Saturday 10 December 2016

ಕಗ್ಗಲ್ಲಿಗೆ ಬಿದ್ದವು ಚಾಣದೇಟುಗಳು -ಭಾಗ - 1

                 ಕಗ್ಗಲ್ಲಿಗೆ ಬಿದ್ದವು  ಚಾಣದೇಟುಗಳು -ಭಾಗ - 1          
         ಹಿರಿಯ ಪ್ರಾಥಮಿಕ ಶಾಲೆಗಳಿಗಿಂತ  ಹೈಸ್ಕೂಲುಗಳು ಮತ್ತೂ ವಿರಳವಾಗಿದ್ದ ದಿನಗಳವು. ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯ ಕುವರ ಶ್ರೀಯುತ ದಿನಕರ ದೇಸಾಯಿಯವರು ಆ ಸಮಯದಲ್ಲಿ ತಮ್ಮ “ಕೆನರಾ ವೆಲ್ ಫೇರ್ ಟ್ರಸ್ಟ್” ಮೂಲಕ ಜಿಲ್ಲೆಯಾದ್ಯಂತ ಶೈಕ್ಷಣಿಕ ಕ್ರಾಂತಿಯನ್ನೇ ಆರಂಭಿಸಿದ್ದರು. ಸ್ಥಳೀಯರ ಬೇಡಿಕೆ ಮತ್ತು ಆಸಕ್ತಿಗಳನ್ನು ಗಮನಿಸಿ ಜಿಲ್ಲೆಯ ಹಲವಾರು ಊರುಗಳಲ್ಲಿ “ಜನತಾ ವಿದ್ಯಾಲಯ” ಹೆಸರಿನಲ್ಲಿ ಹೈಸ್ಕೂಲುಗಳನ್ನು ಪ್ರಾರಂಭಿಸುತ್ತಿದ್ದರು. ಅದೇ ರೀತಿಯ ಒಂದು ಜನತಾ ವಿದ್ಯಾಲಯ 1967-68ರಲ್ಲಿ ಶಿರಸಿ ತಾಲೂಕಿನ ಕುಳವೆ ಮತ್ತು ಬರೂರು ಗ್ರಾಮಗಳ ಮಧ್ಯವರ್ತಿ ಸ್ಥಳದಲ್ಲಿ ಆರಂಭವಾಗಿತ್ತು. ಕುಳವೆಯ ಬಡ್ತಿ ಡಾಕ್ಟರ್, ಕೆರೆಕೈ ಕೃಷ್ಣ ಭಟ್ಟರು, ಕಾಗೇರಿ ಅನಂತ ಹೆಗಡೆಯವರು, ಬೆಳಖಂಡ, ಬರೂರು, ಅರಸೀಕೆರೆ, ಕಲಗದ್ದೆ, ನೇಗಾರು, ಕೆಂಚಗದ್ದೆ, ತೆರಕನಹಳ್ಳಿ ಇವೇ ಮುಂತಾದ  ಸುತ್ತಲಿನ ಹತ್ತಾರು ಹಳ್ಳಿಗಳ ಮಹನೀಯರುಗಳ ಪ್ರಯತ್ನದಿಂದ ಹಾಗೂ ಶ್ರೀಯುತ ದಿನಕರ ದೇಸಾಯಿಯವರ ಕೊಡುಗೆಯಾಗಿ ತಲೆ ಎತ್ತಿದ ಆ ಹೈಸ್ಕೂಲು ಆಗಿನ್ನೂ ತನ್ನ ಬಾಲಗ್ರಹ ಪೀಡೆಯಿಂದ ನರಳುತ್ತಿತ್ತು. ಪ್ರತಿ ತರಗತಿಗೂ ಕನಿಷ್ಠ 30 ವಿದ್ಯಾರ್ಥಿಗಳಿಲ್ಲದಿದ್ದರೆ ಶಾಲೆಯ ಮಾನ್ಯತೆ ರದ್ದಾಗುವ ಭಯವಿತ್ತು. 1972 ರಲ್ಲಿ ನಾವು 7ನೇ ಕ್ಲಾಸ್ ಮುಗಿಸಿದಾಗ ಈ ಹೈಸ್ಕೂಲಿಗೆ ಕೇವಲ ನಾಲ್ಕು ವರ್ಷವಾಗಿತ್ತು. ನನ್ನ ತಂದೆ ಕುಳವೆ ಬಡ್ತಿ ಡಾಕ್ಟರರಲ್ಲಿ ತನ್ನ ಮಗನ ಹೈಸ್ಕೂಲಿನ ಬಗ್ಗೆ ಪ್ರಸ್ತಾಪ ಮಾಡಿದಾಗ ತಮ್ಮದೇ ಆದ ಈ ಹೊಸ ಹೈಸ್ಕೂಲಿಗೆ ಸೇರಿಸುವಂತೆ ತಿಳಿಸಿದರು. ಅಲ್ಲೇ ಇದ್ದ ಕಾಗೇರಿ ಅನಂತ ಹೆಗಡೆಯವರು ತಮ್ಮ ಮನೆಗೇ ಹುಡುಗನನ್ನು ಕರೆತರಲು ಹೇಳಿ, ನಂತರದ ವ್ಯವಸ್ಥೆಯನ್ನು ತಾನು ಮಾಡುವದಾಗಿ  ತಿಳಿಸಿದರು.
        ಇತ್ತ  ನಾನು ಹೈಸ್ಕೂಲಿಗೆ ಹೋಗಲು ಸಂಭ್ರಮ ಪಡತೊಡಗಿದೆ. ಉದ್ದವಾಗಿ ಬೆಳೆದಿದ್ದ ಕೂದಲನ್ನು ಕತ್ತರಿಸಲು ಕ್ಷೌರದವನ ಹತ್ತಿರ ಹೋದಾಗ ನುಣ್ಣಗೆ ಬೋಳು ಹೊಡೆಸಲು ಬಿಡದೆ, ಹಠ ಮಾಡಿ , “ಕ್ರಾಪ್ “ ಹೊಡೆಸಿಕೊಂಡೆ. ನನ್ನ ಮತ್ತು ಅಪ್ಪಯ್ಯನ ನಡುವೆ ರಾಜಿ ಮಾಡುವಂತೆ, ನುಣ್ಣಗೆ ಹೆರೆದ ತಲೆ 15 ದಿನದಲ್ಲಿ ಬೆಳೆಯಬಹುದಾದ ಮಟ್ಟದ ಕೂದಲು ಉಳಿಸಿ, ಕ್ರಾಪ್ ಹೊಡೆಸಿದ್ದಾಯಿತು. ಹೊರಡಲು ಎರಡು ದಿನ ಇರುವಾಗ ನನ್ನ ಪರಮಾಪ್ತ ಗೆಳೆಯ ಗಣಗೇರಿ ಕೃಷ್ಣಮೂರ್ತಿ ಅಯ್ಯ  ನಮ್ಮ ಮನೆಗೇ ಬಂದು, ತಾನೂ ಹೈಸ್ಕೂಲು ಸೇರಲು ಬಯಸುವದಾಗಿಯೂ, ನನ್ನ ಜೊತೆ ಅವನನ್ನೂ ಕರೆದೊಯ್ಯಬೇಕೆಂದೂ ದುಂಬಾಲು ಬಿದ್ದ. ತಂದೆ ಇಲ್ಲದ ಅವನು ಮುಂದೆ ಓದಲು ತನ್ನದೇ ಪ್ರಯತ್ನದಿಂದ ಒಂದು ವ್ಯವಸ್ಥೆ ಮಾಡಿಕೊಳ್ಳಬೇಕಾಗಿತ್ತು. ತನ್ನ ಮಗನ ನೆಲೆಯೇ ಅನಿಶ್ಚಿತವಾಗಿದ್ದರೂ ಸಹ ದಯಾರ್ದೃ ಹೃದಯಿಯಾದ ನನ್ನಪ್ಪ, “ದೈವೇಚ್ಚೆ ಇದ್ದಂತೆ ಆಗುತ್ತದೆ. ನೀನೂ ಒಂದು ಕೈಚೀಲದಲ್ಲಿ ನಿನ್ನ ಬಟ್ಟೆ ಬರೆ ಹಾಕಿಕೊಂಡು ಬಾ “ ಎಂದು ನನ್ನ ಜೊತೆ ಅವನನ್ನೂ ಕರೆದುಕೊಂಡು ಹೊರಟರು. ಮನೆಯಿಂದ ಒಂಭತ್ತು ಮೈಲು ದೂರದ ಕಾಗೇರಿಗೆ ಒಂದು ಸಾಯಂಕಾಲ ನಾವು ಮೂವರೂ ಬಂದಿಳಿದೆವು. “ಈ ಹುಡುಗರು 3-4 ದಿನ ನನ್ನ ಮನೆಯಲ್ಲೇ ಇರಲಿ. ಅಷ್ಟರಲ್ಲಿ ನಾನು ಅವರಿಗೆ ಉಳಿಯಲು ಒಂದು ಸೂಕ್ತ ವ್ಯವಸ್ಥೆ ಮಾಡಿ ಕೊಡುತ್ತೇನೆ. ನೀವು ನಿಶ್ಚಿಂತೆಯಿಂದ ಹೊರಡಿರಿ“, ಎಂದು ನನ್ನಪ್ಪನನ್ನು ಕಳಿಸಿಕೊಟ್ಟ ಅನಂತ ಹೆಗಡೆಯವರು ನಮ್ಮಿಬ್ಬರನ್ನೂ ತಮ್ಮ ಮನೆಯಲ್ಲಿಯೇ ಉಳಿಸಿಕೊಂಡರು. ಅವರ ಹಿರಿಮಗಳು ಪ್ರಭಾವತಿ (ನಂತರ ನಮಗೆ ಅಕ್ಕ ಆದಳು) ಅದೇ ವರ್ಷ ತನ್ನ ಮೆಟ್ರಿಕ್ ಮುಗಿಸಿದ್ದಳು. ಪ್ರಥಮ ಪುತ್ರ ಶಿವರಾಮ ನಮ್ಮ ಜೊತೆಯಲ್ಲೇ ಎಂಟನೇ ಕ್ಲಾಸಿಗೆ ಬರುವವನಿದ್ದ. ಎರಡನೇ ಮಗ ವಿಶ್ವೇಶ್ವರ’’ ಆರನೇ ಕ್ಲಾಸಿನಲ್ಲಿದ್ದ. ಇವರಲ್ಲದೆ ಒಬ್ಬಳು ತಂಗಿ ಸರಸ್ವತಿ ಹಾಗೂ ಮೂರು ಜನ ಇನ್ನೂ ಕಿರಿಯ ತಮ್ಮಂದಿರಿದ್ದರು. ಕೊನೆಯವನಾದ ನಾಗಪತಿ ಆಗ 1-2 ವರ್ಷದ ಬಾಲ.
         ಇವರ ಮನೆಯಲ್ಲಿ ಉಳಿದು ನಾವಿಬ್ಬರೂ ಹೈಸ್ಕೂಲಿಗೆ ಹೋಗಿಬರುತ್ತಾ ನಮ್ಮ ಎಸ್ಸೆಸ್ಸೆಲ್ಸಿ ಮುಗಿಸಿದೆವು. ಈಗ  ನಾನು ನಿಜವಾಗಿ ಹೇಳಬೇಕಾದದ್ದು - ಆಗ ಅವರ ಮನೆ, ಅದರ ಗೃಹಸ್ಥ  ಹಾಗೂ  ಆ ಗೃಹಿಣಿ  ಹೇಗಿದ್ದರು ಎಂಬುದನ್ನೇ ವಿನಹ ನನ್ನದೇ ತುತ್ತೂರಿ ಊದುವದನ್ನಲ್ಲ. ಈ ವಿಷಯ ಈಗಿನವರಿಗೆ (ನಮ್ಮೆಲ್ಲರಿಗೂ ಕೂಡ) ಅನುಕರಣೀಯವಾಗಬಹುದೆಂದು ನನ್ನ ಭಾವನೆ.
         ನಾವು ಆ ಮನೆಗೆ  ಹೋದಾಗ ಮನೆಯ ಯಜಮಾನ “ಅನಂತ ಹೆಗಡೆ”ಯವರಿಗೆ  ಸುಮಾರು 37-38ರ ಪ್ರಾಯ ಇದ್ದಿರಬಹುದು. ಅದಾಗಲೇ ಹಣೆ ಅಗಲವಾಗಲು ಆರಂಭವಾಗಿತ್ತು. ಇವರ ಮನೆ ಸುತ್ತಲಿನ ಪ್ರಾಂತ್ಯದ ಗಣ್ಯರ ಮನೆಗಳ ಪೈಕಿ ಒಂದು. ಮನೆಯಲ್ಲಿ ಸದಾ ಬಂದು ಹೋಗುವವರ ಗಿಜಿಗಿಜಿ. ತುಂಬಾ ಹಳೆಯದಾದವಿಶಾಲವಾದ ಮನೆ. ಮನೆಯಲ್ಲಿ ಮನೆಯವರೇ ಹತ್ತು ಜನ. (ಅವರ ತಾಯಿ “ಮಹಾಲಕ್ಷ್ಮಮ್ಮ” ಸಹ ಇದ್ದರು). ಜೊತೆಗೆ ನಾವಿಬ್ಬರು. ಹೊರಗೆ ಹತ್ತಾರು ಆಳುಮಕ್ಕಳು. (ಅವರ ಪೈಕಿ 3-4 ಜನ ಅಲ್ಲೇ ಮಧ್ಯಾಹ್ನದ ಊಟಕ್ಕೆ ಇರುತ್ತಿದ್ದರು). ಪ್ರತೀ ಮಧ್ಯಾಹ್ನ ಕನಿಷ್ಠ 20 ಜನರಿಗೆ ಅಡಿಗೆ ಮಾಡಬೇಕಿತ್ತು. ಬೆಳಿಗ್ಗೆ ತಿಂಡಿಗೆ  ಎಲ್ಲರಿಗೂ ತೆಳ್ಳೇವು (ತಿಳುವಾದ ದೋಸೆ). ಅದಕ್ಕಾಗಿ ಅಕ್ಕಿ ನೆನೆಸಿಟ್ಟು ಮುನ್ನಾದಿನ ಸಂಜೆಯೇ ರುಬ್ಬುಕಲ್ಲಿನಲ್ಲಿ ರುಬ್ಬಿ ಇಡಬೇಕಿತ್ತು. ಆಗ ಮನೆಗಿನ್ನೂ ಕರೆಂಟು ಬಂದಿರಲಿಲ್ಲ. (ನಾವು ಹೈಸ್ಕೂಲಿನಲ್ಲಿದ್ದಾಗಲೇ ಅಲ್ಲಿಗೆ ಕರೆಂಟು ಬಂತು). ಹಾಗಾಗಿ ಅಕ್ಕಿ ಬೀಸುವದಲ್ಲದೆ ಮಜ್ಜಿಗೆ ಕಡೆಯುವದು, ಹುಳಿ, ತಂಬುಳಿಗಳಿಗೆ ರುಬ್ಬುವದು, ಚಟ್ಣಿ ಪುಡಿ ಮಾಡುವದು ಎಲ್ಲವನ್ನೂ ಕೈಯಿಂದಲೇ  ಮಾಡಬೇಕಿತ್ತು. ಇದಲ್ಲದೆ ಕೊಟ್ಟಿಗೆಯಲ್ಲಿ 15-20 ದನಗಳು. ಅವುಗಳ ಹಾಲು ಕರೆಯುವದು, ಹಾಲು ಕಾಯಿಸುವದು, ಹೆಪ್ಪು ಹಾಕಿ, ಮಜ್ಜಿಗೆ ಕಡೆದು ಬೆಣ್ಣೆ ತೆಗೆಯುವದು, ತುಪ್ಪ ಕಾಯಿಸುವದು – ಮನೆಯಲ್ಲಿ ತುಪ್ಪದ  ಒರತೆ ಬತ್ತಬಾರದು, ಆ ರೀತಿ, + ಎಲ್ಲರಿಗೂ ಮಧ್ಯಾಹ್ನ 3 ಗಂಟೆ ಸುಮಾರಿಗೆ ಚಹಾ ತಿಂಡಿ. ಇಷ್ಟಲ್ಲದೆ ಮನೆಯಲ್ಲಿ ಏನಾದರೂ ಒಂದು ಸಿಹಿತಿಂಡಿ ಮಾಡಿಟ್ಟಿರಬೇಕು (ಲಾಡು, ಹೋಳಿಗೆ ಇತ್ಯಾದಿ)- ಅನಿರೀಕ್ಷಿತ ಅತಿಥಿಗಳಿಗಾಗಿ. ಮತ್ತೆ ರಾತ್ರಿಯೂಟಕ್ಕೆ ಕನಿಷ್ಠ 12 ಜನ. ಇವೆಲ್ಲದರ ಜೊತೆ ಒಂದು ಕೈಕೂಸು + ಉಳಿದ ಎಳೆ ಮಕ್ಕಳನ್ನೂ ಸಂಭಾಳಿಸಬೇಕು ಹಾಗೂ ನಿತ್ಯ ಮುಂಜಾವಿನಲ್ಲಿ ಬಾಗಿಲಿಗೆ ನೀರು ಹಾಕಿ ರಂಗೋಲಿ ಇಡುವದನ್ನು ತಪ್ಪಿಸುವಂತಿಲ್ಲ (ನಾನು ಅಲ್ಲಿದ್ದಾಗ ಇದನ್ನು ಅಕ್ಕ ನಿರ್ವಹಿಸುತ್ತಿದ್ದಳು ಎನ್ನಿ), ಅಡಿಗೆಗೆ ಮತ್ತು ಸ್ನಾನಕ್ಕೆ ಭಾವಿಯಿಂದ ನೀರೆತ್ತಬೇಕು. ಈ  ಅಷ್ಟೂ  ಕೆಲಸಗಳನ್ನು, ಎಲ್ಲೂ ಅಡೆ ತಡೆ ಬಾರದಂತೆ, ಅನಾನುಕೂಲತೆ ಉಂಟಾಗದಂತೆ  ಒಬ್ಬರೇ ಹೆಂಗಸು ನಿರ್ವಹಿಸುತ್ತಿದ್ದರು. ಆ ಮಹಾತಾಯಿಯೇ  “ಸರ್ವೇಶ್ವರಮ್ಮ”_ ಶ್ರೀ ಅನಂತ ಹೆಗಡೆಯವರ ಧರ್ಮಪತ್ನಿ. ಇದನ್ನೆಲ್ಲ ಕಣ್ಣಾರೆ ಕಂಡ ನಮಗೇ ಇದು ಅಸಂಭವ ಎನ್ನಿಸುವ ಹಾಗಿದೆ, ಇನ್ನು  ಈಗಿನ ತಲೆಮಾರಿನವರನ್ನು ಈ ವಿಷಯದಲ್ಲಿ ಹೇಗೆ ನಂಬಿಸುವದು? ಆಗಿನ ದಿನಗಳಲ್ಲಿ ಇನ್ನುಳಿದ ಹವ್ಯಕರ ಮನೆಗಳಲ್ಲೂ ಇದೇ ಸನ್ನಿವೇಶ ಇದ್ದಿರಬಹುದಾದರೂ ಅಲ್ಲೆಲ್ಲ ಇವರ ಮನೆಗೆ ಇದ್ದ  “ಸಂದಣಿ” ಇದ್ದಿರಲಾರದು ಮತ್ತು ಅಲ್ಲೆಲ್ಲ  ಹೆಂಗಸು ಕೂಡ ಒಬ್ಬರೇ  ಇದ್ದಿರಲಾರರು.ಇಷ್ಟೆಲ್ಲ ಒತ್ತಡವನ್ನು ನಿಭಾಯಿಸಿಯೂ ಆ ಅಮ್ಮ ಎಂದೂ ಯಾರ ಮೇಲೂ ಸಿಟ್ಟು ಮಾಡಿದ್ದನ್ನು – ಆಳುಗಳ ಮೇಲೆ ಸಹ – ನಾನಂತೂ ಕಂಡಿಲ್ಲ. ಇಷ್ಟಾಗಿ ಇವರೇನೂ ಕಷ್ಟದ ಬಾಲ್ಯ ಕಳೆದು ಬಂದವರಲ್ಲ. ಸಿದ್ದಾಪುರ ತಾಲೂಕಿನ,  ತುಂಬಾ ಅನುಕೂಲಸ್ಥರಾದ, ಗೋರನ್ ಮನೆ  ಹೆಗಡೆಯವರ ಮನೆಯ ಮಗಳಿವರು. ಅದು ಹೇಗೆ ತಾವು ಮದುವೆಯಾಗಿ ಬಂದ ಆ ಎಳವೆಯಲ್ಲೇ ಈ “ಅನಂತ”ಸಂಸಾರಸಾಗರದಲ್ಲಿ  ಸುಲಲಿತವಾಗಿ ಈಜುವದನ್ನು ರೂಢಿಸಿಕೊಂಡರೋ ನಾ ಕಾಣೆ.
       ಮೂರು ವರ್ಷಗಳ ಕಾಲ ಅವರ ಕೈಯ್ಯೂಟ ಸವಿಯುವ, ಅವರನ್ನು ಹತ್ತಿರದಿಂದ ಗಮನಿಸಿ ಅವರಲ್ಲಿನ ಉದಾತ್ತ ಸ್ವಭಾವಗಳಿಂದ ಪ್ರಭಾವಿತನಾಗುವ, ಆ ಸಂಸ್ಕಾರವನ್ನು ನನ್ನಲ್ಲೂ ಮೇಳೈಸಿಕೊಳ್ಳುವ ಅವಕಾಶ  ನನಗೆ ದಕ್ಕಿದ್ದು ನನ್ನ ಪೂರ್ವಾರ್ಜಿತ ಪುಣ್ಯ ಫಲದಿಂದ ಎಂದೇ ತಿಳಿಯುತ್ತೇನೆ. ನನ್ನ ಪಾಲಿಗೆ ಈ ಅನ್ನಪೂರ್ಣೆ” ಸರ್ವೇಶ್ವರಮ್ಮ ಎರಡನೆಯ “ಅಮ್ಮ”.                                                                                                                                                                                                                     
ಸರ್ವೇಶ್ವರಮ್ಮ- ಅನಂತ ಹೆಗಡೆಯವರು (ಅಂದ  ಕಾಲತ್ತಿಲೆ)
                                                                                                                                                                         ಇನ್ನು, ಶ್ರೀಯುತ ಅನಂತ ಹೆಗಡೆಯವರು ಸಹಾ ತುಂಬ ಸಹೃದಯಶೀಲ ಸದ್ಗೃಹಸ್ಥರು. ಭಾರತದ  ಸ್ವಾತಂತ್ರ್ಯಾನಂತರದ ಆ  ದಿನಗಳಲ್ಲಿ  ಆಗಷ್ಟೇ  ಯೌವ್ವನಿಗರಾಗುತ್ತಿದ್ದವರಿಗೆ ತಾವು ಅನುಸರಿಸಬೇಕಾದ ಜೀವನ ಪದ್ಧತಿ/ವಿಧಾನಗಳ  ಬಗ್ಗೆ  ತುಂಬ ಗೊಂದಲವಿದ್ದ  ಕಾಲಘಟ್ಟವದು. ತಮ್ಮ ಮೂಲ ಸನಾತನ ಪದ್ಧತಿಯನ್ನು ಅನುಸರಿಸುವದೋ ಅಥವಾ ತಮ್ಮನ್ನು ಅಲ್ಲಿಯವರೆಗೆ ಆಳಿದ ಪರಂಗಿಯವರ ಜೀವನಪದ್ಧತಿಯನ್ನು ಅನುಸರಿಸಿಕೊಂಡು ಬೆಳೆಯುವದೋ ಎಂಬುದರ ನಡುವೆ ದ್ವಂದ್ವವಿದ್ದ ಸಮಯವದು. ನಮ್ಮ ದೇಶದ ಎಲ್ಲ ರಂಗಗಳಲ್ಲೂ  ಇದು  ಎದ್ದು ಕಾಣುತ್ತಿತ್ತು. ಯುವಕರಿಗಂತೂ ವಯೋಸಹಜವಾಗಿ ಪರಂಗಿಯವರು ಬಿಟ್ಟುಹೋದ “ಭೋಗಪ್ರಧಾನ” ಜೀವನವೇ  ತುಂಬ ಆಪ್ಯಾಯಮಾನವೆನಿಸುತ್ತಿತ್ತು. ಇಂತಹ ಪರಿಸರದಲ್ಲಿ ಮೈಯ್ಯಲ್ಲಿ ಯೌವನವೂ, ಕೈಯಲ್ಲಿ ಕಾಸೂ ಇದ್ದ’, ಮನೆಯಲ್ಲಿ ಅಂಕೆಯಲ್ಲಿಡುವ ತಂದೆ ಇಲ್ಲದ ಈ ಅನಂತ, ತನ್ನ ತಲೆ ತಿರುಗದಂತೆ ಸಂಭಾಳಿಸಿಕೊಂಡು,  ಅತ್ಯಂತ ಮೌಲ್ಯಯುತ ಜೀವನ ರೂಢಿಸಿಕೊಂಡು, ಎಲ್ಲರಿಗೂ ಮಾದರಿಯಾಗುವಂತೆ ಬದುಕಿದ್ದು ಅವರಲ್ಲಿ ಅಂತರ್ಗತವಾಗಿದ್ದ  ಗಟ್ಟಿಯಾದ  ಸಂಸ್ಕಾರದ  ಬಲದಿಂದಲೇ ಎಂದೆನಿಸುತ್ತದೆ. ಊರ  ಹಿರಿಯರ  ಹಾಗೂ  ಧನವಂತರ ಕೆಲವೊಂದು  “ಹವ್ಯಾಸ”ಗಳನ್ನು ಸಮಾಜವಾಗಲೀ, ಅವರ ಮನೆಯವರಾಗಲೀ ಸಹಜವೆಂಬಂತೆ ಒಪ್ಪಿಕೊಳ್ಳುವ ಪರಿಪಾಠವಿದ್ದ ದಿನಗಳವು. ಅಂತಹದ್ದರಲ್ಲಿ ಯೌವ್ವನ, ಸೌಂದರ್ಯ ಹಾಗೂ ಶ್ರೀಮಂತಿಕೆ ಇವು ಮೂರೂ ಮೇಳೈಸಿದ್ದ ಈ ಅನಂತ ಹೆಗಡೆಯವರು ತುಂಬ ವಿವೇಕಿಯಾಗಿ ವರ್ತಿಸುತ್ತಾ, ಸಮಾಜದ ಏಳಿಗೆಗಾಗಿ ಸಹಕಾರ ಸಂಘ, ಹೈಸ್ಕೂಲು ಇತ್ಯಾದಿ ಸಂಸ್ಥೆಗಳನ್ನು ಕಟ್ಟಿ ಬೆಳೆಸಲು ತಮ್ಮ ಉತ್ಸಾಹ, ಶಕ್ತಿ, ಸಾಮರ್ಥ್ಯಗಳನ್ನು ವಿನಿಯೋಗಿಸಿದರಲ್ಲದೆ ಅನ್ಯಥಾ ಲೋಲುಪ ವ್ಯಸನಗಳಲ್ಲಿ ಅಲ್ಲ ಎಂಬುದು ಅತ್ಯಂತ  ಪ್ರಶಂಸಾರ್ಹ ವಿಷಯವಲ್ಲವೇ?
                                                                                                 (ಮುಂದುವರಿಯುವದು) .            

No comments:

Post a Comment