Friday 29 August 2014

ಹೆಚ್ಚಿದ ಜವಾಬ್ದಾರಿ.....

         'ಮಹಾಭಾರತ'ದಲ್ಲಿ ಒಂದು ಘಟನೆ ಬರುತ್ತದೆ. ದಾನಶೂರನೆನಿಸಿದ್ದ ಕರ್ಣ ಒಮ್ಮೆ ಊಟಕ್ಕೆ ಕುಳಿತಿದ್ದ. ತನಗೆ ತುಂಬ ಪ್ರಿಯವಾಗಿದ್ದ ಚಿನ್ನದ ಚೊಂಬಿನಲ್ಲಿ ನೀರನ್ನು ತುಂಬಿ ಪಕ್ಕದಲ್ಲೇ ಇಟ್ಟುಕೊಂಡಿದ್ದ. ಊಟ ಅರ್ಧ ಆಗಿದ್ದಾಗ ಹೊರಬಾಗಿಲಲ್ಲಿ ಬ್ರಾಹ್ಮಣನೋರ್ವ ಆಗಮಿಸಿ ದಾನ ನೀಡುವಂತೆ ಯಾಚಿಸಿದ. ಅವನನ್ನು ಒಳಗೆ ಕರೆದ ಕರ್ಣ  ತನ್ನ ಎಡಗೈಯಿಂದ ಪಕ್ಕದಲ್ಲಿದ್ದ ತನ್ನ ಪ್ರೀತಿಯ ಚಿನ್ನದ ಚೊಂಬನ್ನು ಆ ಬ್ರಾಹ್ಮಣನಿಗೆ ಎತ್ತಿ ಕೊಟ್ಟುಬಿಟ್ಟ. ಎಡಗೈಯಿಂದ ದಾನ ನೀಡಿದ್ದಕ್ಕೆ ಆ ಯಾಚಕ ಆಕ್ಷೇಪಿಸಿದ. ಅದಕ್ಕೆ ಕರ್ಣ, 'ಮನದಲ್ಲಿ ಕೊಡಬೇಕೆಂಬ  ಭಾವ ಮೂಡಿದಾಗ ತಡ ಮಾಡದೇ ಕೊಟ್ಟುಬಿಡಬೇಕು. ನಾನು ಈಗ ಕೈ ತೊಳೆಯಲೆಂದು ತಡ ಮಾಡಿದ್ದಿದ್ದರೆ ಈ ಪ್ರಿಯ ಚೊಂಬನ್ನು ಬಿಟ್ಟು ಬೇರೆ ವಸ್ತುವನ್ನು ಕೊಡುವಂತೆ ಮನಕ್ಕೆ ಪ್ರೇರಣೆಯಾಗುತ್ತಿತ್ತು. ನಮಗೆ ಪ್ರಿಯವಾದುದನ್ನು ನೀಡುವದು ಯಾವಾಗಲೂ ಉತ್ತಮ ದಾನ. ಕಾರಣ ಎಂಜಲು ಕೈ ತೊಳೆಯುವ ಯೋಚನೆ ಮಾಡದೇ ಎಡಗೈಯಿಂದ ನೀಡಿದೆನೇ  ವಿನ: ಇದರಲ್ಲಿ ಇನ್ಯಾವ ಅರ್ಥವೂ ಇಲ್ಲ' ಎಂದು ಹೇಳುತ್ತಾನೆ.
ಇಲ್ಲಿ ಕರ್ಣ ಆಡಿದ ಮಾತಿನಲ್ಲಿ ಹಲವು ಹೊಳಹುಗಳಿವೆ. ದಾನ ನೀಡುವವನಿಗೆ ಇರಬೇಕಾದ ಮೂಲ ಮನಸ್ಥಿತಿಯು ಎಷ್ಟು ಉನ್ನತವಾಗಿರಬೇಕು ಎಂಬುದರ ಸೂಚನೆಯಿದೆ.
           ಈ ಹಿಂದಿನ ಬ್ಲಾಗ್ ನಲ್ಲಿ ನಮ್ಮ ಅಪ್ಪಯ್ಯನ ಹೊಸಮನೆಯ ಪ್ರವೇಶದ ಸಮಯದಲ್ಲಿ ಆಪದ್ಬಾಂಧವನಾಗಿ ಒದಗಿಬಂದ ರಾಮಪ್ಪ ಹೆಗಡೆಯವರ ಬಗ್ಗೆ ಹೇಳಿದ್ದೇನೆ. ಅವರಂತೆಯೇ ತನ್ನ ಅಂತರಂಗದ ಕರೆಗೆ ಓಗೊಟ್ಟ ಇನ್ನೊಬ್ಬ ಮಹಾನುಭಾವರ ಬಗ್ಗೆ ಕೂಡ ಹೇಳಬೇಕಿದೆ. ಅವರೇ ಡೊ೦ಬೆಸರದ  ನಾರಾಯಣ ಭಟ್ಟರು. ಇವರು ದೊಡ್ನಳ್ಳಿ ಗ್ರಾಮದ ಎಲ್ಲಾ ಬ್ರಾಹ್ಮಣ ಕುಟುಂಬಗಳ ಪುರೋಹಿತ ಭಟ್ಟರು. ನಿಜವಾದ ಅರ್ಥದಲ್ಲಿ ಪುರದ ಹಿತ ಕಾಯುವವರಾಗಿದ್ದರು. ಯಾವುದೇ ಕಾರ್ಯದಲ್ಲೂ ಧರ್ಮ- ಕರ್ಮ - ಕ್ರಿಯಾಲೋಪ ಬಾರದಂತೆ, ಎಂದೂ ದಕ್ಷಿಣೆಯ ಮುಖ ನೋಡದೇ, ಕರ್ತವ್ಯ ನಿರ್ವಹಿಸಿದವರು. ಸತ್ಯದ ಪಕ್ಷಪಾತಿಯಾಗಿ, ಯಾರ ದಾಕ್ಷಿಣ್ಯಕ್ಕೂ ಒಳಗಾಗದೆ ಗಂಭೀರವಾಗಿರುತ್ತಿದ್ದ ಅವರು ಎಲ್ಲರ ಗೌರವಕ್ಕೆ ಪಾತ್ರರಾಗಿದ್ದವರು. ನಮ್ಮ ಮನೆಯ ಪ್ರವೇಶ ಮತ್ತು ವಿನಾಯಕನ ಮುಂಜಿಗೂ ಇವರೇ ಪುರೋಹಿತರು. ಆ ಹೊಸಮನೆಯ ಒಳಗೊಂದು  ದೃಷ್ಟಿ ಹಾಯಿಸಿದರೆ ಅದರ ಒಡೆಯನ ಸ್ಥಿತಿಗತಿ ಯಾರಿಗಾದರೂ ಅರ್ಥವಾಗಿ ಬಿಡುತ್ತಿತ್ತು. ಸೂಕ್ಷ್ಮಗ್ರಾಹಿಗಳಾದ ನಾರಾಯಣ ಭಟ್ಟರಿಗಂತೂ ಕೇಳುವದೇ ಬೇಡ. ಗಂಭೀರರಾಗಿ ಎಲ್ಲ ಕರ್ಮಾಂಗಗಳನ್ನು ಕಿಂಚಿತ್ತೂ ಲೋಪ ಬಾರದಂತೆ  ಮುಗಿಸಿ, ಮಹಾಬಲೇಶ್ವರ ದಂಪತಿ ದಾನವಾಗಿ ನೀಡಿದ ಅಕ್ಕಿ, ತೆಂಗಿನಕಾಯಿ, ಕಲಶ, ಬಟ್ಟೆ, ದಕ್ಷಿಣೆ ಇತ್ಯಾದಿಗಳನ್ನೆಲ್ಲ ಪಡೆದು ಮೌನವಾಗಿ ಭೋಜನ ಮುಗಿಸಿದರು. ನಂತರ ಸುವಾಸನಾರ್ಥವಾಗಿ ಮಹಾಬಲನು ನೀಡಿದ ತುಳಸಿ ದಳವನ್ನು ಪಡೆದವರೇ ಅವನಿಗೆ 'ಒಂದು ರೂಪಾಯಿ' ತರಲು ಹೇಳಿದರು. ಅವನಿಂದ ಒಂದು ರೂಪಾಯಿ ತೆಗೆದುಕೊಂಡು ಈ ಮೊದಲು ದಾನವಾಗಿ ಪಡೆದ ಎಲ್ಲವನ್ನೂ-ಸ್ವೀಕರಿಸಿದ ದಕ್ಷಿಣೆ ಸಹಿತ- ಅವನಿಗೇ ಹಿಂತಿರುಗಿ ನೀಡಿ, 'ಸಂಪೂರ್ಣ ಪುಣ್ಯ ಫಲ ಸಿಗಲಿ' ಎಂದು ಆಶೀರ್ವದಿಸಿದರು. ಮಹಾಬಲನ ಯಾವ ಪ್ರತಿಭಟನೆಗೂ ಜಗ್ಗಲಿಲ್ಲ.
          ಶ್ರೀ ರಾಮಪ್ಪ ಹೆಗಡೆಯವರಾಗಲಿ ಅಥವಾ ಪೂಜ್ಯ ನಾರಾಯಣ ಭಟ್ಟರಾಗಲಿ, ತಮ್ಮ ಮನದಲ್ಲಿ ಸಹಾಯ ಮಾಡಬೇಕೆನ್ನುವ ಭಾವ ಮೂಡಿದಾಗ, ಯಾವ ಕಲ್ಮಶವೂ  ಮನದೊಳಗೆ ನುಸುಳಲು ಬಿಡದೆ, ಆ  ಕರ್ಣನಂತೆ,  ಆಂತರ್ಯದ ಆದೇಶ ಪಾಲಿಸಿದ ಮಹಾನುಭಾವರುಗಳು. ಇಲ್ಲಿ ಕೊಡುಗೆಯ ಮೌಲ್ಯಕ್ಕಿಂತ ಅದರ ಹಿಂದಿನ ಭಾವಕ್ಕೇ ಪ್ರಾಧಾನ್ಯ. ಇಂಥವರ ಸಾಹಚರ್ಯಕ್ಕೆ  ಬದುಕಿನ ಕಾಠಿಣ್ಯಗಳನ್ನೆದುರಿಸಲು ಅವಶ್ಯವಾದ  ಮನೋಬಲ ನೀಡುವ ಸಾಮರ್ಥ್ಯ ಇರುವದು. ನನ್ನ ಅಪ್ಪಯ್ಯ ಇಂತಹ ಹಲವಾರು ಮಹನೀಯರ ಸಾಂಗತ್ಯ ಹೊಂದಿದ್ದ.
           ಜಮೀನಿನ ಮಧ್ಯೆ ಮನೆ ಮಾಡಿದ್ದುದರ ಲಾಭ ನಿಧಾನವಾಗಿ ನನ್ನ ಅಪ್ಪಯ್ಯನಿಗೆ ಸಿಗತೊಡಗಿತು. ತುಡುಗು ದನಗಳ ಹಾವಳಿಯಿಂದ ಬೆಳೆಗೆ ರಕ್ಷಣೆ ಸಿಕ್ಕ ಕಾರಣ ಇಳುವರಿ ಸುಧಾರಿಸತೊಡಗಿತು. ಈ ನಡುವೆ ನಮ್ಮೂರ ಪ್ರಾಥಮಿಕ ಶಾಲೆಯ ಮೊದಲ ಮುಲ್ಕಿ ಪರೀಕ್ಷೆ ಬ್ಯಾಚಿನಲ್ಲಿದ್ದ ಎಂಟು ವಿದ್ಯಾರ್ಥಿಗಳಲ್ಲಿ (ನಾಲ್ಕು ಗಂಡು ಮತ್ತು ನಾಲ್ಕು ಹೆಣ್ಣು ಮಕ್ಕಳು) ನನ್ನಣ್ಣ ವಿನಾಯಕನೂ ಒಬ್ಬನಾಗಿ ಏಳನೇ ಇಯತ್ತೆ ಪಾಸು ಮಾಡಿದ. ತನ್ನ ಮಕ್ಕಳನ್ನು ವೇದವಿದ್ಯಾ ಪಾರಂಗತರನ್ನಾಗಿಸಬೇಕೆಂಬ ಕನಸು ಹೊತ್ತಿದ್ದ ಅಪ್ಪಯ್ಯ ತನ್ನ ಪತ್ನಿ ಮತ್ತು ಮಗ ವಿನಾಯಕನ ಯಾವ ಮಾತನ್ನೂ ಕಿವಿಯ ಮೇಲೆ ಹಾಕಿಕೊಳ್ಳದೆ ಅವನನ್ನು ಸೀದಾ 'ಸಾಲ್ಕಣಿ'ಯಲ್ಲಿದ್ದ  ವೇದ ಪಾಠಶಾಲೆಗೆ ಸೇರಿಸಿ, ಅವನಿಗೆ ಉಳಿದುಕೊಳ್ಳಲು 'ಕಡಕಿನಬೈಲಿ'ನ ಸುಬ್ರಾಯ ಹೆಗಡೆಯವರ ಮನೆಯಲ್ಲಿ ವ್ಯವಸ್ಥೆ ಮಾಡಿ ಊರಿಗೆ ಮರಳಿದ. ಚೆನ್ನಾಗಿ ಗಟ್ಟುಮುಟ್ಟಾಗಿದ್ದ ಮನೆಯ ಹಿರಿಯ ಮಗ ಈ ರೀತಿ ಕೃಷಿ ಕೆಲಸಕ್ಕೆ ಸಿಗದೇ ಹೋದುದಕ್ಕೆ ಗೌರಮ್ಮ ಮನದಲ್ಲೇ ಬೇಸರಿಸಿಕೊಂಡಿದ್ದೇ  ಬಂತು.
          ಹಳೆಯ ಮನೆಯಲ್ಲಿ ಹುಟ್ಟಿದ ಗಂಡು ಮಕ್ಕಳ ಸೈನ್ಯದ ಬಾಲಂಗೋಚಿಯಾಗಿ ಹೊಸ ಮನೆಗೆ ಬಂದ ಮೇಲೆ ಮೊದಲ ಹೆಣ್ಣುಮಗು ಜನಿಸಿತು. ಭಾಗ್ಯಲಕ್ಷ್ಮಿ ಮನೆಗೆ ಬಂದಂತಾಯಿತೆಂದು ಅಪ್ಪಯ್ಯ ಸಂತೋಷ ಪಟ್ಟ. ಈ ಸಂತೋಷ ವಾರ್ತೆಯನ್ನು ತಿಳಿಸಿ ತನ್ನ ಹಿರಿಮಗನಿಗೆ ನನ್ನ ಕೈಯಿಂದಲೇ ಪೋಸ್ಟ್ ಕಾರ್ಡ್ ಬರೆಸಿ ಹಾಕಿದ. ಹೀಗೆ ನಮ್ಮ ಮೊದಲ ತಂಗಿ 'ಸುಮನಾ' ಹಾಗೂ ಇನ್ನೆರಡು ವರ್ಷಗಳ ನಂತರ ಎರಡನೆಯ ತಂಗಿ 'ಶಾಲಿನಿ' ಈ ಮಹಾಬಲ ಸಂಸಾರದ ಸದಸ್ಯೆಯರಾದರು.
           ಹೆಚ್ಚುತ್ತಿದ್ದ  ಖರ್ಚು ಮತ್ತು ಜವಾಬ್ದಾರಿಗಳನ್ನು ಸರಿದೂಗಿಸಲು ಅವಿರತ ದುಡಿಮೆಯ ಈ ದಂಪತಿ ಹೊಸ ಹೊಸ ಮಾರ್ಗಗಳನ್ನು ಆವಿಷ್ಕರಿಸಲೇ ಬೇಕಾಯಿತು. ಕನಸುಗಳ ಬೆನ್ನೇರಿ ಹೊರಟವರಿಗೆ ವಿಶ್ರಾಂತಿ ಎಂಬುದೂ ಕನಸೇ ಅಲ್ಲವೇ?













           

Wednesday 6 August 2014

ಅಂತರಾತ್ಮನ ದನಿಗೆ.......

         ಕಳೆದ ಸುಮಾರು ೮-೯ ವರ್ಷಗಳಿಂದ ಪೂಜ್ಯ ಶ್ರೀ ಡಿ. ವಿ. ಜಿ. ವಿರಚಿತ "ಮಂಕುತಿಮ್ಮನ ಕಗ್ಗ " ನನಗೆ ಗುರುಸ್ಥಾನದಲ್ಲಿದ್ದು ದಾರಿ ತೋರುತ್ತಿರುವ ಪುಸ್ತಕವಾಗಿದೆ. ಅದಕ್ಕೂ ಮೊದಲು ಸಹ ಅದರ ಸಂಗ ಇತ್ತಾದರೂ ನನ್ನ ಬದುಕಿಗೆ ಅದನ್ನು ಸಮೀಕರಿಸಿಕೊಂಡಿರಲಿಲ್ಲ. ನನ್ನ ಬೇಕು-ಬೇಡಗಳಿಗೆ ಬೇಲಿ ಹಾಕಿಕೊಂಡು, ಬದುಕಿನಲ್ಲಿ 'ನೆಮ್ಮದಿ'ಗೆ ಮಿಗಿಲಾದ ಸುಖವಿಲ್ಲ ಎಂಬುದನ್ನು ಮನಗಂಡು, ಆ 'ನೆಮ್ಮದಿ' ಪಡೆಯಲು ನೆರವಾಗುತ್ತಿರುವ "ಕಗ್ಗ'" ನನಗೆ ಗುರುವಾದರೆ, ಅದರ ಕರ್ತೃ "ದಿವಿಜ"-ಗುಂಡಪ್ಪನವರು ಮಹಾಗುರುಗಳು. ಕಳೆದ ಕೆಲ ದಿನಗಳಲ್ಲಿ ನನ್ನ ಸುತ್ತಲಿದ್ದ ಕೆಲವರ ನಡೆ-ನುಡಿಗಳನ್ನು ಕಂಡಾಗ, ಏನ ಕೇನ ಪ್ರಕಾರೇಣ  ಅಧಿಕಾರ, ಹಣ, ಪ್ರತಿಷ್ಠೆ ಹೊಂದಿಯೇ ತೀರಬೇಕೆಂದು - ಅದಕ್ಕಾಗಿ ತಮ್ಮವರಿಗೇ ವಂಚಿಸಿದರೂ ಸರಿಯೆ - ಎಂಬ ಅವರ ಮನ:ಸ್ಥಿತಿಯನ್ನು ಕಂಡಾಗ ಮರುಕ ಉಂಟಾಗುತ್ತಿದೆ. ತಾವು ಈ ಎತ್ತರ ತಲುಪಲು ತ್ಯಾಗ ಮಾಡಿದ, ತಮ್ಮ ಸುಖ ಮರೆತು ಇವರಿಗೆ  ಏಣಿಯಾಗಿ ಮೇಲಕ್ಕೇರಿಸಿದ ಹಿರಿಯರನ್ನೂ ,ಹಿತೈಷಿಗಳನ್ನೂ ಈಗಿನ ಸ್ಥಾನಬಲದಿಂದ ಅವಗಣನೆ ಮಾಡುವದನ್ನು ಗಮನಿಸಿದಾಗ ಸಂಕಟವಾಗುತ್ತದೆ.  ಹಾಗೆಂದು ಇವರು ಬುದ್ಧಿಹೀನರೇನಲ್ಲ, ಆದರೆ ತಮ್ಮ ಜ್ಞಾನ ಕೇವಲ ಪರೋಪದೇಶಕ್ಕಾಗಿಯೇ ವಿನ: ಸ್ವಯಮನುಷ್ಟಾನಕ್ಕೆ ಅಲ್ಲ ಎಂದುಕೊಂಡ ಪ್ರಭೃತಿಗಳು. ತಮ್ಮ ಜೀವಿತಾವಧಿಯ ಉದ್ದಕ್ಕೂ ಋಷಿಯಂತೆ ಬಾಳಿದ "ಡಿ. ವಿ. ಜಿ."  ಇಂಥವರನ್ನು ಎಚ್ಚರಿಸಲೆಂದೇ ಬರೆದ ಕೆಳಗಿನ ಮೂರು ಕಗ್ಗ ಚೌಪದಿಗಳು ಉಲ್ಲೇಖಯೋಗ್ಯವೆನಿಸುತ್ತವೆ.
         ೧) ಹೆಸರು ಹೆಸರೆಂದು ನೀಂ ಬಸವಳಿವುದೇಕಯ್ಯ| 
                ಕಸದೊಳಗೆ ಕಸವಾಗಿ ಹೋಹನಲೆ ನೀನು|| 
                   ಮುಸುಕಲೀ ಧರೆಯ ಮರೆವೆನ್ನನ್ ಎನುತ ಬೇಡು| 
                      ಮಿಸುಕದಿರು ಮಣ್ಣಿನಲಿ - ಮಂಕುತಿಮ್ಮ.||
             ತಾತ್ಪರ್ಯ :- ಎಂದಿದ್ದರೂ ಈ  ಮಣ್ಣಲ್ಲಿ ಮಣ್ಣಾಗಿ ಹೋಗುವವನೇ ಆದ ನೀನು ನಿನ್ನ ಹೆಸರಿಗಾಗಿ ಅದೇಕೆ ಅಷ್ಟು                                         ಗುದ್ದಾಡುತ್ತೀ. 'ಜನ ನನ್ನನ್ನು ಬೇಗನೆ ಮರೆಯಲಿ' ಎಂದುಕೊಂಡರೆ ಈ ತೊಳಲಾಟ                                                         ಇಲ್ಲವಾಗುತ್ತದೆಯಲ್ಲ! (ನಿನಗೆ ನಿರ್ಲಿಪ್ತತೆ ಸಾಧಿಸುತ್ತದೆಯಲ್ಲ !) 
          ೨) ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ |
                  ಚಿನ್ನದಾತುರಕಿಂತ ಹೆಣ್ಣು-ಗಂಡೊಲವು|| 
                    ಮನ್ನಣೆಯ ದಾಹ ಈ ಎಲ್ಲಕುಂ ತೀಕ್ಷ್ಣತಮ| 
                        ಕೊಲ್ಲುವುದದಾತ್ಮವನೆ - ಮಂಕುತಿಮ್ಮ.|| 
                                ಇದಕ್ಕೆ ಹೆಚ್ಚಿನ ವಿವರಣೆ ಅನಗತ್ಯ.
           ೩)  ಭುವಿಯಿಂದ ಮೊಳಕೆವೊಗೆವಂದು ತಮ್ಮಟೆಗಳಿಲ್ಲ|
                    ಫಲಮಾಗುವಂದು ತುತ್ತೂರಿ ದನಿಯಿಲ್ಲ|| 
                       ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ| 
                           ಹೊಲಿ  ನಿನ್ನ  ತುಟಿಗಳನು - ಮಂಕುತಿಮ್ಮ.|| 
                 ತಾತ್ಪರ್ಯ :- ಈ ಜಗತ್ತಿನಲ್ಲಿನ ಅತ್ಯಂತ ಮಹತ್ವವೂ, ಶ್ರೇಷ್ಠವೂ ಆದ ಬೀಜ ಮೊಳಕೆ ಒಡೆದು ಸಸಿಯಾಗುವ,                                           ಕಾಯಿ ಹಣ್ಣಾಗುವ ಪ್ರಕ್ರಿಯೆಗಳು, ಸೂರ್ಯ- ಚಂದ್ರರ "ಬೆಳಗುವ" ಕಾರ್ಯಗಳೇ  ಸದ್ದಿಲ್ಲದೇ                                               ನಡೆಯುತ್ತಿರುವಾಗ  ನಿನ್ನ ಸಾಧನೆಗಳನ್ನು  ಅದೇನು 'ಮಹಾ' ಎಂದು ಸಾರಿಕೊಳ್ಳುತ್ತೀ

                  ಅಂತರಾತ್ಮನ ದನಿಗೆ ಕಿವಿಗೊಡೋಣ. ಆತ್ಮವಂಚನೆಗೈಯ್ಯದೆ ಬದುಕೋಣ
                                                                                                                                           
                                              'ಸರ್ವೇ ಸಂತು ನಿರಾಮಯಾ:'

                                                    -----------------










Friday 1 August 2014

ನಾನು ಬಡವ ... ಅವಳು ಬಡವಿ .....

           " ಹಿಂದೊಮ್ಮೆ ಕದಂಬರ ಸೈನ್ಯದಲ್ಲಿ ದಳಪತಿಯಾಗಿದ್ದ 'ದೊಡ್ಡಣ್ಣ ನಾಯಕ'ನೆಂಬುವನು ನಮ್ಮ ಗ್ರಾಮದಲ್ಲಿದ್ದ ಗ್ರಾಮಾಧಿದೇವತೆ ಶ್ರೀ ಶಂಭುಲಿಂಗೇಶ್ವರನ  ಗುಡಿಯನ್ನು ಜೀರ್ಣೋದ್ಧಾರ ಮಾಡಿಸಿದ ನಂತರ ಈ ಊರಿಗೆ "ದೊಡ್ನಳ್ಳಿ"ಎಂದು ಹೆಸರು ಬಂದಿತು" ಎಂಬುದಾಗಿ ಕಾರವಾರ ಜಿಲ್ಲಾ ಗೆಜೆಟಿಯರ್ ನಲ್ಲಿ ದಾಖಲಾಗಿದೆ ಎಂದು ಈ ಊರಿನಲ್ಲಿ ಪ್ರಾಥಮಿಕ ಶಾಲೆ ಆರಂಭವಾದಾಗ ಮೊದಲ ಶಿಕ್ಷಕರಲ್ಲಿ ಒಬ್ಬರಾಗಿದ್ದ 'ಭಾಗ್ವತ  ಮಾಸ್ತರರು' (ಶ್ರೀ ಕೆ. ಎನ್. ರಾವ್ ) ಶಾಲೆಯ ಸ್ವರ್ಣ ಮಹೋತ್ಸವದ ಸಮಾರಂಭದಲ್ಲಿ ಹೇಳಿದ್ದು ನನಗೆ ನೆನಪಿದೆ. ಶ್ರೀ ಶಂಭುಲಿಂಗೇಶ್ವರ ದೇವರು ಈ ಊರಿನ ಶ್ರೇಯೋಭಿವೃದ್ಧಿಗೆ ಕಾರಣೀಕರ್ತನು. ನಮ್ಮೂರಿನವರ ಆರಾಧ್ಯ ದೈವವಾದ ಇವನು ಸುತ್ತಲಿನ ಸೋಮನಳ್ಳಿ, ಬಿಸಲಕೊಪ್ಪ , ಚಿಪಗಿ, ತಾರಗೋಡು, ನಡಗೋಡು ಮೊದಲಾದ ಗ್ರಾಮಗಳ ಕೆಲವರಿಗೆ ಕುಲದೈವವೂ ಹೌದು. ಊರಿನ ಹಿರಿಯರಾದ ದಿ. ಗಣಪತಿ ಹೆಗಡೆಯವರು "ಈ ಊರಿನಲ್ಲಿ ವಿನಯಶೀಲತೆಯೇ ಉನ್ನತಿಗೆ ಸೋಪಾನ. ನಾ, ನಾ (ಅಹಂ ಭಾವ) ಎಂಬುವವನನ್ನು ನಮ್ಮ ಶಂಭುಲಿಂಗ ಎಂದೂ ಸಹಿಸನು" ಎಂದು ಹೇಳುತ್ತಿದ್ದುದನ್ನು ನಾನು ಬಾಲಕನಿದ್ದಾಗ ಕೇಳಿದ್ದು ಚೆನ್ನಾಗಿ ನೆನಪಿದೆ. ಇಲ್ಲಿ ಶಿವನ ಅಭಿಷೇಕಕ್ಕೆ ನಿಗದಿ ಪಡಿಸಿದ ಹೊಂಡ / ಭಾವಿಯ ನೀರನ್ನೇ ಬಳಸಬೇಕೆಂಬ ನಿಯಮವಿದೆ. ಈ ಭವಹರನ ಮಹಿಮೆ ಅಪಾರವಾಗಿದ್ದು ಭಕ್ತವೃಂದ ಕೂಡ ವಿಶಾಲವಾಗಿದೆ. ಈಗ ಗುಡಿ ಮತ್ತೊಮ್ಮೆ ನವೀಕೃತವಾಗಿದ್ದು ವಿಶಾಲವೂ, ಪ್ರೇಕ್ಷಣೀಯವೂ ಆಗಿದೆ.
             ನನ್ನ ತಂದೆಯವರು ಈ ಊರಿಗೆ ಬಂದಾಗ ದೇವಸ್ಥಾನ ಎಂದರೆ ಒಂದು ಗರ್ಭಗುಡಿ, ಕಿರಿದಾದ ಪ್ರದಕ್ಷಿಣ ಪ್ರಾಕಾರ    ಹಾಗೂ ಎದುರಿನಲ್ಲಿ ಒಂದು ಪುಟ್ಟ ನವರಂಗ (ಸಭಾಗೃಹ) ಇಷ್ಟು ಮಾತ್ರ ಇದ್ದ, ನಿತ್ಯ ಪೂಜೆ ನಡೆಯುತ್ತಿದ್ದ,ಸಣ್ಣ ದೇವಳವಾಗಿತ್ತು. ಗರ್ಭಗೃಹದಲ್ಲಿ ಉದ್ಭವಲಿಂಗವೆಂದು ಪ್ರತೀತಿಯಿದ್ದ ಶಂಭುಲಿಂಗ ಹಾಗು ಎದುರಿನಲ್ಲಿ (ಹೊರಗೆ) ಮೂತಿಯೋ ಬಾಲವೋ, (ನನಗೀಗ ಸರಿಯಾಗಿ ನೆನಪಿಲ್ಲ ) ಖಡ್ಗದಿಂದ ಕೆತ್ತಿಹೋದ ಪುಟ್ಟ ಬಸವಣ್ಣ. ಈ ನಂದಿಯ ಮೇಲುಗಡೆ, ಈಗಲೂ ಇರುವ, ದೊಡ್ಡ ಘಂಟೆ. ಇಂತಿಪ್ಪ ಈ ಗುಡಿಯ ಅರ್ಚಕ ಹುದ್ದೆಯನ್ನೂ ಸಹ ಒಪ್ಪಿಕೊಂಡ ನನ್ನ ತಂದೆ ಮಹಾಬಲೇಶ್ವರನಿಗೆ ಒಟ್ಟಿನಲ್ಲಿ ಆ ಊರಿನವರಲ್ಲಿ ಒಬ್ಬನಾಗಿ, ತಾನು ನೆಲೆ ನಿಲ್ಲಬೇಕಾಗಿತ್ತು.
             ಈ ಮಹಾಬಲನು 'ಗೇಣಿ'ಗೆ ಪಡೆದ ಜಮೀನು ಸಹ ವರ್ಣನಾಯೋಗ್ಯವೇ ಇದೆ. 'ಸಾಗುವಳಿ ಯೋಗ್ಯ'ವೆಂದು ಗುರುತಿಸಲ್ಪಟ್ಟ ಗದ್ದೆಗಳಲ್ಲಿ ಎರಡು ಭಾಗ - ಮೇಲೆ ಕೆರೆಯ ಸರ್ವೇ ನಂಬರಿನಿಂದ ಕೆಳಗೆ ಸುಮಾರು  ಸಾವಿರ ಅಡಿ  ದೂರದಲ್ಲಿದ್ದ ದೊಡ್ಡ ಮಣ್ಣಿನ ಏರಿಯ ತನಕದ ಭಾಗ "ಹೊಸಕಟ್ಟೆ" ಹಾಗೂ ಅದರ ಕೆಳಗೆ ಹಾನಂಬೆ ರಸ್ತೆಯತನಕದ ಭಾಗ "ಮೂಲಗದ್ದೆ". ನನ್ನಮ್ಮ ಈಗಲೂ ಆ ಗದ್ದೆಗಳ ವೈಖರಿ ನೆನಪಿಸಿಕೊಳ್ಳುತ್ತಾಳೆ -ನಾಟಾ ಎಂದು ಬಳಸಬಹುದಾದ ಎಲ್ಲ ದೊಡ್ಡ ಮರಗಳನ್ನೂ ಕಡಿದು ಖಾಲಿ ಮಾಡಲ್ಪಟ್ಟ, ಕೇವಲ ಮುಳ್ಳು ಕಂಟಿ ಮತ್ತು ದಟ್ಟವಾದ ಬಿದಿರು ಮೆಳೆಗಳಿಂದ ತುಂಬಿಹೋದ 'ಹೊಸಕಟ್ಟೆ'ಯಲ್ಲಿ ಅಲ್ಲೊಂದು ಇಲ್ಲೊಂದು 'ಹಾಳಿ' ಹಾಕಿದ ಗುರುತು ಬಿಟ್ಟರೆ ಅದು ಪಕ್ಕದ ಕಾಡಿನ ವಿಸ್ತರಿತ ಭಾಗದಂತೆ ಕಾಣುತ್ತಿತ್ತು. 'ಮೂಲಗದ್ದೆ' ಇದ್ದುದರಲ್ಲೇ ಸ್ವಲ್ಪ ಮೇಲು. ಆಳು ನೋಡಲು ಭಾರಿ ಅಲ್ಲದಿದ್ದರೂ ಮಹಾಬಲನಲ್ಲಿ ಛಲ ಮತ್ತು ಬಲಕ್ಕೆ ಕೊರತೆ ಇರಲಿಲ್ಲ. ಅಕ್ಷರಶ: ಅಹೋರಾತ್ರಿ ದುಡಿದ ಈ "ಗೌರಿ-ಮಹಾಬಲ" ಜೋಡಿ ಆ ಕಾಡನ್ನೆಲ್ಲ ಸವರಿ, ಸುಟ್ಟು, ಗದ್ದೆಯಾಗಿ ಪರಿವರ್ತಿಸಿದಾಗ ನೋಡಿದವರಿಗೆ ಅದರ ಭೂತರೂಪ ಕಟ್ಟುಕತೆ ಅನ್ನಿಸುವ ಹಾಗೆ ಆಗಿತ್ತು. ಆದರೆ ಗದ್ದೆಯ ಎರಡೂ ಪಕ್ಕಗಳಲ್ಲಿದ್ದ "ಬ್ಯಾಣ" ನನಗೆ ತಿಳುವಳಿಕೆ ಮೂಡಿದಾಗಲೂ ಅದೇ ರೂಪದಲ್ಲೇ ಇತ್ತು.
             ಇಷ್ಟೆಲ್ಲ ಕಷ್ಟಪಟ್ಟು ತಯಾರು ಮಾಡಿದ ಗದ್ದೆಯಲ್ಲಿ ಬೇಸಾಯ ಮಾಡಲು ನನ್ನ ಅಪ್ಪಯ್ಯ ಎಲ್ಲರ ಕೃಷಿ ಕೆಲಸ ಮುಗಿಯುವ ತನಕ ಕಾಯಬೇಕಾಗುತ್ತಿತ್ತು. ಏಕೆಂದರೆ ಇವನಲ್ಲಿ ತನ್ನ ಸ್ವಂತ ಎತ್ತಿನ ಜೋಡಿ ಇರಲಿಲ್ಲ. ಅಂತೂ ಇಂತೂ ಅವರಿವರಲ್ಲಿ  ದಮ್ಮಯ್ಯ ಎಂದು ಗುಡ್ಡೆ ಹಾಕಿ ಸಸಿ ನಾಟಿ ಮಾಡಿ ಬಂದರೆ ಕಾಡಿನಂಚಿನ ಈ ಗದ್ದೆಯಲ್ಲಿ ಕಳ್ಳ ದನಗಳ ಕಾಟ. ಅವು  ಮೇಯ್ದು ಉಳಿದಿದ್ದರಲ್ಲಿ ತೆನೆಗೂಡಿದಾಗ, ಆ ಭಾಗದಲ್ಲಿದ್ದ ಅಸಂಖ್ಯ ಕಾಡುಹಂದಿಗಳು ಲೂಟಿ ಮಾಡಿದ ನಂತರ, ಇವನ ಪಾಲಿಗೆ  ಅದೆಷ್ಟು ಮಿಗುತ್ತಿತ್ತೋ ನಾ ಕಾಣೆ. ಊರೊಳಗಿಂದ ಗದ್ದೆಗೆ ಹೋಗಿಬರಲೂ ದೂರವಾಗುತ್ತಿತ್ತು. ಮನೆಯಲ್ಲಿ ಅದಾಗಲೇ ಮಕ್ಕಳ ಸೈನ್ಯ ತಯಾರಾಗುತ್ತಿತ್ತು. ಜೊತೆಯಲ್ಲಿ ಗ್ರಾಮ ದೇವರ ಪ್ರಸಾದ ವಿತರಣೆಗಾಗಿ ಪ್ರತಿ ವಾರವೂ ಸೀಮೆ ಪೂರ್ತಿ ಸುತ್ತುವ ಕೆಲಸ.   ದೇವರ ನಿತ್ಯ ಪೂಜೆಗೆ ಎಲ್ಲಿದ್ದರೂ ಬರಲೇ ಬೇಕಾದ ಅನಿವಾರ್ಯತೆ ಬೇರೆ. ತಾಯಿ ಬದುಕಿದ್ದಾಗ ಕಂಡ ಕಷ್ಟಗಳು ಒಂದು ಬಗೆಯವಾದರೆ ಈಗ ಹೆಂಡತಿ ಮಕ್ಕಳು ಸಹ ತನ್ನ ಜೊತೆಗೇ  ಕಷ್ಟ ಪಡುವದನ್ನು ಕಾಣುವ ಅಸಹಾಯಕತೆ ಕೂಡಾ ಸೇರಿಕೊಂಡು ಮಹಾಬಲನಿಗೆ ಬದುಕು ದುಃಸಹವೆನಿಸತೊಡಗಿತ್ತು. ದೇವಸ್ಥಾನದ ಪೂಜೆಗೆ ಬರಲು ತಡವಾದಲ್ಲಿ ಗೌರಿ ಸಹ ಊರವರ ಮಾತು ಕೇಳಬೇಕಾಗುತ್ತಿತ್ತು. ಇದರಿಂದ ಅವಳೂ ಸಿಟ್ಟಿಗೆದ್ದು ಗಂಡನಿಗೆ ಮಂಗಳಾರತಿ ಮಾಡುತ್ತಿದ್ದಳು. ಇವೆಲ್ಲದರಿಂದ ರೋಸಿಹೋಗಿ  ಕೊನೆಗೆ ಅನಿವಾರ್ಯವಾಗಿ ದೇವರ ಪೂಜೆಯನ್ನು ಘಟ್ಟದ ಕೆಳಗಿನಿಂದ ಬಂದ ನರಸಿಂಹ ಭಟ್ಟರಿಗೆ ವಹಿಸಿಕೊಟ್ಟು, ಕೈತೊಳೆದುಕೊಂಡನು. ಇದೆಲ್ಲ ನಾನು ಹುಟ್ಟುವ ಪೂರ್ವದಲ್ಲೇ ಆದ ಕಥೆ.
          ಆ ವಿಷಮ ದಿನಗಳಲ್ಲಿ ಈ ಮಹಾಬಲ ಸಂಸಾರ ಹೇಗೆ ಸಾಗುತ್ತಿತ್ತು ? ಬಹುಶ: ಬೆಳೆದ ಬೆಳೆ ಕೂಲಿಯಾಳುಗಳ ಸಂಬಳಕ್ಕೆ ಮಾತ್ರ ಸಾಲುತ್ತಿತ್ತೇನೋ! ಪ್ರತಿ ಏಪ್ರಿಲ್ ತಿಂಗಳಲ್ಲೊಮ್ಮೆ ನವೀಕರಣಗೊಳ್ಳುತ್ತಿದ್ದ ಸೊಸಾಯಿಟಿ ಸಾಲವೇ ಕೃಷಿಗೆ ಬಂಡವಾಳ. ಪತಿ - ಪತ್ನಿ ಮಾತ್ರವಲ್ಲದೆ ದುಡಿಯದೇ ತಿನ್ನುವ ಪುಟ್ಟ ಮಕ್ಕಳ ಹೊಟ್ಟೆ ಸಹ ತುಂಬಬೇಕಿತ್ತು.  ಅದಕ್ಕಾಗಿ ಸಣ್ಣ ಪುಟ್ಟ ಪೌರೋಹಿತ್ಯ, ಮದುವೆ ಮುಂಜಿ ಮುಂತಾದ ಶುಭಕಾರ್ಯಗಳಲ್ಲಿ ನೀಡುವ ದಕ್ಷಿಣೆ,ವರ್ಷಕ್ಕೊಮ್ಮೆ ಸೀಮೆ ಸುತ್ತಿ ಗಿಟ್ಟಿಸುತ್ತಿದ್ದ 'ಸಂಭಾವನೆ', ಸಣ್ಣ ಪುಟ್ಟ ಸಮಾರಂಭಗಳಲ್ಲಿ ಅಡಿಗೆ ಕೆಲಸ, ಅಲ್ಲಲ್ಲಿ ಕಿರಾಣಿ ಅಂಗಡಿಗಳಲ್ಲಿ ದೊರಕುತ್ತಿದ್ದ ತಾತ್ಪೂರ್ತಿಕ ಉದ್ರಿ -ಇವೆಲ್ಲವುಗಳ ಮೇಲೆಯೇ ಈ ಕುಚೇಲನ ಜೀವನ ರಥ ಸಾಗುತ್ತಿತ್ತು. ಈ ಮಧ್ಯೆ, ಜಮೀನಿನ ನಡುವೆಯೇ ಮನೆ ಮಾಡಿದರೆ ಸಾಕಷ್ಟು ಅನುಕೂಲತೆ ಇದೆಯೆಂದು ಆಲೋಚಿಸಿ ಊರೊಳಗಿನ ಜಾಗೆಯನ್ನು ಸೊರಬ  ಸೀಮೆಯಿಂದ ಬಂದು ನಮ್ಮೂರಿನಲ್ಲಿ ಜಮೀನು ಮಾಡುತ್ತಿದ್ದ ಶ್ರೀಯುತ ರಾಮಪ್ಪ ಶೇಷಗಿರಿಯಪ್ಪ ಹೆಗಡೆಯವರಿಗೆ ಮಾರಿ, ಅದೇ ದುಡ್ಡಿನಲ್ಲಿ ತನ್ನ ಜಮೀನಿನಲ್ಲಿಯೇ ಒಂದು ಮನೆ ಕಟ್ಟಿಕೊಂಡನು. ಆ ಮನೆ ಕಟ್ಟುವಾಗ ನಾನು ಕನ್ನಡ ಶಾಲೆಯ ಎರಡನೇ ವರ್ಗದಲ್ಲಿದ್ದೆ. ನನ್ನ ದೊಡ್ಡಣ್ಣ ವಿನಾಯಕ ಅದರ ನಿರ್ಮಾಣದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದನು. ಸುಮಾರು ೮ ಅಂಕಣದಷ್ಟು ಜಾಗ ಇದ್ದ ಅದರ ಸುತ್ತಲೂ ಮಣ್ಣು ಮುದ್ದೆ ಗೋಡೆ  ಹಾಗೂ ಒಳಗಡೆ ಮೂರು ಭಾಗವಿತ್ತು.
         ಆ ಮನೆಯ ಪ್ರವೇಶದ ಜೊತೆಗೇ ನನ್ನಣ್ಣನ ಮುಂಜಿ ಸಹ ಮಾಡಲು ಅಪ್ಪಯ್ಯ ಯೋಜಿಸಿದ್ದ. ಊರೊಳಗಿನ ಜಾಗ ಮಾರಿದ ದುಡ್ಡಿನಲ್ಲೇ ಇದೂ ಕೂಡ ಆಗಬೇಕಿತ್ತು. ಅದಕ್ಕಾಗಿ ಪಕ್ಕದ ಇಸಳೂರಿನ ಗೌಡರ ಅಂಗಡಿಯಲ್ಲಿ ಕಿರಾಣಿ ಸಾಮಾನು ತರಲು ಹೋದಾಗ ಮೊದಲು ಹಳೇ ಬಾಕಿ ತುಂಬಿಸಿಕೊಂಡ ಅವರು, ತಾನು ಉದ್ರಿ ಕೊಡುವದನ್ನು ನಿಲ್ಲಿಸಿಬಿಟ್ಟಿರುವದಾಗಿ ಹೇಳಿಬಿಟ್ಟರು. ತನ್ನ ಪರಿಸ್ಥಿತಿಯನ್ನು ಪರಿಪರಿಯಾಗಿ ವಿವರಿಸಿದರೂ ಅದಕ್ಕೆ ಸೊಪ್ಪು ಹಾಕದ ಅವರು ಇವನನ್ನು ಸಾಗಹಾಕಿದರು. ಮಾರನೆ ದಿನದ ಕಾರ್ಯಕ್ಕಾಗಿ ಎಲ್ಲರಿಗೂ ಹೇಳಿಯಾಗಿತ್ತು. ಆದರೆ ಮನೆಯಲ್ಲಿ ನಾಲ್ಕು ಜನರಿಗೆ ಮಾಡಿ ಬಡಿಸುವಷ್ಟು ಸಾಮಗ್ರಿಯೂ ಇರಲಿಲ್ಲ. ಆ ಅತೀವ ನಿರಾಶೆಯಲ್ಲಿ ದುಃಖತಪ್ತ ದಂಪತಿ ದೇವರ ಮೇಲೆ ಭಾರ ಹಾಕಿ ಮಲಗಿದರು.
          ಅದು ಹೇಗೋ ಈ ವಿಷಯ ಗೊತ್ತುಮಾಡಿಕೊಂಡ ರಾಮಪ್ಪ ಹೆಗಡೆಯವರು ಮರುದಿನ ಸೂರ್ಯೋದಯಕ್ಕೆ ಸರಿಯಾಗಿ ಅವತ್ತಿನ ಪುಟ್ಟ ಸಮಾರಂಭಕ್ಕೆ ಅವಶ್ಯವಿರುವಷ್ಟು ದಿನಸಿ ಸಾಮಗ್ರಿ, ಅಕ್ಕಿ, ಕಾಯಿ ಮತ್ತು ಒಂದು ಡಬ್ಬಿ ಬೆಲ್ಲ- ಎಲ್ಲವನ್ನು ಆಳುಗಳ ಕೈಲಿ ಹೊರಿಸಿ ಈ ಹೊಸಮನೆಗೆ ಕಳಿಸಿಕೊಟ್ಟಿದ್ದರು. ಕೃತಜ್ಞತೆಯಿಂದ ಕೊರಳ ಸೆರೆ ಉಬ್ಬಿ ಬಂದ ಮಹಾಬಲ ಭಟ್ಟರ ಬೆನ್ನು ತಟ್ಟಿ, 'ಮೊದಲು ಕಾರ್ಯ ಸಾಗಿಸಿ' ಎಂದು ಪ್ರೋತ್ಸಾಹದ ಮಾತಾಡಿದರು. ಅಂದು ನಮ್ಮ ಕುಟುಂಬದ ಪಾಲಿಗೆ ದೇವರೇ ಆಗಿಬಂದ, ಈಗ ತೊಂಭತ್ತರ ಹೊಸ್ತಿಲಲ್ಲಿರುವ ಶ್ರೀಯುತ ರಾಮಪ್ಪ ಹೆಗಡೆಯವರು ನಾವು ಸಹೋದರರಿಗೆಲ್ಲ ತೀರ್ಥರೂಪರೆ ಹೌದು.
          "ಕೊಲ್ಲುವ  ದೇವರಿಗಿಂತ ಕಾಯುವ ದೇವರು ದೊಡ್ಡವನು" ಎಂಬುದು ಇದಕ್ಕೇ ಅಲ್ಲವೇ ?
           


















     

Friday 27 June 2014

ಮರೆಯಲಾಗದ 'ಮುದಿಯಮ್ಮ'

                                                                                                                                                                            ಈ ಬರಹವನ್ನು ಓದುವ ಪೂರ್ವದಲ್ಲಿ ಈ ಹಿಂದೆ ಇದೇ blogspotನಲ್ಲಿ  ಪ್ರಕಟಿಸಿದ ನನ್ನ "ಮಹಾತಾಯಿ" ಮೇಲೊಮ್ಮೆ ಕಣ್ಣು ಹಾಯಿಸುವದೊಳಿತು  .
        ಅದು ೧೯೪೬-೪೯ರ ಸುಮಾರಿನ ಸಮಯ. ಇಡೀ  ದೇಶ ಸ್ವಾತಂತ್ರ್ಯದ ಘಮಲಿನಲ್ಲಿ ಉನ್ಮತ್ತವಾಗಿದ್ದ ಕಾಲ. ಇದೇ ಸುಮಾರಿಗೆ ಅದಾಗಲೇ ಶಿರಸಿ ತಾಲೂಕಿನ ಕುಳವೆ ಗ್ರಾಮದಲ್ಲಿ ತನ್ನ ದುಡಿಮೆಯಲ್ಲಿ ಬದುಕುತ್ತಾ, ತನ್ನ ಸಜ್ಜನಿಕೆಯಿಂದಾಗಿ  ಊರವರೆಲ್ಲರ ಪ್ರೀತಿಗೆ ಪಾತ್ರನಾಗಿದ್ದ ಯುವಕ ಮಹಾಬಲೇಶ್ವರನಲ್ಲೂ ತನ್ನದೇ ಆದ ಸ್ವಂತ ಜಮೀನು ಹೊಂದುವ ಆಸೆ  ಅದಮ್ಯವಾಗಿ ತಲೆಯೆತ್ತುತ್ತಿತ್ತು. ಕುಳವೆಯಲ್ಲಿ ಬಡ್ತಿ ಡಾಕ್ಟರರ ಮನೆಯಲ್ಲಿ ಮನೆ ಮಗನ ತರಹದ ಪ್ರೀತಿ ವಿಶ್ವಾಸ ಸಿಗುತ್ತಿದ್ದರೂ ಸ್ವತಂತ್ರ ನೆಲೆ ಹೊಂದುವ ಅಭಿಲಾಷೆಯ  ಮುಂದೆ ಅದು ಹಿನ್ನೆಲೆಗೆ ಸರಿಯುತ್ತಿತ್ತು. ಒಂದೆರಡು ವಿಫಲ ಯತ್ನಗಳ ನಂತರ ಕೊನೆಗೊಮ್ಮೆ ತಾಲೂಕಿನ ಪೂರ್ವ ಭಾಗದ "ದೊಡ್ನಳ್ಳಿ"ಯಲ್ಲಿ 'ಗೇಣಿ'ಗೆ  ಜಮೀನು ಸಿಗುವ ಬಾತ್ಮಿಯನ್ನು ಪಡೆದು, ಅದರ ಮಾಲಿಕರಾದ ಕಾರವಾರದ ವಕೀಲ ಹಬ್ಬುರಾಯರನ್ನು ಮತ್ತು ಶಿರಸಿಯಲ್ಲಿ ಅವರ ಪ್ರತಿನಿಧಿಯಾದ ಶ್ರೀಮತಿ ಫಣಿಯಮ್ಮ ಹೆಬ್ಬಾರರನ್ನು ಭೆಟ್ಟಿಯಾಗಿ, ಸುಮಾರು ಹದಿನೆಂಟು ಎಕರೆಯಷ್ಟು ಜಮೀನನ್ನು ಗೇಣಿ ಕರಾರಿನ ಮೇಲೆ ಪಡೆಯುವಲ್ಲಿ ಯಶಸ್ವಿಯಾದನು. ಆಗಿನ ಕಾಲದಲ್ಲಿ ಅದಕ್ಕೆ ವಾರ್ಷಿಕ ತಲಾ ಇಪ್ಪತ್ನಾಲ್ಕು ರೂಪಾಯಿಗಳ ಗೇಣಿ ಮತ್ತು ಸರಕಾರೀ ತೆರಿಗೆ ಇತ್ತು.
        ಆ ವೇಳೆಗೆ ಶಿರಸಿ ಸೀಮೆಯಲ್ಲಿ "ಕನ್ಯಾಬರ" ಇತ್ತು. ಮನೆಮಾರು ಎಲ್ಲ ಇದ್ದವರಿಗೇ ಹೆಣ್ಣು ಸಿಗದ ವಾತಾವರಣ ಇದ್ದಾಗ ಈ ಸುದಾಮನಿಗೆ ಯಾರು ಹೆಣ್ಣು ಕೊಡಬೇಕು. ಮೇಲಾಗಿ ಇವನಿಗಾಗಲೇ ೩೨-೩೩ ವರ್ಷವಾಗಿತ್ತು. ಆ ಸಮಯದಲ್ಲಿ ಘಟ್ಟದ ಕೆಳಗಿನ ಕುಂಬಳ ಸೀಮೆಯಿಂದ ಮಲಯಾಳಿ ಹೆಣ್ಮಕ್ಕಳನ್ನು ತಂದು ತಾವೇ ಎಲ್ಲ ಖರ್ಚು ಹಾಕಿಕೊಂಡು ಮದುವೆ ಮಾಡಿಕೊಳ್ಳುವ ಪದ್ಧತಿ ಅಲ್ಲಲ್ಲಿ ಕೆಲ ಹವ್ಯಕರಲ್ಲಿ ಕಂಡುಬರತೊಡಗಿತ್ತು. (ಚಕ್ರ ಮತ್ತೊಂದು ಸುತ್ತು ತಿರುಗಿದ್ದು ಹವ್ಯಕ ವಿವಾಹಯೋಗ್ಯ ಗಂಡುಗಳಿಗೆ ಈಗ ಮತ್ತೊಮ್ಮೆ "ಕನ್ಯಾಬರ" ಎದುರಾಗಿದೆ. ಎಂತಹ ವಿಪರ್ಯಾಸ !). ಕೆಲ ಮಧ್ಯವರ್ತಿಗಳ ನೆರವಿನಿಂದ ಮಹಾಬಲೇಶ್ವರನೂ ಮಂಗಳೂರಿನ ಸನಿಹದ ಪಣಂಬೂರಿನ ಲಕ್ಷ್ಮೀನಾರಾಯಣ ಐತಾಳರ ಕೊನೆಯ ಮಗಳು ಗೌರಿಯನ್ನು, ಕನ್ಯಾಶುಲ್ಕ ನೀಡಿ, ಅಲ್ಲೇ ಹೋಗಿ ಲಗ್ನವಾದನು. ಅದಾಗಲೇ ಇಳಿವಯಸ್ಸು  ಹಾಗೂ ಕಾಡುತ್ತಿದ್ದ ಉಬ್ಬಸದ ಕಾರಣದಿಂದ ಜರ್ಝರಿತರಾಗಿದ್ದ ಐತಾಳರು  ವಿಶೇಷ ವಿಚಾರ ಮಾಡದೆ ಗುರುತು ಪರಿಚಯ ಇಲ್ಲದ, ಘಟ್ಟದ ಮೇಲಿನವನಾದ, ತನ್ನ ಮಗಳಿಗಿಂತ ಸುಮಾರು ೨೦-೨೧ ವರ್ಷ ಹಿರಿಯನಾದ ಈ ವರನಿಗೆ ಗೊಂಬೆಯಂತೆ ಸುಂದರಳಾದ ತಮ್ಮ  ಮುಗ್ಧ  ಮಗಳನ್ನು ಧಾರೆಯೆರೆದು ಕೊಟ್ಟು,  ಕನ್ಯಾಸೆರೆ ಬಿಡಿಸಿಕೊಂಡು ನಿರಾಳವಾದರು. ಮದುವೆಯ ಗಡಿಬಿಡಿ ಎಲ್ಲ ಮುಗಿದ ಮೇಲೆ ಗೌರಿಯ ಅಣ್ಣ ಸುಂದರನು (ವೆಂಕಟರಮಣ ಐತಾಳ)  ಘಟ್ಟದ ಮೇಲಿನ  ಅಳಿಯದೇವರ ಊರು-ಮನೆ ನೋಡಲು ಬಂದರೆ ಇಲ್ಲೇನಿದೆ?  'ಕೈಲಾಸವಾಸಿ ಪರಮೇಶ್ವರನಂತೆ ತನಗೂ ಏನೂ ಕಮ್ಮಿ ಇಲ್ಲ' ಎಂದು ಅತ್ತೆ-ಮಾವನವರ  ಮುಂದೆ ಹೇಳಿಕೊಂಡಿದ್ದ ಅಳಿಯಬಹಾದ್ದೂರನ ಸ್ಥಿತಿ ನಿಜವಾಗಿಯೂ ಆ ಸ್ಮಶಾನವಾಸಿ ಶಿವನ ಹಾಗೆ 'ಅಂಬರ ಛತ್ತಿನ ಕೆಳಗೆ ಭೂತಾಯಿ ಮಂಚದ' ರೀತಿಯೇ ಇದ್ದದ್ದು ನೋಡಿ ಕೋಪದಿಂದ  ಕೆಂಡಾಮಂಡಲನಾದ ಆ ಅಣ್ಣ  ತನ್ನ ಅಬೋಧ ತಂಗಿಯನ್ನು ಕರೆದುಕೊಂಡು ಬಂದ ಹಾಗೆಯೇ ಹಿಂದಕ್ಕೆ ಹೊರಟು  ಹೋದನು. ಕಷ್ಟ ಕೋಟಲೆಗಳನ್ನೇ ಹಾಸಿ ಹೊದೆದು ದೊಡ್ಡವನಾಗಿದ್ದ ಮಹಾಬಲನ ಜೋಳಿಗೆಗೆ ಈಗ ಇನ್ನೊಂದು ಮಹಾಕಷ್ಟ ಬಂದು ಬಿದ್ದಂತಾಯಿತು.
        ದೂರದ ಮದ್ರಾಸಿನಲ್ಲಿ ನೌಕರಿ ಮಾಡುತ್ತಿದ್ದ ಸುಂದರನು ಈ ಪುಟ್ಟಗೌರಿಯನ್ನು ಕರೆದುಕೊಂಡು ಹೋಗಿ ಘಟ್ಟದ ಕೆಳಗಿನ 'ಅರಬೈಲಿ'ನಲ್ಲಿದ್ದ ತನ್ನ ಇನ್ನೊಬ್ಬ ತಂಗಿ- ಬಾವರ ಮನೆಯಲ್ಲಿ ಬಿಟ್ಟು ಹೊರಟು ಹೋದನು.  ವರ್ಷಒಪ್ಪತ್ತು ಅಲ್ಲೇ ಇದ್ದ ಗೌರಿಗೆ  ಇನ್ನೊಬ್ಬ ವರನನ್ನು ಹುಡುಕಿ ಲಗ್ನ ಮಾಡಿಕೊಡುವ ತಯಾರಿ ನಡೆದಿರುವ ಸುದ್ದಿ ತಿಳಿದ ಮಾಬ್ಲೇಶ್ವರ (ನಾರದರಂತೆ ಎಲ್ಲ ಸೀಮೆಗಳನ್ನು ಸುತ್ತಿ ಗೋಕರ್ಣ ಮಹಾಬಲೇಶ್ವರ ದೇವರ ಪ್ರಸಾದ ವಿತರಣೆ ಮಾಡುತ್ತಿದ್ದ ಗೋಕರ್ಣ ಪುರಾಣಿಕರೊಬ್ಬರ ಮುಖಾಂತರ ) ತನ್ನ ಮಿತ್ರನೊಬ್ಬನಿಗೆ ಪೋಲೀಸನ ಡ್ರೆಸ್ ತೊಡಿಸಿಕೊಂಡು ಸೀದಾ ಅರಬೈಲಿಗೆ ಹೋದನು. ತನ್ನ ಹೋಟೆಲ್ಲಿನ ಒಳಗೆ ಪೊಲೀಸರು ಬಂದು ಗದ್ದಲ ಎಬ್ಬಿಸಿದರೆ ಆಗಬಹುದಾದ ಅನಾನುಕೂಲ ಗ್ರಹಿಸಿದ ಗೌರಿಯ ಬಾವ ತಡ ಮಾಡದೆ ನಿರ್ಣಯ ತೆಗೆದುಕೊಂಡು ಬಡಪಾಯಿ ಗೌರಿಯನ್ನು ಅವಳ ಗಂಡನ ಸುಪರ್ದಿಗೆ ವಹಿಸಿಕೊಟ್ಟನು. ಮತ್ತೊಮ್ಮೆ ಗೌರಿ ದೊಡ್ನಳ್ಳಿಗೆ-ಈ ಬಾರಿ ತೌರಿನ ಬೆಂಗಾವಲಿಲ್ಲದೆ -ಬಂದು ಸ್ಥಾಪಿತಳಾದಳು.
        ದೊಡ್ನಳ್ಳಿಯಲ್ಲಿ ತನ್ನದೆಂಬ ಒಂದು ಸ್ವಂತ ಸೂರು ಇರದ ಕಾರಣ ಅದಾಗಲೇ ಅಲ್ಲಿ ನೆಲೆಸಿದ್ದ, ತನ್ನ ದೂರದ ಬಂಧುಗಳೂ ಆಗಿದ್ದ  'ಹೊಸಹಕ್ಕಲಿ'ನವರ ಮನೆಗೆ ಈ ಮಹಾಶಯ ತನ್ನ ನವ ವಧುವಿನ ಪ್ರವೇಶ ಮಾಡಿಸಿದನು. ತವರಿಗೆ ವಿದಾಯ ಹೇಳುವದೆ ಹೆಣ್ಣು ಮಕ್ಕಳಿಗೆ ಸಂಕಟಮಯ ವಿಷಯ. ಅದರಲ್ಲೂ ದೂರದೂರಿನ, ಏನೂ ಗುರುತು ಪರಿಚಯ ಇಲ್ಲದ, ವಿಭಿನ್ನ ಭಾಷೆ, ಸಂಸ್ಕೃತಿ, ಸಂಪ್ರದಾಯಗಳ ಜನರಿಂದ ಕೂಡಿದ, ತನ್ನ ಗಂಡನ ಸ್ವಂತದ್ದಲ್ಲದ ಈ ಮನೆ ಸೇರಿದ ಬಾಲಕಿ ಗೌರಿಗೆ ಆ ಅಯೋಮಯ ಸ್ಥಿತಿಯಲ್ಲಿ  ಅಲ್ಲಿದ್ದ ಹಿರಿಯ ಜೀವ "ಮುದಿಯಮ್ಮ"ನ ಸಕಾಲಿಕ ಪ್ರೀತಿ ಸಂಜೀವಿನಿಯಂತೆ ಒದಗಿಬಂದಿತು.      
        ಈ 'ಮುದಿಯಮ್ಮ' ಆ ಮನೆಯ ನಾಲ್ವರು ಗಂಡು ಮಕ್ಕಳಾದ ಸುಬ್ರಾಯ, ಲಕ್ಷ್ಮಣ, ಕೃಷ್ಣ  ಮತ್ತು ಸದಾಶಿವ ಹೆಗಡೆಯವರ ತಾಯಿ ಮತ್ತು ದಿವಂಗತ ನಾರಾಯಣ ಹೆಗಡೆಯವರ ಪತ್ನಿ ಭಾಗೀರಥಿ. ಆಗಿನ ಕಾಲದ ಪದ್ಧತಿಯಂತೆ ತಲೆ ಬೋಳಿಸಿಕೊಂಡು ಕೆಂಪುಸೀರೆ ಉಟ್ಟುಕೊಳ್ಳುತ್ತಿದ್ದ ವಿಧವೆ -ಮಡಿಹೆಂಗಸು. ಅವಳು ಆ ಮನೆಯಲ್ಲಿ ಈ ಪುಟ್ಟಗೌರಿಗೆ ತಾಯಿಯ ಮಡಿಲನ್ನು ನೀಡಿದಳು. ವಯೋಸಹಜವಾದ ನಾಚಿಕೆ, ಸಿಗ್ಗು, ಪರಕೀಯ ಭಾವದಿಂದ ಕುಗ್ಗಿ ಹೋಗುತ್ತಿದ್ದ ಈ ಹುಡುಗಿಗೆ ಅಭಯ ನೀಡಿದ್ದಲ್ಲದೆ ,ಅವಳ ಗಂಡನಿಗೆ, 'ಹರುಕೋ ಮುರುಕೋ- ಒಟ್ಟಿನಲ್ಲಿ ತನ್ನದೇ ಸ್ವಂತದ್ದೆನ್ನುವ'- ಒಂದು ಬಿಡಾರ ಕಟ್ಟಿಕೊಳ್ಳಲು ಬೋಧಿಸಿದಳು. ಅದಾಗಲೇ ತನ್ನ ಹೊಸ ಸಂಸಾರಕ್ಕೆ ಏಕಾಂತದ ಅವಶ್ಯಕತೆ ಇದೆಯೆಂಬುದನ್ನು ಮನಗಂಡಿದ್ದ ಮಾಬ್ಲೇಶ್ವರ ಸನಿಹದ ಕಾಡಿನಲ್ಲಿ ಯಥೇಚ್ಚವಾಗಿ ಸಿಗುತ್ತಿದ್ದ 'ಗುರಿಗೆ'  ಗಳುಗಳನ್ನು  ತಂದು ಪಕ್ಕದಲ್ಲೇ ಇದ್ದ ಖಾಲಿ ಗಾಂವ್ಠಾಣ ಜಾಗದಲ್ಲಿ ತಟ್ಟಿಗೋಡೆ ಕಟ್ಟಿ ಒಂದು ಬಿಡಾರ ನಿರ್ಮಿಸಿಯೇ ಬಿಟ್ಟ. ವಯಸ್ಸಿನಲ್ಲಿ ಕಿರಿಯಳಾದರೂ ಕಠಿಣ ಪರಿಶ್ರಮಿಯಾಗಿ ತಯಾರಾಗಿದ್ದ ಗೌರಿ ಆ ಗೋಡೆಗಳಿಗೆಲ್ಲ  ತನ್ನ ಕೈಯಾರೆ ಮಣ್ಣಿನ ಗಿಲಾಯಿ ಮಾಡಿ, ಸಗಣಿ ಸಾರಿಸಿ ಆ ಬಿಡಾರವನ್ನೊಂದು ಮನೆಯನ್ನಾಗಿಸಿದಳು. ಇದೆಲ್ಲದರ ಹಿಂದೆ ಮುದಿಯಮ್ಮನ ಸಲಹೆ-ಸೂಚನೆಯಲ್ಲದೆ ನೆರವೂ ಸಹ ಧಾರಾಳವಾಗಿ ದೊರಕಿತ್ತು.
       ಈ ಮನೆಯಲ್ಲಿಯೇ ನಾವು ಐವರು  ಗಂಡು ಮಕ್ಕಳು ಜನಿಸಿದ್ದು ಮತ್ತು ನನ್ನ ಬೆನ್ನಿಗೆ ಹುಟ್ಟಿದ್ದ, ಮುಖದಲ್ಲಿ ವಿಶೇಷ ದೈವಿಕ ಲಕ್ಷಣಗಳನ್ನು ಹೊಂದಿದ್ದ 'ವಿಶ್ವಪತಿ' ಎಂಬ ಮಗ ತೀರಿಕೊಂಡಿದ್ದು ಕೂಡ. ಇಂತಹ ಯಾತನಾಮಯ ಸಮಯಗಳಲ್ಲೆಲ್ಲ ನನ್ನಮ್ಮನ ಕೆಚ್ಚು ಸಾಯದಂತೆ ನೋಡಿಕೊಂಡಿದ್ದು ಈ ಮುದಿಯಮ್ಮ. ನನಗೆ ಚೆನ್ನಾಗಿ ನೆನಪಿದೆ-ನಮ್ಮ ಮನೆಯೆದುರು, ರಸ್ತೆಯ ಆಚೆ ಇದ್ದ ದೊಡ್ಡ ಅರಳಿ ಮರಕ್ಕೆ ನಿತ್ಯ ನಸುಕಿನಲ್ಲಿ ಭಕ್ತಿಯಿಂದ ಪೂಜೆ ಸಲ್ಲಿಸಿ, ನಂತರ ಪ್ರಸಾದ ರೂಪದ ಬಾಳೆಹಣ್ಣನ್ನು ಕಾಯುತ್ತಿದ್ದ ನಮ್ಮ ಕೈ ಮೇಲೆ ಹಾಕಿ, ನನ್ನಮ್ಮನ ಜೊತೆ ನಾಲ್ಕು ಸುಖ-ದುಃಖದ ಮಾತಾಡಿ ತನ್ನ ಮನೆಗೆ ಹೋಗುತ್ತಿದ್ದಳು ಈ ಮುದಿಯಮ್ಮ. ನಾವು ಊರೊಳಗಿನ ಈ ಮನೆ ತೊರೆದು ನಮ್ಮ ಜಮೀನಿನಲ್ಲೇ ಮನೆ ಮಾಡಿದ ಮೇಲೂ ನಿತ್ಯ ನಮ್ಮ ಮನೆಗೆ ಬಂದು ಮಜ್ಜಿಗೆ ಕಡೆದು ಕೊಟ್ಟು, ಒಂದು ಲೋಟ ತಾನೇ ಕಡೆದ ಮಜ್ಜಿಗೆ ಕುಡಿದು, ಅದಾಗಲೇ ಸಾಕಷ್ಟು ಅನುಭವಿಯಾಗಿದ್ದ ನನ್ನ ಅಮ್ಮನ ಜೊತೆ ನಾಲ್ಕು ಮಾತಾಡಿ ಹೋಗುತ್ತಿದ್ದಳು. ಅವಳ ಪಾಲಿಗೆ ನನ್ನಮ್ಮ ಮಗಳಾದರೆ ನನ್ನಮ್ಮನಿಗೆ ಅವಳು ಅಮ್ಮ.
        ಇಂತಹ ಕರುಣಾಮಯಿ ಮುದಿಯಮ್ಮ ಕೊನೆಗೆ ಪಾರ್ಶ್ವವಾಯುವಿಗೆ ತುತ್ತಾಗಿ ಕೆಲ ತಿಂಗಳು ಹಾಸಿಗೆಯಲ್ಲೇ ಕಳೆದು ತೀರಿಕೊಂಡಾಗ ಅವರ ಮನೆಯವರಿಗಿಂತ ನನ್ನಮ್ಮ ಕಳೆದುಕೊಂಡಿದ್ದೇ ಹೆಚ್ಚಾಗಿತ್ತು.
        ನಿಷ್ಕಾಮ ಕರ್ಮ ಮಾಡುವ ಇಂತಹ ಎಲೆಮರೆಯ ಕಾಯಿಗಳಿಗೆ ಇದೋ ನನ್ನ ನಮನ!









             

Sunday 11 May 2014

ಅಂದು ಇಂದುಗಳ ಸೇತುವೆ

    ಇಂದು  ಸುಮಾರು ೩೦ ರಿಂದ ೪೦ ವರ್ಷ ವಯಸ್ಸಿನ ಆಸುಪಾಸಿನಲ್ಲಿರುವ ಬಹುತೇಕರು ತಮ್ಮ ಬಾಲ್ಯಕ್ಕಿಂತ ಹಿಂದಿನ ವರ್ಷಗಳಲ್ಲಿ ಈ ನಾಡು ಹೇಗಿದ್ದಿರಬಹುದೆಂಬುದನ್ನು ಊಹಿಸಿಕೊಳ್ಳಲಾರರು. ಏಕೆಂದರೆ ಕಳೆದ ೩೦ ವರ್ಷಗಳಲ್ಲಿ ಈ ದೇಶದಲ್ಲಿ ಪ್ರಗತಿಯ ಚಿತ್ರಣ ವರ್ಷದಿಂದ ವರ್ಷಕ್ಕೆ ಅತ್ಯಂತ ತ್ವರಿತವಾಗಿ ಬದಲಾಗುತ್ತಾ ಬಂದಿದೆ. ಅದಕ್ಕೂ ಪೂರ್ವದಲ್ಲಿ ಈ ಬದಲಾವಣೆಯ ವೇಗ ತೀರ ನಿಧಾನ ಗತಿಯಲ್ಲಿದ್ದು, ಜನರಿಗೆ ತಾವು ನಂಬಿದ ಮೌಲ್ಯಗಳನ್ನು ತಮ್ಮ ಜೀವಿತಾವಧಿಯಲ್ಲಿ ಬದಲಾಯಿಸಿಕೊಳ್ಳಬೇಕಾದ ಪ್ರಮೇಯ ಒದಗಿ ಬರುತ್ತಿದ್ದುದು ತೀರ ವಿರಳ. ಆದರೆ ಇಂದಿನ ತ್ವರಿತ ಬದಲಾವಣೆಗಳು ಜೀವನ ಮೌಲ್ಯಗಳನ್ನು ಸ್ಥಿರೀಕರಿಸಿಕೊಳ್ಳಲು ಬಿಡುವದಿಲ್ಲ. ಇದರಿಂದಾಗಿ ೬೦ರ ಮೇಲ್ಪಟ್ಟ ಹಿರಿಯರು ಇಂದಿನ ಯುವಜನತೆ ಯಾವುದೇ ಮೌಲ್ಯಗಳಿಗೆ ಬದ್ಧರಾಗಿಲ್ಲವೆಂದು ಗೊಣಗುತ್ತಿದ್ದರೆ, ಅದೇ ಯುವಕರು, ತಮ್ಮನ್ನು ತಾವು ಬದುಕಿನ ವೇಗದೊಂದಿಗೆ ಸರಿ ತೂಗಿಸಿಕೊಳ್ಳುವಲ್ಲಿ ಹೈರಾಣಾಗುತ್ತಿದ್ದಾರೆ. ಆದರೆ ಇವೆರಡು ಗುಂಪುಗಳ ಮಧ್ಯೆ ಇರುವ ನನ್ನಂತವರನ್ನು ನಾನು ಅತ್ಯಂತ ಅದೃಷ್ಟಶಾಲಿಗಳೆಂದು ಪರಿಗಣಿಸುತ್ತೇನೆ. ಏಕೆಂದರೆ, ನಮ್ಮಗಳ ಬಾಲ್ಯ ಮತ್ತು ಯೌವ್ವನ  ಹಿಂದಿನ ತಲೆಮಾರಿನವರ ಮೌಲ್ಯಾಧಾರಿತ ಬದುಕಿನ ಸಿಹಿಯನ್ನು ಉಂಡಿದ್ದರೆ ತದನಂತರ ವೃತ್ತಿಬದುಕಿನ ಸ್ಪರ್ಧಾಕಣದಲ್ಲಿ ಮೂಲೆಗುಂಪಾಗದಿರಲು  ಈಗಿನ ಇಲೆಕ್ಟ್ರಾನಿಕ್ ಯುಗದ ಧಾವಂತಕ್ಕೂ ನಾವು ಅನಿವಾರ್ಯವಾಗಿ ಒಗ್ಗಿಕೊಳ್ಳಬೇಕಾಯಿತು. ನಮ್ಮ ಯೌವ್ವನದಲ್ಲಿ ಮನದನ್ನೆಗೊಂದು ಒಲವಿನೋಲೆ ಬರೆದರೆ ಅವಳ ಮಾರೋಲೆಗಾಗಿ ವಾರಗಟ್ಟಲೆ ವಿರಹದ ಕುದಿಯಲ್ಲಿ ಕಾತರಿಸಿ ಕಾಯಬೇಕಿತ್ತು. ಏನಾದರೂ ತಡವಾದರೆ ಏಕೆಂದು ತಿಳಿಯದೆ ದುಗುಡ ಬೇರೆ. ಈಗಿನಂತೆ ಎಲ್ಲರ ಬೆರಳ ತುದಿಯಲ್ಲಿ , -ಅಷ್ಟೇಕೆ, ಎಲ್ಲರ ಮನೆಗಳಲ್ಲಿ ಸಹ ಫೋನ್ ಇದ್ದಿರದ ಕಾಲವದು. ಅಂಚೆಯ ಅಣ್ಣನೇ ಎಲ್ಲರ ಬಂಧುವಾಗಿದ್ದ ಕಾಲವದು. ಮಾಹಿತಿ ಸಂವಹನ ನಿಧಾನವಾಗಿದ್ದರಿಂದ ಸಾರ್ವಜನಿಕರ ಬದುಕಿನ ಓಟದ ಗತಿಯೂ ಅದೇ ರೀತಿ ನಿಧಾನವಾಗಿದ್ದ ಕಾಲವದು.
        ನನ್ನ ಈ ಮೊದಲಿನ ಮತ್ತು ಇನ್ನು ಬರೆಯಲು ಉದ್ದೇಶಿಸಿದ ಹೆಚ್ಚಿನೆಲ್ಲ ಬ್ಲಾಗ್ ಗಳಲ್ಲಿ ನಾನು ಆ  ಧಾವಂತರಹಿತ ಕಾಲಘಟ್ಟದಲ್ಲಿ ಬದುಕಿದ್ದ, ಹಾಗೂ ನನ್ನನ್ನು ಪ್ರಭಾವಿಸಿದ ಕೆಲ ಹೃದಯವಂತರ ಬಗ್ಗೆ ಬರೆಯಬಯಸಿದ್ದೇನೆ. ಅವರಲ್ಲಿ ಪ್ರಸಿದ್ಧರೂ ಇದ್ದಾರೆ, ಅನಾಮಿಕರೂ ಇದ್ದಾರೆ. ಅವರೆಲ್ಲರೂ ಅತ್ಯುನ್ನತ ಮಾನವತೆಯ ದೃಷ್ಟಾಂತರೂಪಿಗಳು ಎಂದೇನೂ ನಾನು ಹೇಳಲಾರೆ. ಎಲ್ಲ ಸಾಂಸಾರಿಕರಂತೆ ಅವರಲ್ಲಿಯೂ ಗುಣ-ದೋಷಗಳೆರಡೂ ಮಿಳಿತವಾಗಿದ್ದವು. ಆದರೂ "ಪರಗುಣ                ಪರಮಾಣೂನ್ ಪರ್ವತೀಕೃತ್ಯ....." ಎಂಬ  ಉಕ್ತಿಯಂತೆ ನಾ ಕಂಡ ಅವರ ಗುಣಗಳನ್ನು ಮಾತ್ರ, ಅವರ   ಹೃದಯವಂತಿಕೆಯನ್ನು  ಮಾತ್ರ, ನನ್ನ ಬಾಲ್ಯದಿಂದಾರಂಭಿಸಿ  ಅನುಕ್ರಮದಲ್ಲಿ  ವಿಶದೀಕರಿಸುತ್ತೇನೆ. ಇಲ್ಲಿ ಯಾವುದೇ ಹೆಚ್ಚುಗಾರಿಕೆಯನ್ನು ಮೆರೆಸುವದಕ್ಕಿಂತ ಇದನ್ನೊಂದು ಸ್ಮೃತಿಸಂಪುಟವಾಗಿಸುವ ಉದ್ದೇಶ ಮಾತ್ರ ಇದೆ. ಅಷ್ಟೇ ಅಲ್ಲದೆ ಯಾವ ಬರಹವನ್ನೂ ಸಂಪೂರ್ಣವಾಗಿ ಒಬ್ಬ ವ್ಯಕ್ತಿಗಾಗಿ ಮೀಸಲಿಡದೆ, ಸಮತೋಲಿಸಿ ಕೊಂಡೊಯ್ಯುವ ಇರಾದೆ ಕೂಡ ಇದೆ.
         ಇಂದಿನ ಪೀಳಿಗೆಯವರಿಗೆ ಅಂದಿನ ಜನಸಾಮಾನ್ಯರ ಬದುಕಿನ ಒಂದು ಚಿತ್ರಣವನ್ನು ಕಟ್ಟಿಕೊಡುವಲ್ಲಿ, ತನ್ಮೂಲಕ ತಮ್ಮ ವಿಚಾರ ಸರಣಿಯಲ್ಲಿ ಒಂದು ಹೊಸ ಹೊಳಹನ್ನು ಕಂಡುಕೊಳ್ಳುವಲ್ಲಿ ಈ ನನ್ನ ಬರಹಗಳು ಸಹಾಯಕವಾದರೆ ನನ್ನ ಶ್ರಮ ಸಾರ್ಥಕವಾದಂತೆ.










Sunday 13 April 2014

ಋಣದ ಭಾರವನಂತ

       ಸಿದ್ಧವನ ಗುರುಕುಲದಲ್ಲಿ ಇದ್ದುಕೊಂಡು ಉಜಿರೆಯ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಒಂದು ವಿಶೇಷವಾದ ಲಾಭ ತನ್ನಿಂದ ತಾನೇ ಆಗುತ್ತಿತ್ತು.  ಹಾಸ್ಟೆಲ್ಲಿನಲ್ಲಿ  ಪ್ರತಿದಿನದ ಓದಿನ ಸಮಯ ಕಟ್ಟು ನಿಟ್ಟಾಗಿ ಪಾಲನೆಯಾಗುತ್ತಿದ್ದ ಕಾರಣ ಎಲ್ಲ ಹುಡುಗರಿಗೂ ಕನಿಷ್ಠ ಮಟ್ಟದ ಪರೀಕ್ಷಾ ತಯಾರಿ ತಾನಾಗಿಯೇ ಆಗಿರುತ್ತಿತ್ತು. ಕಾಲೇಜಿನ ದಶಮಾನೋತ್ಸವ ಸಂಭ್ರಮದ ಸದ್ದು ಅಡಗುತ್ತಿದ್ದ ಹಾಗೇ ಎಲ್ಲರೂ ಸಮೂಹ ಸನ್ನಿಗೆ ಒಳಗಾದವರಂತೆ ವಾರ್ಷಿಕ ಪರೀಕ್ಷೆಗೆ ಓದತೊಡಗಿದರು. ಅದರಲ್ಲೂ ಪಿಯುಸಿ ನಂತರ ವೃತ್ತಿಪರ ಕೋರ್ಸ್ ಓದುವ ಕನಸು ಕಟ್ಟಿಕೊಂಡ ಸೈನ್ಸ್ ವಿದ್ಯಾರ್ಥಿಗಳಿಗಂತೂ  ಬಾಲಕ್ಕೆ ಬೆಂಕಿ ಹಚ್ಚಿ ಬಿಟ್ಟಂತಾಗಿತ್ತು.  ಹಾಸ್ಟೆಲ್ಲಿನಲ್ಲಿ, ಬೇಸಿಗೆಯಲ್ಲಿ ನೀರಿನ ತುಟಾಗ್ರತೆ ಆಗುತ್ತಿದ್ದ ಕಾರಣ ಹೊರಗಿನ ಜಿಲ್ಲೆಯವರನ್ನು ಹೊರತುಪಡಿಸಿ ಹತ್ತಿರದವರನ್ನೆಲ್ಲ ಸಿಲೆಬಸ್ ಮುಗಿದ ಕೂಡಲೆ ಪರೀಕ್ಷಾ ದಿನದವರೆಗೂ ಮನೆಗೆ ಕಳಿಸಲಾಗುತ್ತಿತ್ತು. ನಾವು ಕೆಲವೇ ಮಂದಿ ಉಳಿದರೂ ಅತ್ಯಂತ ಸೀರಿಯಸ್ ಆಗಿ ಓದಿ, ತಯಾರಾಗಿ, ಪರೀಕ್ಷೆಯನ್ನು ಎದುರು ನೋಡುತ್ತಿದ್ದೆವು. ಈ ಅವಧಿಯಲ್ಲಿಯೇ ಅನಂತರಾಮು ಮತ್ತು ಪದ್ದಣ್ಣನ ಜೊತೆ ನನ್ನ ಸ್ನೇಹ ಗಾಢವಾಗಿದ್ದು.
        ಎಲ್ಲ ದುಗುಡಕ್ಕೂ ಕೊನೆ ಹಾಡಿ ಅಂತೂ ಪರೀಕ್ಷೆ ಪ್ರಾರಂಭವಾಯ್ತು. ಮೊದಲ ಎರಡು - ಸಂಸ್ಕೃತ ಹಾಗೂ ಇಂಗ್ಲಿಷ್ -ಭಾಷಾ ಪೇಪರ್ ಗಳು ಚೆನ್ನಾಗಿಯೇ ಆದವು. ಗಣಿತ ಪೇಪರ್ ಗಾಗಿ ನನ್ನ ತಯಾರಿ ಅತ್ಯುತ್ತಮ ಮಟ್ಟದಲ್ಲಿತ್ತು. ಉತ್ಸಾಹದ ಬುಗ್ಗೆಯಾಗಿ ಪರೀಕ್ಷಾ ಹಾಲ್ ಹೊಕ್ಕು ಪೇಪರ್ ಕೈಗೆ ಬಂದೊಡನೇ ನನಗೆ ಅತ್ಯಂತ ಗ್ಯಾರಂಟಿ ಇದ್ದ "Mathematical Induction"ನ ಪ್ರಾಬ್ಲಮ್ ತಗೊಂಡು ಬಿಡಿಸೋಕೆ ಶುರು ಮಾಡಿದೆ. MI ದ ಯಾವುದೇ ಪ್ರಾಬ್ಲಮ್ ನ್ನು ನಿದ್ದೆಯಲ್ಲೂ  ಬಿಡಿಸಬಲ್ಲ ಪರಿಣಿತಿ ನನಗಿತ್ತು. ಐದರಿಂದ ಎಂಟು ನಿಮಿಷದಲ್ಲಿ ಬರಬೇಕಾದ ಉತ್ತರ ಏನು ಮಾಡಿದರೂ ಬರುತ್ತಿರಲಿಲ್ಲ. ಅದರಲ್ಲಿ L.H.S.=R.H.S. ಎಂದು ನಿರೂಪಿಸಬೇಕಾಗುತ್ತದೆ. ನಾನು ಅರ್ಧ ಗಂಟೆ ಅದರಲ್ಲೇ ತಿಣುಕಾಡಿದೆ. ಊಹೂಂ, ಉತ್ತರ ಬರಲೊಲ್ಲದು. ಇಷ್ಟರಲ್ಲಿ ನಾನು ನರ್ವಸ್ ಆಗಿ ಚೆನ್ನಾಗಿ ಬೆವರತೊಡಗಿದ್ದೆ. ಮೆದುಳಿನಲ್ಲಿ ನೀಟಾಗಿ ಪೇರಿಸಿದ್ದೆಲ್ಲ ಕದಡಿ ಹೋಗಿ ಬಿಟ್ಟಿತ್ತು. ನನ್ನ ಅಯೋಮಯ ಸ್ಥಿತಿ ನೋಡಿದ ರೂಮ್ ಸೂಪರ್ ವೈಸರ ಆಗಿದ್ದ ಸಂಸ್ಕೃತ ಲೆಕ್ಚರರ್ ಮಹಾಬಲ ಭಟ್ಟರು, "ಕ್ಲಾಸಿನಲ್ಲಿ ಉಡಾಳತನ ಮಾಡದೇ ಸರಿಯಾಗಿ ಓದಿದ್ದಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ " ಎಂದು ಕಿಚಾಯಿಸಿ ಅವರ ಕ್ಲಾಸಿನಲ್ಲಿ ನಾವು ಅವರನ್ನು ಕಾಡಿದ್ದುದರ ಪ್ರತೀಕಾರವೆಂಬಂತೆ ಮೀಸೆಯಲ್ಲೇ ನಕ್ಕರು ಬೇರೆ. ನನಗಾಗ, ಭೂಮಿ ಇಲ್ಲೇ ಬಾಯ್ದೆರೆದು ನನ್ನನ್ನು ನುಂಗಿ ಬಿಡಬಾರದೇ  ಎಂದು ಅನಿಸುತ್ತಿತ್ತು. ಆಗಲೇ ಅರ್ಧ ಗಂಟೆಗೂ ಮಿಕ್ಕಿ ಸಮಯ ಕಳೆದು ಹೋಗಿತ್ತು. ಇನ್ನು ನಾನು ಎಷ್ಟೇ ವೇಗವಾಗಿ ಬಿಡಿಸಿದರೂ ಪೇಪರ್ ಮುಗಿಸುವದು ಅಸಾಧ್ಯವಾಗಿತ್ತು. ಕೊನೆಗೊಮ್ಮೆ ಕಣ್ಮುಚ್ಚಿ ಕುಳಿತು ಶಾಂತನಾಗಿ ಇನ್ನೊಮ್ಮೆ ಪ್ರಶ್ನೆ ಪತ್ರಿಕೆ ನೋಡಿದೆ. ಅಯ್ಯೋ!, ನನ್ನ ಉತ್ಸಾಹದಲ್ಲಿ ನಾನು RHS ನಲ್ಲಿ ಸಂಖ್ಯೆಗಳ ವರ್ಗ(squares )ದ ಬದಲಾಗಿ ಘನ (cubes)ಎಂದು ಬರೆದುಕೊಂಡು ಮೂರ್ಖನಾಗಿದ್ದೆ ! ಕೂಡಲೇ ಆ ಪ್ರಾಬ್ಲಮ್ ಬಿಡಿಸಿದರೂ ಸಹ ಸಮಯ ನಷ್ಟವಾದ ಕಾರಣ ಪೇಪರ್ ಪೂರ್ತಿಗೊಳಿಸಲಾಗಲಿಲ್ಲ. ಸಾಲದ್ದಕ್ಕೆ ಆ ಸಾರಿ ಗಣಿತ ಪೇಪರ್ ಸ್ವಲ್ಪ  ಕಠಿಣವಾಗಿಯೂ ಇತ್ತು. ಅಂತೂ ಇಂತೂ ೭೫ ಮಾರ್ಕ್ಸ್ ನಷ್ಟು ಬಿಡಿಸುವಷ್ಟರಲ್ಲಿ ಟೈಂ ಆಗಿ ಹೋಗಿತ್ತು. ಪರೀಕ್ಷಾ ಕೊಠಡಿಯಿಂದ ಹೊರಬಂದಾಗ ತಲೆ ಸಿಡಿದು ಹೋಗುವದೊಂದೆ ಬಾಕಿ ಉಳಿದಿತ್ತು. ಉಳಿದ ಮಿತ್ರರೆಲ್ಲ ಸಾಕಷ್ಟು ಚೆನ್ನಾಗಿಯೇ ಮಾಡಿದ್ದರು. ಮಿತ್ರ ಪದ್ದಣ್ಣನಲ್ಲಿ ಎಲ್ಲ ಹೇಳಿಕೊಂಡು ಹಳಹಳಿಸಿದೆ. ಅವನು ಯಾವಾಗಲೂ Mr.Cool.  ನನಗೆ ಧೈರ್ಯ ಹೇಳುತ್ತಾ ನನ್ನ ಜೊತೆಯಲ್ಲೇ ತಾಸೆರಡು ತಾಸು ಕಳೆದು ನನ್ನ ದುಗುಡ ಕಮ್ಮಿ ಮಾಡಿಸಿಯೇ ತನ್ನ ರೂಮಿಗೆ ಹೋದನು. ಕೆಮಿಸ್ಟ್ರಿ ಹಾಗು ಫಿಸಿಕ್ಸ್ ಪೇಪರ್ ಚೆನ್ನಾಗಿ ಆಗಿದ್ದವು. ಸ್ಟ್ಯಾಟಿಸ್ಟಿಕ್ಸ್ ಬಗ್ಗೆ ನನಗೆ ಅಂತಹ ಆಸ್ಥೆ ಇದ್ದಿರಲೇ ಇಲ್ಲ. ಅಂತೂ ಪರೀಕ್ಷೆ ಮುಗಿಸಿ ಊರಿಗೆ ಹೋದರೂ, 'ನನ್ನ ಕನಸಿನ  ಬಲೂನಿಗೆ ಎಲ್ಲೋ ಸಣ್ಣ ತೂತಾಗಿ ಹೋಗಿದೆಯೇನೋ' ಎಂಬ ಸಣ್ಣಗಿನ ಆತಂಕ   ನನ್ನನ್ನು ಅಧೀರನನ್ನಾಗಿಸಿ ಅಹರ್ನಿಶಿ ಕಾಡುತ್ತಿತ್ತು.
        ನನ್ನ ಆತಂಕ ಪೂರ್ತಿ ಸುಳ್ಳಾಗಲಿಲ್ಲ. ಫಲಿತಾಂಶ ಬಂದಾಗ  ಗಣಿತ ನನ್ನ ಕೈ ಬಿಟ್ಟಿತ್ತು. ಅದರಲ್ಲಿ ಕೇವಲ ೭೧ ಅಂಕ ಬಂದ ಕಾರಣ ನನ್ನ ಎಲ್ಲ ವಿಷಯಗಳ ಸರಾಸರಿ ಮತ್ತು ಪಿ. ಸಿ. ಎಮ್.ಗಳ ಸರಾಸರಿ ಎರಡೂ ೮೩ % ಆಗಿತ್ತು. ಪ್ರಥಮ ಪಿ ಯು ಸಿ ಯಲ್ಲೂ ಇಷ್ಟೇ ಆಗಿತ್ತು. ಎಲ್ಲ ಮಿತ್ರರೂ," ಈ ಸ್ಕೋರ್ ನಿನಗೆ ಇಂಜಿನಿಯರಿಂಗ್ ನಲ್ಲಿ ಸೀಟ್ ಗಿಟ್ಟಿಸಲು ಬೇಕಾದಷ್ಟಾಯಿತು" ಎಂದು ಬೆನ್ನು ತಟ್ಟಿದರು. ಆಗಿನ್ನೂ ನಮ್ಮ ರಾಜ್ಯದಲ್ಲಿ ಕೇವಲ ೧೨-೧೩ ಇಂಜಿನಿಯರಿಂಗ್ ಕಾಲೇಜುಗಳಿದ್ದವು. ಕಾರಣ ಈ ಕಡಿಮೆ ಸ್ಕೋರಿಗೆ ನನ್ನಿಚ್ಚೆಯ ಕಾಲೇಜ್ ಮತ್ತು ಬ್ರಾಂಚ್ ಸಿಗಲಾರದೆಂಬ ಆತಂಕದಿಂದಲೇ ಉಳಿದೆಲ್ಲ ಮಿತ್ರರ ಜೊತೆ ನಾನೂ  ಇಂಜಿನಿಯರಿಂಗ್ ಗೆ  ಅಪ್ಲೈ ಮಾಡಿದೆ. ಈ ಹಂತದಲ್ಲಿ ನನ್ನಷ್ಟೇ ಅಂಕ ಗಳಿಸಿದ್ದ  ಅನಂತರಾಮು ನನಗೆ ಎಲ್ಲ ವಿಧದಲ್ಲೂ ಗೈಡ್ ಆಗಿದ್ದ.
         ಇಲ್ಲಿಗೆ ನನ್ನ ಎರಡು ವರ್ಷಗಳ ಪಿ ಯು ಸಿ ಹಾಗೂ ಉಜಿರೆಯ,  ತಥಾಪಿ ಸಿದ್ಧವನದ ಋಣಾನುಬಂಧ ಮುಗಿದಂತಾಯಿತು. ನನಗೀಗ ೫೫ ವರ್ಷ ವಯಸ್ಸು. ಇಷ್ಟರವರೆಗಿನ ಜೀವನದಲ್ಲಿ ನನ್ನನ್ನು ಬಹುವಾಗಿ ಪ್ರಭಾವಿಸಿದ ಕಾಲಘಟ್ಟವಾಗಿ ಈ ಅವಧಿಯನ್ನು ನಾನು ಪರಿಗಣಿಸುತ್ತೇನೆ. ತವರ ಪರಿಸರದಿಂದ ಹೊರಬಿದ್ದು ಸಂಪೂರ್ಣ ಭಿನ್ನವಾದ ಪರಿಸರದಲ್ಲಿ ನನ್ನನ್ನು ನಾನು ಪ್ರತಿಷ್ಠಾಪಿಸಿಕೊಂಡು, "ಎಲ್ಲಿ ಬೇಕಾದರೂ ನಾನು ಬದುಕಬಲ್ಲೆ" ಎಂಬ ಆತ್ಮವಿಶ್ವಾಸವನ್ನು ಆವಾಹಿಸಿಕೊಂಡದ್ದು ಇಲ್ಲಿಯೇ. ನಾನೆಷ್ಟು ಸಣ್ಣವನು ಎಂಬುದು ಮೊದಲು ಅರಿವಾದದ್ದು ಇಲ್ಲಿಯೇ. ಪರರ ಕಾಳಜಿ ಮಾಡಿದರೆ ನಿನ್ನ ಕಾಳಜಿ ತಾನಾಗಿಯೇ ಆಗುತ್ತದೆ ಎಂಬ ಸತ್ಯದ ಹೊಳಹು ಗೋಚರಿಸಿದ್ದು ಇಲ್ಲಿಯೇ. ಇನ್ನು ವೈಯಕ್ತಿಕವಾಗಿ, ಮೇಲ್ತುಟಿಯ ಮೇಲೆ ಕಪ್ಪು ಮೂಡತೊಡಗಿದ್ದು ಇಲ್ಲಿಯೇ. ಹುಡುಗಿಯರು ಚೆಂದವಾಗಿ ಗೋಚರಿಸಲು ಆರಂಭವಾಗಿದ್ದೂ ಇಲ್ಲಿಯೇ.
        ಮತ್ತೊಮ್ಮೆ ಇದಕ್ಕೆಲ್ಲ ಕಾರಣೀಕರ್ತರಾದವರೆಲ್ಲರನ್ನು ಮನದುಂಬಿ ನೆನೆಯುತ್ತೇನೆ. ಮಿತ್ರವೃಂದ ಹೊರತುಪಡಿಸಿ, ಗುರುಗಳಾದ ಕೆಮಿಸ್ಟ್ರಿ ಕೃಷ್ಣ ಭಟ್ ಸರ್, ಫಿಸಿಕ್ಸ್ ನ ಜಯರಾಮ ಸುವರ್ಣ ಸರ್, ಗಣಿತದ ಜಯಲಕ್ಷ್ಮಿ ಮೇಡಂ, ಇಂಗ್ಲಿಶ್ ನ ಕುದ್ದಣ್ಣಯ್ಯ ಸರ್, ಸಂಸ್ಕೃತದ ಲಕ್ಷ್ಮೀನಾರಾಯಣ ಸರ್ ಮತ್ತು ಮಹಾಬಲ ಭಟ್ಟರು, ಶೇಖರ ಸರ್ ಹಾಗೂ ಇನ್ನಿತರ ಗುರುವರ್ಯರುಗಳ ಋಣಭಾರ ನನ್ನ ಮೇಲಿದೆ. ಹಸನ್ಮುಖಿ ಲೈಬ್ರರಿಯನ್, ಆಫೀಸ್ ಮ್ಯಾನೇಜರ್ ನಾವಡರವರು, ಹಾಸ್ಟೆಲ್ಲಿನ ಜಿನರಾಜ ಶಾಸ್ತ್ರಿಗಳು , ಪೂವಣಿಯವರು ಇವರೆಲ್ಲರ ಚಾಣದೇಟು ನನ್ನನ್ನು ರೂಪಿಸಿದೆ. ಆಫೀಸ್ ಮ್ಯಾನೇಜರ್ ನಾವಡರ ಕುರಿತು ಒಂದು ಸಣ್ಣ ಟಿಪ್ಪಣಿ ಉಚಿತವೆನಿಸುತ್ತದೆ. ಬಿಳಿಯ ತಿಳುವಾದ ಅಂಗಿ ಮತ್ತು ಲುಂಗಿ ಉಟ್ಟಿರುತ್ತಿದ್ದ, ತೀಕ್ಷ್ಣ ಕಂಗಳ, ಉದ್ದನೆಯ ಕರಿಗಡ್ಡದ ಈ ಸಣಕಲ ವ್ಯಕ್ತಿಗೆ ಎಲ್ಲ ಹುಡುಗರೂ ಹೆದರುತ್ತಿದ್ದರು. ಅವರಿಗೆ ಕಾಲೇಜಿನ ಎಲ್ಲ ಮಕ್ಕಳ ಎಲ್ಲಾ ವಿವರಗಳೂ ಗೊತ್ತಿರುತ್ತಿತ್ತು. ಈಗ್ಗೆ ಸುಮಾರು ೧೮ ವರ್ಷಗಳ ಕೆಳಗೆ ಆ ದಾರಿಯಾಗಿ ಹೋಗುತ್ತಿದ್ದಾಗ, ಒಮ್ಮೆ ನನ್ನ ಕಾಲೇಜು ನೋಡಿ ಬರೋಣವೆಂದು ಒಳಹೊಕ್ಕೆ. ಆ ದಿನ ರಜಾದಿನವಾಗಿತ್ತು. ಪ್ರವೇಶ ದ್ವಾರದಲ್ಲೇ, ನೋಟೀಸ್ ಬೋರ್ಡ್ ಪಕ್ಕದಲ್ಲೇ ನಾವಡರು ನಿಂತಿದ್ದರು. ಗಡ್ದದೊಳಗೆ ನುಸುಳಿದ್ದ ಕೆಲ ಬೆಳ್ಳಿ ಕೂದಲುಗಳನ್ನು ಬಿಟ್ಟರೆ ಥೇಟ್ ಅದೇ ನಾವಡರು. ನಾನು, ನಂತರ ಪರಿಚಯ ಹೇಳಿಕೊಂಡು ಮಾತನಾಡಿಸಿದರಾಯಿತು ಎಂದುಕೊಂಡು ಸೀದಾ ಮೇಲೆ ಹೋಗಿ ಸುತ್ತಾಡಿಕೊಂಡು ಕೆಳಗಿಳಿದೆ. ಕಡೆಯ ಮೆಟ್ಟಿಲನ್ನು ಇಳಿಯುತ್ತಿದ್ದಂತೆ ಎರಡೂ ಕೈ ಮುಗಿದು, "ನಮಸ್ಕಾರ, ಸರ್" ಎನ್ನುತ್ತಿದ್ದಂತೆ ಅವರು ಪ್ರತಿ ನಮಸ್ಕರಿಸಿ, "ಏನು, ರವೀಂದ್ರ ಮಹಾಬಲೇಶ್ವರ ಭಟ್ಟರೇ , ಚೆನ್ನಾಗಿದ್ದೀರಾ?" ಎಂದು ಪೂರ್ಣ ಹೆಸರುಗೊಂಡು ಮಾತನಾಡಿಸಿದಾಗ ನಾನು ನನ್ನನ್ನೇ ಚಿವುಟಿ ನೋಡಿಕೊಂಡಿದ್ದೆ. ನನ್ನ ಉಡಾಫೆಗೆ ನನಗೇ  ನಾಚಿಕೆಯಾಗಿತ್ತು. ಅವರ ಅಸಾಧ್ಯ ನೆನಪಿನಶಕ್ತಿಗೆ ಸಲಾಂ ಹೊಡೆದಿದ್ದೆ. ಇಂತಹ ಮಹಾನುಭಾವರುಗಳ ಸಂಸರ್ಗದಿಂದ ನನ್ನೊಳಗೂ ಒಂದು ಸಂಸ್ಕಾರ ರೂಪುಗೊಂಡಿದ್ದುದು ವಿಶೇಷವೇನೂ ಅಲ್ಲವಲ್ಲ.
       ನನ್ನಂತಹ ಸಾವಿರಾರು ಬಡವರ ಬಾಳಿಗೆ ಬೆಳಕು ತೋರಿದ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರಾದಿಯಾಗಿ ಎಲ್ಲ ಸಹೃದಯಿ ಹಿರಿಯರಿಗೆ ನಾನು ಚಿರಋಣಿ.
         
        



















                                                                                                                                                                                           

Thursday 27 February 2014

"ಸರ್ವತೋಮುಖಿ ಕಲಿಕೆ"

       ನನ್ನ ಸಿದ್ಧವನದ ಸೈನ್ಸ್ ಸಹಪಾಠಿಗಳೆಲ್ಲ ೨ನೆ ಪಿಯುಸಿ ಯ ದ್ವಿತೀಯಾರ್ಧ ಆರಂಭ ಆಗುತ್ತಲೇ ತಮ್ಮ ಕನಸುಗಳ ಸಾಕ್ಷಾತ್ಕಾರಕ್ಕಾಗಿ ಹಗಲಿರುಳೂ ಅಭ್ಯಾಸ ಮಾಡತೊಡಗಿದ್ದರು. ನನಗೀಗ ಸರಿಯಾಗಿ ನೆನಪಿಲ್ಲ, ಅದು ಹೇಗೋ ಹಾಸನದ ಅನಂತರಾಮು ಇಷ್ಟರಲ್ಲಾಗಲೇ  ನನ್ನನ್ನು ತುಂಬಾ ಹಚ್ಚಿಕೊಂಡಿದ್ದ. ಅಷ್ಟೇ ಅಲ್ಲ, ಸಿದ್ಧವನದಲ್ಲೇ ಇದ್ದ ಸೌಮ್ಯ ಸ್ವಭಾವದ, ಎಳಸು ಮುಖದ, ಸುಂದರನಾದ ಎನ್. ವಿದ್ಯಾನಂದನಿಗೂ ಆತ್ಮೀಯನಾಗಿದ್ದ.  ಸಿದ್ಧವನದಿಂದ ಅನತಿ ದೂರದಲ್ಲಿ ರೂಂ ಮಾಡಿಕೊಂಡಿದ್ದ, ತನ್ನ ಊರವರೂ, ಸಂಬಂಧಿಗಳೂ ಆಗಿದ್ದ ಜಯಂತ ಮತ್ತು ರಾಜಶೇಖರ ಸಹೋದರರ ಜೊತೆ ವಾಸವಾಗಿದ್ದ ಅನಂತಪದ್ಮನಾಭ ಯಾನೆ ಪದ್ದಣ್ಣ ಕೂಡ ನನ್ನ ಆತ್ಮೀಯ ವಲಯದೊಳಗೆ ಬಂದಿದ್ದ. ನನ್ನ ಸಹವಾಸಿಯಾಗಿದ್ದ ಸಂಜೀವ ಪೂಜಾರಿ ಕೂಡ ಹತ್ತಿರದವನಾಗಿದ್ದ. ಬೇರೆ ವಿಭಾಗಗಳ ಹುಡುಗರೂ ಸಹ ಜೊತೆಗಾರರಾಗಿದ್ದರು. ಈ ಎಲ್ಲರ ಜೊತೆ ನಾನು ಪ್ರತ್ಯೇಕವಾಗಿ ದಿನದ ಬೇರೆ ಬೇರೆ ಅವಧಿಯಲ್ಲಿ ಜೊತೆಯಿದ್ದು ಎಲ್ಲರ ಗುಣಾವಗುಣಗಳ ಪರಿಚಯ ಹೊಂದಿದ್ದೆ. ಕೆಲ ಮಟ್ಟಿಗೆ ಪ್ರಭಾವಿತನೂ ಆಗಿದ್ದೆ. ವರ್ಷಾರಂಭದಲ್ಲಿ, ಅಂದರೆ ಜೂನ್-ಜುಲೈನಲ್ಲಿ, ಎಲ್ಲರೂ ಬೆಳಿಗ್ಗೆ ಗಂಜಿಯೂಟಕ್ಕೆ ಹೋದ ಕೂಡಲೇ  ಸಂಜೀವ ಪೂಜಾರಿ ಮಂಗನಂತೆ ಚಕಚಕನೆ ಮಾವಿನ ಮರವೇರಿ ಬಲಿತ ಕಾಯಿಗಳನ್ನು ಕೊಯ್ದು ಕೆಳಗೆ ಒಗೆಯುತ್ತಿದ್ದರೆ, ನಾನು ಕೆಳಗಿಂದ ಅವನ್ನು ಹಿಡಿದು ಶ್ರೀನಿವಾಸ ಮೂರ್ತಿಯ ದೊಡ್ಡ ಬ್ಯಾಗಿನಲ್ಲಿ ಹಾಕಿತುರುಕಿ ,ನಂತರ ಇಬ್ಬರೂ ಸೇರಿ ಅದನ್ನು ರೂಮಿನಲ್ಲಿ ಒಗೆದು, ಓಡಿ  ಹೋಗಿ ಊಟದ ಸಾಲಿನ ಕೊನೆಯಲ್ಲಿ ಸೇರಿಕೊಳ್ಳುತ್ತಿದ್ದೆವು. ಚೆನ್ನಾಗಿ ಬಲಿತ ಕಾಯಿಗಳು ೩-೪ ದಿನದಲ್ಲೇ ಮಾಗಿ ಒಳ್ಳೇ ಹಣ್ಣು ಸಿಗುತ್ತಿತ್ತು. ಈ ರೀತಿ ನಾವು ನಾಲ್ಕೂ ಜನ ರೂಂಮೇಟುಗಳು ತಿಂಗಳು ಪೂರ್ತಿ ಉತ್ತಮ ಜಾತಿಯ ಮಾವಿನ ಹಣ್ಣು ತಿನ್ನುತ್ತಿದ್ದೆವು. ಇದರಿಂದಾಗಿ ಹಾಗೂ ಈ ತರಹದ ಇನ್ನೂ ಹಲವು ಮಂಗಚೇಷ್ಟೆಗಳಿಂದಾಗಿ  ಸಂಜೀವ ನನಗೆ ಆಪ್ತನಾಗಿದ್ದ.
        ಆಗ ಅನಂತರಾಮು ತುಂಬಾ ಚಿಕ್ಕ ಹುಡುಗನ ತರಹ ಕಾಣಿಸುತ್ತಿದ್ದ.ಇನ್ನೂ ಎತ್ತರ ಕೂಡ ಬೆಳೆದಿರಲಿಲ್ಲ. ಒಮ್ಮೆ ವಾರಾಂತ್ಯದ ರಜೆಯಲ್ಲಿ ಅವನ ಒತ್ತಾಯಕ್ಕೆ ಕಟ್ಟು ಬಿದ್ದು ಅವನ ಜೊತೆ ಅವನ ಹಾಸನದ ಮನೆಗೂ ಹೋಗಿದ್ದೆ. ಅಲ್ಲಿ ಅವನ ಅಕ್ಕ, ಅಪ್ಪಾಜಿ ಮತ್ತು ಅಮ್ಮ ನನ್ನನ್ನು ತುಂಬಾ ಇಷ್ಟಪಟ್ಟರು. ನನ್ನ ಪೂರ್ವಾಪರ ವಿಚಾರಿಸಿದ ಅವರು ತಮ್ಮ ಮಗ ನನ್ನ ದೋಸ್ತಿ ಮಾಡಿದ್ದಕ್ಕೆ ಖುಷಿ ಪಟ್ಟರು. ನಾನು ಹಾಸನದ ಇದೇ ಭೇಟಿಯಲ್ಲಿ ಒಂದು ಸೂಟ್ ಕೇಸ್ ಖರೀದಿಸಿದ್ದೆ - ಸ್ವಲ್ಪ ಕೆಂಚು ಬಣ್ಣದ್ದು. ಅದು ತೀರ ಸಾಧಾರಣ ಸೂಟ್ ಕೇಸ್  ಆಗಿದ್ದರೂ ಸಹ ಮೊದಲನೆಯದೆಂಬ ಕಾರಣದಿಂದ ಇನ್ನೂ ನನ್ನ ಹತ್ತಿರ ಇದೆ - ನನ್ನ ಹೆಂಡತಿ ಮಕ್ಕಳ ಜೋಕುಗಳಿಗೆ ವಸ್ತುವಾಗುತ್ತ ಮತ್ತು ಸವಿ ನೆನಪುಗಳ  ಕಾರಣದಿಂದ ನನಗೆ ಹೆಚ್ಹೆಚ್ಚು  ಆಪ್ತವಾಗುತ್ತ.
        ಅದೇ ವರ್ಷ ನಮ್ಮ ಕಾಲೇಜಿನ ದಶಮಾನೋತ್ಸವ ಸಮಾರಂಭ ಸಹ ಇತ್ತು. ಆ ಸಂಭ್ರಮಾಚರಣೆಯ ಭಾಗವಾಗಿ ಹಲವಾರು ಅಂತರ್ ಕಾಲೇಜು  ಸ್ಪರ್ಧೆಗಳು ಏರ್ಪಟ್ಟಿದ್ದವು.ನಾನೂ ಸಹ ಡಿಗ್ರಿ ಹುಡುಗರ ಜೊತೆ ಸೇರಿ ಒಂದು ನಾಟಕದಲ್ಲಿ ಚಿಕ್ಕದೊಂದು ಪಾತ್ರ ಮಾಡಿದ್ದೆ. ನಂತರ ಒಳಾಂಗಣದಲ್ಲಿ "ಫೋಟೋ ಅವಾಂತರ" (ರಚನೆ : ಗುಂಡೂ ರಾವ್ ) ನಗೆ  ನಾಟಕ ಆಡಿದ್ದೆವು. ಅದರಲ್ಲಿ ಗುರುಮೂರ್ತಿ ಮುಖ್ಯ ಪಾತ್ರ "ಚೆನ್ನ" ಆಗಿದ್ದರೆ, ನಾನು ಪತ್ರಗಳನ್ನು ಕದ್ದು ಓದುವ "ಪೋಸ್ಟ್ ಮ್ಯಾನ್" ಆಗಿದ್ದೆ. ಇಂಗ್ಲಿಶ್ ಲೆಕ್ಚರರ್ ಶೇಖರ್ ಅವರ ನಿರ್ದೇಶನ ಇತ್ತು. ಗುರುಮೂರ್ತಿ ಸರಿಯಾಗಿ "ಚೆನ್ನ" ಆಗಲಿಲ್ಲ. ಆದರೆ ನಾನು ಇಡೀ ಹಾಲ್ ನ್ನು" ಪೋಸ್ಟ್ ಮ್ಯಾನ್" ಆಗಿ ಇನ್ನಿಲ್ಲದಂತೆ ಮರಳು ಮಾಡಿದ್ದೆ. ನಾಟಕ ಮುಗಿದಾಗ ಎಲ್ಲರೂ ನನ್ನನ್ನು ತುಂಬಾ ಅಭಿನಂದಿಸಿದರು-ಹುಡುಗ ಹುಡುಗಿಯರೆಂಬ ತಾರತಮ್ಯ ಇಲ್ಲದೆ. ನಂತರದ ದಿನಗಳಲ್ಲಿ ಕಾರಿಡಾರಿನಲ್ಲಿ ಎಲ್ಲ ಹುಡುಗಿಯರೂ ತಮಗೊಂದು ಲವ್ ಲೆಟರ್ ಕೊಡಲು ಕೇಳುವವರೇ! "ನಿಮಗೆ ಯಾವ ಪತ್ರನೂ ಇಲ್ಲ, ಬೇಕಿದ್ದರೆ ನಾನೇ ಒಂದು ಬರೆದು ಕೊಡಲಾ?"ಎಂದು ಅವರೆಲ್ಲರನ್ನು ಈ ಪೋಸ್ಟ್ ಮ್ಯಾನ್ ಬಾಯಿ ಮುಚ್ಚಿಸಬೇಕಾಯ್ತು.
        ಇದೇ  ಸುಮಾರಿನಲ್ಲಿ ಕಾಲೇಜು ವತಿಯಿಂದ ಹಲವು ವಿದ್ಯಾರ್ಥಿಗಳು ಗುರುಗಳ ಸಾರಥ್ಯದಲ್ಲಿ ಕೆಮ್ಮಣ್ಣು ಗುಂಡಿ ಮತ್ತು ಕಳಸಕ್ಕೆ ಪ್ರವಾಸ ಹೋಗಿ ಬಂದೆವು. ಇದೆಲ್ಲದರಿಂದಾಗಿ ನನಗೆ ಹಲವಾರು ಹಿರಿಯ ವಿದ್ಯಾರ್ಥಿಗಳ ಒಡನಾಟ ದೊರೆತು ನನ್ನ ಕ್ಲಾಸ್ ಮೇಟ್ ಗಳ ನಡುವೆ ಒಂದು ತರಹ ಪ್ರತಿಷ್ಠೆ  ಜಾಸ್ತಿಯಾಯಿತು. ಆರ್ಟ್ಸ್ ಮತ್ತು ಕಾಮರ್ಸ್ ವಿದ್ಯಾರ್ಥಿಗಳೂ ನನ್ನ ಸ್ನೇಹ ಬಯಸತೊಡಗಿದರು. ಇಷ್ಟಾದರೂ ನಾನ್ಯಾವ ಸ್ಥಿತಿಯಲ್ಲಿದ್ದೆನೆಂದರೆ ನನ್ನ ಹತ್ತಿರ ಒಂದು ಪ್ಯಾಂಟ್ ಆಗಲೀ ಒಂದು ಜೊತೆ ಚಪ್ಪಲಿಯಾಗಲೀ ಇರಲಿಲ್ಲ. ದೇಹ ಬೆಳೆದಿದ್ದ ಕಾರಣ ಚೆಡ್ಡಿ ಹಾಕುವದನ್ನು ಬಿಟ್ಟು ಬಿಳಿ ಲುಂಗಿ ಉಡಲು ತೊಡಗಿ ಒಂದು ವರ್ಷವಾಗಿತ್ತು. ಈಗಿನ ಮಕ್ಕಳು ನಂಬಲಿಕ್ಕಿಲ್ಲ - ನಾನು ನನ್ನ ಜೀವನದ ಮೊದಲ ಜೊತೆ ಚಪ್ಪಲಿ ತಗೊಂಡಿದ್ದು ನನ್ನ ೨ನೆ ಪಿಯುಸಿಯ ೨ನೇ ಟರ್ಮ್ ನಲ್ಲಿ, ಆರು ರೂಪಾಯಿ ಕೊಟ್ಟು ತಾಳಿಕೆಗೆ ಹೆಸರಾಗಿದ್ದ ಕಪ್ಪು ಬಣ್ಣದ ಹವಾಯಿ ಚಪ್ಪಲಿ ಕೊಂಡಾಗ ಸ್ವರ್ಗಕ್ಕೆ ಮೂರೇ ಗೇಣು!.ಯಾವುದೋ ಜಾಹೀರಾತು ನೋಡಿ 'ಲುಧಿಯಾನ'ದಿಂದ ಪೋಸ್ಟ್ ಮೂಲಕ ತರಿಸಿಕೊಂಡ,ತುಂಬಾ ಬಳಕುತ್ತಿದ್ದ ಹಾಗು ಝಗಮಗ ಎನ್ನುತ್ತಿದ್ದ ಪ್ಯಾಂಟ್ ಪೀಸನ್ನು ಮೊದಲ ವರ್ಷದ ರಜದಲ್ಲಿ ಗೋಕರ್ಣ ಬಾವನನ್ನು ಕಾಡಿ ಅವನ ಟೇಲರ್ ಕೈಲಿ ಗೋಕರ್ಣದಲ್ಲೇ ಹೊಲಿಸಿಕೊಂಡಿದ್ದೇ ಮೊದಲ ಪ್ಯಾಂಟ್ ! ೨ನೆ ಪಿಯುಸಿಯ ಮೊದಲ ಆರು  ತಿಂಗಳು ಪ್ಯಾಂಟ್ ಹಾಕಿದಾಗ ಬರಿಗಾಲೇ ಇರುತ್ತಿತ್ತು.  
         ಹಿಂತಿರುಗಿ ನೋಡಿದಾಗ 'ಅಬ್ಬಾ, ಆಗ ನಾನು ಎಷ್ಟೆಲ್ಲಾ ಕಷ್ಟ ಪಟ್ಟಿದ್ದೆನಲ್ಲ' ಎಂದು ಮೊದಲೆಲ್ಲ ಅನ್ನಿಸುತ್ತಿತ್ತು ಮತ್ತು ನನ್ನ ಬಗ್ಗೆ ನನಗೇ ಒಂದು ತರಹದ ಅಭಿಮಾನ ಉಂಟಾಗುತ್ತಿತ್ತು. ಈಗ ಬುದ್ಧಿ ಸ್ವಲ್ಪ ಕೆಲಸ ಮಾಡ ತೊಡಗಿದಾಗ ನೋಡಿದರೆ ಅದೇನು ವಿಶೇಷ ಅನ್ನಿಸುತ್ತಿಲ್ಲ. ಏಕೆಂದರೆ ಆಗ ಸಿದ್ಧವನದಲ್ಲಿ ನನ್ನ ಸಹಾಧ್ಯಾಯಿಗಳಾಗಿದ್ದ ೫೦-೬೦ ಪ್ರತಿಶತ ಹುಡುಗರ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇರಲಿಲ್ಲ. ಬಹುತೇಕರು ಒಂದೇ ತರಹ  ಇದ್ದಿದ್ದರಿಂದ ಅಲ್ಲಿ ಕೀಳರಿಮೆಗೆ ಆಸ್ಪದ ಇರಲಿಲ್ಲ. ಆದ್ದರಿಂದ ನಾನು ಅವನ್ನೆಲ್ಲ  ತುಂಬಾ ಸಹಜವಾಗಿ ಜೈಸಿ ಬರಲು ಸಾಧ್ಯವಾಯಿತು. In fact, ಅಲ್ಲಿ ನನಗಿಂತ ಇನ್ನೂ ಹೀನ ಸ್ಥಿತಿಯಲ್ಲಿ ಇದ್ದ ಹಲವರಿದ್ದರು.ಕೇವಲ ಅಲ್ಲಿ ಮಾತ್ರವಲ್ಲ, ಆಗ ಇಡೀ ದೇಶದ ತುಂಬೆಲ್ಲ ಇದೇ  ರೀತಿಯ ಪರಿಸ್ಥಿತಿ ಇತ್ತು.  ಅವರೆಲ್ಲ ವಿಜಯಿಗಳಾಗಿ ಹೊರಹೊಮ್ಮಿದಾಗ ನನ್ನೊಬ್ಬನದೇ  ಹೆಚ್ಚುಗಾರಿಕೆ ಎಂದುಕೊಳ್ಳಲು ಕಾರಣವೇ ಇಲ್ಲ. ವಿಪರೀತ ಪರಿಸ್ಥಿತಿಗಳಲ್ಲಿ ಗಳಿಸಿದ  ಗೆಲುವು ಮಾತ್ರ ಅಭಿನಂದನಾರ್ಹ.ತನಗಾಗಿ ಸುಂದರ  ಬದುಕನ್ನು ಒಬ್ಬ ಬಡವ ಕಟ್ಟಿಕೊಳ್ಳಬೇಕೆಂದಿದ್ದರೆ  ಇಷ್ಟೂ ಕಷ್ಟ ಪಡದಿದ್ದರೆ  ಹೇಗೆ? ಅಷ್ಟಕ್ಕೂ ಸುಕಾ ಸುಮ್ಮನೆ "ಅನುಭವಿ" ಆಗಲು ಸಾಧ್ಯವೇ? ಇದನ್ನು ಅರಿತ ನಂತರ ನನ್ನ ಒಣಹೆಮ್ಮೆ ಈಗ ಇಲ್ಲವಾಗಿದೆ.                                                                                                             ಟ್ರಾಫಿಕ್ ನ ಗಿಜಿಗಿಜಿಯಲ್ಲಿಯೂ ಸರಾಗವಾಗಿ  ಗಾಡಿ ಓಡಿಸಲು ಬಂದವ ಮಾತ್ರ ನಿಜವಾದ "ಡ್ರೈವರ್"-ಅಲ್ಲವೇ?                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                           . 

Sunday 9 February 2014

ಪರಿಧಿ ವಿಸ್ತಾರ

          ನನ್ನ ಜೀವನದಲ್ಲಿ ದೀರ್ಘಕಾಲ ಬೆಸೆದುಕೊಂಡ ಮಿತ್ರತ್ವಗಳ ಪೈಕಿ ಪದ್ದಣ್ಣ, ರಾಮಚಂದ್ರ ಮತ್ತು ಅನಂತರಾಮುರವರ ದೋಸ್ತಿ ಆರಂಭವಾಗಿದ್ದು ಉಜಿರೆಯಲ್ಲಿಯೇ. ಮುಂದೆ ಅನಂತರಾಮುವಿನ ನಿರಂತರ  ಸಾಂಗತ್ಯ ಸಿಕ್ಕಿದ್ದರಿಂದ ಅವನ ಪೂರ್ಣ ಪರಿವಾರವೇ ನನ್ನನ್ನು ತಮ್ಮವರಲ್ಲೊಬ್ಬನಾಗಿ ಅಪ್ಪಿಕೊಂಡಿದ್ದು, ಇದರ ಬಗ್ಗೆ ಮುಂದೆ ಪ್ರತ್ಯೇಕವಾಗಿ ದಾಖಲಿಸುತ್ತೇನೆ.
          ಪ್ರಥಮ  ಪಿಯುಸಿಯ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ನಾನು ೬೫-೬೬ ಶೇಕಡಾ ಮಾರ್ಕ್ಸ್ ಮಾತ್ರ ಗಳಿಸಿದ್ದು ನೋಡಿ ಕೆಮಿಸ್ಟ್ರಿ ಕೃಷ್ಣ ಭಟ್ ಸರ್ ನನ್ನ ಕರೆಸಿ ನನಗೇನು ತೊಂದರೆ ಆಗ್ತಿದೆ ಎಂದು ವಿಚಾರಿಸಿಕೊಂಡರು. ಎಲ್ಲ ಕೇಳಿ, ಇನ್ನೂ ಸ್ವಲ್ಪ ಹೆಚ್ಚು ಶ್ರಮ ಹಾಕುವಂತೆ ತಿಳಿಸಿ ಪ್ರೋತ್ಸಾಹ ನೀಡಿದರು. ಈ ನಡುವೆ ನನ್ನ ಮಿತ್ರವೃಂದ ಸಹ ವಿಸ್ತರಿಸತೊಡಗಿತ್ತು.ಹಾಗಾಗಿ ಮೊದಲಿನಂತೆ ಬೇಸರ ಬರುತ್ತಿರಲಿಲ್ಲ. ನಮ್ಮ ಸಿದ್ಧವನ ಗುರುಕುಲದಲ್ಲಿನ ಶನಿವಾರ ಮತ್ತು ಭಾನುವಾರದ ವಿಶೇಷ ಕಾರ್ಯಕ್ರಮಗಳು ಮತ್ತು ಶ್ರೀಯುತ ಜಿನರಾಜ ಶಾಸ್ತ್ರಿಗಳ ನಿತ್ಯದ ಗೀತಾ  ಪ್ರವಚನ, ಅದರ ನಡುನಡುವೆ ನಮ್ಮಗಳ ಕಪಿಚೇಷ್ಟೆ, ಆಗಷ್ಟೇ ನಮ್ಮ ಕಾಲೇಜಿನಲ್ಲಿ ಆರಂಭವಾಗಿದ್ದ ಮಹರ್ಷಿ ಮಹೇಶ ಯೋಗಿಗಳ Transendental Meditation ಕ್ಲಾಸುಗಳು, ಕಾಲೇಜಿನಲ್ಲಿ ನಡೆಯುತ್ತಿದ್ದ ವಿವಿಧ ಕಾರ್ಯಕ್ರಮಗಳು, ವಾರಕ್ಕೊಮ್ಮೆ ಎನ್ ಸಿಸಿ ಪರೇಡು ಹೀಗೆ ಸಮಯ ಕಳೆದದ್ದು ತಿಳಿಯುತ್ತಿರಲಿಲ್ಲ. ಪಿಯುಸಿ ಮೊದಲ ವರ್ಷದ ಅಂತಿಮ ಪರೀಕ್ಷೆಯಲ್ಲಿ ಫಲಿತಾಂಶ ನಿರಾಶಾದಾಯಕವಾಗಿರಲಿಲ್ಲ. ಹಾಗಾಗಿ ಎರಡನೇ ವರ್ಷದ ಆರಂಭದಿಂದಲೇ ನನ್ನ ಚಟುವಟಿಕೆಗಳು ಚುರುಕಾಗಿದ್ದವು.
          ನಮ್ಮ ಕಾಲೇಜಿನಿಂದ ಸುಮಾರು ೫-೬ ಕಿಲೋಮೀಟರುಗಳ ಅಂತರದಲ್ಲಿ  "ಗಡಾಯಿಕಲ್ಲು" ಎಂಬ ಒಂದು ಗುಡ್ಡ ಸಮತಟ್ಟಾದ ನೆಲದಿಂದ ಒಡಮೂಡಿ ಮೇಲೆದ್ದು ಒಂದು ತರಹ ದಿವ್ಯವಾಗಿ ಕಾಣುತ್ತಿತ್ತು.ಅದರ ತುದಿಯಲ್ಲೊಂದು ಕೋಟೆಯಿದ್ದು ಶಿಥಿಲವಾಗಿತ್ತು. ಟಿಪ್ಪು ಸುಲ್ತಾನನ ಅಧೀನದಲ್ಲಿದ್ದ  ಅದು ಹಲವಾರು ಐತಿಹಾಸಿಕ ಘಟನೆಗಳಿಗೆ ಮೂಕಸಾಕ್ಷಿಯಾಗಿ ನಿಂತಿದೆ.  ಒಮ್ಮೆ ನಾವು ೫೦-೬೦ ವಿದ್ಯಾರ್ಥಿಗಳು ಒಂದಿಬ್ಬರು ಉಪನ್ಯಾಸಕರನ್ನೂ ಸೇರಿಸಿಕೊಂಡು ಒಂದು ಬೆಳದಿಂಗಳ ರಾತ್ರಿಯನ್ನು ಅಲ್ಲಿ ಕಳೆದಿದ್ದೆವು. ಸೂರ್ಯಾಸ್ತಕ್ಕಿಂತ ಮೊದಲೇ ಮೇಲೆ ಏರಿ ಶಿಖರಾಗ್ರದಿಂದ ನೇಸರಾಸ್ತ ಹಾಗೂ ತಿಂಗಳೋದಯಗಳ ದಿವ್ಯ ದೃಶ್ಯಗಳನ್ನು ಕಂಡು ರೋಮಾಂಚಿತರಾಗಿದ್ದೆವು. ದಾರಿಯ ಚಾರಣ ಕೂಡ ಚೇತೋಹಾರಿಯಾಗಿತ್ತು. ಹುಡುಗ ಹುಡುಗಿಯರು ಪರಸ್ಪರರನ್ನು ಛೇಡಿಸುತ್ತಾ  ಕಡಿದಾದ ಆ ಕಲ್ಲನ್ನು ಏರಿದ್ದೆವು. ಎಲ್ಲ ಹುಡುಗಿಯರು ರಾತ್ರಿಯ ಅಡುಗೆಯನ್ನು ಅಲ್ಲೇ ಒಲೆ ಹೂಡಿ ತಯಾರಿಸಿದ್ದರು. ಬಿಸಿಬಿಸಿ ಊಟ ಸವಿದು ಸರಿರಾತ್ರಿಯ ತನಕ ವಿವಿಧ ಹಾಡು ಹಸೆ ಇತ್ಯಾದಿಗಳಲ್ಲಿ ಕಳೆದು ಕಲ್ಲು ಹಾಸಿನ ಮೇಲೆ ಮಲಗಿದವರಿಗೆ  ಮರುದಿನದ ಸೂರ್ಯೋದಯ ನೋಡಲು ಸರ್ ಎಬ್ಬಿಸಿದಾಗಲೇ ಇಹದ ಅರಿವಾದದ್ದು. ನನಗಂತೂ ಪಿಕ್ನಿಕ್ ಜೊತೆ ಹಲವಾರು ಹೊಸ ಗೆಳೆಯ ಗೆಳತಿಯರ ಪರಿಚಯವಾಗಿ, ಪರಿಧಿ ವಿಸ್ತಾರವಾದ ಕಾರಣ ಕಾಲೇಜು ತುಂಬಾ ಅಪ್ಯಾಯಮಾನವಾಗತೊಡಗಿತ್ತು.                                                                                                                                 ಕಾಲೇಜಿನಲ್ಲಿ ಒಮ್ಮೆ ಆಶುಭಾಷಣ ಕಾರ್ಯಕ್ರಮವಿತ್ತು. ನಾನೂ ಹೆಸರು ಕೊಟ್ಟಿದ್ದೆ. ನನಗೆ ಸಿಕ್ಕ ಚೀಟಿಯಲ್ಲಿ "INERTIA"(ಜಡತ್ವ) ಎಂದು ಇತ್ತು. ಸಭಾ ಭವನ ವಿದ್ಯಾರ್ಥಿಗಳಿಂದ ಕಿಕ್ಕಿರಿದಿತ್ತು. ನನಗೋ ಕಾಲೇಜಿನಲ್ಲಿ ವೇದಿಕೆಯಿಂದ ಮಾತಾಡುವ ಮೊದಲ ಅವಕಾಶ. ಹುಡುಗರ ನಿರೀಕ್ಷೆ ಮತ್ತು ಶಿಳ್ಳೆ ಗಮನಿಸಿ ತೊಡೆ ನಡುಗಲು ಶುರುವಾಯ್ತು. ದೀರ್ಘ ಉಸಿರು ತಗೊಂಡು, ಪರಿಚಯ ಹೇಳಿಕೊಂಡು, ಫಿಸಿಕ್ಸ್ ನಲ್ಲಿ ಕಲಿತ ಡೆಫಿನಿಶನ್ ಹೇಳಿದೆ. ಇಷ್ಟರಲ್ಲೇ ಸುಧಾರಿಸಿಕೊಂಡು ಆಗಿತ್ತು. ನಂತರ ಸೈನ್ಸ್ ನಿಂದ ಹೊರಬಿದ್ದು, ಜನರ ಮನದ ಭಾವನೆಗಳ inertia ದೂರವಾಗಬೇಕೆಂದು ಹೇಳುತ್ತಾ, ಇಲ್ಲವಾದರೆ "ಗಡಾಯಿಕಲ್ಲಿ"ನ  ತರಹ ಆಗುತ್ತೇವೆ ಎನ್ನುತ್ತಾ, ಕಾಲೇಜಿನಲ್ಲೇ ಅತ್ಯಂತ ದಪ್ಪವಿದ್ದ ಒಬ್ಬಳು ಅಕ್ಕನ ಕಡೆ ಕೈ ಮಾಡಿ ಮಾತು ಮುಗಿಸಿದೆ. ಆ ಹುಡುಗಿಗೆ "ಗಡಾಯಿಕಲ್ಲು" ಎಂದು ಅಡ್ಡ ಹೆಸರಿತ್ತು. ಸಂಜ್ಞೆ ಗಮನಿಸಿದ ಹುಡುಗ ಹುಡುಗಿಯರು "ಹೋ" ಎಂದು ಮಾಡು ಹಾರಿ ಹೋಗುವಂತೆ ಕಿರುಚಿದರು. ನನ್ನ ಮಾತು ಎಲ್ಲರಿಗೂ ಹಿಡಿಸಿತ್ತು. ಕಾಲೇಜಿನ 'ವಾಕ್ -ಸಾಮ್ರಾಟ' ಗುರುಮೂರ್ತಿ ತಾನೇ ಬಂದು ಅಭಿನಂದಿಸಿದ. ಮುನಿಸಿಕೊಂಡ ಅಕ್ಕನಿಗೆ 'ಸ್ಸಾರಿ' ಕೇಳಿ ಅವಳ ವಿಶ್ವಾಸ ಸಹ ಗೆದ್ದುಕೊಂಡೆ.                                   ಹೀಗೆ ಹಲವಾರು  ಅನಾನುಕೂಲತೆಗಳ ನಡುವೆಯೂ ಕಾಲೇಜು ನನ್ನನ್ನು ತನ್ನೊಳಗೆ ಎಳೆದುಕೊಂಡಿತ್ತು.                                                                                                                                                                                                                                                                                                                                                                                                                                                       














Saturday 11 January 2014

ಮಹಾ ತಾಯಿ

      ನನ್ನ ಅಪ್ಪಯ್ಯ ಒಬ್ಬ ತುಂಬ ಸರಳ, ಸತ್ಯನಿಷ್ಠ, ಭಾವ ಜೀವಿ. ತುಂಬಾ ಮುಗ್ಧ ಕೂಡಾ. ಪ್ರಾಯಶಃ ಅವನಿಗೆ ದೊರೆತ ಅವನಮ್ಮನ ಶ್ರೀರಕ್ಷೆ ಅವನ ಯೋಚನಾ ಪರಿಧಿಯೊಳಗೆ ಯಾವುದೇ ತರಹದ ಕೊಂಕುತನಗಳು  ಪ್ರವೇಶಿಸದಂತೆ ಅವನ ಜೀವನ ಪರ್ಯಂತ ಅವನನ್ನು ಕಾಪಾಡಿರಬೇಕು. ಅಂತಹ ಮಹಾತಾಯಿಯ ಜೀವನಗಾಥೆ ಈ ಬರಹದ ವಸ್ತು.
.       ಸಿದ್ದಾಪುರ ತಾಲೂಕಿನ "ಡೊ೦ಬೆ" ಗ್ರಾಮದಲ್ಲಿ ಅತ್ಯಂತ ಅನುಕೂಲಸ್ತ, ಗೌರವಾನ್ವಿತ ಅವಿಭಕ್ತ ಕುಟುಂಬದ ಸದಸ್ಯ ಗಣಪತಿ ಭಟ್ಟರ ಧರ್ಮಪತ್ನಿಯಾದ "ಸರಸ್ವತಿ" ಸೌಮ್ಯ ಸ್ವಭಾವದ ಸುಶೀಲೆ. ತುಸು ಎಣ್ಣೆಗಪ್ಪು ಎನ್ನಬಹುದಾದರೂ ಸುಲಕ್ಷಣೆ ಆದ ಕಾರಣ ಹಾಗೂ ಸಂಸಾರದ ಹಾಲಿನಲ್ಲಿ ಜೇನಾಗಿ ಬೆರೆತ ಕಾರಣ ಮನೆಯಲ್ಲೂ , ಊರಲ್ಲೂ ಸರ್ವಮಾನ್ಯಳು . ಪತಿಗಾದರೋ ಸಂಸಾರಕ್ಕಿಂತ ಅಧ್ಯಾತ್ಮ ಮತ್ತು  ಸಾಧು ಸಂತರ ಸಹವಾಸವೇ ಹೆಚ್ಚು ಪ್ರಿಯ . ಅದಕ್ಕೆ ತಕ್ಕಂತೆ ಅಮಾಯಕ ವ್ಯಕ್ತಿತ್ವ . ಕಾರಣ ಸಹಜವಾಗಿಯೇ ಪತ್ನಿಗೆ ಗೃಹಕೃತ್ಯದ ಜೊತೆ ಜೊತೆಗೇ ಅಲ್ಪಸ್ವಲ್ಪ ವ್ಯವಹಾರದ ಸಾಂಗತ್ಯದ ಅನಿವಾರ್ಯತೆ ಕೂಡ ಇತ್ತು . ವಿಶಾಲ ಕೂಡು ಕುಟುಂಬದಲ್ಲಿ ತನ್ನವೇ ಆದ ಹನ್ನೊಂದು ಮಕ್ಕಳ ಸೈನ್ಯ ಕೂಡ ಸೇರಿತ್ತು .
        ಇನ್ನು ಆ  ಮನೆ ಹಾಗು ಅಲ್ಲಿಯ ಕೆಲ ವಿಶೇಷಗಳು ಸಹ ಉಲ್ಲೇಖಯೋಗ್ಯವೇ ಆಗಿವೆ
         ಸದ್ಧರ್ಮಪಾಲನೆಯನ್ನು ವ್ರತವಾಗಿರಿಸಿಕೊಂಡಿದ್ದ ಕುಟುಂಬಕ್ಕೆ ಸಮೃದ್ಧಿಯ ಕೊರತೆಯೇನೂ ಇರಲಿಲ್ಲ. ಹಲವು ಎಕರೆ ಅಡಿಕೆ ತೋಟದ ಒಡೆಯರಾಗಿದ್ದ ಭಟ್ಟರ ಮನೆಯಲ್ಲಿ ವಿವಿಧ  ಒಡವೆ ವಸ್ತುಗಳೂ ಹೇರಳವಾಗಿದ್ದವು. ಭಟ್ಟರ ಮನೆಯ ಹೆಂಗಸರು ತೊಟ್ಟುಕೊಂಡ ಆಭರಣಗಳನ್ನು ನೋಡಲೆಂದೇ ಮದುವೆ ಇತ್ಯಾದಿ ಮಂಗಳಕಾರ್ಯಗಳಲ್ಲಿ ಜನ ಕುತೂಹಲಿಗಳಾಗಿರುತ್ತಿದ್ದರು ಎಂದರೆ ಅವರ ಸಂಪತ್ತಿನ ಒಂದು ಕ್ಷ್ರಿಪ್ರ ಪಾರ್ಶ್ವನೋಟ ನಮಗೆ ಲಭ್ಯವಾಗುತ್ತದೆ.                              ಇನ್ನೊಂದು ವಿಶೇಷವೂ ಆ ಮನೆಯಲ್ಲಿತ್ತು . ಅವರ ಮನೆಯ ಬಾವಿಯಲ್ಲಿ ಒಂದು 'ಚೌಡಿ' ವಾಸವಾಗಿತ್ತು. ಸೌಮ್ಯ ಸ್ವಭಾವದ ಅದು ತುಂಬಾ ವಿನೋದಪ್ರಿಯೆ ಕೂಡ. ಅದು ಖುಷಿಯಾಗಿದ್ದಾಗ ಯಾರಾದರೂ ನೀರು ಸೇದಲು ಭಾವಿಗೆ ಕೊಡ ಇಳಿಬಿಟ್ಟರೆ ಅದನ್ನು ಗಟ್ಟಿಯಾಗಿ ಹಿಡಿದುಕೊಂಡು ಬಿಡುತ್ತಿತ್ತು . ಮೇಲಿದ್ದವರು ಜೋರಾಗಿ ಎಳೆದಾಗ ಒಮ್ಮೆಗೇ ಕೈಬಿಟ್ಟು ಬಿಡುತ್ತಿತ್ತು . ಎಳೆತದ ರಭಸಕ್ಕೆ ಇವರು ಹಿಂದೆ ಬಿದ್ದಾಗ ಒಳಗಿನಿಂದ  ಜೋರಾಗಿ ನಗಾಡುತ್ತಿತ್ತು. ಬಾವಿಯಲ್ಲಿ ಇಣುಕಿ ನೋಡಿದರೆ ಏನೂ ಕಾಣುತ್ತಿರಲಿಲ್ಲ.ಇನ್ನು ಈ  ಮನೆಯ ಕಂದಮ್ಮಗಳು  ಹಠ ಮಾಡಿ ರಚ್ಚೆ ಹಿಡಿದು ಅತ್ತರೆ ಕೋಪಗೊಂಡು ಮಗುವನ್ನು ಎತ್ತಿಕೊಂಡು ಹೋಗಿ ಬಾವಿಯಲ್ಲಿ ಇಟ್ಟುಕೊಂಡು ಬಿಡುತ್ತಿತ್ತು. ಮಗುವಿನ ಅಳು ಬಾವಿಯೊಳಗಿಂದ ಕೇಳಿ ಬರುತ್ತಿದ್ದರೂ ಮಗು ಮಾತ್ರ ಕಾಣುತ್ತಿರಲಿಲ್ಲ. ನಂತರ ಅದಕ್ಕೆ ತಪ್ಪುಗಾಣಿಕೆ ಹಾಗೂ ಪೂಜೆ ಸಲ್ಲಿಸಿದರೆ  ಯಥಾವತ್ ತೊಟ್ಟಿಲಲ್ಲಿ  ಮಗುವನ್ನು ಮಲಗಿಸಿ  ಇಡುತ್ತಿತ್ತು. ನಮ್ಮ ಅಪ್ಪಯ್ಯ ಮಗು ಆಗಿದ್ದಾಗ ಕೂಡ  ಇದೇ ರೀತಿ ಒಮ್ಮೆ ಮೂರು ದಿನಗಳ ಕಾಲ ಅದು ಇವನನ್ನು ಎತ್ತಿಕೊಂಡು ಹೋಗಿತ್ತಂತೆ. ಇಷ್ಟೇ ಅಲ್ಲ,  ದಿನಾ  ರಾತ್ರಿ  ಹೊಸ್ತಿಲ ಮೇಲೆ ಅದಕ್ಕಾಗಿ ವೀಳ್ಯದೆಲೆ ,ಸುಣ್ಣ ಮತ್ತು ಒಂದು ಚೊಂಬು ನೀರು ಇಡಬೇಕಿತ್ತು. ಮಾರನೆ ದಿನ ಬೆಳಿಗ್ಗೆ ನೋಡಿದರೆ  ಅದು ಖಾಲಿಯಾಗಿರುತ್ತಿತ್ತು.   ಬಾಗಿಲಲ್ಲಿ ಯಾರೇ ಮಲಗಿದ್ದರೂ ಅವರನ್ನು ರಾತ್ರಿ ಒಯ್ದು ಗದ್ದೆಯಲ್ಲಿ ಮಲಗಿಸಿಟ್ಟು ಬರುತ್ತಿತ್ತು. ಇಂತಹ ಕೆಲ ತುಂಟತನಗಳನ್ನು ಹೊರತುಪಡಿಸಿದರೆ ಅದು ಸಂಪೂರ್ಣ ನಿರುಪದ್ರವಿ ಚೌಡಿಯಾಗಿತ್ತು.     .
         ಮತ್ತೊಂದು  ವಿಶೇಷ ರೂಢಿ ಸಹ ಆ ಮನೆಯಲ್ಲಿ ತಲೆತಲಾಂತರದಿಂದ ನಡೆದುಕೊಂಡು ಬಂದಿತ್ತು .ಮನೆಯ ಪ್ರಧಾನ ಬಾಗಿಲ ಮೇಲೊಂದು ಮಾಡುಗುಣಿ  ಇತ್ತು . ಅದರಲ್ಲೊಂದು ಗೋಲಕ ಸದಾ ಇರುತ್ತಿತ್ತು. ಯಾವಾಗಲೂ ಅದರೊಳಗೆ ದುಡ್ಡು ಹಾಕುತ್ತಿದ್ದರೇ ವಿನಃ ಎಂದೂ ಅದರಿಂದ ತೆಗೆಯುತ್ತಿರಲಿಲ್ಲ. ಸಂಗ್ರಹಿತ ಹಣ ನಂತರ ದೇವತಾ ಕಾರ್ಯಗಳಿಗೆ ಬಳಸಲ್ಪಡುತ್ತಿತ್ತು. ನನ್ನ ಅಪ್ಪಯ್ಯನ ಒಬ್ಬ ಚಿಕ್ಕಪ್ಪನಿಗೆ ನಾಟಕದ ಖಯಾಲಿ ಇತ್ತು. ನಾಟಕ ಕಂಪನಿಗಳ ಬೆನ್ನು ಹತ್ತಿ ಹೋಗುತ್ತಿದ್ದವನಿಗೆ ಒಮ್ಮೆ ದುಡ್ಡಿನ ತೊಂದರೆ ಬಂತು. ಅಂತಹ ಸನ್ನಡತೆ ಹೊಂದಿರದ ಆತ ಮನೆಯಲ್ಲಿ ಕೇಳಲು ಹಿಂಜರಿದ. ಆಗ ಅವನಿಗೆ ಈ ಗೋಲಕದ ಮೇಲೆ ಕಣ್ಣು ಬಿತ್ತು. ಹಿರಿಯರ ಎಚ್ಚರಿಕೆಯನ್ನು ಅವಗಣನೆ ಮಾಡಿ ಯಾರೂ ಇಲ್ಲದಾಗ ಅದಕ್ಕೆ ಕೈ ಹಚ್ಚಿದ. ಆದರೆ ಅದೇ ಸಮಯಕ್ಕೆ ಸರಿಯಾಗಿ  ಅಲ್ಲಿಗೆ ಬಂದ ತನ್ನ ದೊಡ್ಡಣ್ಣನ ಕೈಗೆ ಸಿಕ್ಕಿಬಿದ್ದ. ಇದನ್ನು ಕಂಡ ನನ್ನ   ಅಪ್ಪಯ್ಯನ ದೊಡ್ಡಪ್ಪ ನಿಟ್ಟುಸಿರು ಬಿಟ್ಟು, "ಅಯ್ಯೋ , ಹುಂಡಿಗೆ ನೀ ಕೈ ಹಾಕಿದೆ ಎಂದರೆ ಇಂದಿನಿಂದಲೇ ಈ ಮನೆಯ ದುರ್ದೆಶೆ ಆರಂಭ ಆದ ಹಾಗಾಯಿತು " ಎಂದಂದು ತುಂಬಾ ಸಂಕಟ ಪಟ್ಟನಂತೆ.
        ದೊಡ್ಡಜ್ಜನ ಆತಂಕ ಕಾಕತಾಳೀಯವೋ ಎಂಬಂತೆ ನಿಜವಾಗತೊಡಗಿತು . ಈಗಿನಂತೆ ಆರೋಗ್ಯ ಸವಲತ್ತುಗಳಿಲ್ಲದ ೧೯೧೫-೨೦ರ ಸುಮಾರಿನ  ಅಂದಿನ ದಿನಗಳಲ್ಲಿ ಅದೇನು ರೋಗ ಬಂದಿತೋ, ಮನೆಯ ಜನ ಹಿರಿ ಕಿರಿಯರೆನ್ನದೆ ಒಬ್ಬೊಬ್ಬರಾಗಿ ಮಸಣದ ದಾರಿ ಹಿಡಿಯತೊಡಗಿದರು. ತನ್ನ ಗಂಡ ಹಾಗೂ ಎಂಟು ಜನ ಮಕ್ಕಳನ್ನು ನೋಡನೋಡುತ್ತಿದ್ದಂತೆ ಕಳೆದುಕೊಂಡ ಸರಸ್ವತಿಗೆ ಅತೀವ ಭಯ ಕಾಡಿರಬೇಕು. ಇನ್ನು ತಾನಿಲ್ಲಿ ಇರಲಾರೆ ಎನ್ನಿಸಿರಬೇಕು. ತಮ್ಮ ಪುರೋಹಿತರನ್ನು ಕರೆಯಿಸಿ ತಾನು ತನ್ನ ಉಳಿದ ಮೂವರು ಮಕ್ಕಳನ್ನು ಉಳಿಸಿಕೊಳ್ಳುವ ಸಲುವಾಗಿ ಈ ಮನೆ ತೊರೆದು ಹೋಗುವ ನಿರ್ಣಯ ಮಾಡಿರುವದಾಗಿ ತಿಳಿಸಿದಳು. ಅವರು ತುಂಬಾ ನೊಂದುಕೊಂಡರೂ ಸಹ ಇವಳ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡವರೇ  ಒಂದು ಚಕ್ಕಡಿ ಗಾಡಿಯಲ್ಲಿ ಒಂದು ಹೊಸ ಸಂಸಾರ ಪ್ರಾರಂಭಿಸಲು ಬೇಕಾಗುವಷ್ಟು ಪಾತ್ರೆ ಪಗಡಗಳನ್ನು ತುಂಬಿಸಿ ಅವಳನ್ನು ಆಶೀರ್ವದಿಸಿ ಕಣ್ಣೀರಿಡುತ್ತಾ ಬೀಳ್ಕೊಟ್ಟರು.
       "ಧೋ" ಎಂದು ಸುರಿಯುತ್ತಿದ್ದ ಆಷಾಢದ ಮಳೆಯಲ್ಲಿ ಮೂರು ಪುಟ್ಟ ಮಕ್ಕಳನ್ನು ಕಟ್ಟಿಕೊಂಡು ಹೊರಟಿದ್ದ ಸರಸ್ವತಮ್ಮನ
ಮುಂದೆ ಯಾವುದೇ ನಿಶ್ಚಿತ ಗುರಿ ಇರಲಿಲ್ಲ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ "ಭಡ್ತಿ" ಆಗಿದ್ದವಳು ಅಕ್ಷರಶಃ ಅನಾಥೆ ಆಗಿ ಹೋಗಿದ್ದಳು. ಆ ಹೊತ್ತಿನಲ್ಲಿ ತನಗೆ ನೆನಪಾದ ಶಿರಸಿ ತಾಲೂಕಿನ ಅರಸಿಕೇರಿಯಲ್ಲಿದ್ದ ತನ್ನ ಸಂಬಂಧಿ ಒಬ್ಬರ ಮನೆಗೆ ಗಾಡಿ
ಹೊಡೆಯಿಸಿ, ಅವರಲ್ಲಿ ತನ್ನ ಸಂಕಟವೆಲ್ಲವನ್ನು ಹೇಳಿಕೊಂಡು, ಗಾಡಿಯಲ್ಲಿ ತಂದ ಎಲ್ಲ ಕಂಚು, ಹಿತ್ತಾಳೆ ಮತ್ತು ತಾಮ್ರದ
ಪಾತ್ರೆಗಳನ್ನು ಅವರ ಸುಪರ್ದಿಗೆ ಒಪ್ಪಿಸಿ, ಮುಂದೆ ತನ್ನ ಮಕ್ಕಳು ಮನೆ ಮಾಡುವಾಗ ಅವನ್ನೆಲ್ಲ ಮರಳಿ ಕೊಂಡೊಯ್ಯುವದಾಗಿ ಹೇಳಿ ಗಾಡಿಯನ್ನು ಮರಳಿ ಕಳಿಸಿದಳು.
       ನನ್ನ ಅಪ್ಪಯ್ಯ, ಅವನ ಒಬ್ಬ ಅಣ್ಣ ಮತ್ತು ಅಕ್ಕ ಮೂವರೂ ಇನ್ನೂ ಚಿಕ್ಕವರೇ ಆಗಿದ್ದರು. ಎಷ್ಟು ದಿನ ಇವರೊಂದಿಗೆ ಆ ತಾಯಿ ಬೇರೆಯವರ ಮನೆಯಲ್ಲಿ ಹಾಗೆ ಸುಮ್ಮನೆ ಉಳಿದುಕೊಂಡಾಳು?. ಇತಿಹಾಸದ ವೈಭವ ಹೊಟ್ಟೆ ತುಂಬಿಸುವ ಬದಲು ಅದಕ್ಕೆ ಅಡ್ಡಿ ಉಂಟುಮಾಡುವದೇ  ಹೆಚ್ಚು ಎಂಬುದನ್ನು ಬಲು ಬೇಗ ಕಂಡುಕೊಂಡ ಆ ತಾಯಿ ತನ್ನೆಲ್ಲಾ ನೋವು, ದುಃಖ, ದುಮ್ಮಾನಗಳನ್ನು ನುಂಗಿ, ಯಾರದೋ ಮನೆಯ ಪಡಿಮಾಡಿನಲ್ಲಿ ಆಶ್ರಯ ಪಡೆದು, ಹಸಿದ ನಾಲ್ಕು  ಹೊಟ್ಟೆಗಳ ಸಲುವಾಗಿ ಬೇರೆಯವರ ಮನೆಯ 'ಕೆಲಸದವಳಾ'ಗ ಬೇಕಾಯಿತು. ಇದು ಹರಿಶ್ಚಂದ್ರ  ಮಹಾರಾಜನ ಚಂದ್ರಮತಿಯ ಕಥೆಗಿಂತ ಹೇಗೆ ಭಿನ್ನ?, ಹೇಳಿ.
        ದೈವರಹಿತರ ಬೆನ್ನನ್ನು ದುರಾದೃಷ್ಟ ಎಂದೂ ಬಿಡುವದಿಲ್ಲ. ಹಲವು ಮನೆ ಹಾಗು ಊರುಗಳನ್ನು ಅನಿವಾರ್ಯವಾಗಿ ಬದಲಾಯಿಸಲೇ ಬೇಕಾಗಿ ಬಂದ ಸುಶೀಲೆಯಾದ ಬಡ ವಿಧವೆಗೆ ಈ ಮಧ್ಯೆ ಇನ್ನೊಬ್ಬ ಮಗ ಹಾಗು ಮಗಳು ದೈವಾಧೀನರಾದದ್ದು ಉರಿವ ಗಾಯದ ಮೇಲೆ ಬರೆ ಎಳೆದು ಉಪ್ಪು ಸುರಿದಂತಾಗಿತ್ತು. ಆ ಮಹಾತಾಯಿ ಇದೆಲ್ಲವನ್ನೂ ನುಂಗಿಕೊಂಡು  ಹೇಗೆ ಬದುಕಿ ಉಳಿದಳು ಎಂಬುದು ನನಗಂತೂ ಇಂದಿಗೂ ಬಿಡಿಸಲಾಗದ ಕಗ್ಗಂಟು. ಈ ನಡುವೆ ಕಿರಿಯ ಮಹಾಬಲೇಶ್ವರ ಹೇಗೋ ಎರಡನೇ ಇಯತ್ತೆ ಪಾಸು ಮಾಡಿದ್ದ ಮತ್ತು ಯಾರದೋ ಮನೆಯ ಮಕ್ಕಳ ಜೊತೆ ಉಪನಯನ ಶಾಸ್ತ್ರ ಕೂಡ ಆಗಿ ಹೋಗಿತ್ತು. ಅವನಮ್ಮ ತನ್ನ ನೆಲೆ ತೊರೆಯುವಾಗ ಅದ್ಯಾವ ಪರಿಯ ಮನಃಸ್ಥಿತಿಯಲ್ಲಿದ್ದಳೆಂದರೆ ಮಕ್ಕಳ ಜಾತಕ ಪಟ್ಟಿಯನ್ನು ತರಲು ಸಹ ಮರೆತಿದ್ದಳು. ಹಾಗಾಗಿ ನಮ್ಮ ಅಪ್ಪಯ್ಯನಿಗೆ ಕೊನೆಯ ತನಕ ತಾನು ಹುಟ್ಟಿದ ಸಂವತ್ಸರ ಜೊತೆಗೆ ಆಂಗೀರಸ ಗೋತ್ರಜ ಎಂಬುದು ಮಾತ್ರ ನೆನಪಿತ್ತು ವಿನಃ ಉಳಿದ ವಿವರಗಳಾವೂ ತಿಳಿದಿರಲಿಲ್ಲ.
         ಹಲವು ಬಾರಿ ನೆಲೆ ಬದಲಿಸಿದ ನಂತರ ಸರಸ್ವತಮ್ಮ  ತಲುಪಿದ್ದು "ಕುಳವೆ" ಗ್ರಾಮವನ್ನು. ಇಷ್ಟರಲ್ಲಾಗಲೇ ಇದ್ದೊಬ್ಬ ಮಗ ಮಹಾಬಲೇಶ್ವರ ಸ್ವಲ್ಪ ತಾನೂ ದುಡಿಯುವಂತಾಗಿದ್ದ. ಆ ತಾಯಿಗೆ, ಓದು ಬರಹ ಬಿಟ್ಟು ತನ್ನ ಮಗ ಸಹ ಜೀತ ಮಾಡಬೇಕಾಯಿತೆನ್ನುವ  ಸಂಕಟ ಸದಾ ಕಾಡುತ್ತಿತ್ತು. ಆದರೆ ಅಂತಹ ಹೀನ ಸ್ಥಿತಿಯಲ್ಲೂ ಸಹ ತನ್ನ ಸತ್ಯನಿಷ್ಠತೆ       ಕಾಪಾಡಿಕೊಂಡಿದ್ದಲ್ಲದೆ ತನ್ನ ಸರ್ವಸ್ವವೂ ಆಗಿದ್ದ ಮಗನಲ್ಲೂ  ಸಹ  ಅದೇ ಅಚಲ ಸತ್ಯನಿಷ್ಠ ಸಂಸ್ಕಾರವನ್ನು ಧೃಡಗೊಳಿಸಿದ್ದು ಆಕೆ ಆತನಿಗಾಗಿ ಮಾಡಿಕೊಟ್ಟ ಅತ್ಯಂತ ದೊಡ್ಡ ಆಸ್ತಿ. ಕುಳವೆಯಲ್ಲಿ  ಗಜಾನನ ಭಟ್ಟರ ಮನೆಯಲ್ಲಿ ತಾಯಿ-ಮಗ ನೆಲೆಯಾದರು. ಉಳಿದುಕೊಂಡ ಮನೆಯಲ್ಲಿ ಬೆಳಿಗ್ಗೆ ಮಜ್ಜಿಗೆ ಕಡೆಯುವದು ಇತ್ಯಾದಿ ಸಣ್ಣಪುಟ್ಟ ಕೆಲಸಗಳ ಸಹಾಯ ಮಾಡಿಕೊಟ್ಟು ಹೊರಗೆ ದುಡಿಯಲು ಮಗ ಹೋಗುತ್ತಿದ್ದರೆ, ತಾಯಿ ಹಲವು ಮನೆಗಳಲ್ಲಿ ಮನೆಗೆಲಸ ಮಾಡಿ ಬರುತ್ತಿದ್ದಳು.
        ಈ ಸುಮಾರಿನಲ್ಲಿಯೇ ರಮಣ ಮಹರ್ಷಿಗಳ ಶಿಷ್ಯರಾದ ಪೂಜ್ಯ ವಾಸಿಷ್ಠ ಗಣಪತಿ ಮುನಿಗಳು ಕುಳವೆಯ ಬಡ್ತಿ ಡಾಕ್ಟರರ ಮನೆಯಲ್ಲಿ ತಮ್ಮ ಬಿಡಾರ ಹೂಡಿದ್ದರು. ಆಗಿನ ಜನರಲ್ಲಿ ಧಾರ್ಮಿಕ ಮನೋಭಾವ ಚೆನ್ನಾಗಿತ್ತು. ನನ್ನ ಅಜ್ಜಿಯಲ್ಲಂತೂ ಅದು ಸ್ವಲ್ಪ ಹೆಚ್ಚೇ ಇತ್ತು. ತನ್ನ ನಿತ್ಯ ಕೋಟಲೆಗಳನ್ನು ಪೂಜ್ಯರ ಸನ್ನಿಧಿಯಲ್ಲಿ ಭಜನೆ ಹಾಗೂ ಧ್ಯಾನಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸ್ವಲ್ಪವಾದರೂ ಮರೆಯಲು ಯತ್ನಿಸುತ್ತಿದ್ದಳು. ತನ್ನ ಎಲ್ಲ ಕಥೆಯನ್ನು ಗುರುವಿನ ಎದುರು ತೆರೆದಿಟ್ಟು ಗುರುಕಾರುಣ್ಯಕ್ಕಾಗಿ ಪ್ರಾರ್ಥಿಸುತ್ತಿದ್ದಳು. ಗುರುಗಳೂ ಸಹ ಈ ಬಡವಿಯ ಬಗ್ಗೆ ಸಹಾನುಭೂತಿ ಹೊಂದಿದ್ದರು. ನನ್ನ ಅಪ್ಪಯ್ಯ ಆಗಿನ್ನೂ ಹುಡುಗನಾಗಿದ್ದರೂ ಸಹ ವಾಸಿಷ್ಟರ ಬಗ್ಗೆ ಅತೀವ ಭಕ್ತಿ ಮತ್ತು ಗೌರವವನ್ನು ಹೊಂದಿದ್ದನು.
       ನನ್ನ ತಂದೆ ಮಹಾಬಲೇಶ್ವರನಿಗೆ ಆಗ ಏರುಪ್ರಾಯ. ಪಕ್ಕದೂರಾದ "ಬಾಳೆತೋಟ"ದ ಕೃಷ್ಣಪ್ಪ ಹೆಗಡೆಯವರು ತಮ್ಮಲ್ಲಿದ್ದ ಒಂದು ಮಹಾ ಹರಾಮಿ ಹೋರಿಯನ್ನು ನೇಗಿಲಿಗೆ ಕಟ್ಟಿ ತಿದ್ದಿ ಕೊಟ್ಟವರಿಗೆ ೨೦ ರೂಪಾಯಿ ಇನಾಮು ಕೊಡುವದಾಗಿ ಘೋಷಿಸಿದ್ದರು. ಸವಾಲು ಸ್ವೀಕರಿಸಿದ  ಮಹಾಬಲೇಶ್ವರ ಒಂದೇ ದಿನದಲ್ಲಿ ಹೋರಿಯನ್ನು ಪಳಗಿಸಿ ಒಂದೆಕರೆ ಗದ್ದೆ ಹೂಡಿಕೊಟ್ಟು, ಇನಾಮು ಗೆದ್ದು, ಅದೇ ದುಡ್ಡಿನಲ್ಲಿ ಕುಳವೆಯಲ್ಲಿ  ಒಂದು ಬಿಡಾರ ಕಟ್ಟಿ, ತಾಯಿಯನ್ನು ಸ್ವಂತ ಮನೆಗೆ ತುಂಬಾ ಸಂಭ್ರಮದಿಂದ ಪ್ರವೇಶ ಮಾಡಿಸಿದನು. ಆಗ "ಸ್ವಂತ ಮನೆ" ಎಂದು  ತನ್ನ ಅಮ್ಮ ಪಟ್ಟ ಸಂಭ್ರಮವನ್ನು ನನ್ನಪ್ಪ ಆಗಾಗ ನೆನೆಸಿಕೊಂಡು ಹನಿಗಣ್ಣಾಗುತ್ತಿದ್ದನು. ಇದೇ ಹುರುಪಿನಲ್ಲಿ ಅರಸಿಕೆರೆಗೆ ಹೋಗಿ ತಾನು ಇಟ್ಟು ಬಂದ ಪಾತ್ರೆ ಪಗಡೆಗಳನ್ನು ಮರಳಿ ಕೇಳಿದರೆ, ಅವೆಲ್ಲ ಕಳುವಾಗಿ ಹೋದವೆಂದು ಹೇಳಿ ಆ ಗೃಹಸ್ಥ ಇವಳನ್ನು ಸಾಗಹಾಕಿದ.
        ಹೀಗಿದ್ದಾಗಲೇ ಒಮ್ಮೆ ತೀವ್ರ ಜ್ವರ ಬಂದು ಎಚ್ಚರ ತಪ್ಪಿದ ಮಗನಿಗೆ ದಿನ ಪೂರ್ತಿ ಎಚ್ಚರಾಗದೇ ಹೋದಾಗ ಆ ತಾಯಿಗೆ ವಾಸಿಷ್ಟರೊಬ್ಬರೇ ತನ್ನ ಮಗನನ್ನು ಉಳಿಸಿಕೊಡಲು ಸಮರ್ಥರು ಎಂದು ಸ್ಫುರಿಸಿತು. ಸೀದಾ ಹೋಗಿ ಗುರುಗಳ ಕಾಲಿಗೆ ಬಿದ್ದ ಅವಳನ್ನು ಎಬ್ಬಿಸಿದ ಗುರುಗಳಿಗೆ ಅವಳನ್ನು ನೋಡುತ್ತಿದ್ದಂತೆ ಎಲ್ಲಾ ಅರ್ಥವಾಗಿ ಹೋಗಿತ್ತು. ಒಮ್ಮೆ ಕಣ್ಣು ಮುಚ್ಚಿ ಧ್ಯಾನಿಸಿ, ಕಣ್ತೆರೆದವರೇ , "ಸರಸ್ವತಿ, ನಿನಗೆ ಪುತ್ರವಿಯೋಗ ತಪ್ಪಿದ್ದಲ್ಲ. ನಾನು ಏನೋ ಕೇಳುತ್ತೇನೆ, ಕೊಡ್ತೀಯಾ?" ಎಂದು ಕೇಳಿದರು.
"ಈ ಬಡವಿ ಹತ್ತಿರ ಕೊಡಲು  ಏನು ತಾನೇ ಇದೆ ನಾಯನಾ" ?* ಎಂದು ಅಳತೊಡಗಿದವಳಿಗೆ, "ಸ್ನಾನ ಮಾಡಿ ಮಡಿಯಾಗಿ ಬಾ"  ಎಂದು ಸೂಚಿಸಿದರು. ಹಾಗೆ ಬಂದವಳ ಕೈಯ್ಯಲ್ಲಿ ಒಂದು ತುಳಸಿ ದಳ ಕೊಟ್ಟು, "ನಿನ್ನ ಮಗನನ್ನು ನನಗೆ ಕೃಷ್ಣಾರ್ಪಣ ಎಂದು ತುಳಸಿ ನೀರು ಬಿಟ್ಟು ಕೊಟ್ಟು ಬಿಡು. ನನ್ನ ಮಗನಾಗಿ ಅವನು ಬದುಕಿ ಉಳಿಯುತ್ತಾನೆ. ಕೊಡುತ್ತೀಯಾ?" ಎಂದು ನಿರುದ್ವಿಗ್ನರಾಗಿ ಕೇಳಿದರು. "ಹೇಗಾದರೂ ನನ್ನ ಮಗ ಜೀವಂತ ಇದ್ದರೆ ಸಾಕು, ನಾಯನಾ" ಎಂದು ಹೃದಯ ಕಲ್ಲು ಮಾಡಿಕೊಂಡು, ಸಂಪೂರ್ಣ ಸಮರ್ಪಣಾ ಭಾವದಿಂದ, ಆ ಪರಮಗುರುವಿಗೆ ತನ್ನ ಆತ್ಮದ ತುಣುಕೇ ಆಗಿದ್ದ ಮಗನನ್ನು ದತ್ತು ನೀಡಿ, ಮನದ ಭಾವೋದ್ವೇಗ ಕರಗಿ ಹರಿಯುವ ತನಕ ಅತ್ತು, ಸ್ಥಿತಪ್ರಜ್ಞ ಭಾವ ಹೊಂದಿದಳು. ಆ ಭಾವ ತೀವ್ರತೆಯ ಬಿರುಗಾಳಿಯನ್ನು ಆ ಮಹಾತಾಯಿ ಅದು ಹೇಗೆ ತಾಳಿಕೊಂಡಳೋ ನಾ ಕಾಣೆ!. ೧೧ ಮಕ್ಕಳನ್ನು ಹಡೆದೂ ತನ್ನದೆನ್ನುವ ಒಂದು ಕುಡಿಯೂ ಇಲ್ಲವಾಯಿತಲ್ಲ ಎಂಬ ಆ ಭಾವವನ್ನು ಜೀರ್ಣಿಸಿಕೊಳ್ಳಲು ಆ  ಧೀರೋದಾತ್ತ ತಾಯಿ ಅದೆಷ್ಟು ಹೆಣಗಿದಳೋ, ಊಹಿಸಲೂ ಅಸಾಧ್ಯ. [* ವಿ.ಸೂ: ವಾಸಿಷ್ಟರನ್ನು ಅವರ ಪ್ರಿಯ ಅನುಯಾಯಿಗಳು "ನಾಯನಾ" ಎಂದು ಸಂಬೋಧಿಸುತ್ತಿದ್ದರು.]
        ಹೀಗೆ ಜನ್ಮಾಂತರದ ಪುಣ್ಯ ವಿಶೇಷದಿಂದ ವಾಸಿಷ್ಠ ಮುನಿಗಳ "ಪುತ್ರ"ನಾದ ಮಹಾಬಲೇಶ್ವರನು ತನ್ನ ತಾಯಿ ಮಾಡಿದ ತ್ಯಾಗವನ್ನು ಕೊನೆಯ ತನಕ ಆರ್ದ್ರ ಭಾವದಿಂದ ನೆನೆಯುತ್ತಿದ್ದನು. ತನ್ನ ಆ ಗುಡಿಸಲನ್ನೇ ಅರಮನೆಗೂ ಮಿಗಿಲಾಗಿ ಶುಭ್ರವಾಗಿ ಇಟ್ಟುಕೊಳ್ಳುತ್ತಿದ್ದುದನ್ನು ಹಾಗೂ ಪಾತ್ರೆ ಪಗಡೆಗಳನ್ನು ಹೊಳೆ ಹೊಳೆಯುವಂತೆ ಇಟ್ಟುಕೊಳ್ಳುತ್ತಿದ್ದುದನ್ನು, ಅತ್ಯಂತ ಆಸ್ಥೆಯಿಂದ ರುಚಿಕಟ್ಟಾದ ಅಡುಗೆ ಮಾಡುತ್ತಿದ್ದುದನ್ನು ಹೀಗೆ ಇನ್ನೂ ಆಕೆಯ ಅಗಣಿತ ಸುಗುಣಗಳನ್ನು ತನ್ನ ಮಕ್ಕಳಾದ ನಮಗೂ, ತನ್ನೆಲ್ಲ ಮುದ್ದು ಮೊಮ್ಮಕ್ಕಳಿಗೂ ಹೊಳೆವ ಕಂಗಳಿಂದ ಹೇಳುತ್ತಿದ್ದನು.
        ಈಗ ಹಿನ್ನೋಟದಲ್ಲಿ ಇದನ್ನೆಲ್ಲಾ ಗಮನಿಸಿದಾಗ ನನಗೆ ನಮ್ಮ, ಅಂದರೆ, ನನ್ನ ಅಪ್ಪಯ್ಯನ ಮಕ್ಕಳಾದ ನಾವು ಆರು ಜನ ಸಹೋದರ-ಸಹೋದರಿಯರ  ಮತ್ತು ಅಪ್ಪಯ್ಯನ ಮೊಮ್ಮಕ್ಕಳ ಸುಯೋಗವೇ ಅಂದಿನ ಆ ಘಟನೆಯ  ಹಿಂದಿನ ಪ್ರೇರಕ ಶಕ್ತಿ ಆಗಿದ್ದಿರಬಹುದೆಂದು ಅನಿಸುತ್ತದೆ. ಇಲ್ಲವಾದರೆ ಭಗವಾನ್ ವಾಸಿಷ್ಠ ಗಣಪತಿ ಮುನಿಗಳ ಮೊಮ್ಮಕ್ಕಳಾಗುವ  ಭಾಗ್ಯ ನಮಗೆಲ್ಲಿ ಸಿಗುತ್ತಿತ್ತು?. 
        ಅಪ್ಪಯ್ಯ ಕುಳವೆಯಲ್ಲಿ ಇದ್ದಾಗಲೇ ಕೊನೆಗೆ ತನ್ನ ತಾಯಿಯನ್ನೂ ಕಳೆದುಕೊಂಡು ಅಕ್ಷರಶ: ಏಕಾಂಗಿಯಾದನು.
        ಆ"ಮಹಾತಾಯಿ" ಸರಸಬ್ಬೆಯ ತ್ಯಾಗ ಪುಣ್ಯಗಳೇ ಇಂದು ನಮಗೆಲ್ಲ ಶ್ರೀರಕ್ಷೆಯಾಗಿದೆ.








    .