ಚಾರ್ ಧಾಮ ಯಾತ್ರೆ -ಭಾಗ 4
ಕೈಗೂಡದ ಯಮುನೋತ್ರಿ ಯಾತ್ರೆದಿನಾಂಕ 12/05/2024
ಬೆಳಗಿನ ಜಾವದ ಎರಡು ಗಂಟೆಗೆಲ್ಲ ಎದ್ದು ಸ್ನಾನಾದಿಗಳನ್ನು ಮುಗಿಸಿ ಯಮುನೋತ್ರಿಯ ಕಡೆಗೆ ಹೊರಡಲು ಸನ್ನದ್ಧರಾಗಿ ಬಂದ ನಮಗೆ ಹೊರಗಿನ ಚಳಿ 'ನಾನೂ ಇದ್ದೇನೆ' ಎನ್ನುತ್ತಾ ಸ್ವಾಗತವನ್ನು ಕೋರಿತು. ನಮಗೆಲ್ಲ ಮೊದಲೇ ತಿಳಿಸಿದಂತೆ ನಾವು ಬೆಚ್ಚಗಿನ ಥರ್ಮಲ್ ಗಳನ್ನು ಹಾಕಿ ಅದರ ಮೇಲೆ ನಮ್ಮ ಮಾಮೂಲಿ ಡ್ರೆಸ್ ಮಾಡಿಕೊಂಡಿದ್ದೆವು. ಅದರ ಹೊರತಾಗಿ ಮೇಲಿನಿಂದ ಬಲವಾದ ಸ್ವೆಟರ್ ಹಾಗೂ ಟೋಪಿಗಳನ್ನು ಸಹ ಧರಿಸಿದ್ದೆವು. ಬಸ್ ಏರುವ ಮೊದಲು ಬಿಸಿ ಬಿಸಿ ಚಹಾ-ಬಿಸ್ಕತ್ ಸೇವಿಸಿ ನಮ್ಮ ನಮ್ಮ ಬಸ್ಸುಗಳನ್ನು ಏರಿದೆವು. ಆಗ ಬೆಳಗಿನ ಜಾವ 3:00 ಗಂಟೆಯ ಸಮಯ. ದಿನದಂತೆ ನರಸಿಂಹ ಭಜನೆಯನ್ನು ಮಾಡಿದೆವು. ನಾನು ಈ ದಿನವೂ ಸಹ ಮಂಕುತಿಮ್ಮನ ಕಗ್ಗದ ಎರಡು ಮುಕ್ತಕಗಳನ್ನು ಹೇಳಿ ವ್ಯಾಖ್ಯಾನ ಮಾಡಿದೆನು.
ನಮ್ಮ ಚಿಕ್ಕ ಪುಟ್ಟ ಚರ್ಚೆ, ವಿಚರ್ಚೆಗಳು ಮುಗಿದು ಇನ್ನೇನು ಎಲ್ಲರೂ ಶಾಂತರಾಗಿ ನಿದ್ರೆಗೆ ಜಾರುವ ಸಮಯ. ಅದೇಕೋ ನಮ್ಮ ಬಸ್ ನಿಂತುಬಿಟ್ಟಿತು. ನಮ್ಮ ಕ್ಯಾಂಪ್ ನಿಂದ ಕೇವಲ 3 ಕಿ.ಮೀ ದೂರ ಮಾತ್ರ ಬಂದಿದ್ದೆವು. ಅದು ದ್ವಿಪಥ ಹೆದ್ದಾರಿ. ಎಡಗಡೆಯ ಸಾಲಿನಲ್ಲಿ ನಾವು ಅಚ್ಚುಕಟ್ಟಾಗಿ ನಮ್ಮ ಮುಂದಿರುವ ವಾಹನದ ಬೆನ್ನು ಹಿಡಿದು ನಿಂತಿದ್ದೆವು. ನಮ್ಮ ಟೂರ್ ಗೈಡ್ ಕೆಳಗೆ ಇಳಿದು ಹೋಗಿ ವಿಚಾರಿಸಿಕೊಂಡು ಬಂದರು. ಇಲ್ಲಿಂದ ಯಮುನೋತ್ರಿಯವರೆಗೆ - ಸುಮಾರು 40 ಕಿಲೋಮೀಟರ್ - ಉದ್ದಕ್ಕೂ ಇದೇ ರೀತಿ ಟ್ರಾಫಿಕ್ ಜಾಮ್ ಆಗಿದೆ ಎಂಬ ವರದಿ ತಂದರು. ನಮ್ಮೆಲ್ಲರ ಉತ್ಸಾಹ ಜರ್ರನೆ ಇಳಿದು ಹೋಯಿತು. ನಿದ್ದೆ ಹಾರಿಹೋಯಿತು. ಎದುರುಗಡೆಯಿಂದ ಕೆಳಗೆ ಬರುವ ವಾಹನಗಳ ಲೇನ್ ಖಾಲಿ ಇತ್ತು. ಅಷ್ಟಷ್ಟು ಹೊತ್ತಿಗೆ ಒಂದು 40 - 50 ವಾಹನಗಳ ಸಾಲು ಕೆಳಗೆ ಸರಿದು ಹೋಗುತ್ತಿತ್ತು. ನಾವು ಮೇಲೆ ಹೋಗುವ ಲೇನ್ ಸಂಪೂರ್ಣ ಜಾಮ್ ಆಗಿದೆ ಎಂಬುದು ನಿಚ್ಚಳವಾಗಿತ್ತು. ನಮ್ಮ ಟೂರ್ ಗೈಡ್ ನಮಗಿಂತ ಮೊದಲು ಹೋದ ಇನ್ನೊಂದು ಟ್ರಾವೆಲ್ಸ್ ನವರ ಮಾರ್ಗದರ್ಶಿಯ ಜೊತೆ ಮಾತನಾಡಿದರು. ಅವರ ಎರಡು ಬಸ್ಸುಗಳು ಸುಮಾರು 30 ತಾಸಿನಿಂದ ನಿಂತ ಜಾಗದಲ್ಲೇ ನಿಂತಿರುವುದಾಗಿ ತಿಳಿಸಿದರು. ಅವರು ನಿಂತ ಸ್ಥಳದಲ್ಲಿ ಯಾವುದೇ ರೀತಿಯ ಮೂಲಸೌಕರ್ಯಗಳಿರಲಿಲ್ಲ. ಬಸ್ಸಿನಲ್ಲಿದ್ದ ಎಲ್ಲಾ ಯಾತ್ರಿಗಳು - ಹೆಣ್ಣುಮಕ್ಕಳು ಸಹಿತ - ತುಂಬಾ ತೊಂದರೆಯನ್ನು ಅನುಭವಿಸುತ್ತಾ ಇರುವುದಾಗಿ ತಿಳಿಸಿದರು. ಪರಿಸ್ಥಿತಿ ಸುಧಾರಿಸಬಹುದು ಎಂದು ನಾವೆಲ್ಲ ಬೆಳಗಿನ 6:30ರ ತನಕ ಕಾದೆವು. ನಂತರ ನಾವೆಲ್ಲ ಸೇರಿ "ಇನ್ನು 10 - 20 ತಾಸು ರಸ್ತೆಯಲ್ಲಿ ಕಾಯುವುದರಲ್ಲಿ ಅರ್ಥವಿಲ್ಲ , ವಾಪಸ್ ನಮ್ಮ ಕ್ಯಾಂಪ್ ಗೆ ತಿರುಗಿ ಹೋದರಾಯಿತು" ಎಂದು ನಿರ್ಣಯಿಸಿದೆವು. ಅದೃಷ್ಟವಶಾತ್ ಬಲಗಡೆಯ ಲೇನ್ ಖಾಲಿ ಇದ್ದುದರಿಂದ ವಾಹನವನ್ನು ಯೂ ಟರ್ನ್ ತೆಗೆದುಕೊಳ್ಳುವುದು ಕಷ್ಟವಾಗಲಿಲ್ಲ. ಅಲ್ಲಿಂದ ಕೇವಲ ಮೂರು ಕಿಲೋಮೀಟರ್ ಕೆಳಗಡೆ ಇದ್ದ 'ಕ್ಯಾಂಪ್ ನಿರ್ವಾಣ' ಸೇರಿಕೊಂಡೆವು.
ಮೊದಲನೆಯದಾದ ಈ 'ಯಮುನೋತ್ರಿ ಯಾತ್ರೆ'ಯೇ ಅಯಶಸ್ವಿಯಾದದ್ದಕ್ಕೆ ನಿರಾಶೆಯಾಯಿತು. ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ನಡುವೆ ಸಾಕಷ್ಟು ನಿದ್ರೆ, ಯಮುನಾ ನದಿಯ ನೀರಿನಲ್ಲಿ ಆಟ ಇಷ್ಟೇ ಆಯಿತು, ಮುಂಜಾನೆಯೆಲ್ಲಾ.
ಮಧ್ಯಾಹ್ನದ ನಂತರ 'ಕ್ಯಾಂಪ್ ನಿರ್ವಾಣ'ದಿಂದ ಒಂದೆರಡು ಮೈಲಿ ದೂರದಲ್ಲಿದ್ದ 'ನಂದಗಾಂವ್' ಎನ್ನುವ ಹಳ್ಳಿಯನ್ನು ಹಾಗೂ ಅದರೊಳಗಿರುವ ನಂದೇಶ್ವರ ದೇವಾಲಯವನ್ನು ದರ್ಶಿಸೋಣ ಎಂದು ವೆಂಕಟೇಶ್ ಜಿ ಅವರು ನಿರ್ಧರಿಸಿದರು. ನಿರಾಶರಾಗಿ ಕುಳಿತಿದ್ದ ಯಾತ್ರಿಗಳೆಲ್ಲ ಸ್ವಲ್ಪ ಚಿಗುರಿಕೊಂಡರು. ಹೋಟೆಲ್ ನಿಂದ ಬಾರಕೋಟ್ ಕಡೆ ಸಾಗುವ ಮಾರ್ಗದಲ್ಲಿ, ಯಮುನಾ ಸೇತುವೆಗೂ ಮೊದಲು, ಎಡಗಡೆ ಇರುವ ಕಡಿದಾದ ದಾರಿಯಲ್ಲಿ ಸುಮಾರು ಎರಡು ಕಿಲೋಮೀಟರ್ ದೂರ ಸಾಗಿದ ನಂತರ ಹಳ್ಳಿಯೊಂದು ಸಿಕ್ಕಿತು. ಇದೇ ನಂದಗಾಂವ್. ಹಿಮಾಲಯದ ತಪ್ಪಲಿನಲ್ಲಿ ಅತ್ಯಂತ ಶಾಂತವಾಗಿ ಪವಡಿಸಿದ ಈ ಹಳ್ಳಿ, ಕಲಾವಿದನೊಬ್ಬ ಅದೇ ತಾನೇ ತನ್ನ ಕುಂಚದಿಂದ ಕ್ಯಾನ್ವಾಸಿನ ಮೇಲೆ ಮೂಡಿಸಿದ ಚಿತ್ರದಂತಿತ್ತು. ವರ್ಷದ ಆರು ತಿಂಗಳು ಸುರಿಯುವ ಹಿಮದಿಂದ ಹಾಗೂ ಉಳಿದ ದಿನಗಳಲ್ಲಿರುವ ಚಳಿಯಿಂದ ರಕ್ಷಿಸಿಕೊಳ್ಳಲು ಇಲ್ಲಿ ಮರದ ಮನೆಗಳನ್ನು ನಿರ್ಮಿಸಿದ್ದಾರೆ. ಮನೆಗಳ ಮುಂಭಾಗದಲ್ಲಿ ಅಥವಾ ಪಕ್ಕದಲ್ಲಿ ಸಮತಟ್ಟುಗೊಳಿಸಿಕೊಂಡ ಸ್ವಲ್ಪ ಜಾಗದಲ್ಲಿ ಆಲೂಗಡ್ಡೆಯನ್ನು ಬೆಳೆಯುತ್ತಿದ್ದರು. ಕಲ್ಲಿನ ಪಾಗಾರಗಳ ಅಂಚಿನಲ್ಲಿ ಆಕ್ರುಟ್ ಹಾಗೂ ಅಂಜೂರದ ಮರಗಳು ಸಹಜವಾಗಿ ಬೆಳೆದು ನಿಂತಿದ್ದವು. ಇರುವ ಅಲ್ಪಸ್ವಲ್ಪ ಜಾಗದಲ್ಲಿ ಬೆಳೆದ ಗೋಧಿಯ ಹುಲ್ಲನ್ನು ಮೆದೆಗಳಲ್ಲಿ ಕಟ್ಟಿ ಈ ಮರಗಳ ರಂಬೆಯ ಮೇಲೆ ಇಟ್ಟಿದ್ದರು. ಈ ಹುಲ್ಲಿಗಾಗಿ ಪ್ರತ್ಯೇಕ ಬಣಿವೆ ಹಾಕುವಷ್ಟು ಹುಲ್ಲಿನ ಪ್ರಮಾಣ ಇರಲಿಲ್ಲ. ಕಾಳುಕಡಿ ಹಾಗೂ ಆಹಾರ ಸಾಮಗ್ರಿಗಳನ್ನು ರಕ್ಷಿಸಿಕೊಳ್ಳಲು ಮರದ ಪಣತ(Silos)ಗಳನ್ನು ನಿರ್ಮಿಸಿಕೊಂಡಿದ್ದರು. ಈ ಪಣತಗಳ ಮೇಲು ಭಾಗದಲ್ಲಿಯೇ ಮನೆಯೂ ಇತ್ತು. ಒಟ್ಟಿನಲ್ಲಿ ಪರ್ವತದ ಓರೆಯಲ್ಲಿ ಹರಡಿ ನಿಂತಿದ್ದ ಈ ಹಳ್ಳಿಯ ಸೌಂದರ್ಯ ವರ್ಣನಾತೀತ. ಒಮ್ಮೆಲೆ ನಾವು ಇಷ್ಟೆಲ್ಲ ಜನ ಪ್ರವಾಸಿಗಳು ಬಂದರೂ ಸಹ ಈ ಹಳ್ಳಿಗರು ಅತೀವ ಕುತೂಹಲದಿಂದ ನಮ್ಮನ್ನು ನೋಡುತ್ತಿರಲಿಲ್ಲ. ಬಹುಶಃ ಈ ಹಳ್ಳಿಗೆ ನಮ್ಮಂತೆ ಪ್ರವಾಸಿಗರು ಮೇಲಿಂದ ಮೇಲೆ ಬರುತ್ತಿರಬಹುದು. ಇಲ್ಲಿಯ ಎರಡು ಮೂರು ನಾಯಿಗಳು ನಮ್ಮನ್ನು ಅನುಸರಿಸಿಕೊಂಡು ಬಂದು ಅದಾಗಲೇ ನಮ್ಮ ಗೆಳೆಯರಾಗಿ ಬಿಟ್ಟವು. ಇಲ್ಲಿಯ ನಾಯಿಗಳು, ಕುರಿಗಳು, ಮೇಕೆಗಳ ಮೈಮೇಲೆಲ್ಲಾ ದಟ್ಟವಾದ, ಉದ್ದವಾದ ಕೂದಲು ತುಂಬಿತ್ತು. ಬಹುಶಃ ಚಳಿಯಿಂದ ರಕ್ಷಿಸಿಕೊಳ್ಳಲು ಕೂದಲು ಈ ರೀತಿ ಸಹಜವಾಗಿಯೇ ಬೆಳೆಯುತ್ತಿದ್ದಿರಬಹುದು. ಊರ ನಡುವಿನ ಕಿರು ಹಾದಿಯಲ್ಲಿ ಸಾಗಿ, ಎತ್ತರದ ಸ್ಥಳದಲ್ಲಿದ್ದ ನಂದೇಶ್ವರ ದೇವಾಲಯವನ್ನು ತಲುಪಿದೆವು. ಚಿಕ್ಕದಾದರೂ ಸಾಕಷ್ಟು ವಿಶಾಲವಾದ ಪ್ರಾಂಗಣವನ್ನು ಹೊಂದಿದ ಅಚ್ಚುಕಟ್ಟಾದ ದೇವಸ್ಥಾನವಿದು. ನಂದೇಶ್ವರ ಶಿವ ಇಲ್ಲಿಯ ಆರಾಧ್ಯ ದೈವ. ಊರಿನ ಪ್ರಮುಖರು ಬಂದು ದೇವಾಲಯದ ಬಾಗಿಲನ್ನು ನಮಗಾಗಿ ತೆರೆದರು. ನಮ್ಮ ಯಾತ್ರಾ ಟೀಮ್ ನಲ್ಲಿದ್ದ ಮಹಿಳೆಯರು ಲಿಂಗಾಷ್ಟಕವನ್ನು ಹಾಡಿ ಸ್ತುತಿಸಿದರು. ಕೆಲವರು ಇಲ್ಲಿಯ ಸ್ಥಳೀಯ ಜನರ ಜೊತೆ ಮಾತಿಗೆ ತೊಡಗಿದರು. ನಾವು ಬೆಂಗಳೂರಿನಿಂದ ಬಂದಿದ್ದೇವೆ ಎಂದು ತಿಳಿದು, ತಮ್ಮ ಮನೆಯ ಯಾರೋ ಒಬ್ಬರು ಬೆಂಗಳೂರಿನಲ್ಲಿ ಇದ್ದಾರೆ ಎಂದು ಹೇಳಿ ಸಂತೋಷಪಟ್ಟರು. ಉದ್ದ ಕೂದಲು, ಗಡ್ಡಧಾರಿಯಾದ ಬಾವಾಜಿಯೊಬ್ಬರು ಇದ್ದರು. ನಾವು ಏನು ಕೊಟ್ಟರೂ ತೆಗೆದುಕೊಳ್ಳದೆ ಮಂದಿರಕ್ಕೆ ನೀಡಲು ಹೇಳಿದರು. ಇಲ್ಲಿಯ ಮಹಿಳೆಯರು ಮತ್ತು ಮಕ್ಕಳು ಕೂಡ ನಮ್ಮಿಂದ ಏನನ್ನೂ ಸ್ವೀಕರಿಸಲು ಇಚ್ಛಿಸಲಿಲ್ಲ. ಇದ್ದುದಕ್ಕೆ ಸಂತೋಷ ಪಡುತ್ತಾ, ಶಿವನನ್ನು ಧ್ಯಾನಿಸುತ್ತಾ, ಸಂತೃಪ್ತ ಜೀವನ ನಡೆಸುವ ಇವರ ಜೀವನ ನಿಜವಾಗಿಯೂ ಅನುಕರಣೀಯ.
ಈ ಊರಿನಲ್ಲಿ ಸ್ಥಳದ ಅಭಾವ ಎಷ್ಟಿದೆ ಎಂದರೆ ನಮ್ಮ ಮಿನಿ ಬಸ್ಸನ್ನು ತಿರುಗಿಸಿಕೊಳ್ಳಲೂ ಸಹ ಸ್ಥಳ ಇರಲಿಲ್ಲ. ನಮ್ಮನ್ನೆಲ್ಲ ಬಸ್ಸಿನಲ್ಲಿ ಕುಳ್ಳಿರಿಸಿಕೊಂಡು ನಮ್ಮ ಎರಡೂ ಜನ ಡ್ರೈವರ್ ಗಳು ರಿವರ್ಸ್ ನಲ್ಲಿಯೇ ಆ ಕಡಿದಾದ ಮಾರ್ಗದಲ್ಲಿ ಸುಮಾರು ಒಂದು ಕಿಲೋಮೀಟರ್ ಸಾಗಿದರು. ಹಾಗೆ ಸಾಗುವಾಗ ಬಂದ ಕಾರುಗಳಿಗೆ ಅಚ್ಚುಕಟ್ಟಾಗಿ ಸೈಡ್ ಕೊಟ್ಟರು. ಅವರ ಚಾಲನಾ ನೈಪುಣ್ಯವನ್ನು ನೋಡಿ ಎಲ್ಲರೂ ಬೆರಗಾದೆವು. ನಂತರ ಒಂದು ಕಟ್ಟಡದ ಪ್ರವೇಶ ದ್ವಾರದಲ್ಲಿ ಬಸ್ಸನ್ನು ತಿರುಗಿಸಿಕೊಂಡು, ಪುನ ಹೈವೇ ತಲುಪಿ, ಅಲ್ಲಿಯೇ ಎದುರುಗಡೆ ಇದ್ದ "ಗಂಗಾ ನಾನಿ" ಎಂಬ ಕುಂಡವೊಂದನ್ನು ದರ್ಶಿಸಿದೆವು. ಇಲ್ಲಿ ಒಂದು ಪುಟ್ಟ ಕೊಳವಿದ್ದು ನೀರಿನ ಬುಗ್ಗೆ ಇದೆ. ಆ ಬುಗ್ಗೆಯ ಜಲ ಉತ್ತರಕಾಶಿಯಿಂದ ಬರುತ್ತದೆ ಎಂದು ಹೇಳುತ್ತಾರೆ. ಈ ಕುಂಡದ ಅಂಚಿನಲ್ಲಿ ಒಂದು ಪುಟ್ಟ ಮಂದಿರವಿದ್ದು ಅದರಲ್ಲಿ ಗಂಗೆ ಮತ್ತು ಯಮುನೆಯರನ್ನು ಪೂಜಿಸುತ್ತಾರೆ. ಶ್ವೇತವರ್ಣದ ಮೂರ್ತಿ ಗಂಗೆಯಾದರೆ, ಕೃಷ್ಣವರ್ಣದ ಮೂರ್ತಿ ಯಮುನೆಯದು. ಇದು ಯಮುನಾ ನದಿಯ ತಟದಲ್ಲಿಯೇ ಇದೆ.
ಇದನ್ನೆಲ್ಲ ಮುಗಿಸಿ ವಾಪಸ್ ವಸತಿಯ ಕಡೆಗೆ ಬಂದಾಗ ಸಂಜೆ 5:30 ಆಗಿತ್ತು. ಚಹಾ ಸೇವಿಸಿ ಎಲ್ಲರೂ ಎದುರುಗಡೆ ಹರಿಯುತ್ತಿರುವ ಯಮುನೆಯ ಕಡೆ ಸಾಗಿದೆವು. ಯಮನೋತ್ರಿಯ ದರ್ಶನ ತಪ್ಪಿದುದನ್ನು ಸರಿಪಡಿಸಲೋ ಎಂಬಂತೆ ಎಲ್ಲಾ ಸೇರಿ ಯಮುನಾರತಿಯನ್ನು ಮಾಡಿದೆವು. ಯಾತ್ರಿಗಳ ಪೈಕಿ ಒಬ್ಬರಾದ ಡಾಕ್ಟರ್ ಮನೋರಮ ಅವರು ಯಮುನೆಯನ್ನು ಕುರಿತು ತಾವೇ ರಚಿಸಿದ ಕವನ ಒಂದನ್ನು ಸುಶ್ರಾವ್ಯವಾಗಿ ಹಾಡಿ, ಈ ಸಂಜೆಯ ನೆನಪನ್ನು ಸ್ಮರಣೀಯವಾಗಿಸಿದರು. ಬೇಗನೆ ಊಟಕ್ಕೆ ಸೇರಿದೆವು. ಅಲ್ಲಿಯೇ ನಮ್ಮ ಮೋಹನ್ ಅವರ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿ ಎಲ್ಲರೂ ಅವರಿಗೆ ಶುಭ ಕೋರಿದೆವು. ಮುಂಜಾನೆ ಮತ್ತೆ ಬೇಗನೆ ಏಳಬೇಕಾಗಿರುವುದರಿಂದ ಬೇಗನೆ ಮಲಗಿದೆವು.
ಡಾ|| ಮನೋರಮಾ ಅವರು ರಚಿಸಿದ ಕವನ ನಿಮ್ಮ ಅವಗಾಹನೆಗಾಗಿ ಇದೋ ಇಲ್ಲಿದೆ.
ನಿನ್ನ ಜುಳು ಜುಳು ನಾದ ಮೊರೆತಕೆ ನನ್ನ ಕಿವಿಗಳು ತುಂಬಲಿ
ನಿನ್ನ ಬೆಲ್ನೊರೆ ಕೊಡುವ ಮುತ್ತನು ನೋಡಿ ಕಂಗಳು ಸವಿಯಲಿ
ನಿನ್ನ ಶೀತಲ ತಂಪು ಕಂಪಿಸೆ ದೇಹ ಧಮನಿಯು ನುಡಿಯಲಿ
ನೀನು ನೆಲೆಸುವ ನನ್ನ ನಾಲಿಗೆ ನಿನ್ನ ದನಿಯನು ಹಾಡಲಿ
ಉಸಿರು ನಿನ್ನದು ಹಸಿರು ನಿನ್ನದು ನೀನೇ ಆಗು ಬಾ ನನ್ನೊಳು
ಉಸಿರು ದನಿಯಲಿ ಕಣ್ಣು ಕಿವಿಯಲಿ ದೇಹ ಉಲಿಯಲಿ ನಿನ್ನೊಳು
On River yamuna
Written on Sunday 12, May 2024. On the banks of Yamuna...praying her with all our 5 senses
Dr Manorama B N
ಬೆಳಗಿನ ಜಾವದ ಎರಡು ಗಂಟೆಗೆಲ್ಲ ಎದ್ದು ಸ್ನಾನಾದಿಗಳನ್ನು ಮುಗಿಸಿ ಯಮುನೋತ್ರಿಯ ಕಡೆಗೆ ಹೊರಡಲು ಸನ್ನದ್ಧರಾಗಿ ಬಂದ ನಮಗೆ ಹೊರಗಿನ ಚಳಿ 'ನಾನೂ ಇದ್ದೇನೆ' ಎನ್ನುತ್ತಾ ಸ್ವಾಗತವನ್ನು ಕೋರಿತು. ನಮಗೆಲ್ಲ ಮೊದಲೇ ತಿಳಿಸಿದಂತೆ ನಾವು ಬೆಚ್ಚಗಿನ ಥರ್ಮಲ್ ಗಳನ್ನು ಹಾಕಿ ಅದರ ಮೇಲೆ ನಮ್ಮ ಮಾಮೂಲಿ ಡ್ರೆಸ್ ಮಾಡಿಕೊಂಡಿದ್ದೆವು. ಅದರ ಹೊರತಾಗಿ ಮೇಲಿನಿಂದ ಬಲವಾದ ಸ್ವೆಟರ್ ಹಾಗೂ ಟೋಪಿಗಳನ್ನು ಸಹ ಧರಿಸಿದ್ದೆವು. ಬಸ್ ಏರುವ ಮೊದಲು ಬಿಸಿ ಬಿಸಿ ಚಹಾ-ಬಿಸ್ಕತ್ ಸೇವಿಸಿ ನಮ್ಮ ನಮ್ಮ ಬಸ್ಸುಗಳನ್ನು ಏರಿದೆವು. ಆಗ ಬೆಳಗಿನ ಜಾವ 3:00 ಗಂಟೆಯ ಸಮಯ. ದಿನದಂತೆ ನರಸಿಂಹ ಭಜನೆಯನ್ನು ಮಾಡಿದೆವು. ನಾನು ಈ ದಿನವೂ ಸಹ ಮಂಕುತಿಮ್ಮನ ಕಗ್ಗದ ಎರಡು ಮುಕ್ತಕಗಳನ್ನು ಹೇಳಿ ವ್ಯಾಖ್ಯಾನ ಮಾಡಿದೆನು.
ನಮ್ಮ ಚಿಕ್ಕ ಪುಟ್ಟ ಚರ್ಚೆ, ವಿಚರ್ಚೆಗಳು ಮುಗಿದು ಇನ್ನೇನು ಎಲ್ಲರೂ ಶಾಂತರಾಗಿ ನಿದ್ರೆಗೆ ಜಾರುವ ಸಮಯ. ಅದೇಕೋ ನಮ್ಮ ಬಸ್ ನಿಂತುಬಿಟ್ಟಿತು. ನಮ್ಮ ಕ್ಯಾಂಪ್ ನಿಂದ ಕೇವಲ 3 ಕಿ.ಮೀ ದೂರ ಮಾತ್ರ ಬಂದಿದ್ದೆವು. ಅದು ದ್ವಿಪಥ ಹೆದ್ದಾರಿ. ಎಡಗಡೆಯ ಸಾಲಿನಲ್ಲಿ ನಾವು ಅಚ್ಚುಕಟ್ಟಾಗಿ ನಮ್ಮ ಮುಂದಿರುವ ವಾಹನದ ಬೆನ್ನು ಹಿಡಿದು ನಿಂತಿದ್ದೆವು. ನಮ್ಮ ಟೂರ್ ಗೈಡ್ ಕೆಳಗೆ ಇಳಿದು ಹೋಗಿ ವಿಚಾರಿಸಿಕೊಂಡು ಬಂದರು. ಇಲ್ಲಿಂದ ಯಮುನೋತ್ರಿಯವರೆಗೆ - ಸುಮಾರು 40 ಕಿಲೋಮೀಟರ್ - ಉದ್ದಕ್ಕೂ ಇದೇ ರೀತಿ ಟ್ರಾಫಿಕ್ ಜಾಮ್ ಆಗಿದೆ ಎಂಬ ವರದಿ ತಂದರು. ನಮ್ಮೆಲ್ಲರ ಉತ್ಸಾಹ ಜರ್ರನೆ ಇಳಿದು ಹೋಯಿತು. ನಿದ್ದೆ ಹಾರಿಹೋಯಿತು. ಎದುರುಗಡೆಯಿಂದ ಕೆಳಗೆ ಬರುವ ವಾಹನಗಳ ಲೇನ್ ಖಾಲಿ ಇತ್ತು. ಅಷ್ಟಷ್ಟು ಹೊತ್ತಿಗೆ ಒಂದು 40 - 50 ವಾಹನಗಳ ಸಾಲು ಕೆಳಗೆ ಸರಿದು ಹೋಗುತ್ತಿತ್ತು. ನಾವು ಮೇಲೆ ಹೋಗುವ ಲೇನ್ ಸಂಪೂರ್ಣ ಜಾಮ್ ಆಗಿದೆ ಎಂಬುದು ನಿಚ್ಚಳವಾಗಿತ್ತು. ನಮ್ಮ ಟೂರ್ ಗೈಡ್ ನಮಗಿಂತ ಮೊದಲು ಹೋದ ಇನ್ನೊಂದು ಟ್ರಾವೆಲ್ಸ್ ನವರ ಮಾರ್ಗದರ್ಶಿಯ ಜೊತೆ ಮಾತನಾಡಿದರು. ಅವರ ಎರಡು ಬಸ್ಸುಗಳು ಸುಮಾರು 30 ತಾಸಿನಿಂದ ನಿಂತ ಜಾಗದಲ್ಲೇ ನಿಂತಿರುವುದಾಗಿ ತಿಳಿಸಿದರು. ಅವರು ನಿಂತ ಸ್ಥಳದಲ್ಲಿ ಯಾವುದೇ ರೀತಿಯ ಮೂಲಸೌಕರ್ಯಗಳಿರಲಿಲ್ಲ. ಬಸ್ಸಿನಲ್ಲಿದ್ದ ಎಲ್ಲಾ ಯಾತ್ರಿಗಳು - ಹೆಣ್ಣುಮಕ್ಕಳು ಸಹಿತ - ತುಂಬಾ ತೊಂದರೆಯನ್ನು ಅನುಭವಿಸುತ್ತಾ ಇರುವುದಾಗಿ ತಿಳಿಸಿದರು. ಪರಿಸ್ಥಿತಿ ಸುಧಾರಿಸಬಹುದು ಎಂದು ನಾವೆಲ್ಲ ಬೆಳಗಿನ 6:30ರ ತನಕ ಕಾದೆವು. ನಂತರ ನಾವೆಲ್ಲ ಸೇರಿ "ಇನ್ನು 10 - 20 ತಾಸು ರಸ್ತೆಯಲ್ಲಿ ಕಾಯುವುದರಲ್ಲಿ ಅರ್ಥವಿಲ್ಲ , ವಾಪಸ್ ನಮ್ಮ ಕ್ಯಾಂಪ್ ಗೆ ತಿರುಗಿ ಹೋದರಾಯಿತು" ಎಂದು ನಿರ್ಣಯಿಸಿದೆವು. ಅದೃಷ್ಟವಶಾತ್ ಬಲಗಡೆಯ ಲೇನ್ ಖಾಲಿ ಇದ್ದುದರಿಂದ ವಾಹನವನ್ನು ಯೂ ಟರ್ನ್ ತೆಗೆದುಕೊಳ್ಳುವುದು ಕಷ್ಟವಾಗಲಿಲ್ಲ. ಅಲ್ಲಿಂದ ಕೇವಲ ಮೂರು ಕಿಲೋಮೀಟರ್ ಕೆಳಗಡೆ ಇದ್ದ 'ಕ್ಯಾಂಪ್ ನಿರ್ವಾಣ' ಸೇರಿಕೊಂಡೆವು.
ಮೊದಲನೆಯದಾದ ಈ 'ಯಮುನೋತ್ರಿ ಯಾತ್ರೆ'ಯೇ ಅಯಶಸ್ವಿಯಾದದ್ದಕ್ಕೆ ನಿರಾಶೆಯಾಯಿತು. ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ನಡುವೆ ಸಾಕಷ್ಟು ನಿದ್ರೆ, ಯಮುನಾ ನದಿಯ ನೀರಿನಲ್ಲಿ ಆಟ ಇಷ್ಟೇ ಆಯಿತು, ಮುಂಜಾನೆಯೆಲ್ಲಾ.
ಮಧ್ಯಾಹ್ನದ ನಂತರ 'ಕ್ಯಾಂಪ್ ನಿರ್ವಾಣ'ದಿಂದ ಒಂದೆರಡು ಮೈಲಿ ದೂರದಲ್ಲಿದ್ದ 'ನಂದಗಾಂವ್' ಎನ್ನುವ ಹಳ್ಳಿಯನ್ನು ಹಾಗೂ ಅದರೊಳಗಿರುವ ನಂದೇಶ್ವರ ದೇವಾಲಯವನ್ನು ದರ್ಶಿಸೋಣ ಎಂದು ವೆಂಕಟೇಶ್ ಜಿ ಅವರು ನಿರ್ಧರಿಸಿದರು. ನಿರಾಶರಾಗಿ ಕುಳಿತಿದ್ದ ಯಾತ್ರಿಗಳೆಲ್ಲ ಸ್ವಲ್ಪ ಚಿಗುರಿಕೊಂಡರು. ಹೋಟೆಲ್ ನಿಂದ ಬಾರಕೋಟ್ ಕಡೆ ಸಾಗುವ ಮಾರ್ಗದಲ್ಲಿ, ಯಮುನಾ ಸೇತುವೆಗೂ ಮೊದಲು, ಎಡಗಡೆ ಇರುವ ಕಡಿದಾದ ದಾರಿಯಲ್ಲಿ ಸುಮಾರು ಎರಡು ಕಿಲೋಮೀಟರ್ ದೂರ ಸಾಗಿದ ನಂತರ ಹಳ್ಳಿಯೊಂದು ಸಿಕ್ಕಿತು. ಇದೇ ನಂದಗಾಂವ್. ಹಿಮಾಲಯದ ತಪ್ಪಲಿನಲ್ಲಿ ಅತ್ಯಂತ ಶಾಂತವಾಗಿ ಪವಡಿಸಿದ ಈ ಹಳ್ಳಿ, ಕಲಾವಿದನೊಬ್ಬ ಅದೇ ತಾನೇ ತನ್ನ ಕುಂಚದಿಂದ ಕ್ಯಾನ್ವಾಸಿನ ಮೇಲೆ ಮೂಡಿಸಿದ ಚಿತ್ರದಂತಿತ್ತು. ವರ್ಷದ ಆರು ತಿಂಗಳು ಸುರಿಯುವ ಹಿಮದಿಂದ ಹಾಗೂ ಉಳಿದ ದಿನಗಳಲ್ಲಿರುವ ಚಳಿಯಿಂದ ರಕ್ಷಿಸಿಕೊಳ್ಳಲು ಇಲ್ಲಿ ಮರದ ಮನೆಗಳನ್ನು ನಿರ್ಮಿಸಿದ್ದಾರೆ. ಮನೆಗಳ ಮುಂಭಾಗದಲ್ಲಿ ಅಥವಾ ಪಕ್ಕದಲ್ಲಿ ಸಮತಟ್ಟುಗೊಳಿಸಿಕೊಂಡ ಸ್ವಲ್ಪ ಜಾಗದಲ್ಲಿ ಆಲೂಗಡ್ಡೆಯನ್ನು ಬೆಳೆಯುತ್ತಿದ್ದರು. ಕಲ್ಲಿನ ಪಾಗಾರಗಳ ಅಂಚಿನಲ್ಲಿ ಆಕ್ರುಟ್ ಹಾಗೂ ಅಂಜೂರದ ಮರಗಳು ಸಹಜವಾಗಿ ಬೆಳೆದು ನಿಂತಿದ್ದವು. ಇರುವ ಅಲ್ಪಸ್ವಲ್ಪ ಜಾಗದಲ್ಲಿ ಬೆಳೆದ ಗೋಧಿಯ ಹುಲ್ಲನ್ನು ಮೆದೆಗಳಲ್ಲಿ ಕಟ್ಟಿ ಈ ಮರಗಳ ರಂಬೆಯ ಮೇಲೆ ಇಟ್ಟಿದ್ದರು. ಈ ಹುಲ್ಲಿಗಾಗಿ ಪ್ರತ್ಯೇಕ ಬಣಿವೆ ಹಾಕುವಷ್ಟು ಹುಲ್ಲಿನ ಪ್ರಮಾಣ ಇರಲಿಲ್ಲ. ಕಾಳುಕಡಿ ಹಾಗೂ ಆಹಾರ ಸಾಮಗ್ರಿಗಳನ್ನು ರಕ್ಷಿಸಿಕೊಳ್ಳಲು ಮರದ ಪಣತ(Silos)ಗಳನ್ನು ನಿರ್ಮಿಸಿಕೊಂಡಿದ್ದರು. ಈ ಪಣತಗಳ ಮೇಲು ಭಾಗದಲ್ಲಿಯೇ ಮನೆಯೂ ಇತ್ತು. ಒಟ್ಟಿನಲ್ಲಿ ಪರ್ವತದ ಓರೆಯಲ್ಲಿ ಹರಡಿ ನಿಂತಿದ್ದ ಈ ಹಳ್ಳಿಯ ಸೌಂದರ್ಯ ವರ್ಣನಾತೀತ. ಒಮ್ಮೆಲೆ ನಾವು ಇಷ್ಟೆಲ್ಲ ಜನ ಪ್ರವಾಸಿಗಳು ಬಂದರೂ ಸಹ ಈ ಹಳ್ಳಿಗರು ಅತೀವ ಕುತೂಹಲದಿಂದ ನಮ್ಮನ್ನು ನೋಡುತ್ತಿರಲಿಲ್ಲ. ಬಹುಶಃ ಈ ಹಳ್ಳಿಗೆ ನಮ್ಮಂತೆ ಪ್ರವಾಸಿಗರು ಮೇಲಿಂದ ಮೇಲೆ ಬರುತ್ತಿರಬಹುದು. ಇಲ್ಲಿಯ ಎರಡು ಮೂರು ನಾಯಿಗಳು ನಮ್ಮನ್ನು ಅನುಸರಿಸಿಕೊಂಡು ಬಂದು ಅದಾಗಲೇ ನಮ್ಮ ಗೆಳೆಯರಾಗಿ ಬಿಟ್ಟವು. ಇಲ್ಲಿಯ ನಾಯಿಗಳು, ಕುರಿಗಳು, ಮೇಕೆಗಳ ಮೈಮೇಲೆಲ್ಲಾ ದಟ್ಟವಾದ, ಉದ್ದವಾದ ಕೂದಲು ತುಂಬಿತ್ತು. ಬಹುಶಃ ಚಳಿಯಿಂದ ರಕ್ಷಿಸಿಕೊಳ್ಳಲು ಕೂದಲು ಈ ರೀತಿ ಸಹಜವಾಗಿಯೇ ಬೆಳೆಯುತ್ತಿದ್ದಿರಬಹುದು. ಊರ ನಡುವಿನ ಕಿರು ಹಾದಿಯಲ್ಲಿ ಸಾಗಿ, ಎತ್ತರದ ಸ್ಥಳದಲ್ಲಿದ್ದ ನಂದೇಶ್ವರ ದೇವಾಲಯವನ್ನು ತಲುಪಿದೆವು. ಚಿಕ್ಕದಾದರೂ ಸಾಕಷ್ಟು ವಿಶಾಲವಾದ ಪ್ರಾಂಗಣವನ್ನು ಹೊಂದಿದ ಅಚ್ಚುಕಟ್ಟಾದ ದೇವಸ್ಥಾನವಿದು. ನಂದೇಶ್ವರ ಶಿವ ಇಲ್ಲಿಯ ಆರಾಧ್ಯ ದೈವ. ಊರಿನ ಪ್ರಮುಖರು ಬಂದು ದೇವಾಲಯದ ಬಾಗಿಲನ್ನು ನಮಗಾಗಿ ತೆರೆದರು. ನಮ್ಮ ಯಾತ್ರಾ ಟೀಮ್ ನಲ್ಲಿದ್ದ ಮಹಿಳೆಯರು ಲಿಂಗಾಷ್ಟಕವನ್ನು ಹಾಡಿ ಸ್ತುತಿಸಿದರು. ಕೆಲವರು ಇಲ್ಲಿಯ ಸ್ಥಳೀಯ ಜನರ ಜೊತೆ ಮಾತಿಗೆ ತೊಡಗಿದರು. ನಾವು ಬೆಂಗಳೂರಿನಿಂದ ಬಂದಿದ್ದೇವೆ ಎಂದು ತಿಳಿದು, ತಮ್ಮ ಮನೆಯ ಯಾರೋ ಒಬ್ಬರು ಬೆಂಗಳೂರಿನಲ್ಲಿ ಇದ್ದಾರೆ ಎಂದು ಹೇಳಿ ಸಂತೋಷಪಟ್ಟರು. ಉದ್ದ ಕೂದಲು, ಗಡ್ಡಧಾರಿಯಾದ ಬಾವಾಜಿಯೊಬ್ಬರು ಇದ್ದರು. ನಾವು ಏನು ಕೊಟ್ಟರೂ ತೆಗೆದುಕೊಳ್ಳದೆ ಮಂದಿರಕ್ಕೆ ನೀಡಲು ಹೇಳಿದರು. ಇಲ್ಲಿಯ ಮಹಿಳೆಯರು ಮತ್ತು ಮಕ್ಕಳು ಕೂಡ ನಮ್ಮಿಂದ ಏನನ್ನೂ ಸ್ವೀಕರಿಸಲು ಇಚ್ಛಿಸಲಿಲ್ಲ. ಇದ್ದುದಕ್ಕೆ ಸಂತೋಷ ಪಡುತ್ತಾ, ಶಿವನನ್ನು ಧ್ಯಾನಿಸುತ್ತಾ, ಸಂತೃಪ್ತ ಜೀವನ ನಡೆಸುವ ಇವರ ಜೀವನ ನಿಜವಾಗಿಯೂ ಅನುಕರಣೀಯ.
ಈ ಊರಿನಲ್ಲಿ ಸ್ಥಳದ ಅಭಾವ ಎಷ್ಟಿದೆ ಎಂದರೆ ನಮ್ಮ ಮಿನಿ ಬಸ್ಸನ್ನು ತಿರುಗಿಸಿಕೊಳ್ಳಲೂ ಸಹ ಸ್ಥಳ ಇರಲಿಲ್ಲ. ನಮ್ಮನ್ನೆಲ್ಲ ಬಸ್ಸಿನಲ್ಲಿ ಕುಳ್ಳಿರಿಸಿಕೊಂಡು ನಮ್ಮ ಎರಡೂ ಜನ ಡ್ರೈವರ್ ಗಳು ರಿವರ್ಸ್ ನಲ್ಲಿಯೇ ಆ ಕಡಿದಾದ ಮಾರ್ಗದಲ್ಲಿ ಸುಮಾರು ಒಂದು ಕಿಲೋಮೀಟರ್ ಸಾಗಿದರು. ಹಾಗೆ ಸಾಗುವಾಗ ಬಂದ ಕಾರುಗಳಿಗೆ ಅಚ್ಚುಕಟ್ಟಾಗಿ ಸೈಡ್ ಕೊಟ್ಟರು. ಅವರ ಚಾಲನಾ ನೈಪುಣ್ಯವನ್ನು ನೋಡಿ ಎಲ್ಲರೂ ಬೆರಗಾದೆವು. ನಂತರ ಒಂದು ಕಟ್ಟಡದ ಪ್ರವೇಶ ದ್ವಾರದಲ್ಲಿ ಬಸ್ಸನ್ನು ತಿರುಗಿಸಿಕೊಂಡು, ಪುನ ಹೈವೇ ತಲುಪಿ, ಅಲ್ಲಿಯೇ ಎದುರುಗಡೆ ಇದ್ದ "ಗಂಗಾ ನಾನಿ" ಎಂಬ ಕುಂಡವೊಂದನ್ನು ದರ್ಶಿಸಿದೆವು. ಇಲ್ಲಿ ಒಂದು ಪುಟ್ಟ ಕೊಳವಿದ್ದು ನೀರಿನ ಬುಗ್ಗೆ ಇದೆ. ಆ ಬುಗ್ಗೆಯ ಜಲ ಉತ್ತರಕಾಶಿಯಿಂದ ಬರುತ್ತದೆ ಎಂದು ಹೇಳುತ್ತಾರೆ. ಈ ಕುಂಡದ ಅಂಚಿನಲ್ಲಿ ಒಂದು ಪುಟ್ಟ ಮಂದಿರವಿದ್ದು ಅದರಲ್ಲಿ ಗಂಗೆ ಮತ್ತು ಯಮುನೆಯರನ್ನು ಪೂಜಿಸುತ್ತಾರೆ. ಶ್ವೇತವರ್ಣದ ಮೂರ್ತಿ ಗಂಗೆಯಾದರೆ, ಕೃಷ್ಣವರ್ಣದ ಮೂರ್ತಿ ಯಮುನೆಯದು. ಇದು ಯಮುನಾ ನದಿಯ ತಟದಲ್ಲಿಯೇ ಇದೆ.
ಇದನ್ನೆಲ್ಲ ಮುಗಿಸಿ ವಾಪಸ್ ವಸತಿಯ ಕಡೆಗೆ ಬಂದಾಗ ಸಂಜೆ 5:30 ಆಗಿತ್ತು. ಚಹಾ ಸೇವಿಸಿ ಎಲ್ಲರೂ ಎದುರುಗಡೆ ಹರಿಯುತ್ತಿರುವ ಯಮುನೆಯ ಕಡೆ ಸಾಗಿದೆವು. ಯಮನೋತ್ರಿಯ ದರ್ಶನ ತಪ್ಪಿದುದನ್ನು ಸರಿಪಡಿಸಲೋ ಎಂಬಂತೆ ಎಲ್ಲಾ ಸೇರಿ ಯಮುನಾರತಿಯನ್ನು ಮಾಡಿದೆವು. ಯಾತ್ರಿಗಳ ಪೈಕಿ ಒಬ್ಬರಾದ ಡಾಕ್ಟರ್ ಮನೋರಮ ಅವರು ಯಮುನೆಯನ್ನು ಕುರಿತು ತಾವೇ ರಚಿಸಿದ ಕವನ ಒಂದನ್ನು ಸುಶ್ರಾವ್ಯವಾಗಿ ಹಾಡಿ, ಈ ಸಂಜೆಯ ನೆನಪನ್ನು ಸ್ಮರಣೀಯವಾಗಿಸಿದರು. ಬೇಗನೆ ಊಟಕ್ಕೆ ಸೇರಿದೆವು. ಅಲ್ಲಿಯೇ ನಮ್ಮ ಮೋಹನ್ ಅವರ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿ ಎಲ್ಲರೂ ಅವರಿಗೆ ಶುಭ ಕೋರಿದೆವು. ಮುಂಜಾನೆ ಮತ್ತೆ ಬೇಗನೆ ಏಳಬೇಕಾಗಿರುವುದರಿಂದ ಬೇಗನೆ ಮಲಗಿದೆವು.
ಡಾ|| ಮನೋರಮಾ ಅವರು ರಚಿಸಿದ ಕವನ ನಿಮ್ಮ ಅವಗಾಹನೆಗಾಗಿ ಇದೋ ಇಲ್ಲಿದೆ.
ನಿನ್ನ ಜುಳು ಜುಳು ನಾದ ಮೊರೆತಕೆ ನನ್ನ ಕಿವಿಗಳು ತುಂಬಲಿ
ನಿನ್ನ ಬೆಲ್ನೊರೆ ಕೊಡುವ ಮುತ್ತನು ನೋಡಿ ಕಂಗಳು ಸವಿಯಲಿ
ನಿನ್ನ ಶೀತಲ ತಂಪು ಕಂಪಿಸೆ ದೇಹ ಧಮನಿಯು ನುಡಿಯಲಿ
ನೀನು ನೆಲೆಸುವ ನನ್ನ ನಾಲಿಗೆ ನಿನ್ನ ದನಿಯನು ಹಾಡಲಿ
ಉಸಿರು ನಿನ್ನದು ಹಸಿರು ನಿನ್ನದು ನೀನೇ ಆಗು ಬಾ ನನ್ನೊಳು
ಉಸಿರು ದನಿಯಲಿ ಕಣ್ಣು ಕಿವಿಯಲಿ ದೇಹ ಉಲಿಯಲಿ ನಿನ್ನೊಳು
On River yamuna
Written on Sunday 12, May 2024. On the banks of Yamuna...praying her with all our 5 senses
Dr Manorama B N
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ