Friday 29 August 2014

ಹೆಚ್ಚಿದ ಜವಾಬ್ದಾರಿ.....

         'ಮಹಾಭಾರತ'ದಲ್ಲಿ ಒಂದು ಘಟನೆ ಬರುತ್ತದೆ. ದಾನಶೂರನೆನಿಸಿದ್ದ ಕರ್ಣ ಒಮ್ಮೆ ಊಟಕ್ಕೆ ಕುಳಿತಿದ್ದ. ತನಗೆ ತುಂಬ ಪ್ರಿಯವಾಗಿದ್ದ ಚಿನ್ನದ ಚೊಂಬಿನಲ್ಲಿ ನೀರನ್ನು ತುಂಬಿ ಪಕ್ಕದಲ್ಲೇ ಇಟ್ಟುಕೊಂಡಿದ್ದ. ಊಟ ಅರ್ಧ ಆಗಿದ್ದಾಗ ಹೊರಬಾಗಿಲಲ್ಲಿ ಬ್ರಾಹ್ಮಣನೋರ್ವ ಆಗಮಿಸಿ ದಾನ ನೀಡುವಂತೆ ಯಾಚಿಸಿದ. ಅವನನ್ನು ಒಳಗೆ ಕರೆದ ಕರ್ಣ  ತನ್ನ ಎಡಗೈಯಿಂದ ಪಕ್ಕದಲ್ಲಿದ್ದ ತನ್ನ ಪ್ರೀತಿಯ ಚಿನ್ನದ ಚೊಂಬನ್ನು ಆ ಬ್ರಾಹ್ಮಣನಿಗೆ ಎತ್ತಿ ಕೊಟ್ಟುಬಿಟ್ಟ. ಎಡಗೈಯಿಂದ ದಾನ ನೀಡಿದ್ದಕ್ಕೆ ಆ ಯಾಚಕ ಆಕ್ಷೇಪಿಸಿದ. ಅದಕ್ಕೆ ಕರ್ಣ, 'ಮನದಲ್ಲಿ ಕೊಡಬೇಕೆಂಬ  ಭಾವ ಮೂಡಿದಾಗ ತಡ ಮಾಡದೇ ಕೊಟ್ಟುಬಿಡಬೇಕು. ನಾನು ಈಗ ಕೈ ತೊಳೆಯಲೆಂದು ತಡ ಮಾಡಿದ್ದಿದ್ದರೆ ಈ ಪ್ರಿಯ ಚೊಂಬನ್ನು ಬಿಟ್ಟು ಬೇರೆ ವಸ್ತುವನ್ನು ಕೊಡುವಂತೆ ಮನಕ್ಕೆ ಪ್ರೇರಣೆಯಾಗುತ್ತಿತ್ತು. ನಮಗೆ ಪ್ರಿಯವಾದುದನ್ನು ನೀಡುವದು ಯಾವಾಗಲೂ ಉತ್ತಮ ದಾನ. ಕಾರಣ ಎಂಜಲು ಕೈ ತೊಳೆಯುವ ಯೋಚನೆ ಮಾಡದೇ ಎಡಗೈಯಿಂದ ನೀಡಿದೆನೇ  ವಿನ: ಇದರಲ್ಲಿ ಇನ್ಯಾವ ಅರ್ಥವೂ ಇಲ್ಲ' ಎಂದು ಹೇಳುತ್ತಾನೆ.
ಇಲ್ಲಿ ಕರ್ಣ ಆಡಿದ ಮಾತಿನಲ್ಲಿ ಹಲವು ಹೊಳಹುಗಳಿವೆ. ದಾನ ನೀಡುವವನಿಗೆ ಇರಬೇಕಾದ ಮೂಲ ಮನಸ್ಥಿತಿಯು ಎಷ್ಟು ಉನ್ನತವಾಗಿರಬೇಕು ಎಂಬುದರ ಸೂಚನೆಯಿದೆ.
           ಈ ಹಿಂದಿನ ಬ್ಲಾಗ್ ನಲ್ಲಿ ನಮ್ಮ ಅಪ್ಪಯ್ಯನ ಹೊಸಮನೆಯ ಪ್ರವೇಶದ ಸಮಯದಲ್ಲಿ ಆಪದ್ಬಾಂಧವನಾಗಿ ಒದಗಿಬಂದ ರಾಮಪ್ಪ ಹೆಗಡೆಯವರ ಬಗ್ಗೆ ಹೇಳಿದ್ದೇನೆ. ಅವರಂತೆಯೇ ತನ್ನ ಅಂತರಂಗದ ಕರೆಗೆ ಓಗೊಟ್ಟ ಇನ್ನೊಬ್ಬ ಮಹಾನುಭಾವರ ಬಗ್ಗೆ ಕೂಡ ಹೇಳಬೇಕಿದೆ. ಅವರೇ ಡೊ೦ಬೆಸರದ  ನಾರಾಯಣ ಭಟ್ಟರು. ಇವರು ದೊಡ್ನಳ್ಳಿ ಗ್ರಾಮದ ಎಲ್ಲಾ ಬ್ರಾಹ್ಮಣ ಕುಟುಂಬಗಳ ಪುರೋಹಿತ ಭಟ್ಟರು. ನಿಜವಾದ ಅರ್ಥದಲ್ಲಿ ಪುರದ ಹಿತ ಕಾಯುವವರಾಗಿದ್ದರು. ಯಾವುದೇ ಕಾರ್ಯದಲ್ಲೂ ಧರ್ಮ- ಕರ್ಮ - ಕ್ರಿಯಾಲೋಪ ಬಾರದಂತೆ, ಎಂದೂ ದಕ್ಷಿಣೆಯ ಮುಖ ನೋಡದೇ, ಕರ್ತವ್ಯ ನಿರ್ವಹಿಸಿದವರು. ಸತ್ಯದ ಪಕ್ಷಪಾತಿಯಾಗಿ, ಯಾರ ದಾಕ್ಷಿಣ್ಯಕ್ಕೂ ಒಳಗಾಗದೆ ಗಂಭೀರವಾಗಿರುತ್ತಿದ್ದ ಅವರು ಎಲ್ಲರ ಗೌರವಕ್ಕೆ ಪಾತ್ರರಾಗಿದ್ದವರು. ನಮ್ಮ ಮನೆಯ ಪ್ರವೇಶ ಮತ್ತು ವಿನಾಯಕನ ಮುಂಜಿಗೂ ಇವರೇ ಪುರೋಹಿತರು. ಆ ಹೊಸಮನೆಯ ಒಳಗೊಂದು  ದೃಷ್ಟಿ ಹಾಯಿಸಿದರೆ ಅದರ ಒಡೆಯನ ಸ್ಥಿತಿಗತಿ ಯಾರಿಗಾದರೂ ಅರ್ಥವಾಗಿ ಬಿಡುತ್ತಿತ್ತು. ಸೂಕ್ಷ್ಮಗ್ರಾಹಿಗಳಾದ ನಾರಾಯಣ ಭಟ್ಟರಿಗಂತೂ ಕೇಳುವದೇ ಬೇಡ. ಗಂಭೀರರಾಗಿ ಎಲ್ಲ ಕರ್ಮಾಂಗಗಳನ್ನು ಕಿಂಚಿತ್ತೂ ಲೋಪ ಬಾರದಂತೆ  ಮುಗಿಸಿ, ಮಹಾಬಲೇಶ್ವರ ದಂಪತಿ ದಾನವಾಗಿ ನೀಡಿದ ಅಕ್ಕಿ, ತೆಂಗಿನಕಾಯಿ, ಕಲಶ, ಬಟ್ಟೆ, ದಕ್ಷಿಣೆ ಇತ್ಯಾದಿಗಳನ್ನೆಲ್ಲ ಪಡೆದು ಮೌನವಾಗಿ ಭೋಜನ ಮುಗಿಸಿದರು. ನಂತರ ಸುವಾಸನಾರ್ಥವಾಗಿ ಮಹಾಬಲನು ನೀಡಿದ ತುಳಸಿ ದಳವನ್ನು ಪಡೆದವರೇ ಅವನಿಗೆ 'ಒಂದು ರೂಪಾಯಿ' ತರಲು ಹೇಳಿದರು. ಅವನಿಂದ ಒಂದು ರೂಪಾಯಿ ತೆಗೆದುಕೊಂಡು ಈ ಮೊದಲು ದಾನವಾಗಿ ಪಡೆದ ಎಲ್ಲವನ್ನೂ-ಸ್ವೀಕರಿಸಿದ ದಕ್ಷಿಣೆ ಸಹಿತ- ಅವನಿಗೇ ಹಿಂತಿರುಗಿ ನೀಡಿ, 'ಸಂಪೂರ್ಣ ಪುಣ್ಯ ಫಲ ಸಿಗಲಿ' ಎಂದು ಆಶೀರ್ವದಿಸಿದರು. ಮಹಾಬಲನ ಯಾವ ಪ್ರತಿಭಟನೆಗೂ ಜಗ್ಗಲಿಲ್ಲ.
          ಶ್ರೀ ರಾಮಪ್ಪ ಹೆಗಡೆಯವರಾಗಲಿ ಅಥವಾ ಪೂಜ್ಯ ನಾರಾಯಣ ಭಟ್ಟರಾಗಲಿ, ತಮ್ಮ ಮನದಲ್ಲಿ ಸಹಾಯ ಮಾಡಬೇಕೆನ್ನುವ ಭಾವ ಮೂಡಿದಾಗ, ಯಾವ ಕಲ್ಮಶವೂ  ಮನದೊಳಗೆ ನುಸುಳಲು ಬಿಡದೆ, ಆ  ಕರ್ಣನಂತೆ,  ಆಂತರ್ಯದ ಆದೇಶ ಪಾಲಿಸಿದ ಮಹಾನುಭಾವರುಗಳು. ಇಲ್ಲಿ ಕೊಡುಗೆಯ ಮೌಲ್ಯಕ್ಕಿಂತ ಅದರ ಹಿಂದಿನ ಭಾವಕ್ಕೇ ಪ್ರಾಧಾನ್ಯ. ಇಂಥವರ ಸಾಹಚರ್ಯಕ್ಕೆ  ಬದುಕಿನ ಕಾಠಿಣ್ಯಗಳನ್ನೆದುರಿಸಲು ಅವಶ್ಯವಾದ  ಮನೋಬಲ ನೀಡುವ ಸಾಮರ್ಥ್ಯ ಇರುವದು. ನನ್ನ ಅಪ್ಪಯ್ಯ ಇಂತಹ ಹಲವಾರು ಮಹನೀಯರ ಸಾಂಗತ್ಯ ಹೊಂದಿದ್ದ.
           ಜಮೀನಿನ ಮಧ್ಯೆ ಮನೆ ಮಾಡಿದ್ದುದರ ಲಾಭ ನಿಧಾನವಾಗಿ ನನ್ನ ಅಪ್ಪಯ್ಯನಿಗೆ ಸಿಗತೊಡಗಿತು. ತುಡುಗು ದನಗಳ ಹಾವಳಿಯಿಂದ ಬೆಳೆಗೆ ರಕ್ಷಣೆ ಸಿಕ್ಕ ಕಾರಣ ಇಳುವರಿ ಸುಧಾರಿಸತೊಡಗಿತು. ಈ ನಡುವೆ ನಮ್ಮೂರ ಪ್ರಾಥಮಿಕ ಶಾಲೆಯ ಮೊದಲ ಮುಲ್ಕಿ ಪರೀಕ್ಷೆ ಬ್ಯಾಚಿನಲ್ಲಿದ್ದ ಎಂಟು ವಿದ್ಯಾರ್ಥಿಗಳಲ್ಲಿ (ನಾಲ್ಕು ಗಂಡು ಮತ್ತು ನಾಲ್ಕು ಹೆಣ್ಣು ಮಕ್ಕಳು) ನನ್ನಣ್ಣ ವಿನಾಯಕನೂ ಒಬ್ಬನಾಗಿ ಏಳನೇ ಇಯತ್ತೆ ಪಾಸು ಮಾಡಿದ. ತನ್ನ ಮಕ್ಕಳನ್ನು ವೇದವಿದ್ಯಾ ಪಾರಂಗತರನ್ನಾಗಿಸಬೇಕೆಂಬ ಕನಸು ಹೊತ್ತಿದ್ದ ಅಪ್ಪಯ್ಯ ತನ್ನ ಪತ್ನಿ ಮತ್ತು ಮಗ ವಿನಾಯಕನ ಯಾವ ಮಾತನ್ನೂ ಕಿವಿಯ ಮೇಲೆ ಹಾಕಿಕೊಳ್ಳದೆ ಅವನನ್ನು ಸೀದಾ 'ಸಾಲ್ಕಣಿ'ಯಲ್ಲಿದ್ದ  ವೇದ ಪಾಠಶಾಲೆಗೆ ಸೇರಿಸಿ, ಅವನಿಗೆ ಉಳಿದುಕೊಳ್ಳಲು 'ಕಡಕಿನಬೈಲಿ'ನ ಸುಬ್ರಾಯ ಹೆಗಡೆಯವರ ಮನೆಯಲ್ಲಿ ವ್ಯವಸ್ಥೆ ಮಾಡಿ ಊರಿಗೆ ಮರಳಿದ. ಚೆನ್ನಾಗಿ ಗಟ್ಟುಮುಟ್ಟಾಗಿದ್ದ ಮನೆಯ ಹಿರಿಯ ಮಗ ಈ ರೀತಿ ಕೃಷಿ ಕೆಲಸಕ್ಕೆ ಸಿಗದೇ ಹೋದುದಕ್ಕೆ ಗೌರಮ್ಮ ಮನದಲ್ಲೇ ಬೇಸರಿಸಿಕೊಂಡಿದ್ದೇ  ಬಂತು.
          ಹಳೆಯ ಮನೆಯಲ್ಲಿ ಹುಟ್ಟಿದ ಗಂಡು ಮಕ್ಕಳ ಸೈನ್ಯದ ಬಾಲಂಗೋಚಿಯಾಗಿ ಹೊಸ ಮನೆಗೆ ಬಂದ ಮೇಲೆ ಮೊದಲ ಹೆಣ್ಣುಮಗು ಜನಿಸಿತು. ಭಾಗ್ಯಲಕ್ಷ್ಮಿ ಮನೆಗೆ ಬಂದಂತಾಯಿತೆಂದು ಅಪ್ಪಯ್ಯ ಸಂತೋಷ ಪಟ್ಟ. ಈ ಸಂತೋಷ ವಾರ್ತೆಯನ್ನು ತಿಳಿಸಿ ತನ್ನ ಹಿರಿಮಗನಿಗೆ ನನ್ನ ಕೈಯಿಂದಲೇ ಪೋಸ್ಟ್ ಕಾರ್ಡ್ ಬರೆಸಿ ಹಾಕಿದ. ಹೀಗೆ ನಮ್ಮ ಮೊದಲ ತಂಗಿ 'ಸುಮನಾ' ಹಾಗೂ ಇನ್ನೆರಡು ವರ್ಷಗಳ ನಂತರ ಎರಡನೆಯ ತಂಗಿ 'ಶಾಲಿನಿ' ಈ ಮಹಾಬಲ ಸಂಸಾರದ ಸದಸ್ಯೆಯರಾದರು.
           ಹೆಚ್ಚುತ್ತಿದ್ದ  ಖರ್ಚು ಮತ್ತು ಜವಾಬ್ದಾರಿಗಳನ್ನು ಸರಿದೂಗಿಸಲು ಅವಿರತ ದುಡಿಮೆಯ ಈ ದಂಪತಿ ಹೊಸ ಹೊಸ ಮಾರ್ಗಗಳನ್ನು ಆವಿಷ್ಕರಿಸಲೇ ಬೇಕಾಯಿತು. ಕನಸುಗಳ ಬೆನ್ನೇರಿ ಹೊರಟವರಿಗೆ ವಿಶ್ರಾಂತಿ ಎಂಬುದೂ ಕನಸೇ ಅಲ್ಲವೇ?













           

Wednesday 6 August 2014

ಅಂತರಾತ್ಮನ ದನಿಗೆ.......

         ಕಳೆದ ಸುಮಾರು ೮-೯ ವರ್ಷಗಳಿಂದ ಪೂಜ್ಯ ಶ್ರೀ ಡಿ. ವಿ. ಜಿ. ವಿರಚಿತ "ಮಂಕುತಿಮ್ಮನ ಕಗ್ಗ " ನನಗೆ ಗುರುಸ್ಥಾನದಲ್ಲಿದ್ದು ದಾರಿ ತೋರುತ್ತಿರುವ ಪುಸ್ತಕವಾಗಿದೆ. ಅದಕ್ಕೂ ಮೊದಲು ಸಹ ಅದರ ಸಂಗ ಇತ್ತಾದರೂ ನನ್ನ ಬದುಕಿಗೆ ಅದನ್ನು ಸಮೀಕರಿಸಿಕೊಂಡಿರಲಿಲ್ಲ. ನನ್ನ ಬೇಕು-ಬೇಡಗಳಿಗೆ ಬೇಲಿ ಹಾಕಿಕೊಂಡು, ಬದುಕಿನಲ್ಲಿ 'ನೆಮ್ಮದಿ'ಗೆ ಮಿಗಿಲಾದ ಸುಖವಿಲ್ಲ ಎಂಬುದನ್ನು ಮನಗಂಡು, ಆ 'ನೆಮ್ಮದಿ' ಪಡೆಯಲು ನೆರವಾಗುತ್ತಿರುವ "ಕಗ್ಗ'" ನನಗೆ ಗುರುವಾದರೆ, ಅದರ ಕರ್ತೃ "ದಿವಿಜ"-ಗುಂಡಪ್ಪನವರು ಮಹಾಗುರುಗಳು. ಕಳೆದ ಕೆಲ ದಿನಗಳಲ್ಲಿ ನನ್ನ ಸುತ್ತಲಿದ್ದ ಕೆಲವರ ನಡೆ-ನುಡಿಗಳನ್ನು ಕಂಡಾಗ, ಏನ ಕೇನ ಪ್ರಕಾರೇಣ  ಅಧಿಕಾರ, ಹಣ, ಪ್ರತಿಷ್ಠೆ ಹೊಂದಿಯೇ ತೀರಬೇಕೆಂದು - ಅದಕ್ಕಾಗಿ ತಮ್ಮವರಿಗೇ ವಂಚಿಸಿದರೂ ಸರಿಯೆ - ಎಂಬ ಅವರ ಮನ:ಸ್ಥಿತಿಯನ್ನು ಕಂಡಾಗ ಮರುಕ ಉಂಟಾಗುತ್ತಿದೆ. ತಾವು ಈ ಎತ್ತರ ತಲುಪಲು ತ್ಯಾಗ ಮಾಡಿದ, ತಮ್ಮ ಸುಖ ಮರೆತು ಇವರಿಗೆ  ಏಣಿಯಾಗಿ ಮೇಲಕ್ಕೇರಿಸಿದ ಹಿರಿಯರನ್ನೂ ,ಹಿತೈಷಿಗಳನ್ನೂ ಈಗಿನ ಸ್ಥಾನಬಲದಿಂದ ಅವಗಣನೆ ಮಾಡುವದನ್ನು ಗಮನಿಸಿದಾಗ ಸಂಕಟವಾಗುತ್ತದೆ.  ಹಾಗೆಂದು ಇವರು ಬುದ್ಧಿಹೀನರೇನಲ್ಲ, ಆದರೆ ತಮ್ಮ ಜ್ಞಾನ ಕೇವಲ ಪರೋಪದೇಶಕ್ಕಾಗಿಯೇ ವಿನ: ಸ್ವಯಮನುಷ್ಟಾನಕ್ಕೆ ಅಲ್ಲ ಎಂದುಕೊಂಡ ಪ್ರಭೃತಿಗಳು. ತಮ್ಮ ಜೀವಿತಾವಧಿಯ ಉದ್ದಕ್ಕೂ ಋಷಿಯಂತೆ ಬಾಳಿದ "ಡಿ. ವಿ. ಜಿ."  ಇಂಥವರನ್ನು ಎಚ್ಚರಿಸಲೆಂದೇ ಬರೆದ ಕೆಳಗಿನ ಮೂರು ಕಗ್ಗ ಚೌಪದಿಗಳು ಉಲ್ಲೇಖಯೋಗ್ಯವೆನಿಸುತ್ತವೆ.
         ೧) ಹೆಸರು ಹೆಸರೆಂದು ನೀಂ ಬಸವಳಿವುದೇಕಯ್ಯ| 
                ಕಸದೊಳಗೆ ಕಸವಾಗಿ ಹೋಹನಲೆ ನೀನು|| 
                   ಮುಸುಕಲೀ ಧರೆಯ ಮರೆವೆನ್ನನ್ ಎನುತ ಬೇಡು| 
                      ಮಿಸುಕದಿರು ಮಣ್ಣಿನಲಿ - ಮಂಕುತಿಮ್ಮ.||
             ತಾತ್ಪರ್ಯ :- ಎಂದಿದ್ದರೂ ಈ  ಮಣ್ಣಲ್ಲಿ ಮಣ್ಣಾಗಿ ಹೋಗುವವನೇ ಆದ ನೀನು ನಿನ್ನ ಹೆಸರಿಗಾಗಿ ಅದೇಕೆ ಅಷ್ಟು                                         ಗುದ್ದಾಡುತ್ತೀ. 'ಜನ ನನ್ನನ್ನು ಬೇಗನೆ ಮರೆಯಲಿ' ಎಂದುಕೊಂಡರೆ ಈ ತೊಳಲಾಟ                                                         ಇಲ್ಲವಾಗುತ್ತದೆಯಲ್ಲ! (ನಿನಗೆ ನಿರ್ಲಿಪ್ತತೆ ಸಾಧಿಸುತ್ತದೆಯಲ್ಲ !) 
          ೨) ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ |
                  ಚಿನ್ನದಾತುರಕಿಂತ ಹೆಣ್ಣು-ಗಂಡೊಲವು|| 
                    ಮನ್ನಣೆಯ ದಾಹ ಈ ಎಲ್ಲಕುಂ ತೀಕ್ಷ್ಣತಮ| 
                        ಕೊಲ್ಲುವುದದಾತ್ಮವನೆ - ಮಂಕುತಿಮ್ಮ.|| 
                                ಇದಕ್ಕೆ ಹೆಚ್ಚಿನ ವಿವರಣೆ ಅನಗತ್ಯ.
           ೩)  ಭುವಿಯಿಂದ ಮೊಳಕೆವೊಗೆವಂದು ತಮ್ಮಟೆಗಳಿಲ್ಲ|
                    ಫಲಮಾಗುವಂದು ತುತ್ತೂರಿ ದನಿಯಿಲ್ಲ|| 
                       ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ| 
                           ಹೊಲಿ  ನಿನ್ನ  ತುಟಿಗಳನು - ಮಂಕುತಿಮ್ಮ.|| 
                 ತಾತ್ಪರ್ಯ :- ಈ ಜಗತ್ತಿನಲ್ಲಿನ ಅತ್ಯಂತ ಮಹತ್ವವೂ, ಶ್ರೇಷ್ಠವೂ ಆದ ಬೀಜ ಮೊಳಕೆ ಒಡೆದು ಸಸಿಯಾಗುವ,                                           ಕಾಯಿ ಹಣ್ಣಾಗುವ ಪ್ರಕ್ರಿಯೆಗಳು, ಸೂರ್ಯ- ಚಂದ್ರರ "ಬೆಳಗುವ" ಕಾರ್ಯಗಳೇ  ಸದ್ದಿಲ್ಲದೇ                                               ನಡೆಯುತ್ತಿರುವಾಗ  ನಿನ್ನ ಸಾಧನೆಗಳನ್ನು  ಅದೇನು 'ಮಹಾ' ಎಂದು ಸಾರಿಕೊಳ್ಳುತ್ತೀ

                  ಅಂತರಾತ್ಮನ ದನಿಗೆ ಕಿವಿಗೊಡೋಣ. ಆತ್ಮವಂಚನೆಗೈಯ್ಯದೆ ಬದುಕೋಣ
                                                                                                                                           
                                              'ಸರ್ವೇ ಸಂತು ನಿರಾಮಯಾ:'

                                                    -----------------










Friday 1 August 2014

ನಾನು ಬಡವ ... ಅವಳು ಬಡವಿ .....

           " ಹಿಂದೊಮ್ಮೆ ಕದಂಬರ ಸೈನ್ಯದಲ್ಲಿ ದಳಪತಿಯಾಗಿದ್ದ 'ದೊಡ್ಡಣ್ಣ ನಾಯಕ'ನೆಂಬುವನು ನಮ್ಮ ಗ್ರಾಮದಲ್ಲಿದ್ದ ಗ್ರಾಮಾಧಿದೇವತೆ ಶ್ರೀ ಶಂಭುಲಿಂಗೇಶ್ವರನ  ಗುಡಿಯನ್ನು ಜೀರ್ಣೋದ್ಧಾರ ಮಾಡಿಸಿದ ನಂತರ ಈ ಊರಿಗೆ "ದೊಡ್ನಳ್ಳಿ"ಎಂದು ಹೆಸರು ಬಂದಿತು" ಎಂಬುದಾಗಿ ಕಾರವಾರ ಜಿಲ್ಲಾ ಗೆಜೆಟಿಯರ್ ನಲ್ಲಿ ದಾಖಲಾಗಿದೆ ಎಂದು ಈ ಊರಿನಲ್ಲಿ ಪ್ರಾಥಮಿಕ ಶಾಲೆ ಆರಂಭವಾದಾಗ ಮೊದಲ ಶಿಕ್ಷಕರಲ್ಲಿ ಒಬ್ಬರಾಗಿದ್ದ 'ಭಾಗ್ವತ  ಮಾಸ್ತರರು' (ಶ್ರೀ ಕೆ. ಎನ್. ರಾವ್ ) ಶಾಲೆಯ ಸ್ವರ್ಣ ಮಹೋತ್ಸವದ ಸಮಾರಂಭದಲ್ಲಿ ಹೇಳಿದ್ದು ನನಗೆ ನೆನಪಿದೆ. ಶ್ರೀ ಶಂಭುಲಿಂಗೇಶ್ವರ ದೇವರು ಈ ಊರಿನ ಶ್ರೇಯೋಭಿವೃದ್ಧಿಗೆ ಕಾರಣೀಕರ್ತನು. ನಮ್ಮೂರಿನವರ ಆರಾಧ್ಯ ದೈವವಾದ ಇವನು ಸುತ್ತಲಿನ ಸೋಮನಳ್ಳಿ, ಬಿಸಲಕೊಪ್ಪ , ಚಿಪಗಿ, ತಾರಗೋಡು, ನಡಗೋಡು ಮೊದಲಾದ ಗ್ರಾಮಗಳ ಕೆಲವರಿಗೆ ಕುಲದೈವವೂ ಹೌದು. ಊರಿನ ಹಿರಿಯರಾದ ದಿ. ಗಣಪತಿ ಹೆಗಡೆಯವರು "ಈ ಊರಿನಲ್ಲಿ ವಿನಯಶೀಲತೆಯೇ ಉನ್ನತಿಗೆ ಸೋಪಾನ. ನಾ, ನಾ (ಅಹಂ ಭಾವ) ಎಂಬುವವನನ್ನು ನಮ್ಮ ಶಂಭುಲಿಂಗ ಎಂದೂ ಸಹಿಸನು" ಎಂದು ಹೇಳುತ್ತಿದ್ದುದನ್ನು ನಾನು ಬಾಲಕನಿದ್ದಾಗ ಕೇಳಿದ್ದು ಚೆನ್ನಾಗಿ ನೆನಪಿದೆ. ಇಲ್ಲಿ ಶಿವನ ಅಭಿಷೇಕಕ್ಕೆ ನಿಗದಿ ಪಡಿಸಿದ ಹೊಂಡ / ಭಾವಿಯ ನೀರನ್ನೇ ಬಳಸಬೇಕೆಂಬ ನಿಯಮವಿದೆ. ಈ ಭವಹರನ ಮಹಿಮೆ ಅಪಾರವಾಗಿದ್ದು ಭಕ್ತವೃಂದ ಕೂಡ ವಿಶಾಲವಾಗಿದೆ. ಈಗ ಗುಡಿ ಮತ್ತೊಮ್ಮೆ ನವೀಕೃತವಾಗಿದ್ದು ವಿಶಾಲವೂ, ಪ್ರೇಕ್ಷಣೀಯವೂ ಆಗಿದೆ.
             ನನ್ನ ತಂದೆಯವರು ಈ ಊರಿಗೆ ಬಂದಾಗ ದೇವಸ್ಥಾನ ಎಂದರೆ ಒಂದು ಗರ್ಭಗುಡಿ, ಕಿರಿದಾದ ಪ್ರದಕ್ಷಿಣ ಪ್ರಾಕಾರ    ಹಾಗೂ ಎದುರಿನಲ್ಲಿ ಒಂದು ಪುಟ್ಟ ನವರಂಗ (ಸಭಾಗೃಹ) ಇಷ್ಟು ಮಾತ್ರ ಇದ್ದ, ನಿತ್ಯ ಪೂಜೆ ನಡೆಯುತ್ತಿದ್ದ,ಸಣ್ಣ ದೇವಳವಾಗಿತ್ತು. ಗರ್ಭಗೃಹದಲ್ಲಿ ಉದ್ಭವಲಿಂಗವೆಂದು ಪ್ರತೀತಿಯಿದ್ದ ಶಂಭುಲಿಂಗ ಹಾಗು ಎದುರಿನಲ್ಲಿ (ಹೊರಗೆ) ಮೂತಿಯೋ ಬಾಲವೋ, (ನನಗೀಗ ಸರಿಯಾಗಿ ನೆನಪಿಲ್ಲ ) ಖಡ್ಗದಿಂದ ಕೆತ್ತಿಹೋದ ಪುಟ್ಟ ಬಸವಣ್ಣ. ಈ ನಂದಿಯ ಮೇಲುಗಡೆ, ಈಗಲೂ ಇರುವ, ದೊಡ್ಡ ಘಂಟೆ. ಇಂತಿಪ್ಪ ಈ ಗುಡಿಯ ಅರ್ಚಕ ಹುದ್ದೆಯನ್ನೂ ಸಹ ಒಪ್ಪಿಕೊಂಡ ನನ್ನ ತಂದೆ ಮಹಾಬಲೇಶ್ವರನಿಗೆ ಒಟ್ಟಿನಲ್ಲಿ ಆ ಊರಿನವರಲ್ಲಿ ಒಬ್ಬನಾಗಿ, ತಾನು ನೆಲೆ ನಿಲ್ಲಬೇಕಾಗಿತ್ತು.
             ಈ ಮಹಾಬಲನು 'ಗೇಣಿ'ಗೆ ಪಡೆದ ಜಮೀನು ಸಹ ವರ್ಣನಾಯೋಗ್ಯವೇ ಇದೆ. 'ಸಾಗುವಳಿ ಯೋಗ್ಯ'ವೆಂದು ಗುರುತಿಸಲ್ಪಟ್ಟ ಗದ್ದೆಗಳಲ್ಲಿ ಎರಡು ಭಾಗ - ಮೇಲೆ ಕೆರೆಯ ಸರ್ವೇ ನಂಬರಿನಿಂದ ಕೆಳಗೆ ಸುಮಾರು  ಸಾವಿರ ಅಡಿ  ದೂರದಲ್ಲಿದ್ದ ದೊಡ್ಡ ಮಣ್ಣಿನ ಏರಿಯ ತನಕದ ಭಾಗ "ಹೊಸಕಟ್ಟೆ" ಹಾಗೂ ಅದರ ಕೆಳಗೆ ಹಾನಂಬೆ ರಸ್ತೆಯತನಕದ ಭಾಗ "ಮೂಲಗದ್ದೆ". ನನ್ನಮ್ಮ ಈಗಲೂ ಆ ಗದ್ದೆಗಳ ವೈಖರಿ ನೆನಪಿಸಿಕೊಳ್ಳುತ್ತಾಳೆ -ನಾಟಾ ಎಂದು ಬಳಸಬಹುದಾದ ಎಲ್ಲ ದೊಡ್ಡ ಮರಗಳನ್ನೂ ಕಡಿದು ಖಾಲಿ ಮಾಡಲ್ಪಟ್ಟ, ಕೇವಲ ಮುಳ್ಳು ಕಂಟಿ ಮತ್ತು ದಟ್ಟವಾದ ಬಿದಿರು ಮೆಳೆಗಳಿಂದ ತುಂಬಿಹೋದ 'ಹೊಸಕಟ್ಟೆ'ಯಲ್ಲಿ ಅಲ್ಲೊಂದು ಇಲ್ಲೊಂದು 'ಹಾಳಿ' ಹಾಕಿದ ಗುರುತು ಬಿಟ್ಟರೆ ಅದು ಪಕ್ಕದ ಕಾಡಿನ ವಿಸ್ತರಿತ ಭಾಗದಂತೆ ಕಾಣುತ್ತಿತ್ತು. 'ಮೂಲಗದ್ದೆ' ಇದ್ದುದರಲ್ಲೇ ಸ್ವಲ್ಪ ಮೇಲು. ಆಳು ನೋಡಲು ಭಾರಿ ಅಲ್ಲದಿದ್ದರೂ ಮಹಾಬಲನಲ್ಲಿ ಛಲ ಮತ್ತು ಬಲಕ್ಕೆ ಕೊರತೆ ಇರಲಿಲ್ಲ. ಅಕ್ಷರಶ: ಅಹೋರಾತ್ರಿ ದುಡಿದ ಈ "ಗೌರಿ-ಮಹಾಬಲ" ಜೋಡಿ ಆ ಕಾಡನ್ನೆಲ್ಲ ಸವರಿ, ಸುಟ್ಟು, ಗದ್ದೆಯಾಗಿ ಪರಿವರ್ತಿಸಿದಾಗ ನೋಡಿದವರಿಗೆ ಅದರ ಭೂತರೂಪ ಕಟ್ಟುಕತೆ ಅನ್ನಿಸುವ ಹಾಗೆ ಆಗಿತ್ತು. ಆದರೆ ಗದ್ದೆಯ ಎರಡೂ ಪಕ್ಕಗಳಲ್ಲಿದ್ದ "ಬ್ಯಾಣ" ನನಗೆ ತಿಳುವಳಿಕೆ ಮೂಡಿದಾಗಲೂ ಅದೇ ರೂಪದಲ್ಲೇ ಇತ್ತು.
             ಇಷ್ಟೆಲ್ಲ ಕಷ್ಟಪಟ್ಟು ತಯಾರು ಮಾಡಿದ ಗದ್ದೆಯಲ್ಲಿ ಬೇಸಾಯ ಮಾಡಲು ನನ್ನ ಅಪ್ಪಯ್ಯ ಎಲ್ಲರ ಕೃಷಿ ಕೆಲಸ ಮುಗಿಯುವ ತನಕ ಕಾಯಬೇಕಾಗುತ್ತಿತ್ತು. ಏಕೆಂದರೆ ಇವನಲ್ಲಿ ತನ್ನ ಸ್ವಂತ ಎತ್ತಿನ ಜೋಡಿ ಇರಲಿಲ್ಲ. ಅಂತೂ ಇಂತೂ ಅವರಿವರಲ್ಲಿ  ದಮ್ಮಯ್ಯ ಎಂದು ಗುಡ್ಡೆ ಹಾಕಿ ಸಸಿ ನಾಟಿ ಮಾಡಿ ಬಂದರೆ ಕಾಡಿನಂಚಿನ ಈ ಗದ್ದೆಯಲ್ಲಿ ಕಳ್ಳ ದನಗಳ ಕಾಟ. ಅವು  ಮೇಯ್ದು ಉಳಿದಿದ್ದರಲ್ಲಿ ತೆನೆಗೂಡಿದಾಗ, ಆ ಭಾಗದಲ್ಲಿದ್ದ ಅಸಂಖ್ಯ ಕಾಡುಹಂದಿಗಳು ಲೂಟಿ ಮಾಡಿದ ನಂತರ, ಇವನ ಪಾಲಿಗೆ  ಅದೆಷ್ಟು ಮಿಗುತ್ತಿತ್ತೋ ನಾ ಕಾಣೆ. ಊರೊಳಗಿಂದ ಗದ್ದೆಗೆ ಹೋಗಿಬರಲೂ ದೂರವಾಗುತ್ತಿತ್ತು. ಮನೆಯಲ್ಲಿ ಅದಾಗಲೇ ಮಕ್ಕಳ ಸೈನ್ಯ ತಯಾರಾಗುತ್ತಿತ್ತು. ಜೊತೆಯಲ್ಲಿ ಗ್ರಾಮ ದೇವರ ಪ್ರಸಾದ ವಿತರಣೆಗಾಗಿ ಪ್ರತಿ ವಾರವೂ ಸೀಮೆ ಪೂರ್ತಿ ಸುತ್ತುವ ಕೆಲಸ.   ದೇವರ ನಿತ್ಯ ಪೂಜೆಗೆ ಎಲ್ಲಿದ್ದರೂ ಬರಲೇ ಬೇಕಾದ ಅನಿವಾರ್ಯತೆ ಬೇರೆ. ತಾಯಿ ಬದುಕಿದ್ದಾಗ ಕಂಡ ಕಷ್ಟಗಳು ಒಂದು ಬಗೆಯವಾದರೆ ಈಗ ಹೆಂಡತಿ ಮಕ್ಕಳು ಸಹ ತನ್ನ ಜೊತೆಗೇ  ಕಷ್ಟ ಪಡುವದನ್ನು ಕಾಣುವ ಅಸಹಾಯಕತೆ ಕೂಡಾ ಸೇರಿಕೊಂಡು ಮಹಾಬಲನಿಗೆ ಬದುಕು ದುಃಸಹವೆನಿಸತೊಡಗಿತ್ತು. ದೇವಸ್ಥಾನದ ಪೂಜೆಗೆ ಬರಲು ತಡವಾದಲ್ಲಿ ಗೌರಿ ಸಹ ಊರವರ ಮಾತು ಕೇಳಬೇಕಾಗುತ್ತಿತ್ತು. ಇದರಿಂದ ಅವಳೂ ಸಿಟ್ಟಿಗೆದ್ದು ಗಂಡನಿಗೆ ಮಂಗಳಾರತಿ ಮಾಡುತ್ತಿದ್ದಳು. ಇವೆಲ್ಲದರಿಂದ ರೋಸಿಹೋಗಿ  ಕೊನೆಗೆ ಅನಿವಾರ್ಯವಾಗಿ ದೇವರ ಪೂಜೆಯನ್ನು ಘಟ್ಟದ ಕೆಳಗಿನಿಂದ ಬಂದ ನರಸಿಂಹ ಭಟ್ಟರಿಗೆ ವಹಿಸಿಕೊಟ್ಟು, ಕೈತೊಳೆದುಕೊಂಡನು. ಇದೆಲ್ಲ ನಾನು ಹುಟ್ಟುವ ಪೂರ್ವದಲ್ಲೇ ಆದ ಕಥೆ.
          ಆ ವಿಷಮ ದಿನಗಳಲ್ಲಿ ಈ ಮಹಾಬಲ ಸಂಸಾರ ಹೇಗೆ ಸಾಗುತ್ತಿತ್ತು ? ಬಹುಶ: ಬೆಳೆದ ಬೆಳೆ ಕೂಲಿಯಾಳುಗಳ ಸಂಬಳಕ್ಕೆ ಮಾತ್ರ ಸಾಲುತ್ತಿತ್ತೇನೋ! ಪ್ರತಿ ಏಪ್ರಿಲ್ ತಿಂಗಳಲ್ಲೊಮ್ಮೆ ನವೀಕರಣಗೊಳ್ಳುತ್ತಿದ್ದ ಸೊಸಾಯಿಟಿ ಸಾಲವೇ ಕೃಷಿಗೆ ಬಂಡವಾಳ. ಪತಿ - ಪತ್ನಿ ಮಾತ್ರವಲ್ಲದೆ ದುಡಿಯದೇ ತಿನ್ನುವ ಪುಟ್ಟ ಮಕ್ಕಳ ಹೊಟ್ಟೆ ಸಹ ತುಂಬಬೇಕಿತ್ತು.  ಅದಕ್ಕಾಗಿ ಸಣ್ಣ ಪುಟ್ಟ ಪೌರೋಹಿತ್ಯ, ಮದುವೆ ಮುಂಜಿ ಮುಂತಾದ ಶುಭಕಾರ್ಯಗಳಲ್ಲಿ ನೀಡುವ ದಕ್ಷಿಣೆ,ವರ್ಷಕ್ಕೊಮ್ಮೆ ಸೀಮೆ ಸುತ್ತಿ ಗಿಟ್ಟಿಸುತ್ತಿದ್ದ 'ಸಂಭಾವನೆ', ಸಣ್ಣ ಪುಟ್ಟ ಸಮಾರಂಭಗಳಲ್ಲಿ ಅಡಿಗೆ ಕೆಲಸ, ಅಲ್ಲಲ್ಲಿ ಕಿರಾಣಿ ಅಂಗಡಿಗಳಲ್ಲಿ ದೊರಕುತ್ತಿದ್ದ ತಾತ್ಪೂರ್ತಿಕ ಉದ್ರಿ -ಇವೆಲ್ಲವುಗಳ ಮೇಲೆಯೇ ಈ ಕುಚೇಲನ ಜೀವನ ರಥ ಸಾಗುತ್ತಿತ್ತು. ಈ ಮಧ್ಯೆ, ಜಮೀನಿನ ನಡುವೆಯೇ ಮನೆ ಮಾಡಿದರೆ ಸಾಕಷ್ಟು ಅನುಕೂಲತೆ ಇದೆಯೆಂದು ಆಲೋಚಿಸಿ ಊರೊಳಗಿನ ಜಾಗೆಯನ್ನು ಸೊರಬ  ಸೀಮೆಯಿಂದ ಬಂದು ನಮ್ಮೂರಿನಲ್ಲಿ ಜಮೀನು ಮಾಡುತ್ತಿದ್ದ ಶ್ರೀಯುತ ರಾಮಪ್ಪ ಶೇಷಗಿರಿಯಪ್ಪ ಹೆಗಡೆಯವರಿಗೆ ಮಾರಿ, ಅದೇ ದುಡ್ಡಿನಲ್ಲಿ ತನ್ನ ಜಮೀನಿನಲ್ಲಿಯೇ ಒಂದು ಮನೆ ಕಟ್ಟಿಕೊಂಡನು. ಆ ಮನೆ ಕಟ್ಟುವಾಗ ನಾನು ಕನ್ನಡ ಶಾಲೆಯ ಎರಡನೇ ವರ್ಗದಲ್ಲಿದ್ದೆ. ನನ್ನ ದೊಡ್ಡಣ್ಣ ವಿನಾಯಕ ಅದರ ನಿರ್ಮಾಣದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದನು. ಸುಮಾರು ೮ ಅಂಕಣದಷ್ಟು ಜಾಗ ಇದ್ದ ಅದರ ಸುತ್ತಲೂ ಮಣ್ಣು ಮುದ್ದೆ ಗೋಡೆ  ಹಾಗೂ ಒಳಗಡೆ ಮೂರು ಭಾಗವಿತ್ತು.
         ಆ ಮನೆಯ ಪ್ರವೇಶದ ಜೊತೆಗೇ ನನ್ನಣ್ಣನ ಮುಂಜಿ ಸಹ ಮಾಡಲು ಅಪ್ಪಯ್ಯ ಯೋಜಿಸಿದ್ದ. ಊರೊಳಗಿನ ಜಾಗ ಮಾರಿದ ದುಡ್ಡಿನಲ್ಲೇ ಇದೂ ಕೂಡ ಆಗಬೇಕಿತ್ತು. ಅದಕ್ಕಾಗಿ ಪಕ್ಕದ ಇಸಳೂರಿನ ಗೌಡರ ಅಂಗಡಿಯಲ್ಲಿ ಕಿರಾಣಿ ಸಾಮಾನು ತರಲು ಹೋದಾಗ ಮೊದಲು ಹಳೇ ಬಾಕಿ ತುಂಬಿಸಿಕೊಂಡ ಅವರು, ತಾನು ಉದ್ರಿ ಕೊಡುವದನ್ನು ನಿಲ್ಲಿಸಿಬಿಟ್ಟಿರುವದಾಗಿ ಹೇಳಿಬಿಟ್ಟರು. ತನ್ನ ಪರಿಸ್ಥಿತಿಯನ್ನು ಪರಿಪರಿಯಾಗಿ ವಿವರಿಸಿದರೂ ಅದಕ್ಕೆ ಸೊಪ್ಪು ಹಾಕದ ಅವರು ಇವನನ್ನು ಸಾಗಹಾಕಿದರು. ಮಾರನೆ ದಿನದ ಕಾರ್ಯಕ್ಕಾಗಿ ಎಲ್ಲರಿಗೂ ಹೇಳಿಯಾಗಿತ್ತು. ಆದರೆ ಮನೆಯಲ್ಲಿ ನಾಲ್ಕು ಜನರಿಗೆ ಮಾಡಿ ಬಡಿಸುವಷ್ಟು ಸಾಮಗ್ರಿಯೂ ಇರಲಿಲ್ಲ. ಆ ಅತೀವ ನಿರಾಶೆಯಲ್ಲಿ ದುಃಖತಪ್ತ ದಂಪತಿ ದೇವರ ಮೇಲೆ ಭಾರ ಹಾಕಿ ಮಲಗಿದರು.
          ಅದು ಹೇಗೋ ಈ ವಿಷಯ ಗೊತ್ತುಮಾಡಿಕೊಂಡ ರಾಮಪ್ಪ ಹೆಗಡೆಯವರು ಮರುದಿನ ಸೂರ್ಯೋದಯಕ್ಕೆ ಸರಿಯಾಗಿ ಅವತ್ತಿನ ಪುಟ್ಟ ಸಮಾರಂಭಕ್ಕೆ ಅವಶ್ಯವಿರುವಷ್ಟು ದಿನಸಿ ಸಾಮಗ್ರಿ, ಅಕ್ಕಿ, ಕಾಯಿ ಮತ್ತು ಒಂದು ಡಬ್ಬಿ ಬೆಲ್ಲ- ಎಲ್ಲವನ್ನು ಆಳುಗಳ ಕೈಲಿ ಹೊರಿಸಿ ಈ ಹೊಸಮನೆಗೆ ಕಳಿಸಿಕೊಟ್ಟಿದ್ದರು. ಕೃತಜ್ಞತೆಯಿಂದ ಕೊರಳ ಸೆರೆ ಉಬ್ಬಿ ಬಂದ ಮಹಾಬಲ ಭಟ್ಟರ ಬೆನ್ನು ತಟ್ಟಿ, 'ಮೊದಲು ಕಾರ್ಯ ಸಾಗಿಸಿ' ಎಂದು ಪ್ರೋತ್ಸಾಹದ ಮಾತಾಡಿದರು. ಅಂದು ನಮ್ಮ ಕುಟುಂಬದ ಪಾಲಿಗೆ ದೇವರೇ ಆಗಿಬಂದ, ಈಗ ತೊಂಭತ್ತರ ಹೊಸ್ತಿಲಲ್ಲಿರುವ ಶ್ರೀಯುತ ರಾಮಪ್ಪ ಹೆಗಡೆಯವರು ನಾವು ಸಹೋದರರಿಗೆಲ್ಲ ತೀರ್ಥರೂಪರೆ ಹೌದು.
          "ಕೊಲ್ಲುವ  ದೇವರಿಗಿಂತ ಕಾಯುವ ದೇವರು ದೊಡ್ಡವನು" ಎಂಬುದು ಇದಕ್ಕೇ ಅಲ್ಲವೇ ?