Wednesday 8 February 2017

AIM FOR SEVA

           ಗತದ ಬಗ್ಗೆ ಹಿಂದಿನ ಮೂರು ಬ್ಲಾಗ್ ಗಳಲ್ಲಿ ಹಂಚಿಕೊಂಡಿದ್ದೇನೆ. ಈಗ ವರ್ತಮಾನದ ಒಂದು ತುರ್ತಿನ ಬಗ್ಗೆ ಅಹರ್ನಿಶಿ ದುಡಿಯುತ್ತಿರುವ ಒಬ್ಬ  ಮಹಾನುಭಾವರ ಕುರಿತು ಹೇಳಿಯೇ ಮುಂದೆ ಸಾಗಬೇಕಾಗಿದೆ.
            ಸ್ವಾಮಿ ಚಿದ್ರೂಪಾನಂದರು ಕಳೆದ ೩೫-೩೬ ವರ್ಷಗಳಿಂದಲೂ ಅಧ್ಯಾತ್ಮದ ಜೊತೆ ಜೊತೆಗೇ ಸಮಾಜದ ನಿರ್ಗತಿಕರ ಉನ್ನತಿಗಾಗಿ ಅವಿಶ್ರಾಂತರಾಗಿ ದುಡಿಯುತ್ತಿದ್ದಾರೆ. ಈಗ್ಗೆ ಕೆಲ ವರ್ಷಗಳ ಹಿಂದೆ ಈ ದೇಶಕ್ಕೆ ಭೆಟ್ಟಿ ನೀಡಿದ ವಿದೇಶೀ  ಧರ್ಮ ಗುರುಗಳೊಬ್ಬರು, "ತಮ್ಮ ಧರ್ಮದ  ಬೆಳೆ  ತೆಗೆಯಲು ಭಾರತ ಅತ್ಯಂತ ಹುಲುಸಾದ ಪ್ರದೇಶವಾಗಿದ್ದು, ಇನ್ನು ನೂರು ವರ್ಷಗಳಲ್ಲಿ ಇಲ್ಲಿನ ಪ್ರತಿಯೊಂದು ಮನೆಯಲ್ಲೂ ತಮ್ಮ ಪ್ರಭುವಿನ  ಗುಣಗಾನ ಕೇಳಿಬರಬೇಕು" ಎಂದು ಅಪ್ಪಣೆ ಮಾಡಿದ್ದನ್ನು ಕೇಳಿ ತುಂಬಾ ನೊಂದುಕೊಂಡ ಸ್ವಾಮಿ  ಚಿದ್ರೂಪಾನಂದರು ಸನಾತನ ಹಿಂದೂ  ಸಂಸ್ಕೃತಿಯನ್ನು ರಕ್ಷಿಸುವ ಜೊತೆಗೇ ಅದರಲ್ಲಿನ ಸಂಕುಚಿತತೆಯನ್ನು ದೂರ ಮಾಡುವ ಕುರಿತು ಧೀರ ಪ್ರತಿಜ್ಞೆ ಕೈಗೊಂಡು ಅಂತೆಯೇ ಕಾರ್ಯತತ್ಪರರಾದರು.ತಮ್ಮ ಪೂಜ್ಯ ಗುರುಗಳಾದ ಸ್ವಾಮಿ ದಯಾನಂದ ಸರಸ್ವತಿಯವರ ಮಾರ್ಗದರ್ಶನದಲ್ಲಿ  AIM FOR SEVA  ಸಂಸ್ಥೆ  ಹುಟ್ಟುಹಾಕಿ ಸೇವಾನಿರತರಾದರು. ಯಾವ ಕಡು ಬಡವರ ನಿರ್ಗತಿಕತೆಯನ್ನು ಬಂಡವಾಳ ಮಾಡಿಕೊಂಡು ಸೇವೆಯ ಸೋಗಿನಲ್ಲಿ ಮತಪರಿವರ್ತನೆಯನ್ನು ಸಹ ಮಾಡಿ ಮುಗಿಸಿ ಬಿಡುತ್ತಿದ್ದರೋ, ಅದೇ ಬಡವರ ಮನೆ ಬಾಗಿಲಿಗೇ ಹೋಗಿ, ಅವರ ಮಕ್ಕಳನ್ನು ಪಡೆದು ದೇಶಾದ್ಯಂತ ಇರುವ ತಮ್ಮ ಸಂಸ್ಥೆಯ "ಛಾತ್ರಾಲಯ"ಗಳಲ್ಲಿ ಅವರಿಗೆ ಸಮಕಾಲೀನ ಶಿಕ್ಷಣದ ಜೊತೆ ಭಗವದ್ಗೀತೆ ಹಾಗೂ ನೂರಾರು ನೀತಿ ಶ್ಲೋಕಗಳನ್ನು ಸಹ  ಕಲಿಸುತ್ತಾ, ಅವರವರ ಮಾತೃಭಾಷೆಯ ಜೊತೆ ರಾಜ್ಯಭಾಷೆ,ಇಂಗ್ಲಿಷ್ ಮತ್ತು ಹಿಂದಿಯಲ್ಲಿ  ಆ ವಿದ್ಯಾರ್ಥಿಗಳನ್ನು ಪರಿಣಿತರನ್ನಾಗಿಸುತ್ತಿದ್ದಾರೆ. ದೇಶಾದ್ಯಂತ ಇರುವ ಇಂತಹ  "ಛಾತ್ರಾಲಯ"ಗಳ ಸಂಖ್ಯೆ ಎಷ್ಟು ಗೊತ್ತೇ ?. ಬರೋಬ್ಬರಿ ೧೦೦+. ಆ ಎಲ್ಲಾ ಬಡವರು ತಮ್ಮ ಮಾತೃಧರ್ಮದಲ್ಲಿಯೇ ಉಳಿಯುವದರ ಜೊತೆಗೇ ಅಪ್ಪಟ ದೇಶಾಭಿಮಾನಿಗಳಾಗಿ ತಯಾರಾಗುತ್ತಿದ್ದಾರೆ. ಇನ್ನು ಇದೆಲ್ಲದರ ಹಿಂದಿರುವ ಪ್ರೇರಕ ಶಕ್ತಿಯಾದ ೮೬ರ ಹರೆಯದ  ಸ್ವಾಮಿ ದಯಾನಂದ ಸರಸ್ವತಿಯವರು ತೀವ್ರ ಅನಾರೋಗ್ಯಕ್ಕೊಳಗಾಗಿದ್ದರೂರೂ ಸಹ ಮುಂಜಾನೆಯಿಂದ ರಾತ್ರಿ ೧೦ರ ತನಕ ದೇಶದೆಲ್ಲೆಡೆ ಸುತ್ತಾಡುತ್ತ ಜನಜಾಗೃತಿ ಮಾಡುತ್ತಿದ್ದಾರೆ.
        ಈ ರೀತಿ ಗೀತಾ ಅಭಿಯಾನ (ಜ್ಞಾನ ಯಜ್ಞ )ದ ಜೊತೆ ಸಮಾಜ ಸೇವೆಯ ವ್ರತ ತೊಟ್ಟ ಸ್ವಾಮಿ ಚಿದ್ರೂಪಾನಂದರ ಉಪನ್ಯಾಸಗಳಿಗೆ ಕಳೆದೊಂದು ವಾರ ಧಾರವಾಡದ ಜನ ಕಿವಿಯಾಗಿದ್ದರು. ಅವರ ವಿರಾಟ್ ರೂಪದ ಈ ಸಮಾಜ ಸೇವಾ ಕಾರ್ಯಗಳ ಪರಿಚಯ ಆಗಿದ್ದು ಸಹ ಅಲ್ಲಿಯೇ. ನನ್ನ ಧರ್ಮಪತ್ನಿ ಸರಸ್ವತಿ ಮತ್ತು ನಾನು ಕಳೆದ ನಾಲ್ಕಾರು ವರ್ಷಗಳಿಂದ ಇಲ್ಲಿಯ ಲಕಮನಹಳ್ಳಿ(ಯಾಲಕ್ಕಿ ಶೆಟ್ಟರ ಕಾಲೋನಿ)ಯಲ್ಲಿರುವ ಅವರ  "ದಯಾನಂದ ಧಾಮ ಛಾತ್ರಾಲಯ"ಕ್ಕೆ ಭೆಟ್ಟಿ ನೀಡಿ ನಮ್ಮ ಕಿಂಚಿತ್  ಸೇವೆ ಸಲ್ಲಿಸುತ್ತಿದ್ದೇವೆ. ತನ್ನ ಅಪಾರ ಕರುಣೆಯನ್ನು ನಮ್ಮ ಮೇಲೆ ಮಳೆಗರೆದ ಆ ಸರ್ವಶಕ್ತನು ನಮ್ಮಿಂದ ಸಮಾಜ ಋಣ ತೀರಿಸಲ್ಪಡಬೇಕೆಂದು ನಿರೀಕ್ಷಿಸುತ್ತಾನೆ. "ರಕ್ಷಂತಿ ಪುಣ್ಯಾನಿ ಪುರಾಕೃತಾನಿ".... ನಮ್ಮನ್ನು ರಕ್ಷಿಸುತ್ತಿರುವ ಆ ಪುಣ್ಯ ನಮ್ಮ ಮಕ್ಕಳಿಗೂ ದಕ್ಕಬೇಕೆಂದರೆ ನಾವೂ ಪುಣ್ಯ ಸಂಚಯಿಸಬೇಕಲ್ಲವೇ ?                                                                   ಸ್ವಾಮೀಜಿಯವರ ಈ   ಸಮಾಜ ಸೇವೆಯ ಯಜ್ಞದಲ್ಲಿ ತಾವೆಲ್ಲ ಕೈ ಜೋಡಿಸಿರಿ ಎಂಬ ಕಳಕಳಿಯ ಮನವಿಯೊಂದಿಗೆ    ಪೂರ್ಣ ವಿರಾಮ ಚಿಹ್ನೆ ಇಡುತ್ತಿದ್ದೇನೆ.                                                                                                                             "IN THE ACT OF GIVING, YOU GROW, PEOPLE GROW AND THE COUNTRY GROWS"
--- SWAMI DAYANANDA SARASWATI                                                                                                          ಸಂಪೂರ್ಣ ವಿವರಗಳಿಗಾಗಿ ಸಂಪರ್ಕಿಸಿರಿ ;
         ಇ - ಮೇಲ್ :aimallindiamovement@gmail.com
                            www.aimforseva.org

"ದಯಾನಂದ ಧಾಮ ಛಾತ್ರಾಲಯ", ಧಾರವಾಡ 
ಸ್ವಾಮಿ ಚಿದ್ರೂಪಾನಂದರು 
                                                 
(ವಿ.ಸೂ. :- ಮೇಲಿನ ವಿಷಯ ಬರೆದಿದ್ದು ಡಿಸಂಬರ್ - ೨೦೧೩ ರಲ್ಲಿ. ಈಗ ಸ್ವಾಮೀ ದಯಾನಂದ ಸರಸ್ವತಿಯವರು ಜೀವನ್ಮುಕ್ತರಾಗಿದ್ದಾರೆ. ಅವರು ನಮ್ಮ ನೆಚ್ಚಿನ ಪ್ರಧಾನ ಮಂತ್ರಿಗಳ ಗುರುಗಳೂ ಆಗಿದ್ದರು ಎಂಬುದು ನಿಮ್ಮ ಟಿಪ್ಪಣಿಗಾಗಿ.)