿದೆವು.

        ಎಂದಿನಂತೆ ಬಸ್ ಏರಿದೊಡನೆ ನರಸಿಂಹ ಭಜನೆ ಆದ ನಂತರ ನಾನು ಮಂಕುತಿಮ್ಮನ ಕಗ್ಗದ ಎರಡು ಪದ್ಯಗಳಿಗೆ ವ್ಯಾಖ್ಯಾನ ಮಾಡಿದೆ. ನಂತರ ಎಲ್ಲರೂ ನಿಧಾನವಾಗಿ ನಿದ್ದೆಗೆ ಜಾರಿದೆವು.

       ಬೆಳಿಗ್ಗೆ 7.30 ರ ಸುಮಾರಿಗೆ ಮಾರ್ಗ ಮಧ್ಯದಲ್ಲಿ ಬೆಳಗಿನ ತಿಂಡಿ ಚಹಾ ಮುಗಿಸಿ ಮತ್ತೆ ಬಸ್ ಏರಿದ ನಾವು 10.30 ರ ಸುಮಾರಿಗೆ ದೇವ ಪ್ರಯಾಗ್ ತಲುಪಿದೆವು.

        ದೇವ ಪ್ರಯಾಗದಲ್ಲಿ ಹೆದ್ದಾರಿಯ ಪಕ್ಕದಲ್ಲಿ ಬಸ್ ನಿಲ್ಲಿಸಿ ಸುಮಾರು 100 -120 ಮೆಟ್ಟಿಲುಗಳನ್ನು ಇಳಿಯಬೇಕಿತ್ತು. ಮೆಟ್ಟಿಲುಗಳು ಸ್ವಲ್ಪ ಹೆಚ್ಚೇ ಎತ್ತರವಾಗಿದ್ದವು. ಹಾಗಾಗಿ ನಿಧಾನವಾಗಿ ಇಳಿಯಬೇಕಾಯಿತು. ಹಾಗೆ ಇಳಿದು ಹೋದ ನಾವು ಒಂದು ಗ್ರಾಮೀಣ ಆಡಿಟೋರಿಯಂ(ಪ್ರೇಕ್ಷಾಗೃಹ)ದಲ್ಲಿ ಸೇರಿದೆವು. ನಾವು ಇಳಿದು ಬಂದ ದಾರಿ ಈ ಪ್ರೇಕ್ಷಾಗೃಹದೊಳಗೆ ಪ್ರವೇಶಿಸಿ, ಹಾಗೆಯೇ ಮುಂದುವರೆದು, ಹೊರ ಹೋಗುತ್ತಿತ್ತು. ಈ ಹಾದಿಯ ಬಲಗಡೆ ವೇದಿಕೆ ಇತ್ತು. ಎಡಗಡೆಗೆ ಇಲ್ಲಿನ ಇಳಿಜಾರನ್ನು ಸೂಕ್ತವಾಗಿ ಬಳಸಿಕೊಂಡು ನಿರ್ಮಿಸಿದ ಆಸನ ವ್ಯವಸ್ಥೆ ಇತ್ತು. ನಡುವೆ ಇದ್ದ ಒಂದಷ್ಟು ಸಮತಟ್ಟಾದ ಸ್ಥಳದಲ್ಲಿ ಬಹುಶಃ ಹಿಂದಿನ ರಾತ್ರಿ ಊರಿನ ದನಕರುಗಳೆಲ್ಲ ಮಲಗಿದ್ದವೇನೋ! ನೆಲ ತೊಳೆದು ಸ್ವಚ್ಛಗೊಳಿಸಿದ್ದರೂ ಸಹ ಗೋಮೂತ್ರ -ಗಂಜಳದ ವಾಸನೆ ಮೂಗಿಗೆ ರಾಚುತ್ತಿತ್ತು. ಈ ಸಭಾಂಗಣದ ಗೋಡೆಯ ಮೇಲೆ ರಾಮಾಯಣದ ಚಿತ್ರಗಳನ್ನು ಬಿಡಿಸಿದ್ದರು.

       ಇಲ್ಲಿ ಎಲ್ಲರೂ ಸೇರಿದ ನಂತರ ನಮ್ಮ ಗೈಡ್ ವೆಂಕಟೇಶ್ ಪ್ರಭುರವರು ಈ ಹಂತದಲ್ಲಿ ನಿರ್ಮಿಸಲಾಗಿರುವ ರಘುನಾಥ ಮಂದಿರದ ಬಗ್ಗೆ ತಿಳಿಸಿದರು. ಬ್ರಾಹ್ಮಣನಾದ ರಾವಣನನ್ನು ವಧಿಸಿದ ರಾಮನು, ಲಕ್ಷ್ಮಣ ಸಹಿತನಾಗಿ ಈ ಸ್ಥಳಕ್ಕೆ ಬಂದು, ತಪಸ್ಸನ್ನಾಚರಿಸಿ ಪ್ರಾಯಶ್ಚಿತ್ತ ಮಾಡಿಕೊಂಡನಂತೆ. ಅದರ ನೆನಪಿಗಾಗಿ ಇಲ್ಲಿ ರಘುನಾಥ ಮಂದಿರ ನಿರ್ಮಿಸಲಾಯಿತು. ಇಲ್ಲಿರುವ ಅಲಕನಂದಾ - ಭಾಗೀರಥಿ  ಸಂಗಮದಿಂದ ಸಾಕಷ್ಟು  ಮೇಲ್ಭಾಗದಲ್ಲಿದೆ ಈ ಮಂದಿರ. ಈಗ ಇರುವ ಮಂದಿರ ಸುಮಾರು 1,250 ವರ್ಷ ಹಿಂದಿನದು ಎನ್ನುತ್ತಾರೆ. ಶ್ರೀ ಶಂಕರಾಚಾರ್ಯರು ತಮ್ಮ ಭಾರತ ಯಾತ್ರೆಯ ಕಾಲದಲ್ಲಿ ಈ ಮಂದಿರವನ್ನು ಸಹ ಸ್ಥಾಪಿಸಿದರು ಎಂಬ  ಪ್ರತೀತಿ ಇದೆ. ನಂತರ ಕಾಲಾನುಕಾಲಕ್ಕೆ ಇಲ್ಲಿಯ ಗಡವಾಲ್ ರಾಜವಂಶಸ್ಥರಿಂದ ಮಂದಿರವು ನವೀಕರಿಸಲ್ಪಟ್ಟಿದೆ. ಮಂದಿರವು ಇಕ್ಕಟ್ಟಾದ ಸ್ಥಳದಲ್ಲಿದ್ದರೂ ಸಹ ಅತ್ಯಂತ ಆಕರ್ಷಕವಾಗಿದೆ. ಒಳಗಿರುವ ಶ್ರೀ ರಘುನಾಥ ಸ್ವಾಮಿಯ ವಿಗ್ರಹ ಸುಮಾರು 15 ಅಡಿ ಎತ್ತರದ ಗ್ರಾನೆಟ್ ಶಿಲೆಯ ಭವ್ಯಮೂರ್ತಿ. ಈ ವಿಗ್ರಹದ ನೇರ ಕೆಳಗಡೆ ಸರಸ್ವತಿ ನದಿ ಹರಿಯುತ್ತಿದ್ದಾಳೆ  ಎನ್ನುತ್ತಾರೆ. ವಿಗ್ರಹದ ಎದುರುಗಡೆ ಸ್ವಲ್ಪ ತೇವಾಂಶವಿದ್ದ ಸ್ಥಳವಿದ್ದು ವರ್ಷದಲ್ಲಿ ಹಲವು ಸಾರಿ ಇಲ್ಲಿ ನೀರು ಜಿನುಗುತ್ತದೆ ಮತ್ತು ಅದು ಸರಸ್ವತಿಯೇ ಎಂಬ ನಂಬಿಕೆಯಿದೆ. ವಿಷ್ಣುವಿನ '108 ದಿವ್ಯದೇಶಂ'ಗಳ ಪೈಕಿ ಇದೂ ಒಂದೆಂದು ಹೇಳುತ್ತಾರೆ. "ತಿರುಕಂಠ ಮೇಣಂ ಕಡಿನಾಗರ್" ಅಥವಾ ರಘುನಾಥ ಎಂದು ಅವರು (ರಾಮಾನುಜಾಚಾರ್ಯ ಮತದವರು) ಹೇಳುತ್ತಾರೆ (ತಮಿಳಿನಲ್ಲಿ). ಇಲ್ಲಿಯ ಅರ್ಚಕರು ತಮಿಳುನಾಡು ಮೂಲದವರೇ ಆಗಿದ್ದಾರೆ.

       ಇಲ್ಲಿ ರಘುನಾಥ ಸ್ವಾಮಿಯ ಎದುರಿನಲ್ಲಿ ಗರುಡ ವಿಗ್ರಹವಿದೆ. ಮಂದಿರದ ಪ್ರಾಂಗಣದಲ್ಲಿಯೇ ಅನ್ನಪೂರ್ಣಾದೇವಿ, ನರಸಿಂಹದೇವರು, ಗರುಡ ಮತ್ತು ಶ್ರೀ ಶಂಕರಾಚಾರ್ಯರ  ಪುಟ್ಟ ಮಂದಿರಗಳಿವೆ. ಇಡೀ ಮಂದಿರದ ಪರಿಸರ ಅತ್ಯಂತ ಸ್ವಚ್ಛವಾಗಿದೆ. ಸುತ್ತಲಿರುವ ಪರ್ವತ ಶ್ರೇಣಿಗಳು, ಎದುರಿನಲ್ಲಿಯ ದೇವ ಪ್ರಯಾಗದ ಸಂಗಮ, ಇಲ್ಲಿನ ಪ್ರಶಾಂತ  ಪರಿಸರಗಳೆಲ್ಲ   ಧ್ಯಾನಾಸಕ್ತರಿಗೆ  ಹೇಳಿ ಮಾಡಿಸಿದಂತಿವೆ.

     ಇಲ್ಲಿನ ಪುರೋಹಿತರು ತುಂಬಾ ಉತ್ಸಾಹದಿಂದ ಮಂದಿರದ ಕುರಿತು ವಿವರಣೆ ನೀಡಿದರು. ದರ್ಶನ ಸಹ ಸಾವಧಾನವಾಗಿ ಮುಗಿಯಿತು.  ಈ ಸ್ಥಳದಲ್ಲಿ ಸ್ವತಃ ಬ್ರಹ್ಮ ದೇವರು ಬಂದು ತಪಸ್ಸು ಮಾಡಿದ್ದರಿಂದ ಈ ಸ್ಥಳದ ಪಾವಿತ್ರ್ಯತೆ ಮತ್ತಷ್ಟು ಹೆಚ್ಚಿದೆಯಂತೆ. ಭಾರದ್ವಾಜ ಮುನಿ ಸಹ ಇಲ್ಲಿಯೇ ತಪಸ್ಸು ಮಾಡಿ ಸಪ್ತರ್ಷಿ ಪಟ್ಟವನ್ನು ಪಡೆದರಂತೆ.

      ಮಂದಿರದ ಹೆಬ್ಬಾಗಿಲಿನಿಂದ ಕೆಳಗಡೆ ಇಳಿಯುವ ನೂರಾರು ಮೆಟ್ಟಿಲುಗಳನ್ನು ಇಳಿದು ನಾವು ತಲುಪಿದ್ದು  ಭಾಗೀರಥಿ ಮತ್ತು ಅಲಕನಂದಾ ನದಿಗಳ ಸಂಗಮವಾದ ದೇವಪ್ರಯಾಗವನ್ನು. ಇಲ್ಲಿ ಸರಸ್ವತಿ ನದಿ ಸಹ  ರಘುನಾಥ ಸ್ವಾಮಿಯ ವಿಗ್ರಹದ ತಳಭಾಗದಿಂದ ಗುಪ್ತಗಾಮಿನಿಯಾಗಿ ಹರಿದು ಬಂದು ಸಂಗಮವನ್ನು ಸೇರುತ್ತಾಳೆ ಎನ್ನುತ್ತಾರೆ. ಆದ್ದರಿಂದ ಈ ದೇವ ಪ್ರಯಾಗ ಸಹ ತ್ರಿವೇಣಿ ಸಂಗಮವೇ.

       ಹಿಂದೆ ದೇವಶರ್ಮನೆಂಬ ಋಷಿ ಇಲ್ಲಿ ಬಹುಕಾಲ ತಪಸ್ಸನ್ನಾಚರಿಸಿದ್ದ ಕಾರಣದಿಂದ ಈ ಸ್ಥಳಕ್ಕೆ ದೇವಪ್ರಯಾಗ ಎಂದು ಹೆಸರು ಬಂದಿದೆಯಂತೆ.

       ಇಲ್ಲಿ ಸಂಗಮ ಸ್ಥಾನದಲ್ಲಿ ನಿಂತಾಗ ನಮ್ಮ ಬಲಗಡೆಯಿಂದ ಅತ್ಯಂತ ರಭಸವಾಗಿ ಸ್ವಚ್ಛ ನೀರನ್ನು ಹೊತ್ತು ಹರಿದು ಬರುತ್ತಿದ್ದವಳೇ ಭಾಗೀರಥಿ. ಅವಳ ವೇಗ ಅತ್ಯಂತ ಜೋರಾಗಿದೆ. ಇಲ್ಲಿ ಎಡಗಡೆಯಿಂದ ಅಲಕನಂದಾ ನದಿ ಹರಿದು ಬರುತ್ತಾಳೆ. ಅವಳೂ ಸಹ ವೇಗಿಯೇ! ಆದರೆ ಭಾಗೀರಥಿಯಷ್ಟಲ್ಲ. ಕಳೆದೊಂದು ವಾರದಿಂದ ಈ ಭಾಗದಲ್ಲಿ ಮಳೆ ಆಗುತ್ತಿದ್ದ ಕಾರಣ ಅಲಕನಂದಾ ನದಿಯ ನೀರು ಸ್ವಲ್ಪ ರಾಡಿಯಾಗಿ ಕಾಣಿಸುತ್ತಿತ್ತು. ಈ ಎರಡು ನದಿಗಳು ಸಂಗಮಿಸಿದ ನಂತರ ಅವಳೇ ಗಂಗೆ - ಭಾರತೀಯರ ಆರಾಧ್ಯ ದೇವತೆ ಗಂಗಾಮಾತೆ. ಮುಂದೆ ಗಂಗೆಯು ಋಷಿಕೇಶ, ಹರಿದ್ವಾರಗಳಲ್ಲಿ ಹರಿದು ಉತ್ತರ ಭಾರತದ ಬಯಲು ಭೂಮಿಗೆ ನೀರನ್ನು ಉಣಿಸಿ, ಇಡೀ ದೇಶವನ್ನೇ ಸುಭಿಕ್ಷಗೊಳಿಸಿದ್ದಾಳೆ. ಈ ದೇಶದ ಅಸಂಖ್ಯ ಸನಾತನಿ ಶ್ರದ್ದಾಳುಗಳಿಂದ ಪೂಜಿಸಲ್ಪಟ್ಟು, ತನ್ನ ಪಾತ್ರದುದ್ದಕ್ಕೂ ತೀರ್ಥಕ್ಷೇತ್ರಗಳ ಸರಮಾಲೆಯನ್ನೇ ಸೃಷ್ಟಿಸಿದ್ದಾಳೆ. ಪ್ರಯಾಗರಾಜ್, ಕಾಶಿ, ಗಯಾ ಮುಂತಾದ ಕ್ಷೇತ್ರಗಳಿಗೆ ಇವಳಿಂದಾಗಿಯೇ ಕೀರ್ತಿ ಬಂದಿದೆ.

       ಇಲ್ಲಿ ಸಂಗಮ ಸ್ಥಾನದಲ್ಲಿ ಭಕ್ತರಿಗೆ ತೀರ್ಥ ಸ್ನಾನ ಮಾಡಲು ತಡೆಬೇಲಿ ನಿರ್ಮಿಸಿ, ಮುಳುಗುಹಾಕಲು ಸರಪಳಿಗಳ ಆಸರೆ ನೀಡಿದ್ದಾರೆ. ನಾವು ನದೀ ಸಂಗಮದಲ್ಲಿ ಇಳಿದು  ತೀರ್ಥಪ್ರೋಕ್ಷಣೆ ಮಾಡಿಕೊಂಡೆವು. ಅರ್ಘ್ಯ ನೀಡಿದೆವು. ನಮ್ಮಲ್ಲೇ ಕೆಲವರು, ಸ್ನಾನದ ತಯಾರಿಯಲ್ಲಿ ಬಂದವರು, ಇಲ್ಲಿ ಸ್ನಾನ ಮಾಡಿದರು. ಮಹಿಳೆಯರಿಗೆ ಬಟ್ಟೆ ಬದಲಾಯಿಸಲು ಸೂಕ್ತ ವ್ಯವಸ್ಥೆ ಇದೆ. ದಂಡೆಯ ಮೇಲೆ ಕಟ್ಟಿಸಿರುವ ಕಟ್ಟಡದಲ್ಲಿ ಭಕ್ತಾದಿಗಳಿಂದ ಸಂಕಲ್ಪ ಮಾಡಿಸಿ ನದಿಯ ಪೂಜೆ ಮಾಡಿಸುವ ಬ್ರಾಹ್ಮಣರ ದಂಡೇ ಇದೆ. ಎಲ್ಲವೂ ಅಚ್ಚುಕಟ್ಟಾಗಿಯೇ ಕಾಣಿಸಿದವು. ಭಕ್ತರ ಸಂದಣಿ ಇತ್ತಾದರೂ ತೀರ ಅಸಾಧ್ಯವೆನಿಸುವಷ್ಟು ಇರಲಿಲ್ಲ. ನನ್ನ ಹತ್ತಿರ ರುದ್ರಾಕ್ಷಿ ಸರ ಮಾರಲು ಬಂದ ಒಬ್ಬರಿಗೆ "ನನಗೆ ಸರ ಬೇಡ" ಎಂದು, "ನೀವು ಇಟ್ಟುಕೊಳ್ಳಿ" ಎಂದು ಐವತ್ತು ರೂಪಾಯಿ ಕೊಡಲು ಹೋದೆ. "ಬೇಡ ಸ್ವಾಮಿ, ದುಡಿದು ತಿನ್ನುವವರು ನಾವು. ಭಿಕ್ಷೆ ಬೇಡ" ಎಂದು ಸ್ವಾಭಿಮಾನ ತೋರಿಸಿದರು. ತುಂಬಾ ಮೆಚ್ಚಿಗೆಯಾಯಿತು.

     ಇಲ್ಲಿ ಎಲ್ಲರೂ ಸಾಕಷ್ಟು ಫೋಟೋ ತೆಗೆಸಿಕೊಂಡೆವು. ಅಷ್ಟರಲ್ಲಾಗಲೇ 12:30 ಆಗಿತ್ತು- ಅಂದರೆ ಹೊರಡುವ ಸಮಯ. ನಾವು ಬಂದ ದಾರಿಯಲ್ಲಿ ಹಿಂದಿರುಗದೇ, ಭಾಗೀರಥಿ ನದಿಗೆ ಅಡ್ಡವಾಗಿ ಕಟ್ಟಿದ ತೂಗು ಸೇತುವೆಯನ್ನು ದಾಟಿ, ಅದರ ಆಚೆಯಿದ್ದ ಅಂಗಡಿ ಸಾಲುಗಳ ನಡುವೆ ಸಾಗುತ್ತಾ, ಸ್ವಲ್ಪ ಮೇಲ್ಭಾಗದಲ್ಲಿದ್ದ ಹೆದ್ದಾರಿ ತಲುಪಿದೆವು. ಸಂಗಮವನ್ನು ಸುತ್ತು ಹಾಕಿ ನಮ್ಮ ಬಸ್ಸುಗಳು ಅದಾಗಲೇ ಈ ಸ್ಥಳವನ್ನು ತಲುಪಿದ್ದವು. ಈ ದಿನ ತುಂಬಾ ಜೋರಾದ ಬಿಸಿಲು ಇದ್ದ ಕಾರಣ ಎಲ್ಲರೂ ಬಸವಳಿದಿದ್ದೆವು. ಆದ್ದರಿಂದ ಅಲ್ಲಿ ಮಾರುತ್ತಿದ್ದ 'ಜಲ್ ಜೀರಾ' ಇತ್ಯಾದಿ ತಂಪು ಪಾನೀಯಗಳನ್ನು ಸೇವಿಸಿ ಬಸ್ ಏರಿದೆವು. ಒಂದರ್ಧ ಗಂಟೆಯಲ್ಲಿ ಬಸ್ಸು ಮಧ್ಯಾಹ್ನದ ಊಟಕ್ಕೆಂದು ನಿಂತಿತು.

       ನಮ್ಮ ಊಟದ ಟೀಮ್ ನಿತ್ಯದ ಅಡುಗೆಯ ಜೊತೆ ಈ ದಿನ ವಿಶೇಷವಾಗಿ ಬಿಸಿಬೇಳೆ ಬಾತ್ ಮತ್ತು ಜಾಮೂನ್ ತಯಾರಿಸಿದ್ದರು. ಇಂದು ನಮ್ಮ ಸಹಯಾತ್ರಿಗಳಾದ ಸುಮಾ - ಪ್ರವೀಣ್ ದಂಪತಿ ಮತ್ತು ಮಕ್ಕಳು ಹಾಗೂ  ಇನ್ನೊಬ್ಬ ಸಹಯಾತ್ರಿ ಸಂತೋಷ್ ಎಲ್ಲರಿಗೂ ಬಡಿಸಿದರು. ಎಲ್ಲರಲ್ಲೂ ತೀರ್ಥಯಾತ್ರೆ ಸುಸೂತ್ರವಾಗಿ ಸಂಪನ್ನವಾದ ಕುರಿತು ನಿರಾಳತೆ ಇತ್ತು. ಊಟ ಎಂದಿನಂತೆ ಉತ್ತಮವಾಗಿತ್ತು. ನಮ್ಮ ಯಾತ್ರೆಯ ಅಡುಗೆ ಟೀಂನವರು ಬೆಂಗಳೂರಿನವರು. ಅವರು ಯಾತ್ರೆಯ ಉದ್ದಕ್ಕೂ ಬೇರೆ ಬೇರೆ ದಿನಗಳಲ್ಲಿ ವಿಭಿನ್ನವಾದ ವ್ಯಂಜನಗಳನ್ನು ತಯಾರಿಸಿ, ಯಾತ್ರಿಗಳಿಗೆ ಊಟದಲ್ಲಿ ಏಕತಾನತೆ ಬರದಂತೆ ನಿಗಾ ವಹಿಸಿದ್ದರು. ಹಾಗಾಗಿ ಪ್ರತಿ ಊಟಕ್ಕೂ ಮುಂಚೆ "ಈ ದಿನ ಏನಿರಬಹುದು" ಎಂಬ ಕುತೂಹಲ ನಮ್ಮಲ್ಲಿರುತ್ತಿತ್ತು. ಇದು ನಿಜಕ್ಕೂ ತುಂಬಾ ಸವಾಲಿನ ಕೆಲಸ. ಅದನ್ನು ಅವರು ಯಶಸ್ವಿಯಾಗಿ ನಿರ್ವಹಿಸಿ ತೋರಿಸಿದ್ದಾರೆ. ಯಾತ್ರೆಯುದ್ದಕ್ಕೂ ಯಾರಿಗೂ ಸಹ ಆರೋಗ್ಯದ ಸಮಸ್ಯೆ ಕಾಡಲಿಲ್ಲ. ಅದರ ಶ್ರೇಯಸ್ಸು ಈ ಅಡಿಗೆ ಟೀಮ್ ನವರಿಗೆ ಸಲ್ಲಬೇಕು.

       ಊಟದ ನಂತರ ನಮ್ಮ ಪಯಣ ಗಂಗಾ ನದಿಗುಂಟ ಸಾಗಿತು. ದಾರಿಯಲ್ಲಿ ಋಷಿಕೇಶದಲ್ಲಿ ನಮ್ಮ ಬಸ್ಸಿನಲ್ಲಿಯೇ ಇದ್ದ, ನಮ್ಮ ಸಹಯಾತ್ರಿಗಳಾಗಿದ್ದ ಅತ್ಯುತ್ತಮ, ಉತ್ಸಾಹೀ, ದೈವಿಕ ದಂಪತಿಗಳಾದ ಭಾರದ್ವಾಜ ಮತ್ತು ಅನುರಾಧ ಅವರು (ತಮ್ಮ ವೈಯಕ್ತಿಕ ಕಾರಣಗಳಿಗಾಗಿ) ಇಳಿದು ಡೆಹ್ರಾಡೂನ್ ಮೂಲಕ ಬರುವುದಾಗಿ ಹೇಳಿ ಹೋದರು. ಯಾತ್ರೆಯುದ್ದಕ್ಕೂ ಅವರ ಉತ್ಸಾಹ ಮತ್ತು ತೊಡಗಿಸಿಕೊಳ್ಳುವಿಕೆ ಚೇತೋಹಾರಿಯಾಗಿತ್ತು.

      ಋಷಿಕೇಶದ ದಾರಿಯಲ್ಲಿ ಉದ್ದಕ್ಕೂ ನದಿಯಲ್ಲಿ ರಾಫ್ಟಿಂಗ್ ಮಾಡುವ ಉತ್ಸಾಹಿ ಯುವಕ-ಯುವತಿಯರ ಕಾರುಗಳು ತೆರೆಪಿಲ್ಲದೆ ಸಾಗುತ್ತಿದ್ದವು. ಕೆಲವು ದೊಡ್ಡ ಪಿಕಪ್ ವಾಹನಗಳ ಮೇಲೆ ರಾಫ್ಟ್ ಅನ್ನು ಏರಿಸಿಕೊಂಡು ಬರುತ್ತಿದ್ದ ವಾಹನಗಳಿದ್ದವು. ಇಲ್ಲಿ ಗಂಗಾ ನದಿಯಲ್ಲಿ ರಾಫ್ಟಿಂಗ್ ಏರ್ಪಡಿಸುವ ಟ್ರಾವೆಲ್ ಏಜೆನ್ಸಿಗಳಿವೆ. ಪ್ರತೀ ರಾಫ್ಟ್ ನಲ್ಲೂ ಪರಿಣಿತರೊಬ್ಬರಿರುತ್ತಾರೆ. ಅವರ ಮಾರ್ಗದರ್ಶನದಲ್ಲಿ, ವೇಗವಾಗಿ ಹರಿಯುವ ಗಂಗಾ ನದಿಯಲ್ಲಿ ರಾಫ್ಟಿಂಗ್ ಮಾಡುವುದು ಅತ್ಯಂತ ರೋಮಾಂಚಕ ಅನುಭವ. ಇದಕ್ಕಾಗಿಯೇ ಸಹಸ್ರಾರು ಸಂಖ್ಯೆಯಲ್ಲಿ ಯುವಜನರು ಬರುತ್ತಾರೆ. ಅವರಿಗಿದು ತೀರ್ಥಯಾತ್ರೆಯಲ್ಲ, ಸಾಹಸಯಾತ್ರೆ!!.

ಇಂದು ವಾರದ ಮೊದಲ ದಿನವಾದರೂ ಸಹ ನಮ್ಮ ವಾಹನಕ್ಕೆ ಸರಾಗವಾಗಿ ಸಾಗಲು ಆಗದಷ್ಟು ವಾಹನ ದಟ್ಟಣೆ ಇತ್ತು. ಇನ್ನು ವಾರಾಂತ್ಯದಲ್ಲಿ ಬಂದರೆ ಇಲ್ಲಿ ಇರಬಹುದಾದ ದಟ್ಟಣೆ ಕೇವಲ ಊಹಿಸಿಕೊಳ್ಳಬೇಕು, ಅಷ್ಟೇ!

       ಚಿಕ್ಕ ಪುಟ್ಟ ಟ್ರಾಫಿಕ್ ಜಾಮ್ ಗಳನ್ನು ನಿವಾರಿಸಿಕೊಳ್ಳುತ್ತಾ ಋಷಿಕೇಶವನ್ನು ದಾಟಿ ಮುಂದೆ ಸಾಗಿದೆವು. ಸಾಯಂಕಾಲ 4-30 ರ ಸುಮಾರಿಗೆ ಹರಿದ್ವಾರ ತಲುಪಿದೆವು. ಅಲ್ಲಿ ಪಟ್ಟಣದ ನಡುವೆ ಸಾಗಿ, ರೈಲ್ವೆ ಸ್ಟೇಷನ್ ಗೆ ಹೊಂದಿಕೊಂಡಂತೆ ಇದ್ದ ಹೋಟೆಲ್ ಲಿ ರಾಯ್ ನಲ್ಲಿ(Le Roi) ನಮ್ಮ ವಾಸ್ತವ್ಯಕ್ಕೆ ಏರ್ಪಾಡು ಮಾಡಿದ್ದರು. ಹೋಟೆಲ್ ತುಂಬಾ ಪ್ರಶಸ್ತವಾಗಿತ್ತು. ನೋಡಿದರೆ ಅದು ರೈಲ್ವೆ ಆಸ್ತಿ ಎನಿಸುವಂತಿತ್ತು. ನಾನು ಅಲ್ಲಿಯ ಮ್ಯಾನೇಜರ್ ನನ್ನು ಈ ಕುರಿತು ಪ್ರಶ್ನಿಸಿದೆ. ಅವನು, 'ಈ ಜಾಗ ರೈಲ್ವೆಯದು. ಆದರೆ ದೀರ್ಘ ಕಾಲದ ಲೀಸ್ ಮೇಲೆ ಪಡೆದು, ಹೋಟೆಲ್ ನಿರ್ಮಿಸಿ ನಡೆಸಲಾಗುತ್ತಿದೆ' ಎಂದರು.

       "ತೀರ್ಥಯಾತ್ರಾ ಟೂರ್ಸ್ ಅಂಡ್ ಟ್ರಾವೆಲ್ಸ್" ನವರು ಕರಾರು ಮಾಡಿಕೊಂಡ ಚಾರ್ ಧಾಮ ಯಾತ್ರೆಯ ವೀಕ್ಷಣೆಗಳೆಲ್ಲ ಈಗ ಮುಗಿದಂತಾಯಿತು. ವೆಂಕಟೇಶ್ ಪ್ರಭುರವರು, ಸಾಯಂಕಾಲ ಹರಿದ್ವಾರದ ಪೇಟೆಯಲ್ಲಿ ಸುತ್ತಾಡಿ ಇಲ್ಲಿಯ ಪ್ರಸಿದ್ಧ ಸ್ಥಳೀಯ ತಿನಿಸುಗಳನ್ನು ಹಾಗೂ ಮಿಠಾಯಿಗಳನ್ನು ಸವಿಯಬಯಸುವವರಿಗೆ ಆ ಎಲ್ಲ ಮಾಹಿತಿಗಳನ್ನು ಅದಾಗಲೇ ವಾಟ್ಸಪ್ ಗ್ರೂಪಿನಲ್ಲಿ ಹಂಚಿಕೊಂಡಿದ್ದರು. ನಾವು ಸಹ ಅತ್ಯಂತ ನಿರಾಳವಾಗಿ ರೂಮಿನಲ್ಲಿ ಲಗೇಜ್ ಇಟ್ಟು ಹರಿದ್ವಾರದ ರಸ್ತೆಗಳಲ್ಲಿ ಅಡ್ಡಾಡಿದೆವು. ಅಲ್ಲಿಯೇ ಚಹಾ ಸೇವಿಸಿದೆವು. ಆದರೆ ಅತಿಯಾದ ಜನದಟ್ಟಣೆ ಹಾಗೂ ಅಸಮರ್ಪಕ ಚರಂಡಿ ವ್ಯವಸ್ಥೆಯ ಕಾರಣ ಎಲ್ಲಾ ಕಡೆ ಅನಾರೋಗ್ಯಕರ ಕೊಳಕೇ ರಾಚುತ್ತಿತ್ತು. ಆದ್ದರಿಂದ ರಸ್ತೆಯ ಪಕ್ಕದ ಚಾಟ್ಸ್ ಸೇವಿಸಲು ಧೈರ್ಯ ಸಾಕಾಗಲಿಲ್ಲ.

       ನಾಳೆ ಮುಂಜಾನೆ ಋಷಿಕೇಶದಲ್ಲಿರುವ ಪ್ರೇಕ್ಷಣೀಯ ಪುಣ್ಯಧಾಮಗಳಾದ ಮಾನಸಾದೇವಿ ಮಂದಿರ, ಚಂಡಿದೇವಿ ಮಂದಿರ, ಬಿಲ್ಕೇಶ್ವರ ಮಹಾದೇವ ಮಂದಿರ, ಸುರೇಶ್ವರಿ ದೇವಿ ಮಂದಿರ, ನರಸಿಂಹ ಮಂದಿರ, ಹರ್ ಕೀ ಪೌರಿ ಮತ್ತು ಖನಕಾಲ್ ಗಳನ್ನು ಆಸಕ್ತ ಯಾತ್ರಿಕರು ತಮ್ಮ ಸ್ವಂತ ವ್ಯವಸ್ಥೆಯ ಮೂಲಕ ನೋಡಬಹುದು ಎಂದು ವೆಂಕಟೇಶ್ ಪ್ರಭು ತಿಳಿಸಿದರು. ನಮ್ಮ ಯಾತ್ರಿಗಳ ಪೈಕಿ ಕೆಲವರು ಅದಕ್ಕಾಗಿ ವ್ಯವಸ್ಥೆ ಸಹ ಮಾಡಿಕೊಂಡಿದ್ದರು. ಆದರೆ ನಾವು 9 ಜನವೂ ಅದಕ್ಕೆ ಒಲವು ತೋರಿಸಲಿಲ್ಲ. (ನಾನು ಈ ಹಿಂದೆ ಬಂದಾಗ, ಈ ಋಷಿಕೇಶ ಇನ್ನೂ ಚಿಕ್ಕ ಪಟ್ಟಣಕ್ಕಿಂತ ಸಣ್ಣದಿದ್ದಾಗ ಅವನ್ನೆಲ್ಲ ನೋಡಿದ್ದೇನೆ. ಆದರೆ ನಿಖರವಾದ ವಿವರಣಾತ್ಮಕ ನೆನಪಿಲ್ಲ.)

       ನಾವು ತಿರುಗಿ ಎಂಟು ಗಂಟೆಯ ಸುಮಾರಿಗೆ ಹೋಟೆಲಿಗೆ ಬಂದು ಇಲ್ಲಿಯೇ ಊಟ ಮಾಡಿದೆವು. ಹೊರಗಡೆ ಬೀದಿ ಬದಿಯ ತಿನಿಸು ಸವಿದ ಕೆಲವರು ಊಟ ಮಾಡಲಿಲ್ಲ. ಯಾತ್ರೆ ಸಂಪನ್ನವಾದ ಸಂತಸದಲ್ಲಿ ನೆನಪುಗಳನ್ನು ಚರ್ಚಿಸುತ್ತಾ ಸ್ವಲ್ಪ ಸಮಯ ಕಳೆದೆವು. ನಂತರ 11-00 ಗಂಟೆ ಸುಮಾರಿಗೆ ನಿದ್ರೆಗೆ ಜಾರಿದೆವು.

                          ರಘುನಾಥ ಮಂದಿರದ ಪಾರ್ಶ್ವನೋಟ                               

ದೇವಪ್ರಯಾಗ -ನಮ್ಮ ಹಿಂದೆ ಭಾಗೀರಥಿ (ನೀಲಿ),ಎಡಗಡೆ ಅಲಕನಂದಾ (ಬೂದಿ ಬಣ್ಣ)

ವೆಂಕಟೇಶ್ ದಾಸ್ ಮತ್ತು ಖುಷ್ ಜೊತೆಯಲ್ಲಿ 



                                                                                                      (ಸಶೇಷ......)


ಬುಧವಾರ, ಸೆಪ್ಟೆಂಬರ್ 25, 2024

ಚಾರ್ ಧಾಮ ಯಾತ್ರೆ -ಭಾಗ 13

        

ಚಾರ್ ಧಾಮ ಯಾತ್ರೆ -ಭಾಗ 13

ಮಾನಾ ಮತ್ತು ಪಾಂಡುಕೀಶ್ವರ

ದಿನಾಂಕ:-19/05/2024 

       ಸೂರ್ಯೋದಯವನ್ನು ಸವಿಯುವ ಆಸೆಯಿಂದ ಬೇಗನೆ ಎದ್ದೆವಾದರೂ ನೀಲಕಂಠ ಪರ್ವತಾಗ್ರವು ಮೋಡಗಳಿಂದ ಮುಚ್ಚಿದ್ದು ಮೋಡಗಳು ಸರಿಯಲೇ ಇಲ್ಲ. ಬೆಳಿಗ್ಗೆ 5-00 ರಿಂದ 6-00 ಗಂಟೆಯವರೆಗೆ ಕಾದರೂ ಏನೂ ಬದಲಾಗಲಿಲ್ಲ. ನಿರಾಶರಾಗಿ ಅಲ್ಲೇ ಇದ್ದ ಚಾದಂಗಡಿಯಲ್ಲಿ ಚಹಾ ಗುಟುಕರಿಸಿ ರೂಮಿನ ಕಡೆ ಸಾಗಿದೆವು. ತಕ್ಷಣ ಸ್ನಾನಾದಿಗಳನ್ನು ಮುಗಿಸಿ ಬೆಳಗಿನ ತಿಂಡಿ ತಿನ್ನಲು ಬಂದೆವು. ನಿನ್ನೆಯೇ ಬದರೀನಾರಾಯಣನ ದರ್ಶನ ಮುಗಿಸಿದ್ದು ಒಳ್ಳೆಯದೇ ಆಯಿತು. ಈ ದಿನ ಏಕಾದಶಿ ಇದ್ದ ಪ್ರಯುಕ್ತ ಜನಜಂಗುಳಿ ತುಂಬಾ ಇತ್ತು. ವಿಷ್ಣುಗಂಗಾ ನದಿಯ ದಂಡೆಯಗುಂಟ ಸರತಿಯ ಸಾಲು ಅದಾಗಲೇ 2 - 3 ಕಿಲೋಮೀಟರ ದೂರ ಸಾಗಿತ್ತು. ನಾವಿಬ್ಬರೂ ಇಲ್ಲಿನ ಮಾರ್ಕೆಟ್ಟಿಗೆ ಹೋಗಿ ಅಡ್ಡಾಡಿದೆವು. ಮೊಮ್ಮಗಳು ವೇದಾಳ ಸಲುವಾಗಿ ಉಣ್ಣೆಯ ಫ್ರಾಕ್ ಹಾಗೂ ಸ್ವೆಟರ್ ತೆಗೆದುಕೊಂಡೆವು. ಇಡೀ ಯಾತ್ರೆಯಲ್ಲಿ ನಮ್ಮ ಖರೀದಿ (ಶಾಪಿಂಗ್) ಎಂದರೆ ಇದು ಮಾತ್ರ.

         ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನವೇ ಬ್ರಹ್ಮಕಪಾಲದಲ್ಲಿ ಶ್ರಾದ್ಧ ವಿಧಿಗಳನ್ನು ನೆರವೇರಿಸಲು ಕೆಲವರು ಹೋಗಿದ್ದರು. ನಮ್ಮ ಆದಿ ಸುಬ್ರಹ್ಮಣ್ಯ ಮತ್ತು ರವಿಕುಮಾರ್ ಸಹ ಹೋಗಿದ್ದರು. ಅವರೆಲ್ಲ ಬರುವಷ್ಟರಲ್ಲಿ ಬೆಳಿಗ್ಗೆ 10.30 ಆಯಿತು. ಅವರೆಲ್ಲ ಬೆಳಗಿನ ತಿಂಡಿ ತಿಂದ ನಂತರ 11-00 ಗಂಟೆಗೆ ನಮ್ಮ ಬಸ್ ಹೊರಟಿತು. ಮಾನಾ ಗ್ರಾಮವನ್ನು ದರ್ಶಿಸಿ ನಾವು ತಿರುಗಿ ಹೋಗುವುದಿತ್ತು. ಆದರೆ, ಬದರಿಯಿಂದ ಮಾನಾಗೆ ಕೇವಲ ಮೂರು ನಾಲ್ಕು ಕಿಲೋಮೀಟರ್ ದೂರ ಮಾತ್ರವೇ ಇದ್ದರೂ, ವಾಹನಗಳ ಸಂಖ್ಯೆ ತೀರಾ ಹೆಚ್ಚಿದ್ದುದರಿಂದ ಅಲ್ಲಿಗೆ ತಲುಪಲು ಸಾಧ್ಯವಾಗುತ್ತಿರಲಿಲ್ಲ. ಅದನ್ನು ಗಮನಿಸಿ ವೆಂಕಟೇಶ್ ಪ್ರಭು ಅವರು ಮಾನಾ ಭೆಟ್ಟಿಯನ್ನು ರದ್ದು ಮಾಡಿ, ವಾಪಸ್ ಹೋಗುವುದಾಗಿ ನಿರ್ಣಯಿಸಿ, ಅದರಂತೆ ಅಡಿಗೆ ವ್ಯಾನ್ ಅನ್ನು ಕಳಿಸಿದ್ದರು. ಆ ವ್ಯಾನ್ ಸಹ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿ ಬಿದ್ದಿತ್ತು. ಮಾನಾ ಭೇಟಿಯನ್ನು ರದ್ದು ಮಾಡಿದ್ದು ನಮ್ಮ ಯಾತ್ರಿಗಳನ್ನು ಕೆರಳಿಸಿತು. ಈಗಾಗಲೇ ಯಮುನೋತ್ರಿ - ಗಂಗೋತ್ರಿ ಭೆಟ್ಟಿ ರದ್ದಾಗಿದ್ದು, ಈ ಮಾನಾ ಭೇಟಿಯನ್ನು, ಎಷ್ಟು ಹೊತ್ತು ಕಾದರೂ ಸರಿ, ರದ್ದುಗೊಳಿಸಲೇಬಾರದೆಂದು ವೆಂಕಟೇಶ್ ಪ್ರಭು ಅವರ ಮೇಲೆ ಒತ್ತಡ ತಂದರು. ಅವರು ಮುಂದಿನ ಪ್ರಯಾಣವನ್ನು ಗಮನದಲ್ಲಿರಿಸಿಕೊಂಡಿದ್ದ ಕಾರಣ ಈ ಒತ್ತಡದಿಂದ ತುಂಬಾ ಕಸಿವಿಸಿಗೊಂಡರು. ಮುನಿಸಿಕೊಂಡರು. ಆದರೆ ಅಂತಿಮವಾಗಿ ಒಪ್ಪಿಕೊಂಡರು. ಬಸ್ಸನ್ನು ಅಲ್ಲೇ ತಿರುಗಿಸಿ ಮತ್ತೆ ಮಾನಾ ಕಡೆ ಹೊರಟೆವು. ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿ ಬಿದ್ದಿದ್ದ ಊಟದ ವ್ಯಾನ್ ಗೆ ಸಹ ಮಾನಾ ಕಡೆ ತಿರುಗಿ ಬರಲು ಸೂಚಿಸಿದರು.

         ರಸ್ತೆಯಲ್ಲಿ ತುಂಬಾ ರಶ್ ಇತ್ತು. ಆದರೂ ದೂರ ಕಡಿಮೆಯಿದ್ದ ಕಾರಣ 12-00 ಗಂಟೆಯ ಸುಮಾರಿಗೆ ಮಾನಾ ಗ್ರಾಮದ ಸ್ವಾಗತ ಕಮಾನಿನ ಎದುರು ವಾಹನವನ್ನು ನಿಲ್ಲಿಸಲಾಯಿತು. ಇಲ್ಲಿಂದ ಮುಂದೆ ಕಾಲ್ನಡಿಗೆಯ ಪ್ರಯಾಣ.

       ನನಗೆ ಈ ದಿನ ಜ್ವರದ ಲಕ್ಷಣ - ಚಳಿ, ತಲೆನೋವು - ಇದ್ದ ಕಾರಣ ನಾನು ನಡೆದುಕೊಂಡು ಮಾನಾ ಕಡೆ ಹೋಗಲು ಹಿಂದೇಟು ಹಾಕಿ ಬಸ್ಸಿನಲ್ಲೇ ಉಳಿದೆನು. ನನ್ನ ಪತ್ನಿ ಸಹ ನನ್ನ ಜೊತೆ ಉಳಿದಳು. ಮತ್ತೂ ಕೆಲವರು ಸಹ ಉಳಿದರು.

         ಮಾನಾ ಗ್ರಾಮ ಭಾರತ ಟಿಬೆಟ್ ಗಡಿಯ ಮೊದಲ ಗ್ರಾಮ ಅಥವಾ ಭಾರತ ದೇಶದ ಕೊನೆಯ ಗ್ರಾಮ. ಈ ಊರಿನಲ್ಲಿ ವ್ಯಾಸ ಗುಹೆ, ಗಣೇಶ ಗುಹೆಗಳಿವೆ. ಇಲ್ಲಿಯೇ ಮಹರ್ಷಿ ವ್ಯಾಸರು ಮಹಾಭಾರತವನ್ನು ಹೇಳುತ್ತಾ ಹೋದಂತೆ ಗಣಪತಿಯು ಬರೆದುಕೊಳ್ಳುತ್ತಿದ್ದನಂತೆ. ಹಾಗಾಗಿ ಈ ಊರಿಗೆ ಪೌರಾಣಿಕ ಮಹತ್ವವೂ ಇದೆ. ಪ್ರಾಚೀನ ಕಾಲದಲ್ಲಿ ಇದನ್ನು "ವ್ಯಾಸಪುರಿ" ಎನ್ನುತ್ತಿದ್ದರಂತೆ. ಇನ್ನೂ ಕೆಲವು ಐತಿಹ್ಯಗಳ ಪ್ರಕಾರ ಇದು ಕುಬೇರನ ಅಲಕಾಪುರಿ ಪಟ್ಟಣವಾಗಿತ್ತಂತೆ. (ಅಲಕನಂದಾ ನದಿಯ ಮೂಲ ಸ್ಥಾನದಲ್ಲಿ) ಇಲ್ಲಿ ಸರಸ್ವತೀ ನದಿಯ ಉಗಮವನ್ನು ನೋಡಬಹುದು. ಉಗಮ ಸ್ಥಾನದಿಂದ ಸುಮಾರು ಒಂದು ಕಿಲೋಮೀಟರ್ ದೂರ ಪ್ರಕಟವಾಗಿ ಹರಿಯುವ ಸರಸ್ವತೀ ನದಿ ನಂತರ ಭೂತಳದಲ್ಲಿ ಹರಿಯುತ್ತದೆ. ಇಲ್ಲಿ ಸರಸ್ವತೀ ನದಿಗೆ ಅಡ್ಡಲಾಗಿದ್ದ ಬೃಹತ್ ಬಂಡೆಯನ್ನು "ಭೀಮ್ ಪೂಲ್" ಎನ್ನುತ್ತಾರೆ. ಮಾನಾ ಗ್ರಾಮದ ಮಾರುಕಟ್ಟೆಯಲ್ಲಿ ಉಣ್ಣೆಯ ಬಟ್ಟೆಗಳು ವ್ಯಾಪಕವಾಗಿ ಮಾರಾಟವಾಗುತ್ತವೆ.

       ಮಾನಾ ಗ್ರಾಮವನ್ನು ನೋಡಲು ಹೋದವರು ತುಂಬಾ ಖುಷಿಯಿಂದ ವಾಪಸ್ ಬಂದರು. ಅಷ್ಟರಲ್ಲಿ ಊಟದ ವ್ಯಾನ್ ಕೂಡ ಬಂದಿತ್ತು. ಅಲ್ಲಿಯೇ ಊಟ ಮುಗಿಸಿ ವಾಪಸ್ ಹೊರಟೆವು.

        ವಾಪಸ್ ಬರುವಾಗ, ಬದರಿಯಿಂದ ಸ್ವಲ್ಪವೇ ದೂರದಲ್ಲಿ, ರಸ್ತೆಯ ಎಡಗಡೆಗೆ ಒಂದು ಗುಹಾ ದೇವಾಲಯವಿದೆ. ಇದನ್ನು 'ಏಕಾದಶಿ ಗುಹೆ' ಎನ್ನುತ್ತಾರೆ. ಭಗವಾನ್ ವಿಷ್ಣುವು ಎಲ್ಲಾ ದೇವತೆಗಳಿಗೂ ಕಂಟಕಪ್ರಾಯನಾಗಿದ್ದ "ಮುರ" ಎಂಬ ರಾಕ್ಷಸನ ಜೊತೆ ಹಲವು ವರ್ಷಗಳ ಕಾಲ ನಿರಂತರವಾಗಿ ಯುದ್ಧ ಮಾಡಿ, ದಣಿದು, ಸ್ವಲ್ಪ ವಿಶ್ರಮಿಸಿಕೊಳ್ಳಲು ಈ ಗುಹೆಯಲ್ಲಿ ಮಲಗಿದ್ದನಂತೆ. ಇದೇ ಸಮಯವನ್ನು ಸಾಧಿಸಿ ಅವನನ್ನು ಮುಗಿಸಲು 'ಮುರ' ಬಂದನಂತೆ. ಆಗ ವಿಷ್ಣುವಿನ ದೇಹದಿಂದ ಅಪೂರ್ವ ಚೆಲುವೆಯೊಬ್ಬಳು ಉದ್ಭವಿಸಿ ಮುರನೊಂದಿಗೆ ಹೋರಾಡಿದಳಂತೆ ಮತ್ತು ಅವನ ಎಲ್ಲಾ ಶಸ್ತ್ರಾಸ್ತ್ರಗಳನ್ನು ನಿಷ್ಕ್ರಿಯಗೊಳಿಸಿ ಅವನನ್ನು ವಧಿಸಿದಳಂತೆ. ನಿದ್ದೆ ತಿಳಿದೆದ್ದ ವಿಷ್ಣುವು ಎದುರಿನಲ್ಲಿ ಸತ್ತು ಬಿದ್ದಿರುವ ಮುರನನ್ನು ನೋಡಿ ಆಶ್ಚರ್ಯಪಟ್ಟನಂತೆ. ಆಗ ಅವನೆದುರು ಕಾಣಿಸಿಕೊಂಡ ಆ ಸ್ತ್ರೀ, ತಾನು ಮುರನನ್ನು ಹತ್ಯೆ ಮಾಡಿರುವುದಾಗಿ ನಿವೇದಿಸಿಕೊಂಡಳಂತೆ. ಅದು ಕೃಷ್ಣಪಕ್ಷದ ಏಕಾದಶಿ ದಿನವಾಗಿತ್ತು. ಭಗವಂತ ಅವಳನ್ನು "ಏಕಾದಶೀ" ಎಂದೇ ಹೆಸರಿಸಿದ. 'ಯಾರು ಏಕಾದಶಿ ದಿನದಂದು ಉಪವಾಸವನ್ನು ಆಚರಿಸಿ, ದೇವತಾರಾಧನೆ ಮಾಡುತ್ತಾರೋ ಅವರಿಗೆ ಮೋಕ್ಷ ಸಿಗುವಂತೆ' ಅನುಗ್ರಹಿಸಬೇಕೆಂದು ಅವಳು ಕೋರಿಕೊಂಡ ವರಕ್ಕೆ "ತಥಾಸ್ತು" ಎಂದನಂತೆ. ಅಂದಿನಿಂದ ಏಕಾದಶಿ ಉಪವಾಸ ವ್ರತಾಚರಣೆ ಆರಂಭವಾಯಿತಂತೆ.

      ಧರ್ಮಕರ್ಮ ಸಂಯೋಗದಿಂದ ಈ ಏಕಾದಶಿ ಗುಹೆಗೆ ನಾವು ಭೆಟ್ಟಿ ನೀಡಿದ ದಿನ ಕೂಡ ಏಕಾದಶಿ ದಿನವೇ ಆಗಿತ್ತು! ಅಲ್ಲಿ ಸ್ವಾಮೀಜಿಯೊಬ್ಬರು ಪ್ರವಚನ ಮಾಡುತ್ತಿದ್ದರು. ನಾವು ಇಲ್ಲಿ ನಮಸ್ಕರಿಸಿ ಮುಂದೆ ಪ್ರಯಾಣಿಸಿದೆವು.

        ಇಲ್ಲಿಂದ ಮುಂದೆ ನಮ್ಮ ಬಸ್ ಪಾಂಡುಕೀಶ್ವರದಲ್ಲಿ ನಿಂತಿತು. ಪಾಂಡುಕೀಶ್ವರ ಬದರಿನಾಥದಿಂದ 16 -18 ಕಿಲೋಮೀಟರ್ ಕೆಳಭಾಗದಲ್ಲಿ, ಹೆದ್ದಾರಿಗೆ ಹೊಂದಿಕೊಂಡಂತೇ ಇದ್ದು, ಅಲಕನಂದಾ (ವಿಷ್ಣುಗಂಗಾ )ನದಿಯ ದಡದಲ್ಲಿದೆ. ಇದು ಮಹಾಭಾರತದೊಂದಿಗೆ ನಿಕಟವಾಗಿ ಬೆಸೆದುಕೊಂಡ ಸ್ಥಳ. ಇಲ್ಲಿಯೇ ಮುನಿಶಾಪಗ್ರಸ್ತನಾದ ಕುರು ದೊರೆ ಪಾಂಡುವು, ತನ್ನ ಇಬ್ಬರು ಪತ್ನಿಯರಾದ ಕುಂತಿ - ಮಾದ್ರಿಯರ ಜೊತೆ ವಾನಪ್ರಸ್ಥದಲ್ಲಿದ್ದನಂತೆ. ಇಲ್ಲಿಯೇ ಕುಂತಿ-ಮಾದ್ರಿಯರಿಗೆ, ಪಾಂಡುವಿನ ಅನುಜ್ಞೆಯಂತೆ, ವಿವಿಧ ದೇವತೆಗಳನ್ನು ಆಹ್ವಾನಿಸುವ ಮೂಲಕ, ಪಾಂಡವರೈವರ ಜನ್ಮವಾಯಿತಂತೆ. ನಂತರ ಅದೊಂದು ದುರ್ದಿನದಂದು, ನದಿಯಲ್ಲಿ ಸ್ನಾನ ಮಾಡುತ್ತಿದ್ದ ಪರಮ ರೂಪವತಿಯಾದ ಮಾದ್ರಿಯ ಸೌಂದರ್ಯಕ್ಕೆ ಮರುಳಾಗಿ, ಮೋಹಪರವಶನಾಗಿ, ಮಾದ್ರಿಯು ಬೇಡ ಬೇಡವೆಂದರೂ ಕೇಳದೆ ಪಾಂಡುವು ಅವಳನ್ನು ಸಂಗಮಿಸಲು, ಅವನ ಮರಣವಾಯಿತಂತೆ. ತನ್ನ ಕಾರಣದಿಂದಲೇ ದೊರೆಯು ತೀರಿಕೊಂಡಿದ್ದರಿಂದ, ಎಲ್ಲಾ ಐದು ಮಕ್ಕಳ ಲಾಲನೆ, ಪಾಲನೆಯ ಜವಾಬ್ದಾರಿಯನ್ನು ಕುಂತಿಗೆ ವಹಿಸಿ ಮಾದ್ರಿಯೂ ಸಹ ಗಂಡನೊಂದಿಗೆ ಸಹಗಮನ ಮಾಡಿದಳಂತೆ. ಈ ಸ್ಥಳದಲ್ಲಿ ಈ ಮೂವರೂ ವಿಷ್ಣುವಿನ ಮಂದಿರವನ್ನು ನಿರ್ಮಿಸಿ ಯೋಗ ಧ್ಯಾನಗಳಲ್ಲಿ ನಿರತವಾದ್ದರಿಂದ ಇದನ್ನು "ಯೋಗಧ್ಯಾನ ಬದರಿ" ಎಂದೂ ಕರೆಯುತ್ತಾರೆ . ಪಂಚಬದ್ರಿಗಳಲ್ಲಿ ಇದೂ ಒಂದು. ಈ ಮಂದಿರದಲ್ಲಿ ಪಾಂಡು ದೊರೆಯಿಂದ ಸ್ಥಾಪಿತವಾದ, ಹಿತ್ತಾಳೆಯ, ಯೋಗಧ್ಯಾನ ಬದ್ರಿಯ ವಿಗ್ರಹವಿದೆ. ಕಾಲಾನಂತರದಲ್ಲಿ, ತಮ್ಮ ವನವಾಸದ ಅವಧಿಯಲ್ಲಿ, ಈ ಸ್ಥಳಕ್ಕೆ ಬಂದ ಪಾಂಡವರು, ಪಾಂಡು-ಮಾದ್ರಿಯರಿಗೆ ತರ್ಪಣ ನೀಡಿದ್ದಲ್ಲದೇ, ಇದೇ ಸ್ಥಳದಲ್ಲಿ ಅರ್ಜುನನು ಇಂದ್ರನನ್ನು ಕುರಿತು ತಪಸ್ಸನ್ನು ಸಹ ಮಾಡಿದನಂತೆ. ಇದೇ ಸ್ಥಳದಲ್ಲಿ ಪಾಂಡವರು, ಯೋಗಧ್ಯಾನ ಬದ್ರಿ ಮಂದಿರದ ಪಕ್ಕದಲ್ಲಿಯೇ, ಇನ್ನೊಂದು ಮಂದಿರವನ್ನು ವಾಸುದೇವನಿಗಾಗಿ ನಿರ್ಮಿಸಿದರಂತೆ. ಈ ವಾಸುದೇವ ಮಂದಿರದ ಒಳಗಡೆ ವಾಸುದೇವ ಲಕ್ಷ್ಮಿಯರಲ್ಲದೆ ಮಾದ್ರಿಯ ವಿಗ್ರಹವೂ ಇದೆ.

         ಈ ಮಂದಿರಗಳು ಕಾಲಕಾಲಕ್ಕೆ ನವೀಕರಿಸಲ್ಪಟ್ಟಿವೆ. ಈ ಮಂದಿರದಲ್ಲಿ ಪುರಾತನ ತಾಮ್ರ ಪತ್ರಗಳು ದೊರೆತಿದ್ದು, ಸಂಸ್ಕೃತ ಭಾಷೆಯಲ್ಲಿರುವ ಅವು ಐತಿಹಾಸಿಕ ದಾಖಲೆಗಳಾಗಿ ಸಂಗ್ರಹಿತವಾಗಿವೆ. ಈಗ ಈ ಮಂದಿರಗಳು ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿವೆ. ಕ್ರಿಸ್ತಶಕ 4 - 5ನೇ ಶತಮಾನದಲ್ಲಿ ಈ ಮಂದಿರಗಳ ಪುನರ್ ನಿರ್ಮಾಣ/ ನವೀಕರಣವಾಗಿದ್ದರ ಕುರಿತ ಮಾಹಿತಿ ಈ ತಾಮ್ರಪತ್ರಗಳಲ್ಲಿ ಇದೆಯಂತೆ.

     ಮಂದಿರವನ್ನು ನೋಡಲು ಹೆದ್ದಾರಿಯಿಂದ ಕೆಳಗೆ ಇಳಿದು ಬರಬೇಕು. ಹಾಗೆ ಬರುವಾಗ ಊರ ನಡುವಿನ ಸ್ವಲ್ಪ ಇಕ್ಕಟ್ಟಾದ ಹಾದಿಯಲ್ಲಿ ಸಾಗಬೇಕು. ಆದರೆ ಊರು ಸ್ವಚ್ಛ, ಸುಂದರವಾಗಿದೆ. ಈ ಮಂದಿರಗಳನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದಾರೆ. ಸುತ್ತಲೂ ಹಿಮಾಲಯ ಪರ್ವತ ಶ್ರೇಣಿಗಳು, ಕೆಳಭಾಗದಲ್ಲಿ ಜುಳುಜುಳನೆ ಹರಿಯುವ ವಿಷ್ಣು ಗಂಗಾ ನದಿ. ಯಾತ್ರಾ ಮಾರ್ಗದರ್ಶಿ ಸ್ಥಳ ಪುರಾಣಕ್ಕೆ ಸಂಬಂಧಪಟ್ಟ ಕಥೆಗಳನ್ನು ಹೇಳುತ್ತಿದ್ದರೆ ನಮ್ಮ ಮನಸ್ಸು ತಕ್ಷಣ ಆ ಕಾಲಕ್ಕೆ ಓಡುತ್ತದೆ. ಬಾಲ ಪಾಂಡವರು ಕಣ್ಣೆದುರು ಬರುತ್ತಾರೆ. ಕುಂತಿಯ ಪರಿಪಾಟಲು ಮನಸ್ಸನ್ನು ಹಾದು ಹೋಗುತ್ತದೆ.          ಎರಡೂ ಮಂದಿರಗಳೂ ಒಂದೇ ರೀತಿ ಕಂಡರೂ ಗೋಪುರದ (ಶಿಖರದ) ವಿನ್ಯಾಸದಲ್ಲಿ ವ್ಯತ್ಯಾಸವನ್ನು ಗಮನಿಸಬಹುದು. ಯೋಗಧ್ಯಾನ ಬದ್ರಿ ಮಂದಿರದ ದ್ವಾರದ ಮೆಟ್ಟಿಲುಗಳ ಎಡ ಭಾಗದಲ್ಲಿ ನಂದಿ ಸಹಿತನಾದ ಶಿವನ ಪುಟ್ಟ ಮಂದಿರವಿದೆ. ಇನ್ನೊಂದು ಬದಿಗೆ ಗಣೇಶನ ಪುಟ್ಟಮಂದಿರವಿದೆ. ಇಲ್ಲಿನ ಪರಿಸರ ಧ್ಯಾನಾಸಕ್ತರಿಗೆ ಅತ್ಯಂತ ಪ್ರಶಸ್ತವಾಗಿದೆ.

      ಇಲ್ಲಿ ಸಾವಧಾನವಾಗಿ ದರ್ಶನ ಮುಗಿಸಿ ಪ್ರದಕ್ಷಿಣೆ ಬಂದೆವು. ನಂತರ ಅದೇ ಮೆಟ್ಟಿಲುಗಳ ದಾರಿಯಲ್ಲಿ ಏರಿ ಹೆದ್ದಾರಿಗೆ ಬಂದೆವು. ಅಲ್ಲಿಂದ ಹೊರಟು, ತಿರುವುಗಳಿಂದ ಕೂಡಿದ ರಸ್ತೆಯಲ್ಲಿ ನಿಧಾನವಾಗಿ ಸಾಗುತ್ತಾ, ಸಾಯಂಕಾಲ 7:00 ರ ಸುಮಾರಿಗೆ ಜ್ಯೋತಿರ್ಮಠದಲ್ಲಿ ನಿಗದಿತ ಹೋಟೆಲ್ ತಲುಪಿ, ಚಹಾ ಸೇವಿಸಿಯೇ ನಮ್ಮ ನಮ್ಮ ರೂಮುಗಳಿಗೆ ಹೋಗಿ ಸೇರಿಕೊಂಡೆವು.

      ಜ್ಯೋತಿರ್ಮಠ ತಲುಪುವಲ್ಲಿ ವಿಳಂಬವಾದ ಕಾರಣ (ದಾರಿಯಲ್ಲಿನ ಟ್ರಾಫಿಕ್ ಜಾಮ್) ಇಲ್ಲಿ ಶಂಕರ್ ಗುಫಾ, ಶಂಕರ ಮಠ ಇತ್ಯಾದಿಗಳನ್ನು ನೋಡಲು ಆಗಲಿಲ್ಲ. ರಾತ್ರಿ 9.30 ಕ್ಕೆಲ್ಲ ಊಟದ ವ್ಯವಸ್ಥೆಯಾಗಿತ್ತು. ನಾಳೆ ಬೆಳಿಗ್ಗೆ ಬೇಗನೆ ಹೊರಟು ದಾರಿಯಲ್ಲಿ ದೇವ ಪ್ರಯಾಗ ಇತ್ಯಾದಿ ದರ್ಶಿಸಿ ಹರಿದ್ವಾರ ತಲುಪಬೇಕಿದೆ.

(ವಾಚಕರು ಕ್ಷಮಿಸಬೇಕು. ಬದರಿ ಕ್ಷೇತ್ರದ ಕುರಿತು ಮಾಹಿತಿ ನೀಡುವ ಒಂದು ಪುಟ್ಟ ವಿಡಿಯೋವನ್ನು ಶ್ರೀ ವೆಂಕಟೇಶ ಪ್ರಭು ಅವರು ನಮ್ಮ ವಾಟ್ಸಾಪ್ ಗ್ರೂಪ್ ನಲ್ಲಿ ಹಂಚಿಕೊಂಡಿದ್ದರು. ಅದನ್ನು ನಾನು ಭಾಗ -೧೨ ರಲ್ಲಿಯೇ ತಮ್ಮೊಡನೆ ಹಂಚಿಕೊಳ್ಳಬೇಕಿತ್ತು. ಮರೆತು ಹೋಗಿತ್ತು. ಈಗ ನೀಡುತ್ತಿದ್ದೇನೆ.)


ಮೋಡಗಳ ಹಿಂದೆ ಮರೆಯಾದ ನೀಲಕಂಠ ಪರ್ವತ 

ಮಾನಾ ಗ್ರಾಮದ ಸ್ವಾಗತ ಕಮಾನು 

ವಿಷ್ಣುಗಂಗಾಗೆ ಸೇರುವ ಒಂದು ಹಿಮನದಿ 

ಪಾಂಡುಕೀಶ್ವರ (ಯೋಗಧ್ಯಾನ ಬದ್ರಿ (ಎಡ)ಮತ್ತು ವಾಸುದೇವ ಮಂದಿರ )

                           (ಸಶೇಷ ......)


ಬುಧವಾರ, ಸೆಪ್ಟೆಂಬರ್ 11, 2024

ಚಾರ್ ಧಾಮ ಯಾತ್ರೆ -ಭಾಗ 11



ಚಾರ್ ಧಾಮ ಯಾತ್ರೆ -ಭಾಗ 11

ಜ್ಯೋತಿರ್ಮಠ ಮತ್ತು ವಿಷ್ಣು ಪ್ರಯಾಗ

ದಿನಾಂಕ:-18/05/2024

         ಒಂದು ತಾಸಿನ ನಂತರ ಅಲಾರಂ ಹೊಡೆಯುತ್ತಿದ್ದಂತೆ ಎಚ್ಚರವಾಯಿತು. ಎದ್ದು ಸ್ನಾನ ಶೌಚಾದಿಗಳನ್ನು ಮುಗಿಸಿ, ಬ್ಯಾಗ್ ತಯಾರು ಮಾಡಿ ಹೊರಗಿಟ್ಟಿದ್ದಾಯ್ತು. ಬೆಳಗಿನ 2-30ಕ್ಕೆ ಚಹಾ ಸೇವನೆ ಮಾಡಿ 2-45ಕ್ಕೆಲ್ಲ ನಮ್ಮ ವಾಹನಗಳು ಬದರಿನಾಥದ ಮಾರ್ಗ ಹಿಡಿದು ಹೊರಟೇಬಿಟ್ಟಿದ್ದವು. ಗುಪ್ತಕಾಶಿಗೆ ವಿದಾಯ ಹೇಳಿದಂತಾಯಿತು.

         ಮುಂಜಾವಿನ 8-00/ 8:30ರ ಸುಮಾರಿಗೆ 'ಗರುಡಗಂಗಾ' ಎಂಬಲ್ಲಿ ಬೆಳಗಿನ ಉಪಹಾರಕ್ಕಾಗಿ ನಮ್ಮ ಮಿನಿ ಬಸ್ ನಿಂತಿತು. ಇಲ್ಲಿ ಅಲಕನಂದಾ ನದಿಯ ಉಪನದಿಯೊಂದು ಇದೆ, - ಹೆಸರು 'ಗರುಡಗಂಗಾ'. ಈ ಹೊಳೆಗೆ ಅಡ್ಡವಾಗಿ ನಿರ್ಮಿಸಿದ ಸೇತುವೆಯನ್ನು ದಾಟುವ ಮೊದಲೇ ನಮ್ಮ ವಾಹನವನ್ನು, ತಿಂಡಿ ತಿನ್ನುವ ಸಲುವಾಗಿ, ಆಯ್ಕೆ ಮಾಡಿದ ಹೋಟೆಲಿನೆದುರು ನಿಲ್ಲಿಸಿದರು. ಅಲ್ಲಿ ಇಳಿದ ನಾವೆಲ್ಲ ಸೇತುವೆ ದಾಟಿ, ಹೊಳೆಯ ಆಚೆ ದಡದಲ್ಲಿದ್ದ ದೇವಸ್ಥಾನ ಸಮುಚ್ಚಯ ತಲುಪಿದೆವು. ಇಲ್ಲಿ ಒಂದಷ್ಟು ಮೆಟ್ಟಿಲುಗಳನ್ನು ಇಳಿದಾಗ ಗಂಗಾಮಾತಾ ಮಂದಿರ, ಪುಟ್ಟದಾದ ಶಿವನ ಮಂದಿರ ಹಾಗೂ ಗರುಡ ಮಂದಿರ ಇವೆ. ಇವುಗಳ ಪಕ್ಕದಲ್ಲಿ ಇರುವ ಮೆಟ್ಟಿಲುಗಳನ್ನು ಇಳಿದು ಹೋದರೆ ಗರುಡಗಂಗಾ ಹೊಳೆ. ಈ ಝರಿಯಲ್ಲಿನ ನೀರು ಸ್ಪಟಿಕ ಶುಭ್ರವಾಗಿತ್ತು. ನೀರಿನ ತಳ ಸ್ಪಷ್ಟವಾಗಿ ಕಾಣುತ್ತಿತ್ತು. ಈ ಸ್ಥಳದ ಐತಿಹ್ಯದ ಪ್ರಕಾರ ಇಲ್ಲಿ ಗರುಡನು ವಿಷ್ಣುವಿನ ವಾಹನವಾಗುವ ಆಕಾಂಕ್ಷೆಯಿಂದ 30,000 ವರ್ಷಗಳ ಕಾಲ ತಪಸ್ಸನ್ನು ಮಾಡಿದ್ದನು. ಸುಪ್ರೀತನಾದ ವಿಷ್ಣು, ಅಲ್ಲಿಂದ ಉತ್ತರಕ್ಕಿರುವ ಬದರಿ ಕ್ಷೇತ್ರಕ್ಕೆ ಹೋಗಿ ಅಲ್ಲಿ ಮೂರು ದಿನ ತಪಸ್ಸನ್ನಾಚರಿಸಲು ಸೂಚಿಸಿದನು. ಅದೇ ರೀತಿ ಮಾಡಿದ ಗರುಡನಿಗೆ ಬದರಿಯಲ್ಲಿ ದರ್ಶನವಿತ್ತು ಮೋಕ್ಷ ನೀಡಿದನಂತೆ, ವಿಷ್ಣು. ಬದರಿಯಲ್ಲಿ ಗರುಡ ತಪಸ್ಸು ಮಾಡಿದ 'ಗರುಡ ಶಿಲೆ' ಅಲಕನಂದಾ ನದಿಯ ಮಧ್ಯದಲ್ಲಿದೆ.

         ಈ ಗರುಡಗಂಗಾ ನದಿಯಲ್ಲಿ ಸಿಗುವ ಶಿಲೆಯನ್ನು ಜೊತೆಯಲ್ಲಿ ಇಟ್ಟುಕೊಂಡರೆ ಸರ್ಪಭಯ ಇರುವುದಿಲ್ಲ ಎಂಬ ಪ್ರತೀತಿ ಇದೆ. ಹಾಗಾಗಿ ಯಾತ್ರಿಗಳು ಇಲ್ಲಿಂದ ಪುಟ್ಟ ಉರುಟು ಕಲ್ಲುಗಳನ್ನು ತಮ್ಮ ಮನೆಗಳಿಗೆ ಒಯ್ಯುತ್ತಾರಂತೆ. ನಮಗೆ ಈ ಮಾಹಿತಿ ಸಕಾಲದಲ್ಲಿ ಸಿಕ್ಕದೇ ಇದ್ದ ಕಾರಣ ನಾವ್ಯಾರೂ ಇಲ್ಲಿಂದ ಕಲ್ಲು ಆಯ್ದುಕೊಳ್ಳಲಿಲ್ಲ. ಆದರೆ ಗರುಡಗಂಗೆಯ ಶುದ್ಧ ಸ್ಪಟಿಕ ಜಲದಂತಹ ನೀರು ಯಾತ್ರೆಯುದ್ದಕ್ಕೂ ಮತ್ತೆಲ್ಲೂ ಕಾಣಸಿಗಲಿಲ್ಲ. ಅದೇ ಜಲವನ್ನು ತೀರ್ಥವಾಗಿ ಪ್ರೋಕ್ಷಣೆ ಮಾಡಿಕೊಂಡು, ಬೊಗಸೆಯಲ್ಲಿ ಎತ್ತಿ ಕುಡಿದೆವು ಕೂಡ. ಯಾತ್ರಿಗಳು ಇಲ್ಲಿ ತೀರ್ಥಸ್ನಾನ ಸಹ ಮಾಡುತ್ತಾರೆ. ನೀರಿನಲ್ಲಿ ಸ್ವಲ್ಪ ಸಮಯ ಕಳೆದ ನಂತರ ವಾಹನ ನಿಲ್ಲಿಸಿದ ಹೋಟೆಲಿನ ಹತ್ತಿರ ಹೋಗಿ, ಬೆಳಗಿನ ತಿಂಡಿ - ಚಹಾ ಸೇವನೆ ಮುಗಿಸಿ, ಮತ್ತೆ ಬಸ್ಸನ್ನೇರಿ, ಬೆಳಗಿನ 10:30ರ ಸುಮಾರಿಗೆ ಜ್ಯೋತಿರ್ಮಠದಲ್ಲಿನ ನರಸಿಂಹ ದೇವರ ಮಂದಿರದ ಎದುರು ಇದ್ದೆವು.

         ಜ್ಯೋತಿರ್ಮಠಕ್ಕೆ "ಜೋಶಿಮಠ" ಎಂತಲೂ ಹೇಳುತ್ತಾರೆ. ಆದರೆ ಈಗ ಜ್ಯೋತಿರ್ಮಠ ಎಂಬ ಹೆಸರನ್ನೇ ಅಧಿಕೃತಗೊಳಿಸಿರುತ್ತಾರೆ.

         ದೇವಸ್ಥಾನದ ಎದುರುಗಿನ ರಸ್ತೆ ಸ್ವಲ್ಪ ಇಕ್ಕಟ್ಟಾಗಿತ್ತು. ಇಲ್ಲಿ ನಮ್ಮನ್ನು ಇಳಿಸಿದ ವಾಹನಗಳು, ಸುಮಾರು ಅರ್ಧ ಕಿಲೋಮೀಟರ್ ಮುಂದೆ ಸಾಗಿ, ರಸ್ತೆ ಸ್ವಲ್ಪ ಅಗಲವಾಗಿರುವಲ್ಲಿ ನಿಂತವು. ನಾವು ರಸ್ತೆಯಿಂದ ಸುಮಾರು ನೂರರಷ್ಟು ಮೆಟ್ಟಿಲುಗಳನ್ನು ಇಳಿದು ದೇವಾಲಯಗಳು ಇದ್ದಲ್ಲಿಗೆ ನಡೆದೆವು. ಈ ಕಾಲುಹಾದಿಯ ಎಡಭಾಗದಲ್ಲಿ ನರಸಿಂಹ ದೇವರ ಮಂದಿರವಿದ್ದರೆ ಬಲಭಾಗದಲ್ಲಿ ವಾಸುದೇವ ಮಂದಿರವಿದೆ.

         ನಾವು ಮೊದಲು ಅತ್ಯಂತ ಶಿಸ್ತುಬದ್ಧವಾಗಿ ನಿರ್ಮಿಸಲ್ಪಟ್ಟ ಶಿಲಾದೇವಾಲಯವಾದ ನರಸಿಂಹ ದೇವರ ಮಂದಿರಕ್ಕೆ ತೆರಳಿದೆವು. ವಿಶಾಲವಾದ ಜಾಗದಲ್ಲಿ ಮಂದಿರವಿದೆ. ಈ ದೇವಾಲಯವನ್ನೇ ಜ್ಯೋತಿರ್ಮಠ ಎನ್ನುತ್ತಾರೆ. "ನರಸಿಂಹ ಬದ್ರಿ" ಎಂತಲೂ ಹೇಳುತ್ತಾರೆ.

         ಆದಿ ಶಂಕರಾಚಾರ್ಯರು ಈ ಮಂದಿರವನ್ನು ಎಂಟನೆಯ ಶತಮಾನದಲ್ಲಿ ನಿರ್ಮಿಸಿದರು ಎಂಬ ಪ್ರತೀತಿ ಇದೆ. ಅದಕ್ಕೆ ಪೂರಕವೆಂಬಂತೆ ಈ ಮಂದಿರದ ಪ್ರಾಂಗಣದಲ್ಲೇ ಶ್ರೀ ಶಂಕರಾಚಾರ್ಯರ ಗದ್ದಿ ಸಹ ಇದೆ. ಒಂದು ಪುಟ್ಟ ಕಟ್ಟಡದ ಮೊದಲ ಮಹಡಿಯಲ್ಲಿ ಈ ಗದ್ದಿ ಇದೆ, ಮತ್ತು ಅಲ್ಲಿ ಶ್ರೀ ಶಂಕರಾಚಾರ್ಯರ ಮೂರ್ತಿ ಸಹ ಇದೆ. ನಾವು ಅದನ್ನು ವೀಕ್ಷಿಸಿ, ಗೋಡೆಯ ಮೇಲೆಲ್ಲ ಬರೆದ ಅವರ ಜೀವನಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು (ಹಿಂದಿಯಲ್ಲಿ ಇದ್ದವು) ಓದಿಕೊಂಡೆವು.

         ನರಸಿಂಹ ಮಂದಿರದಲ್ಲಿ ಪುಟ್ಟದಾದ, ಪದ್ಮಾಸನ ಭಂಗಿಯಲ್ಲಿನ, ಸಾಲಿಗ್ರಾಮ ಶಿಲೆಯ ನರಸಿಂಹ ದೇವರ ವಿಗ್ರಹ ಇದೆ. ಇದನ್ನು ಉದ್ಭವಮೂರ್ತಿ ಎಂತಲೂ ಹೇಳುತ್ತಾರೆ.

         ಈ ದೇವಳದ ಕಥೆಯ ಜೊತೆ "ಭವಿಷ್ಯ ಬದ್ರಿ" ಸಹ ತಳಕು ಹಾಕಿಕೊಂಡಿದೆ. ಇಲ್ಲಿರುವ ನರಸಿಂಹ ಸ್ವಾಮಿಯ ಎಡಗೈ ತುಂಬಾ ತೆಳುವಾಗಿದೆ. ಅದು ಈಗಲೂ ಸವೆಯುತ್ತಲೇ ಇದೆಯಂತೆ! ಅದು ಸಂಪೂರ್ಣ ಕರಗಿದಾಗ, ಈಗಿರುವ ಬದರಿನಾಥಕ್ಕೆ ಹೋಗುವ ದಾರಿಯಲ್ಲಿನ ಜಯ - ವಿಜಯ ಪರ್ವತಗಳು ಭಯಂಕರ ಭೂಕುಸಿತಕ್ಕೆ ಸಿಲುಕಿ ಕುಸಿದು, ಬದರಿನಾಥನ ರಸ್ತೆ ಮುಚ್ಚಿ ಹೋಗುತ್ತದೆಯಂತೆ. ಆಗ "ಬದರಿವಿಶಾಲ" ಸ್ವಾಮಿಯು ಅದಾಗಲೇ ಸ್ಥಾಪಿತವಾಗಿರುವ ಭವಿಷ್ಯ ಬದರಿಯಲ್ಲಿ ಕಾಣಿಸಿಕೊಳ್ಳುತ್ತಾರಂತೆ. ಆಗ ಭವಿಷ್ಯ ಬದ್ರಿಯೇ ಬದರಿನಾಥವಾಗುತ್ತದೆಯಂತೆ.

         ಈ ದೇವಾಲಯ ಬದರಿನಾಥ ಸ್ವಾಮಿಯ ಚಳಿಗಾಲದ ಪೀಠ ಸಹ ಆಗಿದೆ. ನರಸಿಂಹ ಸ್ವಾಮಿಯ ಪಕ್ಕ, ಇಲ್ಲಿಯ ಗರ್ಭಗುಡಿಯೊಳಗೆ, ಬದರಿನಾಥ ಸ್ವಾಮಿಯ ವಿಗ್ರಹ ಸಹ ಇದೆ. ಚಳಿಗಾಲದ ಆರು ತಿಂಗಳು ಬದರಿನಾಥದ ಅರ್ಚಕರು ಇಲ್ಲಿಯೇ ಸ್ವಾಮಿ 'ಬದರಿವಿಶಾಲ'ನನ್ನು ಪೂಜಿಸುತ್ತಾರಂತೆ. ಈ ದೇವಾಲಯದ ಪ್ರಾಂಗಣದಲ್ಲಿಯೇ ಒಂದು ತೀರ್ಥಕುಂಡವಿದ್ದು, ಸ್ನಾನ ಮಾಡಿ ಬಟ್ಟೆ ಬದಲಾಯಿಸಲು ಕೋಣೆಗಳು ಸಹ ಇವೆ. ಈ ತೀರ್ಥದ ತಣ್ಣನೆಯ ಜಲವನ್ನು ನಾವು ತೀರ್ಥವಾಗಿ ಸೇವಿಸಿ, ಪ್ರೋಕ್ಷಣೆ ಸಹ ಮಾಡಿಕೊಂಡೆವು.

         ಈ ಮಂದಿರದ ಪ್ರಾಂಗಣದಿಂದ 15 - 20 ಮೆಟ್ಟಿಲುಗಳನ್ನು ಏರಿ, ಮೊದಲು ಆಗಮಿಸಿದ ಕಾಲುದಾರಿಯಲ್ಲಿ ನಿಂತಾಗ ಎದುರುನಲ್ಲೇ ಪುರಾತನವಾದ ವಾಸುದೇವ ಮಂದಿರವಿದೆ .ಈಗ ನಾವೆಲ್ಲ ಅತ್ತ ತೆರಳೋಣವೇ?

         ಪ್ರಾಂಗಣದ ಪ್ರವೇಶದಲ್ಲೇ ಎಡಗಡೆಗೆ ಗರುಡ ಮಂದಿರವಿದೆ. ಅದನ್ನು ದರ್ಶಿಸಿ ಒಳಗೆ ಪ್ರವೇಶಿಸಿದರೆ ಅದುವೇ ವಾಸುದೇವ ಮಂದಿರ. ಕಟಿಹಾರ ವಂಶದ ರಾಜರಿಂದ 7ರಿಂದ 11ನೆಯ ಶತಮಾನದ ನಡುವೆ ನಿರ್ಮಿಸಲ್ಪಟ್ಟ ಈ ಮಂದಿರದ ಗರ್ಭಗೃಹದಲ್ಲಿ 5.50 ರಿಂದ 6 .00 ಅಡಿ ಎತ್ತರದ, ಅತ್ಯಂತ ಮನೋಹರವಾದ, ನಿಂತ ಭಂಗಿಯಲ್ಲಿರುವ ಭಗವಾನ್ ವಾಸುದೇವರ ವಿಗ್ರಹ ಇದೆ. ಶಂಖ, ಚಕ್ರ, ಗದಾ ಪಾಣಿಯಾಗಿರುವ, ಕಪ್ಪು ಸಾಲಿಗ್ರಾಮ ಶಿಲೆಯಲ್ಲಿ ನಿರ್ಮಿತವಾದ ಮೂರ್ತಿ ಇದು. ನೋಡಿದೊಡನೆ ಭಕ್ತಿ ಭಾವದಿಂದ ನತಮಸ್ತಕರಾಗುವಂತಿದೆ. ಮಂದಿರದ ಒಳಗೆ ವಿಶೇಷ ಶಕ್ತಿಯ ಕಂಪನದ ಅನುಭವ ಆಗುತ್ತದೆ.

         ಹೊರಪ್ರಾಂಗಣದಲ್ಲಿ ನೃತ್ಯಭಂಗಿಯಲ್ಲಿರುವ ಅಷ್ಟಭುಜ ಗಣೇಶನ ವಿಗ್ರಹವಿದೆ. ಈ ಮೂರ್ತಿಯಂತೂ ತುಂಬಾ ಸುಂದರವಾಗಿದೆ. ಇದಲ್ಲದೆ ಕಾಳಿ ಮಂದಿರ, ಶಿವಮಂದಿರ, ಭೈರವದೇವ ಮಂದಿರ, ನವದುರ್ಗಾ ಮಂದಿರ ಸಹ ಇವೆ. ಗೌರೀ-ಶಂಕರ ಮಂದಿರವೂ ಇದೆ. ತುಂಬಾ ಪುರಾತನವಾದ ಮಂದಿರಗಳ ಸಮುಚ್ಚಯವಿದು. ಆದರೆ ಎದುರುಗಡೆ ಇರುವ ನರಸಿಂಹ ಮಂದಿರ ಸಂಪೂರ್ಣ ನವನಿರ್ಮಾಣದಂತಿದೆ.

         ಈ ವಾಸುದೇವ ಮಂದಿರ ಸಮುಚ್ಚಯದಲ್ಲಿರುವ ಎಲ್ಲಾ ಗುಡಿಗಳನ್ನು ದರ್ಶಿಸಿ, ಅಲ್ಲಿಂದ ಹೊರಬಂದು, ನಿಧಾನವಾಗಿ ನಮ್ಮ ಬಸ್ಸುಗಳನ್ನು ನಿಲ್ಲಿಸಿದ ಸ್ಥಳದತ್ತ ನಡೆದೆವು. ಹಾಗೆ ನಡೆಯುವಾಗ ಹಿಮಾಲಯದ ಪರಿಸರದಲ್ಲಿ ಸಹಜವಾಗಿ ಬೆಳೆಯುವ ಹೂ ಗಿಡಗಳನ್ನು, ಹಣ್ಣಿನ ಮರಗಳನ್ನು ಗಮನಿಸುತ್ತಾ, ಸುತ್ತಲಿನ ಗಿರಿ- ಕಂದರ- ಶಿಖರಗಳ ಸೌಂದರ್ಯವನ್ನು ಆಸ್ವಾದಿಸುತ್ತಾ ಸಾಗಿದೆವು.

         ಈ ಮಂದಿರಗಳಲ್ಲದೆ ಜ್ಯೋತಿರ್ಮಠದಲ್ಲಿ ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ, ಚತುರಾಮ್ನಾಯ ಪೀಠಗಳಲ್ಲಿ ಒಂದಾದ ಉತ್ತರಾಮ್ನಾಯ ಪೀಠವಿದೆ( ಶಂಕರ ಮಠ ). ಈ ಶಂಕರ ಮಠದ ಹೆಸರೇ ಜ್ಯೋತಿರ್ಮಠ. ಈ ಹೆಸರೇ ಈ ಊರಿನ ಹೆಸರೂ ಕೂಡ ಆಗಿಬಿಟ್ಟಿದೆ. ಉಳಿದ ಮೂರು ಪೀಠಗಳೆಂದರೆ ದಕ್ಷಿಣದಲ್ಲಿ ಶೃಂಗೇರಿ ಪೀಠ, ಪೂರ್ವದಲ್ಲಿ ಪುರಿಯ ಗೋವರ್ಧನ ಪೀಠ, ಪಶ್ಚಿಮದಲ್ಲಿ ದ್ವಾರಕೆಯ ಶಾರದಾ ಪೀಠ.

         ಈ ಉತ್ತರಾಮ್ನಾಯ ಜ್ಯೋತಿರ್ಮಠ ಪೀಠದ ಮೊದಲ ಜಗದ್ಗುರುವಾಗಿ ಆದಿ ಶಂಕರಾಚಾರ್ಯರ ನಾಲ್ವರು ಪ್ರಮುಖ ಶಿಷ್ಯರಲ್ಲಿ ಒಬ್ಬರಾದ ತೋಟಕಾಚಾರ್ಯರು  ಇದ್ದರು. ಸದ್ಯದ ಗುರುಗಳು ಸ್ವಾಮಿ ಶ್ರೀ ಅವಿಮುಕ್ತೇಶ್ವರಾನಂದ ಸರಸ್ವತಿಯವರು.

         ಈ ಶಂಕರ ಮಠ ಅತ್ಯಂತ ಹತ್ತಿರದಲ್ಲೇ ಇದ್ದರೂ ಸಹ ನಮ್ಮ ಪ್ರವಾಸದ ಪರಿಧಿಯ ಆಚೆ ಇದ್ದ ಕಾರಣ ನಾವು ಅಲ್ಲಿಗೆ ಭೇಟಿ ನೀಡಲು ಆಗಲಿಲ್ಲ.(ನಾಳೆ ಸಾಯಂಕಾಲ ನೋಡುವ ಯೋಜನೆ ಇದೆ) ಜ್ಯೋತಿರ್ಮಠದಿಂದ ಹೊರಟ ನಾವು ಮಧ್ಯಾಹ್ನದ ಊಟದ ಸಮಯಕ್ಕೆ ಸರಿಯಾಗಿ ವಿಷ್ಣು ಪ್ರಯಾಗವನ್ನು ತಲುಪಿದೆವು.

         ವಿಷ್ಣು ಪ್ರಯಾಗದಲ್ಲಿ ಎರಡು ಮಹಾಗಿರಿಗಳ ನಡುವೆ, ಅಲಕನಂದಾ ನದಿಯ ಪಕ್ಕದಲ್ಲಿಯೇ, ಏರುತ್ತಾ ಸಾಗುವ ವಾಹನ ದಾರಿ ಬದರಿನಾಥಕ್ಕೆ ಹೋಗುತ್ತದೆ. ಅಲಕನಂದಾ ನದಿಯ ಹರಿವಿಗುಂಟ ನೋಡಿದರೆ, ಇಲ್ಲಿ, ಅದಕ್ಕೆ ಎಡಗಡೆಯಿಂದ ರಭಸವಾಗಿ ಹರಿದು ಬಂದು ಸೇರುವ 'ಧೌಲಿಗಂಗಾ' ನದಿ ಇದೆ. ಇವೆರಡರ ಸಂಗಮವೇ ವಿಷ್ಣು ಪ್ರಯಾಗ! ಈ 'ಧೌಲಿಗಂಗಾ' ನದಿಗೆ, ಈ ಜಾಗಕ್ಕಿಂತಲೂ ಸ್ವಲ್ಪ ಮೇಲೆ, 'ಋಷಿಗಂಗಾ' ಎಂಬ ನದಿ ಬಂದು ಸೇರುತ್ತದೆ. ಈ ಋಷಿಗಂಗಾ ನದಿಯ ಮೇಲೆ ಒಂದು ಹೈಡೆಲ್ ಪ್ರಾಜೆಕ್ಟ್ ಇತ್ತು. ಇಲ್ಲಿ ಈಗ ಎರಡು ವರ್ಷಗಳ ಹಿಂದೆ, ಒಮ್ಮೆಲೇ ಮಿಂಚಿನಂತೆ ಕ್ಷಿಪ್ರ ಪ್ರವಾಹ ಬಂದು, ಯಾರಿಗೂ ಒಂಚೂರೂ ಅವಕಾಶ ನೀಡದಂತೆ, ಈ ಹೈಡೆಲ್ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡುತ್ತಿದ್ದ ಇಂಜಿನಿಯರ್ ಗಳೂ ಸೇರಿದಂತೆ, ನೂರಾರು ಜನ ಕೊಚ್ಚಿಕೊಂಡು ಹೋದರಂತೆ. ಅದೇ ಸಂದರ್ಭದಲ್ಲಿ, ಈ ವಿಷ್ಣು ಪ್ರಯಾಗದಲ್ಲಿ ಧೌಲಿಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಒಂದು ಸ್ಟೀಲ್ ಬ್ರಿಡ್ಜ್ ಸಹ ಹಾಳಾಗಿರುವುದನ್ನು ಈಗಲೂ ನೋಡಬಹುದು. (ಆ ಬ್ರಿಜ್ ಈಗಿರುವ ನದೀ ಪಾತ್ರಕ್ಕಿಂತ ಸುಮಾರು 40 ಅಡಿಗಳಿಗಿಂತ ಮೇಲೆ ಇದೆ. ಅಂದರೆ ಆಗ ಬಂದ ಪ್ರವಾಹದ ಭೀಕರತೆಯನ್ನು ಊಹಿಸಿಕೊಳ್ಳಬಹುದು)

         ಈ ಸ್ಥಳದಲ್ಲಿ ನಾರದ ಮಹರ್ಷಿಗಳು ದೀರ್ಘಕಾಲ ಶ್ರೀ ವಿಷ್ಣುವನ್ನು ಕುರಿತು ತಪಸ್ಸು ಮಾಡಿದ್ದರಂತೆ. ಅವರಿಗೆ ಶ್ರೀ ವಿಷ್ಣು, ತನ್ನನ್ನು ಕುರಿತು ಬದರಿ ಕ್ಷೇತ್ರದಲ್ಲಿ ಏಳು ದಿನ ತಪಸ್ಸು ಮಾಡಿದರೆ, ದರ್ಶನವಿತ್ತು, ಮೋಕ್ಷ ನೀಡುವುದಾಗಿ ಹೇಳಿದರಂತೆ. ಅದರಂತೆ ನಾರದರು ಮತ್ತೂ ಉತ್ತರಕ್ಕೆ ಇರುವ ಬದರಿ ಕ್ಷೇತ್ರಕ್ಕೆ ತೆರಳಿ, ಅಲ್ಲಿ ಅಲಕನಂದಾ ತೀರದಲ್ಲಿ ತಪಸ್ಸು ಮಾಡಿ, ಬದರೀನಾಥನನ್ನು ಒಲಿಸಿಕೊಂಡರಂತೆ. ಅಲ್ಲಿ ಅವರು ಕುಳಿತು ತಪಸ್ಸು ಮಾಡಿದ್ದರೆಂದು ಹೇಳಲಾಗುವ ನಾರದ ಶಿಲೆಯೂ ಇದೆ.

         ಇನ್ನು, ಈ "ಪಂಚ ಪ್ರಯಾಗ"ಗಳ ಕುರಿತು ಒಂದೆರಡು ಸಾಲುಗಳು ಈ ಸಂದರ್ಭದಲ್ಲಿ ಅವಶ್ಯಕ ಎನಿಸುತ್ತದೆ;- ಅಲಕನಂದಾ ನದಿಯು ಬದರಿಯಿಂದ ಹರಿಯುತ್ತಿದ್ದು ಅದು ಮುಖ್ಯ ನದಿ. ಅದಕ್ಕೆ ಗಂಗಾ ಕಣಿವೆಯಲ್ಲಿ ಇತರ ಉಪನದಿಗಳು ಸೇರಿ ಅವಳು ತನ್ನ ಗಾತ್ರವನ್ನು ಹಿರಿದಾಗಿಸಿಕೊಳ್ಳುತ್ತಾ ಸಾಗುತ್ತಾಳೆ. ಹೀಗೆ ಪ್ರತಿಯೊಂದು ಶಾಖೆ ಅಥವಾ ಉಪನದಿ ಬಂದು ಸೇರುವ ಸ್ಥಳವೇ ಪ್ರಯಾಗ. ಅಲಕನಂದಾ ನದಿಯ ಹರಿವಿಗುಂಟ ಹೊರಟಾಗ ಮೊದಲಿಗೆ ಸಿಗುವುದು ವಿಷ್ಣು ಪ್ರಯಾಗ. ವಿಶೇಷವೆಂದರೆ, ಈ ವಿಷ್ಣು ಪ್ರಯಾಗದವರೆಗೆ ಅಲಕನಂದಾ ನದಿಯನ್ನು "ವಿಷ್ಣುಗಂಗಾ" ಎಂದು ಕರೆಯುತ್ತಾರೆ. ಇಲ್ಲಿ ವಿಷ್ಣುಗಂಗಾ ನದಿಗೆ ಎಡಗಡೆಯಿಂದ ‘ಧೌಲಿಗಂಗಾ’ ನದಿ ಬಂದು ಸೇರಿ, ಇಲ್ಲಿಂದ ಮುಂದೆ ವಿಷ್ಣುಗಂಗೆಯೇ "ಅಲಕನಂದಾ" ಆಗುತ್ತಾಳೆ. ಮುಂದೆ ಸಾಗಿದ ಅಲಕನಂದಾಳಿಗೆ ಮತ್ತೆ ಎಡಗಡೆಯಿಂದ "ನಂದಾಕಿನಿ" ನದಿ ಬಂದು ಸೇರುತ್ತದೆ. ಆ ಸ್ಥಳವೇ 'ನಂದಪ್ರಯಾಗ'. ಇದು ಯಾದವ ದೊರೆ ನಂದರಾಜನ ಹೆಸರನ್ನು ಪಡೆದಿದೆ. ಇಲ್ಲಿ ಗೋಪಾಲಸ್ವಾಮಿ ಮಂದಿರವೂ ಇದೆ. (ನಾವು ಇಲ್ಲಿ ಇಳಿಯಲಿಲ್ಲ) ನಂದಾಕಿನಿಯನ್ನು ಸೇರಿಸಿಕೊಂಡು ಉಬ್ಬಿದ ಅಲಕನಂದಾ ಸ್ವಲ್ಪ ಮುಂದೆ ಸಾಗುವಷ್ಟರಲ್ಲಿ ಮತ್ತೆ ಎಡಗಡೆಯಿಂದ, ಪಿಂಡಾರ ಗ್ಲೇಸಿಯರ್ ನಿಂದ ಹರಿದು ಬಂದು ಸೇರುತ್ತಾಳೆ -'ಪಿಂಡಾರಗಂಗಾ'. ಈ ಸ್ಥಳವೇ "ಕರ್ಣ ಪ್ರಯಾಗ". ಮಹಾಭಾರತದ ಪ್ರಸಿದ್ಧ ಯೋಧ ಕರ್ಣನು ಇಲ್ಲಿ ತಪಸ್ಸನ್ನು ಆಚರಿಸಿದ್ದನಂತೆ. ಇನ್ನಷ್ಟು ಮೈ ತುಂಬಿಕೊಂಡ ಅಲಕನಂದಾ ಮುಂದೆ ಸಾಗಿ ಕೇದಾರನಾಥದಿಂದ ಹರಿದು ಬಂದು ಸೇರುವ ಮಂದಾಕಿನಿಯನ್ನು ತನ್ನ ಜೊತೆ ಕೂಡಿಸಿಕೊಂಡು ಹರಿಯುತ್ತಾಳೆ. ಇಲ್ಲಿ ಮಂದಾಕಿನಿ ಬಲಗಡೆಯಿಂದ ಬಂದು ಅಲಕನಂದಾವನ್ನು ಸೇರುತ್ತಾಳೆ. ಈ ಸ್ಥಳವೇ "ರುದ್ರಪ್ರಯಾಗ". ಈ ರುದ್ರಪ್ರಯಾಗದಲ್ಲಿ ಹಿಂದೆ ನಾರದರು ಶಿವನನ್ನು ಕುರಿತು ತಪಸ್ಸು ಮಾಡಿದಾಗ, ಶಿವನು ಅವರಿಗೆ ರುದ್ರರೂಪಿಯಾಗಿ ದರ್ಶನವಿತ್ತು, ಸಂಗೀತವನ್ನು ವರವಾಗಿ ನೀಡಿದನಂತೆ. ಈ ರುದ್ರಪ್ರಯಾಗ ಇರುವದರಿಂದ ಇಡೀ ಜಿಲ್ಲೆಗೆ 'ರುದ್ರಪ್ರಯಾಗ ಜಿಲ್ಲೆ' ಎಂದು ಹೇಳುತ್ತಾರೆ. ಇಲ್ಲಿಂದ ಗುಪ್ತಕಾಶಿಯ ಮೂಲಕ ಕೇದಾರನಾಥಯಾತ್ರೆಯಾದರೆ, ಅಲಕನಂದಾ ನದಿಯ ಹರಿವಿನ ಮೂಲದ ಕಡೆ ಹೊರಟರೆ, ಬದರಿನಾಥ ಯಾತ್ರೆ. ರುದ್ರ ಪ್ರಯಾಗದಿಂದ ಮುಂದೆ ಹರಿಯುವ ಅಲಕನಂದಾ ನದಿಗೆ ಮತ್ತೆ ಬಲಗಡೆಯಿಂದ ಬಂದು ಸೇರುತ್ತಾಳೆ "ಭಾಗೀರಥಿ". ಇವಳು ಗಂಗೋತ್ರಿಯಿಂದ ಹರಿದು ಬರುತ್ತಾಳೆ .ಈ ಸಂಗಮದ ಹೆಸರು "ದೇವಪ್ರಯಾಗ". ಇಲ್ಲಿ ಗುಪ್ತಗಾಮಿನಿಯಾಗಿ ಸರಸ್ವತಿ ಸಹ ಬಂದು ಸೇರುತ್ತಾಳೆ ಎಂಬ ಪ್ರತೀತಿಯಿದೆ. ಈ ಪ್ರಯಾಗದ ನಂತರ ಅಲಕನಂದಾ ನದಿಯ ಹೆಸರು "ಗಂಗಾನದಿ" ಎಂದಾಗುತ್ತದೆ. ಅವಳೇ ಭಾರತೀಯರಿಗೆಲ್ಲ ಪರಮ ಪವಿತ್ರಳಾದ 'ಗಂಗಾಮಾತೆ'. ದೇವಪ್ರಯಾಗದಿಂದ ಮುಂದೆ ಹರಿಯುವ ಗಂಗಾ, ಋಷಿಕೇಶದ ಮೂಲಕ ಹಾದು, ಹರಿದ್ವಾರದಲ್ಲಿ ಬಯಲು ಸೇರುತ್ತಾಳೆ. ಮುಂದೆ ಯಮುನಾ ನದಿಯನ್ನು  ಜೊತೆ ಸೇರಿಸಿಕೊಳ್ಳುತ್ತಾಳೆ, ಪ್ರಯಾಗರಾಜದಲ್ಲಿ (ಅಲಹಾಬಾದ್).


ಹಿಮಾಲಯದ ತಪ್ಪಲಿನಲ್ಲಿ ಅಲಕನಂದಾ ನದಿಗುಂಟ ನಿಸರ್ಗ ಸೌಂದರ್ಯ


ಇದೇ ಗರುಡ ಗಂಗಾ (ಚಿತ್ರದಲ್ಲಿ ಶಿವಲಿಂಗ್ ಚಿಕ್ಕಮಠ್ )




ಶ್ರೀ ಶಂಕರಾಚಾರ್ಯ ಗದ್ದಿ


ಶ್ರೀ ನರಸಿಂಹ ಮಂದಿರ




ಈ ಬಾಲ್ಕನಿಯ ನೇರ ಕೆಳಗೆ ವಿಷ್ಣು ಪ್ರಯಾಗ

( ಸಶೇಷ.......)

ಶುಕ್ರವಾರ, ಸೆಪ್ಟೆಂಬರ್ 6, 2024

ಚಾರ್ ಧಾಮ ಯಾತ್ರೆ -ಭಾಗ 10

 


ಚಾರ್ ಧಾಮ ಯಾತ್ರೆ -ಭಾಗ 10

ಕಾಲ್ನಡಿಗೆಯಲ್ಲಿ ಗೌರಿಕುಂಡದತ್ತ

ದಿನಾಂಕ:-17/05/2024


         ಪಿಟ್ಟೂವಿನಿಂದ ಇಳಿದು ಮೈಮುರಿದೆ. ತುಂಬಾ ಹುಮ್ಮಸ್ಸಿನಿಂದ ನಡೆಯತೊಡಗಿದೆ. ಅವನೂ ಸಹ ನನ್ನ ಜೊತೆ ನಿರಾಳವಾಗಿ ನಡೆದು ಬರುತ್ತಿದ್ದ. ಸುಮಾರು 6 ಕಿ.ಮೀ ನಡೆದ ನಂತರ ನಾನು, 'ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಮುಂದೆ ಹೋಗೋಣ' ಎಂದೆ. ಕುಡಿಯುವ ನೀರಿನ ವ್ಯವಸ್ಥೆ ಇದ್ದಲ್ಲಿ ನಿಂತುಕೊಂಡೆವು. ಐದು ನಿಮಿಷದ ವಿಶ್ರಾಂತಿಯ ನಂತರ ಹೊರಟಾಗ ಅವನು ನನ್ನಲ್ಲಿ ಪಿಟ್ಟೂವನ್ನು ಏರಿ ಕುಳಿತುಕೊಳ್ಳಲು ಹೇಳಿದ. ನಾನು ದೃಢವಾಗಿ "No" ಎಂದೆ. ಮತ್ತೊಮ್ಮೆ ಈ ಬಡಪಾಯಿಗೆ ತೊಂದರೆ ಕೊಡಲು ಮನಸ್ಸಿಗೆ ತುಂಬಾ ಹಿಂಸೆಯಾಗುತ್ತಿತ್ತು. ಅವನ ಬೆನ್ನು ತಟ್ಟಿ, 'ಇಬ್ಬರೂ ಒಟ್ಟಾಗಿ ನಡೆಯೋಣ, ನಡೆ!' ಎಂದೆ. ಅವನೂ ಸಹ ಖುಷಿಯಿಂದ ಹೆಜ್ಜೆ ಹಾಕಿದ. ನಾನೇನಾದರೂ ನಡೆಯುತ್ತಾ ಪ್ರಪಾತದ ಅಂಚಿಗೆ ಹೋದೆನಾದರೆ ತಕ್ಷಣ ಅವನು ತನ್ನ ಎಡಗೈಯಿಂದ ನನ್ನನ್ನು ಒಳಗಡೆಗೆ ತಳ್ಳುತ್ತಿದ್ದ. ಅವನ ಕಾಳಜಿಯನ್ನು ಕಂಡು, ಅವನಿಗೆ ಆತಂಕ ಸೃಷ್ಟಿಸಬಾರದೆಂದು, ಸಾಧ್ಯವಾದಷ್ಟು ಸುರಕ್ಷಿತ ಜಾಗದಲ್ಲೇ ನಡೆಯುತ್ತಿದ್ದೆ.

         ಹೀಗೆ ನಡೆಯುವಾಗ ಈ ಭಕ್ತ ಜನರನ್ನು ಹತ್ತಿರದಿಂದ ಗಮನಿಸಲು ಸಾಧ್ಯವಾಯಿತು. "ಹರ ಹರ ಮಹಾದೇವ್", "ಕೇದಾರ್ ಬಾಬಾ ಕಿ ಜೈ" ಎನ್ನುತ್ತಾ ಮೇಲೆ ಏರುವ ಎಲ್ಲ ವಯಸ್ಸಿನ ಭಕ್ತರನ್ನು ನೋಡಿ ಮನಸ್ಸು ಆಶ್ಚರ್ಯ ಪಡುತ್ತಿತ್ತು. ಅದರಲ್ಲೂ, ವಯಸ್ಸಾದ ಹೆಂಗಸರೂ ಸಹ,- ಕೆಲವೇ ಹೆಜ್ಜೆ ನಡೆಯುವುದು, ನಿಂತು ಸುಧಾರಿಸಿಕೊಳ್ಳುವುದು, ಮತ್ತೆ ನಡೆಯುವುದು, ನಿರಂತರವಾಗಿ ಕೇದಾರನಾಥನ ಜೈ ಜೈಕಾರ ಮಾಡುವುದು - ಈ ರೀತಿಯಲ್ಲಿ ಏರುವುದನ್ನು ನೋಡಿ, ಇದಕ್ಕೆ ಆ ಕೇದಾರನಾಥನ ಮಹಿಮೆ ಎನ್ನಬೇಕೋ, ಅಥವಾ ಮನುಷ್ಯನ ಮನಸ್ಸಿನ ಅಸೀಮ ಶಕ್ತಿಯ ನಿದರ್ಶನ ಎನ್ನಬೇಕೋ ತಿಳಿಯದಾಗಿತ್ತು ನನಗೆ.

      ಸುಮಾರು ಎಂಟು - ಒಂಭತ್ತು ಕಿಲೋ ಮೀಟರ್ ನಡೆಯುವಷ್ಟರಲ್ಲಿ 'ಗೌರಿಕುಂಡ' ಬಂತು. ಇದಕ್ಕೂ ಪೂರ್ವದಲ್ಲಿ ಒಬ್ಬ ಶ್ರದ್ಧಾಳುವನ್ನು ಕಂಡೆ. ಆತನ ಎರಡೂ ಕಾಲುಗಳು ಪೋಲಿಯೋದಿಂದ ನಿಷ್ಕ್ರಿಯವಾಗಿದ್ದವು. ಕೇವಲ ಕೈಗಳು ಮತ್ತು ಪೃಷ್ಠದ ಆಧಾರದಲ್ಲಿ ಅವನು ತೆವಳುತ್ತಾ ಏರುತ್ತಿದ್ದ. "ಅರೆ! ಇನ್ನೂ 20 ಕಿಲೋಮೀಟರ್ ಗೂ ಮಿಕ್ಕಿ ಇವನು ಏರಬೇಕಲ್ಲ!" ಎಂದು ನೆನೆದಾಗ ಒಮ್ಮೆ ನನಗೆ, ನನ್ನ ಮೆದುಳು ಸ್ತಬ್ಧವಾದಂತೆ ಅನಿಸಿತು. ನಾನೂ ಸಹ ಜೋರಾಗಿ "ಜೈ ಕೇದಾರನಾಥ ಬಾಬಾ!" ಎಂದೆ. ಇಳಿಯುವಾಗ, ಅಂದರೆ ನಾನು ನಡೆಯುತ್ತಿರುವಾಗ, ನಿರಂತರವಾಗಿ ಪ್ರತಿ ಹೆಜ್ಜೆಗೂ ಕೇದಾರನಾಥನನ್ನು ಸ್ಮರಿಸುತ್ತಾ ಇಳಿಯುತ್ತಿದ್ದೆ. ಒಂದು ಲಯದಲ್ಲಿ ನಾನೇ, ಅಲ್ಲಿಯೇ ರೂಪಿಸಿಕೊಂಡ, "ಕೇದಾರನಾಥ ಓಂ ಕೇದಾರನಾಥ! ಜಯಜಯ ಶಿವಶಿವ ಕೇದಾರನಾಥಾ!" ಎಂದು ಹಾಡಿಕೊಳ್ಳುತ್ತಾ ಇಳಿಯುತ್ತಿದ್ದೆ. ಯಾವ ಚಾರಣ ನನ್ನ ಕನಸಾಗಿತ್ತೋ, ಅದನ್ನು ಏರಲು ಆಗಲಿಲ್ಲವಾದರೂ, ಅರ್ಧದಷ್ಟು ದೂರವನ್ನಾದರೂ ಇಳಿಯುತ್ತಿದ್ದೇನೆ ಎಂಬ ಸಮಾಧಾನ ಮನಸ್ಸನ್ನು ತುಂಬಿತ್ತು.

             ಕೊನೆಯ ಹಂತವಾದ ಗೌರಿಕುಂಡಕ್ಕೆ ಬರುವಷ್ಟರಲ್ಲಿ ಜನಸಂದಣಿ ಮತ್ತೂ ತೀವ್ರವಾಗಿತ್ತು. ಅವರನ್ನು ನಿವಾರಿಸಿಕೊಂಡು ಮುಂದೆ ಸಾಗುವುದು ಕಷ್ಟವಾಗಿ ನಮ್ಮ ನಡಿಗೆ ನಿಧಾನವಾಯಿತು. ಮುಂದಾಕಿನಿ ನದಿಯ ಪಕ್ಕದಲ್ಲಿರುವ ಒಂದು ಬಿಸಿ ನೀರಿನ ಬಗ್ಗೆಯ ಸುತ್ತ ಒಂದು ಪುಟ್ಟ ಕೊಳ ನಿರ್ಮಾಣವಾಗಿದ್ದು ಇದನ್ನು "ಗೌರಿ ಕುಂಡ" ಎನ್ನುತ್ತಿದ್ದರು. 2013ರ ಮಹಾ ಪ್ರವಾಹದಲ್ಲಿ ಇದು ಸಂಪೂರ್ಣ ಮುಚ್ಚಿ ಹೋಗಿಬಿಟ್ಟಿದೆ. ಆದರೆ ನದಿಯಿಂದ ಸುಮಾರು 100 ಅಡಿ ಎತ್ತರದಲ್ಲಿ ಪಾರ್ವತಿ ದೇವಿಯ ಮಂದಿರವಿದೆ. ಇದನ್ನು "ಗೌರಿಕುಂಡ ಮಂದಿರ" ಎಂದೂ ಹೇಳುತ್ತಾರೆ. ಈ ಮಂದಿರದ ಎದುರುಗಡೆ ಒಂದು ಪುಟ್ಟ ಕೊಳವನ್ನು. ( ಪುಷ್ಕರಣಿ ) ನಿರ್ಮಿಸಿದ್ದಾರೆ. ಇದು ಬಿಸಿ ನೀರಿನ ಬುಗ್ಗೆಯ ಜೊತೆ ಸಂಪರ್ಕ ಹೊಂದಿದೆ. ಇದನ್ನು ಸಹ ಗೌರಿ ಕುಂಡ ಎಂತಲೇ ಎನ್ನುತ್ತಾರೆ. ಇದರೊಳಗಿನ ನೀರು ಹಿತವಾಗಿ ಬೆಚ್ಚಗಿದೆ.ಇದೇ ಸ್ಥಳದಲ್ಲಿಯೇ ಚಾರಣದ ಹಾದಿಯಲ್ಲಿ ಒಂದು ಸ್ವಾಗತ ಕಮಾನು ನಿರ್ಮಿಸಿದ್ದಾರೆ. ಏರುವಾಗ ಈ ಕಮಾನಿನ ನಂತರ ಗೌರಿಕುಂಡದ ಮಾರ್ಕೆಟ್ ಸ್ಥಳ ಸಿಗುತ್ತದೆ. ಇಲ್ಲಂತೂ ಅತಿಯಾದ ಜನದಟ್ಟಣೆ, ಒತ್ತೊತ್ತಿ ನಿಂತ ಅಂಗಡಿ ಮುಂಗಟ್ಟುಗಳು ಇದ್ದು ಇಲ್ಲಿ ಸಾಗುವಾಗ ನಡಿಗೆ ತುಂಬಾ ನಿಧಾನವಾಗುತ್ತದೆ. 

          ಈ ಗೌರಿ ಕುಂಡಕ್ಕೂ ಸಹ ಒಂದು ಸ್ಥಳ ಪುರಾಣವಿದೆ:- ಇಲ್ಲಿಯೇ ಪಾರ್ವತಿ ದೇವಿ ತನ್ನ ಬೆವರಿನಿಂದ ಒಬ್ಬ ಹುಡುಗನನ್ನು ಸೃಷ್ಟಿಸಿ, ಅವನನ್ನು ತಾನು ಸ್ನಾನ ಮಾಡುವ ಸ್ಥಳಕ್ಕೆ ಕಾವಲಿರಿಸಿ ಸ್ನಾನಕ್ಕೆ ಹೋಗಿದ್ದಳಂತೆ. ಅಷ್ಟರಲ್ಲಿ ಹೊರಗಡೆ ಹೋದ ಶಿವ ಬಂದಾಗ, ಆ ಹುಡುಗ ಶಿವನನ್ನು ಮುಂದಕ್ಕೆ ಹೋಗಲು ಬಿಡಲಿಲ್ಲವಂತೆ. ಕೋಪಗೊಂಡ ಶಿವ ಆ ಬಾಲಕನ ತಲೆಯನ್ನು ಕತ್ತರಿಸಿದನಂತೆ. ಅಷ್ಟರಲ್ಲಿ ಹೊರಗೆ ಬಂದ ಪಾರ್ವತಿ, ತಾನು ಸೃಷ್ಟಿಸಿದ ಮಗನ ಶಿರವನ್ನು ಶಿವ ಕತ್ತರಿಸಿದ್ದನ್ನು ಕಂಡು ತುಂಬಾ ದುಃಖಿತಳಾದಳಂತೆ. ಅವಳನ್ನು ರಮಿಸಲು, ಶಿವನು ತನ್ನ ಗಣಗಳು ತಂದ ಆನೆಯ ಶಿರವನ್ನು ಆ ಬಾಲಕನ ಮುಂಡಕ್ಕೆ ಜೋಡಿಸಿದನಂತೆ. ತನ್ಮೂಲಕ ಗಜಾನನನ ಜನ್ಮವಾಯಿತಂತೆ.

         ಒಟ್ಟಿನಲ್ಲಿ ನಮ್ಮ ಪುರಾಣ ಮಹಾಕಾವ್ಯಗಳ, ವಿಶೇಷತಃ ಮಹಾಭಾರತದ, ಕಥಾವಳಿಗಳಿಗೆ ಸರಿಯಾಗಿ ಈ ದೇವಭೂಮಿಯಲ್ಲಿ ಮಹಿಮಾನ್ವಿತ ಸ್ಥಳಗಳಿವೆ. ಮನಸ್ಸು ಭ್ರಮಿಸಿ ಹೋಗುವಷ್ಟು ಸಾಮ್ಯತೆಗಳು ಗೋಚರಿಸುತ್ತವೆ. ಇದನ್ನು ಕೃತಿ ರಚನಾಕಾರನ ಚಾತುರ್ಯ ಎನ್ನಬೇಕೋ, ಅಥವಾ ವಿಶೇಷ ಶಕ್ತಿ ಸಂಪನ್ನವಾಗಿದ್ದ ಆ ಕಾಲಘಟ್ಟದಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿ ಆ ಮಹಾಕಾವ್ಯಗಳ ರಚನೆಯಾಯಿತೋ, ಒಂದೂ 'ಇದಮಿತ್ಥಂ' ಎಂದು ತಿಳಿಯದೆ "ಅಜ್ಞೇಯವೆಂದದಕೆ ಕೈಮುಗಿವ ಭಕ್ತ"ನಾಗುವುದೊಂದೇ ದಾರಿಯಾಗಿ ಕಾಣುತ್ತದೆ.

         ಇಲ್ಲಿಗೆ ಬಂದು ತಲುಪುವಷ್ಟರಲ್ಲಿ ನನ್ನ ಜೊತೆ ಹೊರಟ ನಾಲ್ವರು ಮಹಿಳೆಯರು ಚದುರಿ ಹೋಗಿದ್ದರು. ಹಾಗಾಗಿ ನಾನೊಬ್ಬನೇ ಮೇಲಿನ ಪಾದಚಾರಿ ಮಾರ್ಗದಿಂದ ಕೆಳಗಿಳಿದು ಗೌರಿಕುಂಡ ದೇವಸ್ಥಾನ ಹಾಗೂ ಗೌರಿಕುಂಡವನ್ನು ನೋಡಿಕೊಂಡು ಬಂದೆ. ಪಿಟ್ಟೂವನ್ನು ಏರುವಾಗಲೇ, ಎಲ್ಲಾ ಐದು ಪಿಟ್ಟೂಗಳಿಗೆ, ಗೌರಿ ಕುಂಡದಲ್ಲಿರುವ ಟ್ಯಾಕ್ಸಿ ಸ್ಟಾಂಡಿನ ಹತ್ತಿರ ನಮ್ಮನ್ನು ಬಿಡತಕ್ಕದ್ದು ಎಂದು ತಾಕೀತು ಮಾಡಿದ್ದೆ. ದಾರಿಯಲ್ಲಿ ಎರಡನೆಯ ಟೀ ಬ್ರೇಕ್ ನಲ್ಲಿ ನನ್ನ ಪತ್ನಿ ಸರಸ್ವತಿ ಮತ್ತು ಇನ್ನೊಬ್ಬ ಮಹಿಳೆ ಸಿಕ್ಕಿದ್ದರು. ಆ ಮಹಿಳೆಗೆ ಕನ್ನಡದ ಹೊರತಾಗಿ ಬೇರೆ ಭಾಷೆ ಬರುತ್ತಿರಲಿಲ್ಲ. ಅವರ ದೇಹ ತೂಕವೂ ಸ್ವಲ್ಪ ಹೆಚ್ಚು (೮೦+ಕಿಲೋ)ಇದ್ದ ಕಾರಣ ಆ ಪಿಟ್ಟೂ ತುಂಬಾ ನಿಧಾನವಾಗಿ ಕಷ್ಟಪಟ್ಟು ಬರುತ್ತಿದ್ದ. ಹಾಗಾಗಿ ನನ್ನ ಪತ್ನಿ, ತನ್ನ ಪಿಟ್ಟೂಗೆ ಹೇಳಿ, ಸಾಧ್ಯವಾದಷ್ಟು ನಿಂತು ನಿಂತು, ಅವರನ್ನು ಜೊತೆಜೊತೆಗೆ ಕರೆದು ತರುತ್ತಿದ್ದರು. ನಮ್ಮ ಜೊತೆ ಇದ್ದ ಇನ್ನೊಬ್ಬ ಮಹಿಳೆ ಸಹ ಅದೇ ರೀತಿ ಇದ್ದರೂ ಸಹ, ಅವರನ್ನು ಹೊತ್ತುಕೊಂಡ ಪಿಟ್ಟೂ ತನ್ನ ಜೊತೆಗೆ ಇನ್ನೊಬ್ಬನನ್ನು ಸೇರಿಸಿಕೊಂಡಿದ್ದ ಕಾರಣ, ಅವರು ನಿರಂತರವಾಗಿ ನಡೆದು ಅದಾಗಲೇ ಟ್ಯಾಕ್ಸಿ ಸ್ಟ್ಯಾಂಡ್ ಸೇರಿಯಾಗಿತ್ತು. ಆದರೆ ಈ ಪಿಟ್ಟೂ ಸ್ವಲ್ಪ ದುರಾಸೆಗೆ ಬಿದ್ದ ಎನಿಸುತ್ತದೆ. ಕೊನೆಕೊನೆಗಂತೂ ಅವನು ತೀರಾ ನಿಧಾನವಾಗಿ ಬಿಟ್ಟ. ನಾವು ಮೂರು ಜನ ಟ್ಯಾಕ್ಸಿ ಸ್ಟ್ಯಾಂಡ್ ಸೇರಿದರೂ ಸಹ ನನ್ನ ಪತ್ನಿ ಮತ್ತು ಇನ್ನೊಬ್ಬರು ಬರಲೇ ಇಲ್ಲ. ನಾವು ಮೂವರು ಟ್ಯಾಕ್ಸಿ ಸ್ಟ್ಯಾಂಡಿನಲ್ಲಿ ಸುಮಾರು ಎರಡು ತಾಸು ಕಾದೆವು. ನಂತರ ನಾನು ನನ್ನ ಜೊತೆಗಿದ್ದ ಇಬ್ಬರು ಮಹಿಳಾ ಯಾತ್ರಿಗಳಿಗೆ, ಅವರು ಟ್ಯಾಕ್ಸಿ ಹಿಡಿದು ಸೋನ್ ಪ್ರಯಾಗ್ ಗೆ ಹಾಗೂ ತದನಂತರ ಸೀತಾಪುರಕ್ಕೆ ಹೋಗಿ ಅಲ್ಲಿ ನಮಗಾಗಿ ಕಾಯುತ್ತಿದ್ದ ನಿತಿನ್ ಅವರನ್ನು ಕೂಡಿಕೊಳ್ಳಲು ಸೂಚಿಸಿದೆ.

        ನಾನು ಪುನಃ ಒಂದೂಕಾಲು ಕಿಲೋ ಮೀಟರ್ ಮೇಲೇರಿ ಗೌರಿಕುಂಡಕ್ಕೆ ಬಂದೆ. ಅದಾಗಲೇ ಸುಮಾರು ಹತ್ತು ಕಿಲೋಮೀಟರ್ ನಡೆದಿದ್ದರೂ ಸಹ, ನನಗಿರುವ ಒಬ್ಬಳೇ ಹೆಂಡತಿಯನ್ನು (ಪ್ರಾಣಸಖಿ) ನಾನು ಬಿಟ್ಟು ಹೋಗುವ ಹಾಗಿಲ್ಲವಲ್ಲ! ತೀರ್ಥಯಾತ್ರೆಯಾದ ಕಾರಣ ಅವರನ್ನು ಬೈದುಕೊಳ್ಳಲು ಸಹ ಆಗಲಿಲ್ಲ! ಗೌರಿಕುಂಡದ ಆ ಜನದಟ್ಟಣೆಯ ನಡುವೆ, ಈ ಮಹಿಳೆಯರಿಗಾಗಿ ಹುಡುಕುತ್ತಾ, ಎಲ್ಲಾ ಪಿಟ್ಟೂಗಳು ಯಾತ್ರಿಗಳನ್ನು ಇಳಿಸುವ ಸ್ಥಳದಲ್ಲಿ ಇವರಿಗಾಗಿ ಹುಡುಕಾಡಿದೆ. ಅಲ್ಲಿಯೂ ಇವರಿಬ್ಬರು ಇರಲಿಲ್ಲ. ಅಲ್ಲೇ ಇರುವ ಪೊಲೀಸ್ ಚೌಕಿಯಲ್ಲಿ ವಿಚಾರಿಸಿದೆ. ಒಬ್ಬ ಪೊಲೀಸ್ ಅಧಿಕಾರಿ ತಕ್ಷಣ ನನ್ನ ಜೊತೆ ಬಂದ. ನಾವಿಬ್ಬರೂ ಸೇರಿ ಮತ್ತೂ ಸ್ವಲ್ಪ ಮುಂದೆ ಹೋದೆವು. ಅಲ್ಲಿ ನನ್ನ ಪತ್ನಿ ಕುಳಿತಿದ್ದಳು! ಭಾಷೆ ಬಾರದ ಸಹಯಾತ್ರಿಗಾಗಿ ಅವಳು ಕಾದು ಕುಳಿತಿದ್ದಳು. ಬೆಳಿಗ್ಗೆ ಪಿಟ್ಟೂವಿನಲ್ಲಿ ಕೂರುವ ಮೊದಲೇ ನಮ್ಮಿಬ್ಬರ ಫೋನ್ ಅದಲಿ ಬದಲಿಯಾಗಿತ್ತು. ನನ್ನ ಫೋನ್ ನಲ್ಲಿದ್ದ ಬಿಎಸ್ಸೆನ್ನೆಲ್ ಸಿಮ್ ಗೆ ಸಂಪರ್ಕ ಸಿಗುತ್ತಿರಲಿಲ್ಲ. ಕೊನೆಗೆ ನನ್ನವಳು, ತನ್ನನ್ನು ಹೊತ್ತು ತಂದ ಪಿಟ್ಟೂವಿನ ಫೋನ್ ಮೂಲಕ ನನ್ನ ಹತ್ತಿರವಿದ್ದ ಫೋನಿಗೆ ಕನೆಕ್ಟ್ ಮಾಡಿಕೊಂಡಳು(ಜಿಯೋ ಸಿಮ್). ಆದರೆ ಅಷ್ಟರಲ್ಲಾಗಲೇ ನಾನು ಅಲ್ಲಿ ತಲುಪಿಯಾಗಿತ್ತು. ಅದೇ ಸಮಯಕ್ಕೆ ಸರಿಯಾಗಿ ಭಾರೀ ಭಾರವನ್ನು ಇಳಿಸಿ ಆ ಪಿಟ್ಟೂ ಸಹ ಕುಳಿತುಕೊಳ್ಳುತ್ತಿದ್ದ. ನಮ್ಮ ಸಹಯಾತ್ರಿ ಸ್ವಲ್ಪವೂ ನಡೆಯಲಾರಳು ಎಂಬ ಕಾರಣಕ್ಕೆ ನಾನು ಈ ಪಿಟ್ಟೂವಿಗೆ ಅವರನ್ನು ಟ್ಯಾಕ್ಸಿಸ್ಟ್ಯಾಂಡ್ ನವರೆಗೆ ಬಿಡಲು ಹೇಳಿದೆ. ಅದು ನಾವು ಮೊದಲು ಮಾಡಿಕೊಂಡ ಕರಾರು ಸಹ ಆಗಿತ್ತು. ಆದರೆ ಈ ಪಿಟ್ಟೂ ಜಗಳ ತೆಗೆದ. ನಾನು ಅವನಿಗೆ, "ನೀನು ಈ ಮಹಿಳೆಯನ್ನು ಟ್ಯಾಕ್ಸಿ ಸ್ಟ್ಯಾಂಡ್ ವರೆಗೆ ಬಿಡದಿದ್ದರೆ ನಿನಗೆ ಹಣ ಪಾವತಿ ಮಾಡುವುದಿಲ್ಲ. ಅಲ್ಲದೆ ಪೊಲೀಸ್ ನವರಿಗೆ ಸಹ ಈ ವಿಷಯವನ್ನು ಹೇಳುತ್ತೇನೆ" ಎಂದು ಬೆದರಿಸಿದೆ. ಸ್ವಲ್ಪ ಪ್ರತಿಭಟಿಸಿದರೂ ಸಹ, ನಮ್ಮ ಹತ್ತಿರವಿದ್ದ ತನ್ನ ಐಡಿ ಕಾರ್ಡ್ ಹಾಗೂ ಕೊಡಲು ಒಪ್ಪಿಕೊಂಡ ಕೂಲಿಯನ್ನು ಪಡೆದುಕೊಳ್ಳಲು ಈ ಕೊನೆಯ ಹಂತದಲ್ಲಿ ಜಗಳವಾಡುವುದು ನಿಷ್ಪ್ರಯೋಜಕ ಎಂದು ಅವನಿಗೂ ಅನಿಸಿರಬೇಕು. ಟ್ಯಾಕ್ಸಿ ಸ್ಟ್ಯಾಂಡ್ ವರೆಗೆ ಇಳುಕಲು ದಾರಿಯಾದ್ದರಿಂದ, ಗೊಣಗುತ್ತಾ, ಅವರನ್ನು ಮತ್ತೆ ಬೆನ್ನಿಗೇರಿಸಿಕೊಂಡು ಟ್ಯಾಕ್ಸಿ ಸ್ಟಾಂಡ್ ಕಡೆ ಹೆಜ್ಜೆ ಹಾಕಿದ. ಅಲ್ಲಿ ಆ ಇಬ್ಬರು ಪಿಟ್ಟೂಗಳಿಗೂ ಅವರ ನಿಗದಿತ ಕೂಲಿಯನ್ನು ಪಾವತಿ ಮಾಡಿದ್ದಲ್ಲದೆ ಅವರ ಐಡಿ ಕಾರ್ಡುಗಳನ್ನು ಹಿಂತಿರುಗಿಸಿದೆವು.  

         ಟ್ಯಾಕ್ಸಿಗಳು ಬಂದು ನಿಲ್ಲುವ ಜಾಗ ತಲುಪಲು ಸಾಕಷ್ಟು ಉದ್ದದ ಸರತಿ ಸಾಲು ಇತ್ತು. ಸಾಲಿನಲ್ಲಿ ನಿಂತು, ತಕ್ಷಣಕ್ಕೆ ಸಿಕ್ಕಿದ ಟ್ಯಾಕ್ಸಿಯನ್ನು ಹಿಡಿದುಕೊಂಡು, ನಿಗದಿತ ದರವನ್ನು ಪಾವತಿಸಿ (ತಲಾ ರೂ. 50/-), ಸೋನ್ ಪ್ರಯಾಗದಲ್ಲಿ ಇಳಿಯುತ್ತಿದ್ದಂತೆ ಮಳೆ ಜಿನುಗಲು ಆರಂಭಿಸಿತು. ನಮ್ಮ ಪುಣ್ಯಕ್ಕೆ ತಕ್ಷಣ ನಿಂತಿತು ಕೂಡ. ಅಲ್ಲಿಂದ ಸೀತಾಪುರದವರೆಗಿನ ಸುಮಾರು 2 km ದೂರದ ಮಾರ್ಗ ಚೆನ್ನಾಗಿದ್ದರೂ ಸಹ ದಟ್ಟಣೆಯ ಕಾರಣದಿಂದ ಪೊಲೀಸರು ವಾಹನಗಳ ಸಂಚಾರವನ್ನು ನಿಷೇಧಿಸಿದ್ದರು. ಆದ್ದರಿಂದ ವೃದ್ಧರು, ಮಕ್ಕಳು, ಅಬಲರು, ಮಹಿಳೆಯರೆನ್ನದೆ  ಎಲ್ಲರೂ ನಡೆದುಕೊಂಡೇ ಈ ಎರಡು ಕಿಲೋಮೀಟರ್ ಕ್ರಮಿಸಿ ಸೀತಾಪುರ ತಲುಪಬೇಕಾಗಿತ್ತು . ನಮ್ಮ ಜೊತೆ ಇದ್ದ ಸಹಯಾತ್ರಿ ಮಹಿಳೆಯನ್ನೂ ಸಹ ನಿಧಾನವಾಗಿ ನಡೆಸಿಕೊಂಡು, ಅಂತೂ ಇಂತೂ ಒಂದು ಗಂಟೆ ಕಾಲ ನಡೆದು, ಸೀತಾಪುರ ತಲುಪಿ, ಪಟ್ಟಣದ ಪ್ರವೇಶ ದ್ವಾರದಲ್ಲಿಯೇ ನಮಗಾಗಿ ಕಾಯುತ್ತಿದ್ದ ಶ್ರೀ ನಿತಿನ್ ಪ್ರಭುರವರನ್ನು ಕೂಡಿಕೊಂಡೆವು. ಇನ್ನು ಕ್ಯಾಂಪ್ ತಲುಪುವ ತನಕ ನಮ್ಮ ಜವಾಬ್ದಾರಿ ಮುಗಿದಂತಾಯಿತು.  ಸಮಾಧಾನದ ದೀರ್ಘ ನಿಟ್ಟುಸಿರಿನೊಂದಿಗೆ ಅವರು ಸೂಚಿಸಿದ ಹೋಟೆಲಿಗೆ ಹೋಗಿ ಕುಳಿತೆವು. ಅದಾಗಲೇ 4:00 pm ಆಗಿದ್ದರೂ ಸಹ, ತುಂಬಾ ಹಸಿವು ಹಾಗೂ ದಣಿವುಗಳಿಂದ ಕಂಗೆಟ್ಟಿದ್ದ ಕಾರಣ ಮರುಮಾತಾಡದೆ ಊಟವನ್ನೇ ಮಾಡಿದೆವು. ಹಸಿವೆಗೆ ಊಟ ರುಚಿರುಚಿಯಾಗಿಯೇ ಇದ್ದಿತ್ತು. ಊಟ ಮುಗಿಸುತ್ತಿದ್ದಂತೆ ಸ್ವಲ್ಪ ಚಿಗುರಿಕೊಂಡೆವು. ನಮ್ಮ ಕರ್ನಾಟಕದವರೇ ಆದ ಶ್ರೀಯುತ ಚಿಕ್ಕಮಠ ದಂಪತಿ ಹಾಗೂ ಶ್ರೀ ನಾಗರಾಜ್ ದಂಪತಿ ಇನ್ನೂ ಬಂದು ಸೇರುವವರಿದ್ದರು.  ಇಲ್ಲಿ ಒಂದು ತಾಸು ಕಾಯುವಷ್ಟರಲ್ಲಿ ಅವರೂ ಸಹ ಬಂದು ಸೇರಿದರು. ಅವರೆಲ್ಲ ಊಟ ಮುಗಿಸಿ, ನಾವೆಲ್ಲ ಅಲ್ಲಿಂದ ಹೊರಡುವಾಗ ಸಂಜೆ ಸುಮಾರು 6-30 ಆಗಿತ್ತು. ಆದರೆ ತೀವ್ರತರವಾದ ಟ್ರಾಫಿಕ್ ಜಾಮ್ ಇತ್ತು. ಎಲ್ಲವನ್ನೂ ನಿಭಾಯಿಸಿಕೊಂಡು, ಕೇವಲ 40 ಕಿ.ಮೀ ದೂರದ ಗುಪ್ತಕಾಶಿಯ 'ಕ್ಯಾಂಪ್ ನಿರ್ವಾಣ' ಸೇರಿದಾಗ ರಾತ್ರಿ 11:15 ಆಗಿತ್ತು. ವೆಂಕಟೇಶ ಪ್ರಭು ಅವರು ನಮಗಾಗಿ ಊಟವನ್ನು ಸಿದ್ಧಪಡಿಸಿ ಇಟ್ಟುಕೊಂಡು ಕಾಯುತ್ತಿದ್ದರು. ಅವರಿಗೂ ಸಹ ಎಲ್ಲ ಯಾತ್ರಿಗಳು ಮರಳಿ ಕ್ಯಾಂಪ್ ಸೇರಿದ್ದರಿಂದ ತುಂಬಾ ನಿರಾಳವಾಗಿತ್ತು.(ನಾವೇ ಕಡೆಯವರು). ಊಟ ಮುಗಿಸಿ ರೂಮ್ ಸೇರಿದೆವು. ನಾಳೆ ಬೆಳಗ್ಗೆ 2:00 ಗಂಟೆಗೆಲ್ಲ ಲಗೇಜ್ ಹೊರಗೆ ಇಡಬೇಕೆಂದು ಸೂಚಿಸಿದ್ದರಿಂದ ನಾವು ಒಂದು ಗಂಟೆಗೆಲ್ಲ ಎದ್ದು ತಯಾರಾಗಬೇಕಾಗಿತ್ತು. ಆಗಲೇ ರಾತ್ರಿ 12-00 ಗಂಟೆ ಆಗಿತ್ತು. ಆದರೂ ಸಹ ತುಂಬ ದಣಿವಾದ ಕಾರಣ ತಕ್ಷಣ ನಿದ್ರೆ ಬಂತು.

    ಕೇದಾರನಾಥ ಚಾರಣದ ಹಾದಿ(ಮೇಲೆ)  ಮತ್ತು ಹಾದಿಯಲ್ಲಿನ ದಟ್ಟಣೆ (ಕೆಳಗೆ )

    ಗೌರಿಕುಂಡದ ಹೆಬ್ಬಾಗಿಲು 

                                                                                                                   ‌‌(ಸಶೇಷ.....)