Thursday 2 January 2020

ಹೀಗೇಕೆ ನಾವು ಭಾರತೀಯರು

ಸ್ವಾರ್ಥವೆಮ್ಮ ಪರಂಪರೆಯು
ಇದುವೆ ನಮ್ಮ ಸಂಸ್ಕೃತಿ
ಲಂಚ ಎಮಗೆ ವರ್ಜ್ಯವಲ್ಲ
ಎಲ್ಲೆಡೆಯಿದೆ ಮಾನ್ಯತೆ


ಲಂಚಕೋರ ಪರಮಶೂರ
ಅಪ್ಪಿಕೊಳುವೆವವನನು
ತಪ್ಪು ತಿದ್ದುವಲ್ಲಿ ಎಮಗೆ
ಇಲ್ಲ ಎನಿತು ಆಸ್ತೆಯು


ಕಾಣಿಕೆಯನು ಅಳತೆ ಮೀರಿ
ಸಲ್ಲಿಸುವರು ಗುಡಿಯಲಿ
ಯೋಗ್ಯತೆಯದು ಇರಲಿ ಬಿಡಲಿ
ಬೇಡಿ ಫಲವ ಶೀಘ್ರದಿ


ಭಕ್ತಿ ಭಾವ ಏನು ಇಲ್ಲ
ಕೊಡುಕೊಳ್ಳುವ ಪರಿಯಿದು
ಹೊರಗೆ ಬಂದು ನೋಡಿರಯ್ಯ
ಇದಕ್ಕೆ 'ಲಂಚ' ಎನುವರು

ತಿರುಗಿನೋಡು ನಮ್ಮ ಚರಿತೆ
ಲಂಚ ಯುದ್ಧ ಗೆದ್ದಿದೆ
ಮೀರ್ ಜಾಫರ್ ಶೆಟ್ಟಿ ಮಲ್ಲ
ಮನೆಮುರುಕರ ದಂಡಿದೆ


ಪಾರ್ಸಿ ಹಿಂದು ಮುಸಲ್ಮಾನ
ಬುದ್ಧ ಕ್ರೈಸ್ತ ಜೈನರು
ತಮಿಳ ತೆಲುಗ ಹಿಂದಿ ವಂಗ
ಕೇರಳಿ ಕರ್ನಾಟಕಿ


ಏಕೆ ಹೀಗೆ ಹಿಂದೆ ಸರಿಸಿ
ಮೊದಲು ಬರಲಿ ದೇಶವು
ಸೆಟೆದು ಹೇಳಿ ಎದೆಯುಬ್ಬಿಸಿ
ನಾವು ಭಾರತೀಯರು'


ಹಳೆಯ ಚರಿತೆ ಹೊಸಕಿ ಹಾಕಿ
ಹೊಸದೆ ದೇಶ ಕಟ್ಟುವಾ
ಮೊದಲು ದೇಶಸೂತ್ರ ಪಠಿಸಿ
ದೇಶ ಗೆಲಿಸಿ ಗೆಲ್ಲುವಾ
ದೇಶ ಗೆಲಿಸಿ ಗೆಲ್ಲುವಾ


  • ರವೀಂದ್ರ ಭಟ್ ದೊಡ್ನಳ್ಳಿ
(ಜಾಲತಾಣದಲ್ಲಿ ಕಂಡ ಸಂದೇಶವೊಂದರಿಂದ ಸ್ಪೂರ್ತಿ ಪಡೆದು)

No comments:

Post a Comment