Tuesday 24 December 2019

ನನ್ನೂರು ದೊಡ್ನಳ್ಳಿ

ಸಹ್ಯಾದ್ರಿಯ ಉತ್ತುಂಗದ
ಶಿರದಿ ಪವಡಿಸಿರುವ ಪುರವು
ಮೆರೆವ ದೇವಿ ಮಾರಿಕಾಂಬೆ
ನೆಲೆಯಾಗಿಹ ಶಿರಸಿಯು.  /
ಪುಣ್ಯ ಶಿರಸಿಯೂರಿನಿಂದ
ಆರು ಮೈಲು ಪೂರ್ವದಲ್ಲಿ
ಶಂಭುಲಿಂಗ ಸ್ವಾಮಿ ನೆಲೆಸಿ
ಹರಸುತಿರುವ ಧಾಮವು.
ಇದೇ ನನ್ನ ಹುಟ್ಟಿದೂರು ದೊಡ್ನಳ್ಳಿ ಗ್ರಾಮವು.  //

ಊರ ಹಿಂದೆ ದಟ್ಟ ಕಾಡು
ಎದುರಿನಲ್ಲಿ ಬಯಲುಗದ್ದೆ
ಇರುವ ಮೂರು ಕಣಿವೆಗಳಲಿ
ನಳನಳಿಸುವ ತೋಟವು. /
ಬೆಟ್ಟ ಬೇಣ ತೆಂಗು ಕಂಗು
ಸುತ್ತ ಹರಿದ್ವರ್ಣ ಸೊಬಗು
ಕೋಡಿ ಹರಿಸಿ ಬೀಗುತಿರುವ
ಹರಡಿದಾರು ಕೆರೆಗಳು.
ಇದೇ ನನ್ನ ಹುಟ್ಟಿದೂರು ದೊಡ್ನಳ್ಳಿ ಗ್ರಾಮವು.  //

ಶಂಭುಲಿಂಗ ಸ್ವಾಮಿ ಗುಡಿಯು
ಸಲಿಲ  ತೀರ್ಥ ಹೊಂಡವು
ಏಳು ದಶಕ ಕಳೆದ ಹೆಮ್ಮೆ
ಮೂಡಿಸಿರುವ ಶಾಲೆಯು. /
ಸುತ್ತ ಹತ್ತು ಹಳ್ಳಿಗಳಿಗೆ
ಪಂಚಾಯತಿ ಕೇಂದ್ರವು
ಎಲ್ಲ ರೈತ ಬಂಧುಗಳಿಗೆ
ಬೆನ್ನೆಲುಬಿನ ಸಂಘವು.
ಇದೇ ನನ್ನ ಹುಟ್ಟಿದೂರು ದೊಡ್ನಳ್ಳಿ ಗ್ರಾಮವು.  //

ಮುರಿದ ಎಲುಬು ಕೀಲುಗಳಿಗೆ
ದಿವ್ಯೌಷಧ  ಇಲ್ಲಿದೆ.
ಜಿಲ್ಲೆಯಲ್ಲೆ ಹೆಸರುವಾಸಿ
ಡಬ್ಬಿ ಬೆಲ್ಲ ನಮ್ಮದೇ.
ಸ್ನೇಹಪರರು ಊರಜನರು
ಕ್ರೀಡೆ ಕಲೆಯ ರುಚಿಯಿದೆ.
ಜನಿಸಬೇಕು ಮತ್ತೆ ಇಲ್ಲೇ
ಇದೇ ನೆಲದ ಕನಸಿದೆ.
 ಇದೇ ನನ್ನ ಹುಟ್ಟಿದೂರು ದೊಡ್ನಳ್ಳಿ ಗ್ರಾಮವು.  //

          -ರವೀಂದ್ರ ಭಟ್, ದೊಡ್ನಳ್ಳಿ.

























Thursday 12 December 2019

ದಿಗಂತಾಲಿಂಗನ

                   ಏಕೆ ನಾಚುವೆ ನಿನ್ನ
                   ಮನದನ್ನೆ ಧಾತ್ರಿಯನು 
                   ಬಿಗಿದಪ್ಪಿ  ಚುಂಬಿಸಲು  ಅಂಬರೇಶ  ।
                   ಜನಕಂಜಿ ಅಬಲೆಯನು 
                   ಕ್ಷಿತಿಜದಂಚಿಗೆ ಕರೆದು 
                   ಮುದ್ದಿಸುವೆ ಮೈಮರೆತು  ನಾನು ಬಲ್ಲೆ.   ।।

                  ಪ್ರೀತಿ ಮಾಡಿದ ಮೇಲೆ 
                  ಇನ್ನೇಕೆ ಅಂಜಿಕೆಯು 
                  ಸರಳೆ ಸದ್ಗುಣೆ  ಸಹಜೆ  ನಮ್ಮ ಧಾತ್ರಿ  ।
                  ಈ ಜನಕೆ ತಮ್ಮವರ 
                  ಪ್ರೀತಿಸಲೇ ಬಿಡುವಿಲ್ಲ 
                  ನಿಮ್ಮನೇನ್ ನೋಡುವರು ಬಾಚಿ ತಬ್ಬು.   ।।


                                    -ರವೀಂದ್ರ ಭಟ್, ದೊಡ್ನಳ್ಳಿ