Sunday 9 February 2014

ಪರಿಧಿ ವಿಸ್ತಾರ

          ನನ್ನ ಜೀವನದಲ್ಲಿ ದೀರ್ಘಕಾಲ ಬೆಸೆದುಕೊಂಡ ಮಿತ್ರತ್ವಗಳ ಪೈಕಿ ಪದ್ದಣ್ಣ, ರಾಮಚಂದ್ರ ಮತ್ತು ಅನಂತರಾಮುರವರ ದೋಸ್ತಿ ಆರಂಭವಾಗಿದ್ದು ಉಜಿರೆಯಲ್ಲಿಯೇ. ಮುಂದೆ ಅನಂತರಾಮುವಿನ ನಿರಂತರ  ಸಾಂಗತ್ಯ ಸಿಕ್ಕಿದ್ದರಿಂದ ಅವನ ಪೂರ್ಣ ಪರಿವಾರವೇ ನನ್ನನ್ನು ತಮ್ಮವರಲ್ಲೊಬ್ಬನಾಗಿ ಅಪ್ಪಿಕೊಂಡಿದ್ದು, ಇದರ ಬಗ್ಗೆ ಮುಂದೆ ಪ್ರತ್ಯೇಕವಾಗಿ ದಾಖಲಿಸುತ್ತೇನೆ.
          ಪ್ರಥಮ  ಪಿಯುಸಿಯ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ನಾನು ೬೫-೬೬ ಶೇಕಡಾ ಮಾರ್ಕ್ಸ್ ಮಾತ್ರ ಗಳಿಸಿದ್ದು ನೋಡಿ ಕೆಮಿಸ್ಟ್ರಿ ಕೃಷ್ಣ ಭಟ್ ಸರ್ ನನ್ನ ಕರೆಸಿ ನನಗೇನು ತೊಂದರೆ ಆಗ್ತಿದೆ ಎಂದು ವಿಚಾರಿಸಿಕೊಂಡರು. ಎಲ್ಲ ಕೇಳಿ, ಇನ್ನೂ ಸ್ವಲ್ಪ ಹೆಚ್ಚು ಶ್ರಮ ಹಾಕುವಂತೆ ತಿಳಿಸಿ ಪ್ರೋತ್ಸಾಹ ನೀಡಿದರು. ಈ ನಡುವೆ ನನ್ನ ಮಿತ್ರವೃಂದ ಸಹ ವಿಸ್ತರಿಸತೊಡಗಿತ್ತು.ಹಾಗಾಗಿ ಮೊದಲಿನಂತೆ ಬೇಸರ ಬರುತ್ತಿರಲಿಲ್ಲ. ನಮ್ಮ ಸಿದ್ಧವನ ಗುರುಕುಲದಲ್ಲಿನ ಶನಿವಾರ ಮತ್ತು ಭಾನುವಾರದ ವಿಶೇಷ ಕಾರ್ಯಕ್ರಮಗಳು ಮತ್ತು ಶ್ರೀಯುತ ಜಿನರಾಜ ಶಾಸ್ತ್ರಿಗಳ ನಿತ್ಯದ ಗೀತಾ  ಪ್ರವಚನ, ಅದರ ನಡುನಡುವೆ ನಮ್ಮಗಳ ಕಪಿಚೇಷ್ಟೆ, ಆಗಷ್ಟೇ ನಮ್ಮ ಕಾಲೇಜಿನಲ್ಲಿ ಆರಂಭವಾಗಿದ್ದ ಮಹರ್ಷಿ ಮಹೇಶ ಯೋಗಿಗಳ Transendental Meditation ಕ್ಲಾಸುಗಳು, ಕಾಲೇಜಿನಲ್ಲಿ ನಡೆಯುತ್ತಿದ್ದ ವಿವಿಧ ಕಾರ್ಯಕ್ರಮಗಳು, ವಾರಕ್ಕೊಮ್ಮೆ ಎನ್ ಸಿಸಿ ಪರೇಡು ಹೀಗೆ ಸಮಯ ಕಳೆದದ್ದು ತಿಳಿಯುತ್ತಿರಲಿಲ್ಲ. ಪಿಯುಸಿ ಮೊದಲ ವರ್ಷದ ಅಂತಿಮ ಪರೀಕ್ಷೆಯಲ್ಲಿ ಫಲಿತಾಂಶ ನಿರಾಶಾದಾಯಕವಾಗಿರಲಿಲ್ಲ. ಹಾಗಾಗಿ ಎರಡನೇ ವರ್ಷದ ಆರಂಭದಿಂದಲೇ ನನ್ನ ಚಟುವಟಿಕೆಗಳು ಚುರುಕಾಗಿದ್ದವು.
          ನಮ್ಮ ಕಾಲೇಜಿನಿಂದ ಸುಮಾರು ೫-೬ ಕಿಲೋಮೀಟರುಗಳ ಅಂತರದಲ್ಲಿ  "ಗಡಾಯಿಕಲ್ಲು" ಎಂಬ ಒಂದು ಗುಡ್ಡ ಸಮತಟ್ಟಾದ ನೆಲದಿಂದ ಒಡಮೂಡಿ ಮೇಲೆದ್ದು ಒಂದು ತರಹ ದಿವ್ಯವಾಗಿ ಕಾಣುತ್ತಿತ್ತು.ಅದರ ತುದಿಯಲ್ಲೊಂದು ಕೋಟೆಯಿದ್ದು ಶಿಥಿಲವಾಗಿತ್ತು. ಟಿಪ್ಪು ಸುಲ್ತಾನನ ಅಧೀನದಲ್ಲಿದ್ದ  ಅದು ಹಲವಾರು ಐತಿಹಾಸಿಕ ಘಟನೆಗಳಿಗೆ ಮೂಕಸಾಕ್ಷಿಯಾಗಿ ನಿಂತಿದೆ.  ಒಮ್ಮೆ ನಾವು ೫೦-೬೦ ವಿದ್ಯಾರ್ಥಿಗಳು ಒಂದಿಬ್ಬರು ಉಪನ್ಯಾಸಕರನ್ನೂ ಸೇರಿಸಿಕೊಂಡು ಒಂದು ಬೆಳದಿಂಗಳ ರಾತ್ರಿಯನ್ನು ಅಲ್ಲಿ ಕಳೆದಿದ್ದೆವು. ಸೂರ್ಯಾಸ್ತಕ್ಕಿಂತ ಮೊದಲೇ ಮೇಲೆ ಏರಿ ಶಿಖರಾಗ್ರದಿಂದ ನೇಸರಾಸ್ತ ಹಾಗೂ ತಿಂಗಳೋದಯಗಳ ದಿವ್ಯ ದೃಶ್ಯಗಳನ್ನು ಕಂಡು ರೋಮಾಂಚಿತರಾಗಿದ್ದೆವು. ದಾರಿಯ ಚಾರಣ ಕೂಡ ಚೇತೋಹಾರಿಯಾಗಿತ್ತು. ಹುಡುಗ ಹುಡುಗಿಯರು ಪರಸ್ಪರರನ್ನು ಛೇಡಿಸುತ್ತಾ  ಕಡಿದಾದ ಆ ಕಲ್ಲನ್ನು ಏರಿದ್ದೆವು. ಎಲ್ಲ ಹುಡುಗಿಯರು ರಾತ್ರಿಯ ಅಡುಗೆಯನ್ನು ಅಲ್ಲೇ ಒಲೆ ಹೂಡಿ ತಯಾರಿಸಿದ್ದರು. ಬಿಸಿಬಿಸಿ ಊಟ ಸವಿದು ಸರಿರಾತ್ರಿಯ ತನಕ ವಿವಿಧ ಹಾಡು ಹಸೆ ಇತ್ಯಾದಿಗಳಲ್ಲಿ ಕಳೆದು ಕಲ್ಲು ಹಾಸಿನ ಮೇಲೆ ಮಲಗಿದವರಿಗೆ  ಮರುದಿನದ ಸೂರ್ಯೋದಯ ನೋಡಲು ಸರ್ ಎಬ್ಬಿಸಿದಾಗಲೇ ಇಹದ ಅರಿವಾದದ್ದು. ನನಗಂತೂ ಪಿಕ್ನಿಕ್ ಜೊತೆ ಹಲವಾರು ಹೊಸ ಗೆಳೆಯ ಗೆಳತಿಯರ ಪರಿಚಯವಾಗಿ, ಪರಿಧಿ ವಿಸ್ತಾರವಾದ ಕಾರಣ ಕಾಲೇಜು ತುಂಬಾ ಅಪ್ಯಾಯಮಾನವಾಗತೊಡಗಿತ್ತು.                                                                                                                                 ಕಾಲೇಜಿನಲ್ಲಿ ಒಮ್ಮೆ ಆಶುಭಾಷಣ ಕಾರ್ಯಕ್ರಮವಿತ್ತು. ನಾನೂ ಹೆಸರು ಕೊಟ್ಟಿದ್ದೆ. ನನಗೆ ಸಿಕ್ಕ ಚೀಟಿಯಲ್ಲಿ "INERTIA"(ಜಡತ್ವ) ಎಂದು ಇತ್ತು. ಸಭಾ ಭವನ ವಿದ್ಯಾರ್ಥಿಗಳಿಂದ ಕಿಕ್ಕಿರಿದಿತ್ತು. ನನಗೋ ಕಾಲೇಜಿನಲ್ಲಿ ವೇದಿಕೆಯಿಂದ ಮಾತಾಡುವ ಮೊದಲ ಅವಕಾಶ. ಹುಡುಗರ ನಿರೀಕ್ಷೆ ಮತ್ತು ಶಿಳ್ಳೆ ಗಮನಿಸಿ ತೊಡೆ ನಡುಗಲು ಶುರುವಾಯ್ತು. ದೀರ್ಘ ಉಸಿರು ತಗೊಂಡು, ಪರಿಚಯ ಹೇಳಿಕೊಂಡು, ಫಿಸಿಕ್ಸ್ ನಲ್ಲಿ ಕಲಿತ ಡೆಫಿನಿಶನ್ ಹೇಳಿದೆ. ಇಷ್ಟರಲ್ಲೇ ಸುಧಾರಿಸಿಕೊಂಡು ಆಗಿತ್ತು. ನಂತರ ಸೈನ್ಸ್ ನಿಂದ ಹೊರಬಿದ್ದು, ಜನರ ಮನದ ಭಾವನೆಗಳ inertia ದೂರವಾಗಬೇಕೆಂದು ಹೇಳುತ್ತಾ, ಇಲ್ಲವಾದರೆ "ಗಡಾಯಿಕಲ್ಲಿ"ನ  ತರಹ ಆಗುತ್ತೇವೆ ಎನ್ನುತ್ತಾ, ಕಾಲೇಜಿನಲ್ಲೇ ಅತ್ಯಂತ ದಪ್ಪವಿದ್ದ ಒಬ್ಬಳು ಅಕ್ಕನ ಕಡೆ ಕೈ ಮಾಡಿ ಮಾತು ಮುಗಿಸಿದೆ. ಆ ಹುಡುಗಿಗೆ "ಗಡಾಯಿಕಲ್ಲು" ಎಂದು ಅಡ್ಡ ಹೆಸರಿತ್ತು. ಸಂಜ್ಞೆ ಗಮನಿಸಿದ ಹುಡುಗ ಹುಡುಗಿಯರು "ಹೋ" ಎಂದು ಮಾಡು ಹಾರಿ ಹೋಗುವಂತೆ ಕಿರುಚಿದರು. ನನ್ನ ಮಾತು ಎಲ್ಲರಿಗೂ ಹಿಡಿಸಿತ್ತು. ಕಾಲೇಜಿನ 'ವಾಕ್ -ಸಾಮ್ರಾಟ' ಗುರುಮೂರ್ತಿ ತಾನೇ ಬಂದು ಅಭಿನಂದಿಸಿದ. ಮುನಿಸಿಕೊಂಡ ಅಕ್ಕನಿಗೆ 'ಸ್ಸಾರಿ' ಕೇಳಿ ಅವಳ ವಿಶ್ವಾಸ ಸಹ ಗೆದ್ದುಕೊಂಡೆ.                                   ಹೀಗೆ ಹಲವಾರು  ಅನಾನುಕೂಲತೆಗಳ ನಡುವೆಯೂ ಕಾಲೇಜು ನನ್ನನ್ನು ತನ್ನೊಳಗೆ ಎಳೆದುಕೊಂಡಿತ್ತು.                                                                                                                                                                                                                                                                                                                                                                                                                                                       














No comments:

Post a Comment